Tuesday, October 22, 2024

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಹಗರಣ : ಪೊಲೀಸ್ ತನಿಖೆಗೆ ಮಹಾಸಭೆ ನಿರ್ಣಯ

ದೋಷ ಪೂರಿತ ಲೆಕ್ಕ ಪತ್ರ : ಸದಸ್ಯರ ಆಕ್ರೋಶ : ಮರು ಆಡಿಟ್‌

ಜನಪ್ರತಿನಿಧಿ (ಬ್ರಹ್ಮಾವರ) : ಬ್ರಹ್ಮಾವರದಲ್ಲಿರುವ ದಕ್ಷಿಣ ಕನ್ನಡ ಸಹಕಾರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯನ್ನು ಸರ್ಕಾರ ವಜಾಗೊಳಿಸಿದ್ದು ವಿಶೇಷಾಧಿಕಾರಿಯನ್ನು ನೇಮಿಸಿದೆ. ಈ ಹೊತ್ತಿಗಾಗಲೇ ಕಾರ್ಖಾನೆಯ ವಾರ್ಷಿಕ ಮಹಾಸಭೆಯನ್ನು ನಡೆಸಬೇಕಾಗಿದ್ದು ಬುಧವಾರ ವಿಶೇಷಾಧಿಕಾರಿಯಾದ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು.

ದ.ಕ.ಜಿಲ್ಲಾ ಕೇಂದ್ರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಆಡಳಿತ ಮಂಡಳಿ ಮಾರಾಟ ಮಾಡಿದ್ದು ಇದು ಸಾಕಷ್ಟು ಗೊಂದಲಗಳಿಗೆ ಕಾರಣವಾಯ್ತು. ಈ ಬಗ್ಗೆ ತನಿಖೆಯು ಕೂಡ ನಡೆಯುತ್ತಿದ್ದು ಈ ಬಗ್ಗೆ ಮಹಾಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಸುಮಾರು 19ಕೋಟಿ ಲೂಟಿ ಮಾಡಿದ ಆಡಳಿತ ಮಂಡಳಿ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಯಿತು.

ಸಭೆ ಆರಂಭಗೊಳ್ಳುತ್ತಿದ್ದಂತೆ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿಯವರು ಸಭೆಯ ಬಗ್ಗೆ ಪ್ರಾಸ್ತಾವಿಸಿ ಸಭೆಯ ಕಾರ್ಯಸೂಚಿಯಂತೆ ಸಭೆಯಲ್ಲಿ ಚರ್ಚೆ ಮಾಡಬೇಕೆಂದು ಹೇಳಿದರು. ಹಿಂದಿನ ವಾರ್ಷಿಕ ಮಹಾಸಭೆಯ ನಿರ್ಣಯಗಳನ್ನು ಓದುತ್ತಿರುವಂತೆ ಸದಸ್ಯರು ಚರ್ಚೆಯನ್ನು ಆರಂಭಿಸಿದರು.

ಕಳೆದ ಬಾರಿಯ ವಾರ್ಷಿಕ ಮಹಾಸಭೆಯಲ್ಲಿ ಚಿರ್ಚಿ ಆದ ರೀತಿ ನಿರ್ಣಯಗಳನ್ನು ಬರೆಯಲಿಲ್ಲ. ತಮಗೆ ಬೇಕಾದಂತೆ ನಿರ್ಣಯಗಳನ್ನು ಬರೆದಿದ್ದಾರೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ವಿಷಯ ಪ್ರಸ್ತಾಪಿಸಿದರು. ಕಾರ್ಖಾನೆಯ ಹಗರಣದ ಬಗ್ಗೆ ಪೊಲೀಸ್ ತನಿಖೆ ಆಗಬೇಕೆಂದು ನಿರ್ಣಯ ಮಾಡಲಾಗಿತ್ತು. ಆದರೆ ನಿರ್ಣಯ ಬರೆಯದೆ ಇಲಾಖೆ ತನಿಖೆಗೆ ಒಪ್ಪಿಸುವುದಂತ ಬರೆದಿದ್ದಾರೆ. ಮಹಾಸಭೆ ನಿರ್ಣಯವನ್ನು ಪುಸ್ತಕದಲ್ಲಿ ಕಥೆ ಬರೆದಂತೆ ಬರೆದುಕೊಂಡು ಹೋಗಿದ್ದಾರೆ. ಈ ರೀತಿ ಮಾಡಿದ್ದು ಸರಿಯಲ್ಲ, ಅದಕ್ಕೆ ಈ ಮಹಾಸಭೆಯಲ್ಲಿ ಮರು ನಿರ್ಣಯ ಮಾಡಬೇಕು ಎಂದು ಹೇಳಿದರು.

ಈ ಬಗ್ಗೆ ಕಿಶನ್ ಹೆಗ್ಡೆ ಕೊಳ್ಳೆಬೈಲು ಮಾತನಾಡಿ ನಿರ್ಣಯ ಆಗಿದ್ದು ಮಾಡಲೇಬೇಕು. ನಿರ್ಣಯ ಮಾಡದಿರುವುದರ ಬಗ್ಗೆ ಕ್ರಿಮಿನಿಲ್ ಮೊಕದ್ದಮೆ ದಾಖಲಿಸಬೇಕು ಎಂದರು. ಈ ಬಗ್ಗೆ ಮಹಾಸಭೆಯ ಮತ ಹಾಕಿದಾಗ ಸಭೆಯು ಮರು ನಿರ್ಣಯದ ಬಗ್ಗೆ ಸರ್ವಾನುಮತದಿಂದ ಒಪ್ಪಿಗೆ ನೀಡಿದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಸತೀಶ್ ಕಿಣಿ ಮಾತನಾಡಿ ನಾನು ಹಲವಾರು ಅಂಶಗಳನ್ನು ಕಳೆದ ಮಹಾಸಭೆಯಲ್ಲಿ ಎತ್ತಿದ್ದೆ, ಆದರೆ ಒಂದೂ ವಿಚಾರವನ್ನು ನಿರ್ಣಯದಲ್ಲಿ ಹಾಕಲಿಲ್ಲ, ಇದು ಉದ್ದೇಶ ಪೂರ್ವಕವಾಗಿ ಮಾಡಿದ್ದಾರೆ. ನಾನು 14ಕೋಟಿ ಅವ್ಯವಹಾರ ಆಗಿದೆ ಎಂದು ಹೇಳಿದ್ದೆ ಯಕ್ಕೆ ಸೇರಿಸಲಿಲ್ಲ. ಎಂದು ಹೇಳಿದರು. ಮಹಾಸಭೆಗೆ ಮಂಡಿಸಿದ ಲೆಕ್ಕಪತ್ರವೇ ಸರಿ ಇಲ್ಲ, ಆಡಳಿತ ಮಂಡಳಿ ಹೇಳಿದ ಹಾಗೆ ಮಾಡಿದೆ. ಇಲ್ಲಿ

ಅವ್ಯವಹಾರ ಮೊತ್ತವನ್ನು ನಮೂದಿಸಿಲ್ಲ. ಆದರಿಂದ ಈ ಲೆಕ್ಕ ಪತ್ರವೇ : ಸರಿ ಇಲ್ಲ ಎಂದು ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

ಇದಕ್ಕೆ ಧ್ವನಿಗೂಡಿಸಿ ಮಾತನಾಡಿದ ಸದಾನಂದ ಶೆಟ್ಟಿ ಕೆದೂರು ಇ.ಎಂ.ಡಿ ಹಣವನ್ನು ಕಟ್ಟದೆ ಟೆಂಡರ್ ಹೇಗೆ ಮಂಜೂರು ಮಾಡಲು ಸಾಧ್ಯ ? ಐದು ಕೋಟಿಯನ್ನು ಇ.ಎಂ.ಡಿ ಹಣವನ್ನು ಪಡೆಯದೆ ಟೆಂಡ‌ರ ಮಂಜೂರು ಮಾಡಿದ್ದಾರೆ. – ಇದು ದೊಡ್ಡ ಅಪರಾಧ ಎಂದರು.

ಸದಸ್ಯರಾದ ಹರಿಪ್ರಸಾದ್ ಶೆಟ್ಟಿ ಕಾವ್ಯಕ್ಕಿ ಮಾತನಾಡಿ ಕಾರ್ಖಾನೆಯನ್ನು ಮಾರಾಟ ಮಾಡಿದ್ದು ಮಾತ್ರವಲ್ಲದೆ ಅಲ್ಲಿ ಪಂಚಾಂಗದ ಕಲ್ಲುಗಳನ್ನು ಕಿತ್ತು ಮಾರಾಟ ಮಾಡಿದ್ದಾರೆ ಇದನ್ನು ಪೊಲೀಸ್ ತನಿಖೆಗೆ ಒಳಪಡಿಸಿ ಬೇಕು ಎಂದು ಆಗ್ರಹಿಸಿದರು.

ಗ್ರಾಮ ಪಂಚಾಯತ್ ವ್ಯವಸ್ಥೆಯಲ್ಲಿ ಐದು ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿಯನ್ನು ಮಾಡುವಾಗ ಇ-ಟೆಂಡರ್ ಮಾಡಬೇಕೆಂದಿದೆ. ಆದರೆ ಇಲ್ಲಿ ದೊಡ್ಡ ಮೊತ್ತದ ಇ-ಟೆಂಡರ್ ಪ್ರಕ್ರಿಯೆಯನ್ನು ಇ-ಟೆಂಡರ್ ಮಾಡದಿರುವುದೇ ಇಲ್ಲಿ ಅವ್ಯವಹಾರ ಇದೆ ಎಂಬುದು ಹೇಳಲಾಗುತ್ತಿದೆ ಎಂದು ವಂಡೆ ಉದಯ್ ಕುಮಾ‌ರ್ ಶೆಟ್ಟಿ ಹೇಳಿದರು.

ಕಾರ್ಖಾನೆ ಮಾಜಿ ಅಧ್ಯಕ್ಷರಾದ ಜಯಕರ ಶೆಟ್ಟಿ ಮಾತನಾಡಿ ಕಾರ್ಖಾನೆ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಲಾಗಿತ್ತು. ಆದರೆ ಅದನ್ನು ನೆಲಸಮ ಮಾಡಿದರು. ರೈತರಿಗೆ ಅಗತ್ಯವಿರುವ ಯೋಜನೆ ಇಲ್ಲಿ ಆಗಬೇಕಾಗಿದೆ ಎಂದು ಕಾರ್ಖಾನೆಯ ಹಗರಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಬನ್ನೂರು ವಿಕಾಸ್ ಹೆಗ್ಡೆ ಮಾತನಾಡಿ ಕಾರ್ಖಾನೆ ಈ ಭಾಗದ ರೈತರ ಅನುಕೂಲಕ್ಕಾಗಿ ಬದಲಿ ಘಟಕವನ್ನು ಆರಂಭಿಸಬೇಕು. ಎಥೆನಾಲ್ ಘಟಕ ಅಥವಾ ಕಬ್ಬಿಗೆ ಪೂರಕವಾಗಿ ಮಾಡಬಹುದಾದ ಯೋಜನೆ ಆರಂಭಿಸಬೇಕು ಎಂದರು. ಯಡಾಡಿ ಸತೀಶ್ ಶೆಟ್ಟಿ, ಶಶಿಧರ ಶೆಟ್ಟಿ ಎಲ್ಲೂರು ಕಾರ್ಖಾನೆಯ ಅಭಿವೃದ್ಧಿ ಪಡಿಸಲು ವಿಷಯ ಮಂಡಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಮಾತನಾಡಿ, ಕಾರ್ಖಾನೆ ಬಗ್ಗೆ ಸಾಧಕ ಬಾಧಕಗಳನ್ನು ಚರ್ಚೆ ಮಾಡಿ ಏನು ಮಾಡಬೇಕು ಎನ್ನುವುದನ್ನು ವಿವರವಾಗಿ ಚರ್ಚಿಸಿ ಸರ್ಕಾರದ ಗಮನಕ್ಕೆ ತರೋಣ ಎಂದು ಹೇಳಿದರು.

ಕಾರ್ಖಾನೆಯ ವ್ಯವಸ್ಥಾಪನ ನಿರ್ದೇಶಕರಾದ ಲಾವಣ್ಯ ಕೆ.ಆರ್ ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಖಾನೆಯ ಸಿಬ್ಬಂದಿ ಗೋಪಾಲಕೃಷ್ಣ ಶೆಟ್ಟಿ ಸ್ವಾಗತಿಸಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!