Tuesday, October 22, 2024

ದಬ್ಬಾಳಿಕೆ ರಾಜಕಾರಣವನ್ನು ತಿರಸ್ಕರಿಸಿದ ಪ್ರಜಾಪ್ರಭುತ್ವ !

ರಾಜ್ಯದಲ್ಲಿ ಫಲಿಸದ ಜೆಡಿಎಸ್‌ ಜೊತೆಗಿನ ಮೈತ್ರಿ | ಸಿದ್ದರಾಮಯ್ಯ ಕುರ್ಚಿ ಭದ್ರ

ಶ್ರೀರಾಮ ಮಂದಿರ, ಭಾರತೀಯ ಮುಸ್ಲೀಮರ ಬಗ್ಗೆ ದ್ವೇಷದ ಭಾಷಣಗಳು ಯಾವುವೂ ಬಿಜೆಪಿಗೆ  400 ಕ್ಷೇತ್ರಗಳನ್ನು ತಂದುಕೊಡಲಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ ಸರ್ವಾಧಿಕಾರಿ ಧೋರಣೆಯ ಸರ್ಕಾರದ ಹುಟ್ಟಡಗಿಸಿದೆ. ಶ್ರೀರಾಮನ ನಾಡು ಉತ್ತರ ಪ್ರದೇಶದ ಫಲಿತಾಂಶ ಬಿಜೆಪಿ ದೇಶದಲ್ಲಿ ವಿಶ್ವಾಸ ಕಳೆದುಕೊಂಡಿದೆ ಎನ್ನುವುದನ್ನು ತಿಳಿಸಿದೆ. ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ  ದೇಶದ ಜನರು  ದಬ್ಬಾಳಿಕೆಯ ರಾಜಕಾರಣವನ್ನು ಒಪ್ಪುವುದಿಲ್ಲ ಎಂದು ಪಾಠ ಕಲಿಸಿದಂತಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ 400 ಕ್ಷೇತ್ರಗಳನ್ನು ಹಾಗೂ ಎನ್‌ಡಿಎ ಮೈತ್ರಿಕೂಟ ೪೦೦ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ಹಿಡಿಯುತ್ತದೆ ಎಂದು ಹೇಳಿದ್ದ ಮೋದಿಗೆ ತೀವ್ರ ಮುಖಭಂಗವಾಗಿದೆ. ಮೋದಿ ಸ್ವತಃ ಈ ಬಾರಿ ವಾರಣಾಸಿಯಲ್ಲಿ ಕೇವಲ  1,52,513 ಮತಗಳ ಅಂತರದಲ್ಲಿ ಗೆದ್ದಿರುವುದು ಹಾಗೂ ಬಿಜೆಪಿ ಭದ್ರಕೋಟೆ ಎಂದು ಗುರುತಿಸಿಕೊಂಡಿರುವ ಉತ್ತರಪ್ರದೇಶದಲ್ಲಿ 80 ಕ್ಷೇತ್ರಗಳಲ್ಲಿ ಕೇವಲ 33 ಕ್ಷೇತ್ರಗಳಲ್ಲಷ್ಟೇ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ವ್ಯಕ್ತಿ ಆರಾಧನೆ, ಧರ್ಮ ರಾಜಕಾರಣವನ್ನು ಸುದೀರ್ಘ ಕಾಲದವರೆಗೆ ದೇಶದ ಜನ ಒಪ್ಪುವುದಿಲ್ಲ ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿ.

ಆಡಳಿತ ವಿರೋಧಿ ಅಲೆಯ ಕಾರಣಕ್ಕೆ ಹಲವು ಹಾಲಿ ಸಂಸದರಿಗೆ ಕೋಕ್‌ ಕೊಟ್ಟು ಯುವ ನಾಯಕರನ್ನು ಕಣಕ್ಕಿಳಿಸಿ ಬಿಜೆಪಿ ಮಾಡಿದ ತಂತ್ರಗಾರಿಕೆ ʼಮ್ಯಾಜಿಕ್‌ ನಂಬರ್‌ʼ ದಾಟಲು ಸಹಕಾರಿಯಾಗಿಲ್ಲ. ಮೋದಿ, ಅಮಿತ್‌ ಶಾ ಜೋಡಿ ʼವಿಕಸಿತ ಭಾರತʼ ಕಲ್ಪನೆಯ ಜೊತೆಗೆ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು, ಪೌರತ್ವ ತಿದ್ದುಪಡಿ, ಅಯೋಧ್ಯೆಯ ಶ್ರೀರಾಮ ಮಂದಿರದಂತಹ ಯಾವುದೇ ರಾಜಕೀಯ ತಂತ್ರಗಾರಿಕೆ ಬಿಜೆಪಿಗೆ ಲಾಭ ತಂದುಕೊಟ್ಟಿಲ್ಲ. ಲೋಕಸಭಾ ಚುನಾವಣೆಗೂ ಮುನ್ನಾ ʼಇಂಡಿಯಾʼ ಮೈತ್ರಿಕೂಟದ ಭಾಗವಾಗಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರನ್ನು ಎನ್‌ಡಿಎಗೆ ಎಳೆದುಕೊಂಡಿದ್ದು, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಎನ್‌ಡಿಎ ಗೆ ಸೇರಿದ್ದರಿಂದ ತುಸು ಮಾನ  ಉಳಿಯಿತು. ಒಂದು ಹಂತದಲ್ಲಿ ಬಿಜೆಪಿ ಸೋತು ಗೆದ್ದಿತು, ಕಾಂಗ್ರೆಸ್‌ ಗೆದ್ದು ಸೋತಿದೆ. ಆದರೇ, ಬಿಜೆಪಿಯ ʼಕಾಂಗ್ರೆಸ್‌ ಮುಕ್ತ ಭಾರತʼದ ಕನಸು ಅಕ್ಷರಶಃ ಸುಳ್ಳಾಗಿದೆ.

ಶ್ರೀರಾಮ ಮಂದಿರದ ಹೆಸರಿನಲ್ಲಿ ಸಾರ್ವಕಾಲಿಕ ಸಾಧನೆ ಮಾಡುತ್ತೇವೆಂದು ಚುನಾವಣೆ ಎದುರಿಸಿದ ಬಿಜೆಪಿಗೆ ತೀವ್ರ ಮುಖಭಂಗವಾಗಿರುವುದಂತೂ ಸತ್ಯ. ಉತ್ತರ ಪ್ರದೇಶದಲ್ಲೇ ದಲಿತ, ಯಾದವ, ಹಿಂದುಳಿದ ವರ್ಗ ಹಾಗೂ ಮುಸ್ಲೀಂ ಮತಗಳ ಕ್ರೋಢಿಕರಣದಿಂದ ʼಇಂಡಿಯಾʼ ಮೈತ್ರಿಕೂಟಕ್ಕೆ ಹೆಚ್ಚಿನ ಕ್ಷೇತ್ರಗಳು ಒಲಿದಿವೆ. ಅಯೋಧ್ಯೆ ಇರುವ ಫೈಜಾಬಾದ್‌ ಕ್ಷೇತ್ರದಲ್ಲೇ ಬಿಜೆಪಿ ಅಭ್ಯರ್ಥಿ ಬಾರಿ ಅಂತರದಿಂದ ಸೋಲು ಕಂಡಿದ್ದು ಬಿಜೆಪಿಗರ ಬಾಯಿ ಮುಚ್ಚಿಸಿದೆ. ಇನ್ನು, ಕೇಂದ್ರದ ಅಧಿಕಾರ ಹಿಡಿಯುವುದಕ್ಕೆ ಸಹಕಾರಿ ಆಗುವ ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳಗಲ್ಲೇ ದೊಡ್ಡ ಮಟ್ಟದ ಹಿನ್ನೆಡೆ ಆಗಿರುವುದು ದೇಶದಾದ್ಯಂತ ಬಿಜೆಪಿ ತನ್ನ ಸಂಪೂರ್ಣ ವಿಶ್ವಾಸ ಕಳೆದುಕೊಂಡಿರುವುದಕ್ಕೆ ಹಿಡಿದ ಕನ್ನಡಿ.

ರಾಜ್ಯದಲ್ಲಿ ಫಲಿಸದ ಜೆಡಿಎಸ್‌ ಜೊತೆಗಿನ ಮೈತ್ರಿ :

ಹಿರಿಗೌಡರ ಜೆಡಿಎಸ್‌ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಎನ್‌ಡಿಎ ಜೊತೆಗೆ ಮೈತ್ರಿ ಮಾಡಿಕೊಂಡಿತ್ತು. ಇಲ್ಲಿನ ಬಿಜೆಪಿಯವರಿಗೆ ಇಷ್ಟವಿಲ್ಲದೇ ಇದ್ದರೂ, ಹೈಕಮಾಂಡ್‌ ಮಾತಿಗೆ ತಲೆಬಾಗಲೇಬೇಕಾಯ್ತು. ಚುನಾವಣಾ ಪ್ರಚಾರಗಳಲ್ಲಿ ಜೆಡಿಎಸ್‌ ಮೈತ್ರಿಯ ಕಾರಣದಿಂದ ರಾಜ್ಯದ 28 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎಂದಿದ್ದ ಬಿಜೆಪಿಯ ನಿರೀಕ್ಷೆ ಹುಸಿಯಾಯ್ತು. ರಾಜ್ಯದಲ್ಲಿ ಬಿಜೆಪಿಯ ಅತಿಯಾದ ಆತ್ಮ ವಿಶ್ವಾಸವೇ ಮುಳುವಾಯಿತು.

ಇನ್ನು, 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ, ತಲಾ ಒಂದೊಂದು ಕ್ಷೇತ್ರಗಳನ್ನಷ್ಟೇ ಗೆಲ್ಲುವಲ್ಲಿ ಸಾಧ್ಯವಾಗಿತ್ತು. ಆಗಷ್ಟೇ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಕಳೆದುಕೊಂಡಿದ್ದ ಕಾಂಗ್ರೆಸ್‌ ಜೆಡಿಎಸ್‌ನೊಂದಿಗೆ ಸಮ್ಮಿಶ್ರ ಸರ್ಕಾರ ರಚನೆ ಮಾಡಿತ್ತು. ಕಾಂಗ್ರೆಸ್‌ ದೇಶದಾದ್ಯಂತ ದುರಿತ ಕಾಲ ಅನುಭವಿಸುತ್ತಿದ್ದ ಸಂದರ್ಭವದು. ಮೋದಿ ಶುಕ್ರ ದೆಸೆಯನ್ನು ಅನುಭವಿಸುತ್ತಿದ್ದ ಕಾಲ. ರಾಜ್ಯದಲ್ಲಿಯೂ ಮೋದಿ ಹವಾ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಿತ್ತು. ಬಿಜೆಪಿ 28 ಲೋಕಸಭಾ ಕ್ಷೇತ್ರಗಳಲ್ಲಿ 25 ಕ್ಷೇತ್ರಗಳನ್ನು ಪಡೆದುಕೊಂಡಿತ್ತು. ಮುಂದೆ ಕೆಲವು ತಿಂಗಳಲ್ಲಿ ಬಿ.ಎಸ್‌. ಯಡಿಯೂರಪ್ಪ ಸಮ್ಮಿಶ್ರ ಸರ್ಕಾರ ಒಡೆಯುವಲ್ಲಿ ಯಶಸ್ವಿಯಾದರು. ಮುಂದಿನದ್ದು ರಾಜಕೀಯ ಇತಿಹಾಸ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಿದ ಕಾಂಗ್ರೆಸ್‌, ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದರೂ, ಜನ ಉಪಕಾರ ಸ್ಮರಣೆ ಲೋಕಸಭಾ ಚುನಾವಣೆಯಲ್ಲಿ ತೋರಿಲ್ಲ. ಹಾಗೆ ನೋಡುವುದಾದರೇ, 2014ರ ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳಂತಹ ಯಾವ ಯೋಜನೆಗಳಿಲ್ಲದಿದ್ದರೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 9 ಕ್ಷೇತ್ರಗಳಲ್ಲಿ ಗೆದ್ದಿತ್ತು. ಈ ಬಾರಿ ಗ್ಯಾರಂಟಿ ಯೋಜನೆಗಳು ಇದ್ದರೂ ಕೂಡ ಕಾಂಗ್ರೆಸ್‌ ನಿರೀಕ್ಷೆಯಷ್ಟು ಕ್ಷೇತ್ರಗಳು ಲಭಿಸಿಲ್ಲ. ಗ್ಯಾರಂಟಿ ಯೋಜನೆಗಳು ವಿಫಲವೇ ? ಎನ್ನುವ ಪ್ರಶ್ನೆಯೂ ನಮ್ಮ ಮುಂದಿದೆ. ಕನಿಷ್ಠ ಡಬಲ್‌ ಡಿಜಿಟ್ ಮೀರುವ ಕಾಂಗ್ರೆಸ್‌ ನಿರೀಕ್ಷೆಗಳಿಗೆ ಗ್ಯಾರಂಟಿ ಯೋಜನೆಗಳು ಫಲ ನೀಡದೆ ಇರುವುದು, ಕಾಂಗ್ರೆಸ್‌ ತನ್ನನ್ನು ತಾನು ಪರಾಮರ್ಶಿಸಿಕೊಳ್ಳುವಂತೆ ಮಾಡಿದೆ.

ಸಿದ್ದರಾಮಯ್ಯ ಕುರ್ಚಿ ಮತ್ತಷ್ಟು ಭದ್ರ :

ಲೋಕಸಭಾ ಚುನಾವಣೆಯ ಬಳಿಕ ಸಿಎಂ ಬದಲಾವಣೆಯ ವಿಚಾರ ಕೆಲವು ವಾರಗಳ ಹಿಂದೆ ಮುನ್ನೆಲೆಗೆ ಬಂದಿತ್ತು, ಡಿಕೆಶಿ ಸಿಎಂ ಹುದ್ದೆಗೇರುವ ಹುಮ್ಮಸ್ಸಿನಲ್ಲಿದ್ದಿದ್ದರು. ಆದರೇ, ಈಗ ಆ ವಿಚಾರ ಗೌಣವಾದಂತೆ ಕಾಣಿಸುತ್ತಿದೆ. ಚುನಾವಣೆಯ ಜವಾಬ್ದಾರಿ ಹೊತ್ತಿದ್ದ ಸಿಎಂ ಮತ್ತು ಡಿಸಿಎಂ ಅವರ ಪ್ರಭಾವ ಹೆಚ್ಚಿರುವ ಪ್ರದೇಶಗಳಲ್ಲಿ ಅವರ ರಾಜಕೀಯ ವರ್ಚಸ್ಸು ಕೆಲಸಕ್ಕೆ ಬಾರಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿದ್ದ ಏಕೈಕ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಸಿಎಂ ಡಿಕೆಶಿ ಸಹೋದರ ಡಿಕೆ ಸುರೇಶ್‌ ಹೀನಾಯ ಸೋಲನುಭವಿಸಿದ್ದು, ತೀವ್ರ ಮುಖಭಂಗವಾಗಿದೆ. ಡಿಕೆ ಸುರೇಶ್‌ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿ ಸಂಸದರೇ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಆದರೇ, ಇದೇ ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡಿದ ಡಾ. ಸಿಎನ್‌ ಮಂಜುನಾಥ್‌ ಅವರ ಎದರು ಸೋತಿದ್ದು ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲಾಗದ ನೋವಾಗಿದೆ.

ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಅವರ ಪ್ರತಿಷ್ಠೆಯ ಕಣ, ತವರು ಜಿಲ್ಲೆ ಮೈಸೂರಿನ ಸೋಲು ಮುಖಭಂಗವಾದರೂ, ತಮ್ಮ ವರುಣಾ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿರುವ ಚಾಮರಾಜನಗರದ ಗೆಲುವು ಸಿಎಂ ಗೆ ತುಸು ಸಮಧಾನ ತಂದಿದೆ. ಕರಾವಳಿಯ ಎಲ್ಲಾ ಕ್ಷೇತ್ರಗಳಲ್ಲಿ ಹೀನಾಯ ಸೋಲು ʼಕಾಂಗ್ರೆಸ್‌ ಗ್ಯಾರಂಟಿʼ ಬೇಡ, ʼಮೋದಿ ಗ್ಯಾರಂಟಿʼ ಸಾಕು ಎಂಬಂತಿದೆ.

ಹಳೆ ಮೈಸೂರು ಪ್ರಾಂತ್ಯದ ಚಾಮರಾಜನಗರ, ಹಾಸನ, ಮಧ್ಯ ಕರ್ನಾಟಕದ ದಾವಣಗೆರೆ, ಮುಂಬೈ ಕರ್ನಾಟಕದ ಚಿಕ್ಕೋಡಿ, ಕಲ್ಯಾಣ ಕರ್ನಾಟಕದ ಬೀದರ್‌, ಕಲಬುರುಗಿ, ರಾಯಚೂರು, ಕೊಪ್ಪಳ, ಬಳ್ಳಾರಿ ಕ್ಷೇತ್ರಗಳ ಗೆಲುವು ತುಸು ಸಮಾಧಾನ ತರಿಸಿದೆ ಎಂಬಂತೆ ಕಾಣಿಸುತ್ತಿದೆ. ಈ ಕಲ್ಯಾಣ ಕರ್ನಾಟಕದ ಕ್ಷೇತ್ರಗಳಲ್ಲಿ ಮಲ್ಲಿಕಾರ್ಜುನ್‌ ಖರ್ಗೆ ಪ್ರಭಾವ ಹೆಚ್ಚಿದ್ದರೂ, ಅಂಹಿಂದ ನಾಯಕ ಸಿಎಂ ಸಿದ್ದರಾಮಯ್ಯ ಈ ಕ್ಷೇತ್ರಗಳ ಗೆಲುವಿನ ಶ್ರೇಯವನ್ನು ಪಡೆದುಕೊಳ್ಳಬಹುದು. ʼಅಹಿಂದʼ ಮತಗಳು ಹೆಚ್ಚಿರುವ ಕ್ಷೇತ್ರಗಳಲ್ಲಿ ತನ್ನ ನೇತೃತ್ವದ ಸರ್ಕಾರದ ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿಯಾಗಿದೆ ಎಂದು ಹೈಕಮಾಂಡ್‌ ಮುಂದಿಟ್ಟು ತಮ್ಮ ಕುರ್ಚಿಯನ್ನು ಮತ್ತಷ್ಟು ಗಟ್ಟಿಯಾಗಿಸಿಕೊಳ್ಳಬಹುದು. ಲೋಕಸಭಾ ಚುನಾವಣೆಯಿಂದ ಡಿಕೆಶಿ ಪ್ರೊಫೈಲ್‌ ವೃದ್ಧಿಸಿದಂತೆ ಕಾಣಿಸುತ್ತಿಲ್ಲ. ಹಾಗಾಗಿ ಡಿಕೆಶಿ ಸಿಎಂ ಕನಸು ಸದ್ಯಕ್ಕಂತೂ ನನಸಾಗುವುದು ಕಷ್ಟ.

-ಶ್ರೀರಾಜ್‌ ವಕ್ವಾಡಿ  

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!