Sunday, September 8, 2024

ನಾರಾಯಣ ಗುರುಗಳ ತತ್ವ ಗೆಲ್ಲಬೇಕಾದರೇ ಗೀತಕ್ಕ ಶಿವಮೊಗ್ಗದಲ್ಲಿ ಗೆಲ್ಲಬೇಕು : ನಿಕೇತ್‌ ರಾಜ್‌ ಮೌರ್ಯ

ಜನಪ್ರತಿನಿಧಿ (ಕಿರಮಂಜೇಶ್ವರ) : ಇವತ್ತು ಇಡೀ ರಾಜ್ಯದ ಪ್ರಚಾರ ಸಭೆಗಳಲ್ಲಿ ಹೆಣ್ಣು ಮಕ್ಕಳನ್ನು ಹೆಚ್ಚಾಗಿ ಕಾಂಗ್ರೆಸ್ ಕಾಣುತ್ತಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರ ಕೊಟ್ಟ ಗ್ಯಾರಂಟಿಗಳು ಕಾರಣ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ನಿಕೇತ್ ರಾಜ್ ಮೌರ್ಯ ಹೇಳಿದರು.

ಅವರು ಕಿರಿಮಂಜೇಶ್ವರದಲ್ಲಿ ಇಂದು(ಮಂಗಳವಾರ) ನಡೆದ ಕಾಂಗ್ರೆಸ್ ಬೃಹತ್ ಮಹಿಳಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಗೀತಕ್ಕ (ಗೀತಾ ಶಿವರಾಜ್‌ ಕುಮಾರ್) ನಿಮ್ಮ ಪ್ರತಿನಿಧಿ. ಶಿವಮೊಗ್ಗ ಜಿಲ್ಲೆಗೆ ಅಂಟಿರುವ ಕಳಂಕವನ್ನು ಈ ಲೋಕಸಭಾ ಚುನಾವಣೆಯಲ್ಲಿ ಗೀತಕ್ಕ ಅವರಿಗೆ ಮತ ಹಾಕುವುದರ ಮೂಲಕ ಮತದಾರರು ತೊಳೆಯುತ್ತಾರೆ ನಂಬಿಕೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಂಗಾರಪ್ಪ ಅವರು ನಾನು(ಸಿದ್ದರಾಮಯ್ಯ) ಒಟ್ಟಿಗೆ ಸೇರಿ ರಾಜಕೀಯ ಮಾಡಿದ್ದಿದ್ದರೇ, ಈ ರಾಜ್ಯದಲ್ಲಿ ಬಿಜೆಪಿ ಕಾಲಿಡುವುದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ. ಐತಿಹಾಸಿಕ ದುರಂತ ಏನು ಕೇಳಿದರೇ, ಬಂಗಾರಪ್ಪ ಅವರು ನಾನು ಒಟ್ಟಿಗೆ ಸೇರುವ ಹಾಗೆ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದರು ಎನ್ನುವುದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.

ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಸಿಡಿದೆದ್ದ ಅವರು, ಮಹಿಳಾ ಕುಸ್ತಿಪಟುಗಳು ದಿನಗಟ್ಟಲೇ ದೆಹಲಿಯಲ್ಲಿ ಪ್ರತಿಭಟನೆ ಮಾಡಿ ಗೋಳಿಟ್ಟಾಗ ಮೋದಿ ಮಾತನಾಡಿಲ್ಲ, ಮಣಿಪುರದಲ್ಲಿ ಮಹಿಳೆಯೋರ್ವಳನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿದಾಗ  ಪ್ರಧಾನಿಗಳು ಮಾತನಾಡಿಲ್ಲ, ದೆಹಲಿಯಲ್ಲಿ ವರ್ಷಗಟ್ಟಲೇ ಬೆಂಬಲ ಬೆಲೆ ಕೊಡಿ ಎಂದು ಪ್ರತಿಭಟನೆ ಮಾಡಿದಾಗ, ಸುಮಾರು 800 ರೈತರು ಪ್ರತಿಭಟನೆಯಲ್ಲಿರುವಾಗಲೇ ಮೃತರಾದಾಗ ಮೋದಿ ಮಾತನಾಡಿಲ್ಲ. ಜನರ ಬದುಕಿನ ಬಗ್ಗೆ ಮೋದಿ ಮಾತನಾಡಬೇಕಿತ್ತು, ಅದರೇ ಮಾತನಾಡಿಲ್ಲ, ರೈತರ ಪರವಾಗಿ ಮಾತನಾಡಬೇಕಿತ್ತು, ಅದರೇ ಮೋದಿ ಮಾತನಾಡಿಲ್ಲ, ಮಹಿಳೆಯರ ರಕ್ಷಣೆಯ ಬಗ್ಗೆ  ಮೋದಿ ಮಾತನಾಡಬೇಕಿತ್ತು, ಆದರೇ, ಮೋದಿ ಮಾತನಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾರಾಯಣ ಗುರುಗಳ ತತ್ವ ಗೆಲ್ಲಬೇಕಾದರೇ ಗೀತಕ್ಕ ಗೆಲ್ಲಬೇಕು, ಅಂಬೇಡ್ಕರ್ ಅವರ ಸಂವಿಧಾನ ಗೆಲ್ಲಬೇಕಾದರೇ ಗೀತಕ್ಕ ಗೆಲ್ಲಬೇಕು, ಮಾತವತಾವಾದಿ ಕುವೆಂಪು ಅವರ ತತ್ವಗಳು ಗೆಲ್ಲಬೇಕಾದರೇ ಗೀತಕ್ಕ ಗೆಲ್ಲಬೇಕು, ಕನಕದಾಸರ ತತ್ವ ಗೆಲ್ಲಬೇಕಾದರೇ ಗೀತಕ್ಕ ಗೆಲ್ಲಬೇಕು, ಬಸವಣ್ಣನ ಆದರ್ಶಗಳು ಗೆಲ್ಲಬೇಕಾದರೇ ಗೀತಕ್ಕ ಗೆಲ್ಲಬೇಕು. ಸಂಸತ್ ನಲ್ಲಿ ಸಂವಿಧಾನದ ಹೆಸರಿನಲ್ಲಿ ʼಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದಳಾದ ನಾನು…ʼ ಎಂದು ಗೀತಾ ಶಿವರಾಜ್ ಕುಮಾರ್ ಅವರು ಪ್ರಮಾಣವಚನ ಸ್ವೀಕರಿಸುತ್ತಾರೋ ಅಂದೇ ಈ ಕ್ಷೇತ್ರದ ಸಮಸ್ಯೆಗಳ ನಿರ್ಮೂಲನೆಗೆ ನಾಂದಿ ಸಿಗುತ್ತದೆ ಎಂದು ಹೇಳಿದರು.

ನಮ್ಮ ಪಕ್ಷದ ಹಸ್ತದ ಚಿಹ್ನೆ ಅಭಯ ಹಸ್ತದಂತೆ ಕಾಣಿಸುತ್ತಿದೆ : ಗೀತಾ ಶಿವರಾಜ್‌ ಕುಮಾರ್‌

ನಮ್ಮ ಪಕ್ಷದ ಚಿಹ್ನೆ ಹಸ್ತ. ಇವತ್ತು ನನಗೆ ಅದು ಅಭಯ ಹಸ್ತದ ಹಾಗೆ ಕಾಣಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಮೀಸಲಾತಿ ತಂದುಕೊಟ್ಟು, ಮಹಿಳೆ ಸ್ವಾವಲಂಬಿ ಆಗುವ ಹಾಗೆ ಮಾಡಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹೇಳಿದರು.

ನಮ್ಮ ಕಾಂಗ್ರೆಸ್ ಸರ್ಕಾರ ಯೋಜನೆಗಳ ಬಗ್ಗೆ ಜನರು ಇಂದು ಮಾತನಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಇಲ್ಲಿನ ಮಹಿಳೆಯರು ಮಾತನಾಡುತ್ತಿದ್ದಾರೆ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಬೆಲೆ ಏರಿಕೆ, ಹಣದುಬ್ಬರ ಸೃಷ್ಟಿಯಾಗಿದೆ. ಇವೆಲ್ಲಾ ನಿವಾರಣೆಯಾಗಬೇಕಾದರೇ, ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ನೀವು ತಮ್ಮ ಅಮೂಲ್ಯ ಮತ ಚಲಾಯಿಸಬೇಕು ಎಂದು ಸಮಾವೇಶದಲ್ಲಿ ನೆರೆದ ಮಹಿಳೆಯರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್ ಮನವಿ ಮಾಡಿಕೊಂಡರು.

‌ಬಿಜೆಪಿ ಅವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ ಅವರು, ಶಿವಮೊಗ್ಗದಲ್ಲಿ ಗೀತಾ ಶಿವಕುಮಾರ್ ಅವರಿಗೆ ಮನೆಯಿಲ್ಲ, ಅವರನ್ನು ಸಂಪರ್ಕಿಸಬೇಕಂದ್ರೆ ಬೆಂಗಳೂರಿಗೆ ಹೋಗಬೇಕಾಗುತ್ತದೆ, ಗೀತಾ ಶಿವರಾಜ್ ಕುಮಾರ್‌ ಅವರ ಮನೆಯಲ್ಲಿ ನಾಯಿ ಇದೆ ಅಂತೆಲ್ಲಾ ತುಂಬಾ ಕೇಳ ಮಟ್ಟದ ರಾಜಕೀಯವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಅವರಿಗೆ ನನ್ನ ಬಗ್ಗೆ ಹೇಳುವುದಕ್ಕೆ ಏನೂ ಸಿಗುವುದಿಲ್ಲ. ಅದಕ್ಕೆ ಸುಖಾಸುಮ್ಮನೆ ಇಂತವನ್ನೆಲ್ಲಾ ಹೇಳಿ ಅಪ ಪ್ರಚಾರ ಮಾಡುತ್ತಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಹೆಣ್ಣು ಮಕ್ಕಳ ಮಂಗಳ ಸೂತ್ರದ ಬಗ್ಗೆ ಇಷ್ಟು ಕೀಳಾಗಿ ಮಾತನಾಡಿ ಹೆಣ್ಣು ಮಕ್ಕಳ ಭಾವನೆಗಳನ್ನು ಕೆರಳಿಸಿದ್ದಾರೆ. ಒಬ್ಬ ಪ್ರಧಾನಿ ಹುದ್ದೆಯಲ್ಲಿ ನಿಂತು ಹೀಗೆಲ್ಲಾ ಮಹಿಳೆಯರನ್ನು ಅವಮಾನಿಸುವುದು ಸೂಕ್ತವಲ್ಲ ಎಂದು ಹೇಳಿದರು.

ಸಭೆಯಲ್ಲಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌, ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರುಗಳಾದ ಕೆ. ಗೋಪಾಲ ಪೂಜಾರಿ, ಬೈಂದೂರು ಸುಕುಮಾರ್‌ ಶೆಟ್ಟಿ, ಕಾರ್ಕಳ ಕಾಂಗ್ರೆಸ್‌ ಮುಖಂಡ ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ, ಕಾಂಗ್ರೆಸ್‌ ನಾಯಕಿ ಮಮತಾ ಗಟ್ಟಿ, ಶೃಂಗೇರಿ ಶಾಸಕ ಟಿ. ಡಿ ರಾಜೇ ಗೌಡ, ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿ.ಬಿ ನಿಂಗಯ್ಯ, ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಉಡುಪಿ‌ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ರಾಜು ಪೂಜಾರಿ, ಕಾಂಗ್ರೆಸ್‌ ಮುಖಂಡರಾದ ಕೆ. ಪ್ರಕಾಶ್ಚಂದ್ರ ಶೆಟ್ಟಿ, ಗೌರಿ ದೇವಾಡಿಗ ಸೇರಿ, ಸುಬ್ರಹ್ಮಣ್ಯ ಭಟ್‌ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!