Sunday, September 8, 2024

ಹವಾಮಾನ‌ ಆಧಾರಿತ ಬೆಳೆ ವಿಮಾ ಯೋಜನೆ ಅನುಷ್ಠಾನದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ ರಾಜ್ಯಕ್ಕೆ ಪ್ರಥಮ

ಮಂಗಳೂರು : ರೈತರ ಪಾಲಿಗೆ ವರದಾನವಾಗಿರುವ ಕೇಂದ್ರ ಸರಕಾರದ ಬಹು ಮಹಾತ್ವಾಕಾಂಕ್ಷೆಯ ಯೋಜನೆಯಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) ಸಮರ್ಪಕವಾಗಿ ಜ್ಯಾರಿಗೆ ತಂದು ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿರುವುದು ಹೆಮ್ಮೆಯ ವಿಚಾರ ಎಂದು ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರಕುಮಾರ್ ತಿಳಿಸಿದ್ದಾರೆ.

ಅವರು ಸೋಮವಾರ ಬ್ಯಾಂಕಿನಲ್ಲಿ ಕೆನರಾ ಬ್ಯಾಂಕ್ ಹಾಗೂ ಲೀಡ್ ಡಿಸ್ಟ್ರಿಕ್ಟ್ ಬ್ಯಾಂಕ್, ತೋಟಗಾರಿಕೆ ಇಲಾಖೆ ನಬಾರ್ಡ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿಮಾ ವಿಭಾಗದ ವತಿಯಿಂದ ನಡೆದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.

ಹವಾಮಾನ ವೈಪರಿತ್ಯದಿಂದಾಗುವ ಬೆಳೆಗಳ ಹಾನಿಯನ್ನು ಭರಿಸಲು ಸರಕಾರ ಕೈಗೊಂಡ ಈ ಯೋಜನೆಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಮುಂಚೂಣಿಯಲ್ಲಿದ್ದು, ರಾಜ್ಯದ ಇತರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಮುನ್ನಡೆಯನ್ನು ಕಂಡು ಎಸ್‌ಸಿಡಿಸಿಸಿ ಬ್ಯಾಂಕ್ ದಾಖಲೆ ನಿರ್ಮಿಸಿದೆ. 2022-23ನೇ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 3,45,808 ರೈತರು ಈ ಯೋಜನೆಯಡಿ ದಾಖಲಾತಿಗೊಂಡಿದ್ದು, ಈ ಪೈಕಿ ಎಸ್‌ಸಿಡಿಸಿಸಿ ಬ್ಯಾಂಕ್ ಮೂಲಕ ಉಭಯಜಿಲ್ಲೆಗಳಲ್ಲಿ 1,04,895 ರೈತರು ಈ ಯೋಜನೆಯಲ್ಲಿ ದಾಖಲಾತಿ ಪಡೆದು, ರೂ.24.14 ಕೋಟಿ ವಿಮಾ ಪ್ರೀಮಿಯಂ ಜಮೆಯಾಗಿದೆ ಎಂದು ಡಾ| ಎಂ.ಎನ್. ರಾಜೇಂದ್ರಕುಮಾರ್ ತಿಳಿಸಿದರು.

ಬೆಳೆ ಸಾಲ ಪಡೆದರೈತರಿಗೆ ವಿಮೆ: ಬೆಳೆ ಸಾಲ ಪಡೆದರೈತರಿಗೆ ವಿಮಾಯೋಜನೆಯನ್ನು ಮಾಡಿಸುವ ಬಗ್ಗೆ ಎಸ್‌ಸಿಡಿಸಿಸಿ ಬ್ಯಾಂಕ್ ಚಿಂತನೆ ನಡೆಸಿದೆ. ಕೃಷಿ ಬೆಳೆ ಸಾಲ ಮಾಡಿದ ರೈತ ಅಕಾಲಿಕ ಮೃತ ಪಟ್ಟರೆ ಅವರ ಕುಟುಂಬಕ್ಕೆ ಹೊರಯಾಗಬಾರದೆಂಬ ಚಿಂತನೆಯಿಂದ ರೈತರಿಗೆ ಈ ವಿಮಾಯೋಜನೆ ಆಧಾರವಾಗುತ್ತದೆ ಎಂದು ಡಾ| ಎಂ.ಎನ್. ರಾಜೇಂದ್ರಕುಮಾರ್ ತಿಳಿಸಿದರು.

ಡಾ| ಎಂ.ಎನ್. ರಾಜೇಂದ್ರಕುಮಾರ್‌ಅವರನ್ನು ಅಭಿನಂದಿಸಿ ಮಾತನಾಡಿದ ತೋಟಗಾರಿಕೆ‌ ಇಲಾಖೆಯ‌ ಉಪನಿರ್ದೇಶಕರಾದ ಎಚ್.ಎನ್.ನಾಯಕ್ ಸಹಕಾರ ತತ್ವದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ‌ ಎಸ್‌ಸಿಡಿಸಿಸಿ ಬ್ಯಾಂಕ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅದರಲ್ಲೂ ರೈತಪರ ನಿಲುವಿನಲ್ಲಿ ಹಾಗೂ ಚಿಂತನೆಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಕಾರ್ಯವೆಸಗುತ್ತಿರುವುದು ಅಭಿನಂದನಾರ್ಹ. ಡಾ| ಎಂ.ಎನ್. ರಾಜೇಂದ್ರಕುಮಾರ್‌ ಅವರ ದೂರದರ್ಶಿ ನಾಯಕತ್ವ‌ ಇದಕ್ಕೆ ಪ್ರೇರಣೆಯಾಗಿದ್ದು, ಇವರ ಮಾರ್ಗದರ್ಶನದಲ್ಲಿ ಸಹಕಾರ ಕ್ಷೇತ್ರವು‌ ಇನ್ನಷ್ಟು‌ಉಜ್ವಲತೆಯನ್ನು ಪಡೆಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಲೀಡ್ ಡಿಸ್ಟ್ರಿಕ್ಟ್ ಮೆನೇಜರ್ ಪ್ರವೀಣ್, ನಬಾರ್ಡ್‌ ಡಿಡಿ‌ಎಂ ಶ್ರೀಮತಿ ಸಂಗೀತಾಕರ್ತ, ಸಹಕಾರಿ ಸಂಘಗಳ ಉಪನಿಬಂಧಕರಾದ ಪ್ರವೀಣ್ ಬಿ. ನಾಯಕ್, ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ‌ ಇದರ ವಿಮಾ ವಿಭಾಗದ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕರಾದ ಶಾಂತನುದಾಸ್, ಕ್ಷೇತ್ರ ಮಾರಾಟ ವ್ಯವಸ್ಥಾಪಕರು ಸತೀಶ್, ತೋಟಗಾರಿಕೆ‌ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪ್ರವೀಣ್ ಕೆ, ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ರವೀಂದ್ರ, ಮಹಾ ಪ್ರಬಂಧಕರಾದ ಗೋಪಿನಾಥ್ ಭಟ್, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸುಧೀರ್‌ ಕುಮಾರ್ ಹಾಗೂ ಬ್ಯಾಂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.

ಲೀಡ್ ಡಿಸ್ಟ್ರಿಕ್ಟ್ ಮೆನೇಜರ್ ಪ್ರವೀಣ್ ಸ್ವಾಗತಿಸಿದರು. ಸಹಕಾರಿ ಸಂಘಗಳ ಉಪನಿಬಂಧಕರಾದ ಪ್ರವೀಣ್ ಬಿ. ನಾಯಕ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!