spot_img
Monday, March 16, 2026
spot_img

ಇನ್ನಾದರೂ ರಾಜ್ಯ ಬಿಜೆಪಿ ಪ್ರಬುದ್ಧ ರಾಜಕಾರಣಕ್ಕೆ ಮುಂದಾಗಲಿ !

ನಾಯಕತ್ವದ ಹಪಾಹಪಿಯಿಂದ ಹೊರಬರಲಿ | ಹಾಸ್ಯಾಸ್ಪದ ಪ್ರಹಸನಗಳನ್ನು ನಿಲ್ಲಿಸಲಿ. 

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಇತ್ತೀಚೆಗೆ ನೀಡಿರುವ ಹೇಳಿಕೆಯೊಂದು ರಾಜ್ಯ ಬಿಜೆಪಿಯ ಅಧ್ಯಕ್ಷ ಸ್ಥಾನದ ಬಗೆಗಿರುವ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದೆ. ʼಪ್ರಜಾಪ್ರಭುತ್ವ ನೆಲೆಯಲ್ಲಿ ನಮ್ಮ ಪಕ್ಷದ(ಬಿಜೆಪಿ) ಆಂತರಿಕ ಚುನಾವಣಾ ಪ್ರಕ್ರಿಯೆ ದೇಶದಾದ್ಯಂತ ಜಾರಿಯಲ್ಲಿದೆʼ ಎಂದಿರುವುದಕ್ಕೆ ಪ್ರತಿಕ್ರಿಯಿಸಿ ವರದಿಗಾರರೊಬ್ಬರು ಕೇಳಿದ್ದ ʼಒಂದು ವರ್ಷದ ಹಿಂದೆ ವಿಜಯೇಂದ್ರ ಅವರನ್ನು ಬಿಜೆಪಿಯ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ನೇಮಕ ಮಾಡಿರುವುದರಿಂದ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಡೆಯುತ್ತದೆಯೇ ?ʼ ಎಂಬ ಪ್ರಶ್ನೆಗೆ, ವಿಜಯೇಂದ್ರ ನೇಮಕವು “ಅನಿವಾರ್ಯ” ಆಗಿತ್ತು ಮತ್ತು ಈಗ ದೇಶಾದ್ಯಂತ ಚುನಾವಣೆ ನಡೆಯಲಿದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಈಗ ರಾಜಕೀಯವಾಗಿ ಒಂದಿಷ್ಟು ಚರ್ಚೆಗೂ ಕಾರಣವಾಗಿದೆ.

ಕೇಂದ್ರ ಬಿಜೆಪಿಯಲ್ಲಿಯೂ ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆ ನಡೆಯುತ್ತಿದೆ. ಇತ್ತ, ರಾಜ್ಯ ಬಿಜೆಪಿಗೆ ವಿಜಯೇಂದ್ರ ಯಡಿಯೂರಪ್ಪ ಅಧ್ಯಕ್ಷರಾಗಿರುವುದು ಬಿಜೆಪಿಯ ಒಂದು ಬಣಕ್ಕೆ  ಸುತಾರಾಂ ಇಷ್ಟವಿಲ್ಲ. ರಾಜ್ಯದ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಶಿಫಾರಸ್ಸಿಗೆ ತಕ್ಕಂತೆ ಸದಾ ತಲೆ ಅಲ್ಲಾಡಿಸುವ ಬಿಜೆಪಿ ಹೈಕಮಾಂಡ್‌ ಬಗ್ಗೆಯೂ ಯಾವುದೇ ಅಂಜಿಕೆ ಇಲ್ಲದೇ ಯತ್ನಾಳ್‌ ತಮ್ಮದೇ ಒಂದು ಬಣ ಸೃಷ್ಟಿಸಿಕೊಂಡು ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಸಮರ ಸಾರಿರುವುದು ಗೊತ್ತಿರುವ ವಿಷಯ. ಆರ್.‌ ಅಶೋಕ್‌ ಅವರನ್ನು ವಿಧಾನಸಭಾ ವಿರೋಧ ಪಕ್ಷದ ನಾಯಕರಾಗಿ ನೇಮಕ ಮಾಡಿದಾಗಲೂ ಅಸಮಧಾನಗೊಂಡಿತ್ತು ಈ ಬಣ. ಪುತ್ರನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟಾಭಿಷೇಕ, ವಿಧಾನಸಭೆ ವಿಪಕ್ಷ ನಾಯಕರಾಗಿ ಆರ್. ಅಶೋಕ್ ಆಯ್ಕೆಗೊಳಿಸುವಂತೆ ಮಾಡಿ ಯಡಿಯೂರಪ್ಪ ಮತ್ತೆ ಪಕ್ಷದಲ್ಲಿ ತಾವು ಅಧಿಕಾರದ ಕೇಂದ್ರ ಸ್ಥಾನವಾಗಿ ಸಾಬೀತು ಮಾಡಿಕೊಂಡರು. ಈ ಎಲ್ಲಾ ಕಾರಣಕ್ಕಾಗಿ ಯಡಿಯೂರಪ್ಪ ಅವರಿಗೆ ಅತ್ಯಾಪ್ತರೆನ್ನಿಸಿಕೊಂಡವರೂ ಕೂಡ ʼಪಕ್ಷ ಯಾವುದೇ ಒಬ್ಬ ವ್ಯಕ್ತಿಯ ಮೇಲೆ ಅವಲಂಬಿತವಾಗಿಲ್ಲʼ ಎಂಬಂತೆ ಹೈಕಮಾಂಡ್‌ಗೂ ಮುಲಾಜಿಲ್ಲದೆ ಅಭಿಪ್ರಾಯ ಹೊರಹಾಕಿದರು.

ರಾಜ್ಯದ ಬಿಜೆಪಿಯಲ್ಲಿ ಸರ್ವೋಚ್ಛ ನಾಯಕರಾಗಿ ಗುರುತಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಬಿ. ಎಸ್‌ ಯಡಿಯೂರಪ್ಪ ಅವರನ್ನೂ ಬಿಜೆಪಿಯ ಪಕ್ಷದ ಒಳಗೆ ಇರುವವರೇ ಕಟುವಾಗಿ ಟೀಕಿಸುವವರೆಗೆ ಕಾಲ ಬಂದಿದೆ. ಇವೆಲ್ಲದಕ್ಕೂ ಯಡಿಯೂರಪ್ಪ ಅವರಿಗೆ ತಮ್ಮ ಪುತ್ರನ ಮೇಲಿನ ಇಲ್ಲಸಲ್ಲದ ಪ್ರೀತಿಯೇ ಕಾರಣ. ಯಡಿಯೂರಪ್ಪ ಅವರ ಸ್ವಾರ್ಥದ ಕಾರಣದಿಂದಲೇ ರಾಜ್ಯ ಬಿಜೆಪಿ ಒಡೆದು ಚೂರಾಯಿತು. ದಕ್ಷಿಣ ಭಾರತದಲ್ಲಿ ಬಿಜೆಪಿಯ ಹೆಸರು ಕೇಳುವಂತೆ ಮಾಡಿರುವ ಕೀರ್ತಿಯೂ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ, ಬಿಜೆಪಿ ಒಡೆದು ಎರಡು ಮೂರಾಗುವಂತೆ ಮಾಡಿರುವ ಕೀರ್ತಿಯೂ ಅವರಿಗೇ ಸಲ್ಲುತ್ತದೆ. ಇವೆಲ್ಲಾ ಬಿಜೆಪಿಯವರದ್ದೇ ಅಭಿಪ್ರಾಯ. ಏನೇ ಇರಲಿ, ಯಡಿಯೂರಪ್ಪ ಒಬ್ಬ ಮಾಸ್‌ ಲೀಡರ್‌ ಎನ್ನುವುದರಲ್ಲಿ ಸಂಶಯವಿಲ್ಲ. ಪಕ್ಷದ ಪ್ರಮುಖ ಹುದ್ದೆಗಳು ವಿವಿಧ ಹಂತಗಳಲ್ಲಿ ಬಲಾಢ್ಯರು, ಪಟ್ಟಭದ್ರ ಹಿತಾಸಕ್ತಿಗಳು ಮೇಲುಗೈ ಸಾಧಿಸುವಂತಾಗಿದ್ದು ಯಡಿಯೂರಪ್ಪ ಅವರ ಕಾಲದಲ್ಲಿ. ಪಕ್ಷದೊಳಗಿನ ಒಂದು ಸಾಂಸ್ಥಿಕ ಶಿಸ್ತು ಕದಡಿ ಹೋಗಿರುವುದಕ್ಕೆ ಇವೆಲ್ಲವೂ ಒಂದು ಕಾರಣವಾಗಿ ಸೇರ್ಪಡೆಯಾಗುತ್ತಲೇ ಹೋಗುತ್ತದೆ. ಈವರೆಗೆ ರಾಜ್ಯದಲ್ಲಿ ಬಿಜೆಪಿ ಒಂದು ಪರಿಪೂರ್ಣ ಪಕ್ಷವಾಗಿ ಬೆಳೆಯುವುದಕ್ಕೆ ಪದೆ ಪದೆ ಸೋಲುತ್ತಿರುವುದಕ್ಕೂ ಇವೇ ಮೊದಲಾದವು ಕಾರಣ. ಇವೆಲ್ಲವನ್ನು ಯಡಿಯೂರಪ್ಪ ಹಾಗೂ ಅವರ ಅತ್ಯಾಪ್ತ ಬಳಗದವರು ಇದೊಂದು ಚಾರಿತ್ರಿಕ ಸಂದರ್ಭದಲ್ಲಿ ಆಗಬೇಕಾಗಿರುವ ಅನಿವಾರ್ಯತೆ ಎಂಬಂತೆ ಸಮರ್ಥಿಸಿಕೊಳ್ಳಬಹುದಾದರೂ, ಇದು ಬಿಜೆಪಿಯ ಒಂದು ಶಿಸ್ತು ಸ್ವರೂಪ ಸಂಪೂರ್ಣವಾಗಿ ಕಳೆದುಕೊಳ್ಳಲು  ಆದಿಯಾಯ್ತು. ಸ್ವಾರ್ಥಕ್ಕೆ ಪ್ರತಿಸ್ವಾರ್ಥ ಬೆಳೆಯಿತು. ಅಧಿಕಾರಕ್ಕಾಗಿ ಪಕ್ಷದ ಶಿಸ್ತನ್ನು ಬಿಟ್ಟು ಪ್ರಭಾವಿಗಳು ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡರು.

ಆ ಬಳಿಕ ಈ ಬೂದಿಯೊಳಗೆ ಕುದಿಯುವ ಬೆಂಕಿಗೆ ಮತ್ತಷ್ಟು ಶಕ್ತಿ ದೊರಕಿದ್ದು, ವಿಜಯೇಂದ್ರ ಯಡಿಯೂರಪ್ಪ ರಾಜ್ಯ ಬಿಜೆಪಿಯ ಅಧ್ಯಕ್ಷರಾದಾಗ. ಪಕ್ಷದ ಒಬ್ಬ ಶಾಸಕನೂ ಆಗಿರದ ಕಾಲಕ್ಕೆ ವಿಜಯೇಂದ್ರ ತಮ್ಮ ತಂದೆ ಯಡಿಯೂರಪ್ಪ ಅವರ ʼಸೂಪರ್‌ ಸಿಎಂʼ ಆಗಿ ಇದ್ದದ್ದು ಕೂಡ ಪಕ್ಷದ ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ದೇಶದಾದ್ಯಂತ ಬಿಜೆಪಿ ಜಯ ಸಾಧಿಸುತ್ತಿದ್ದ ಕಾಲದಲ್ಲಿ, ʼದೇಶದಷ್ಟೇ ದೊಡ್ಡದಾದ ಬಿಜೆಪಿʼಯಂತಹ ಪಕ್ಷದ ರಾಜ್ಯ ಘಟಕವನ್ನು ನಿಭಾಯಿಸುವುದಕ್ಕೆ ವಿಜಯೇಂದ್ರ ಸಮರ್ಥರೇ ಅಲ್ಲ ಎನ್ನುವ ಮಾತು ಸ್ವತಃ ಬಿಜೆಪಿಯವರಿಂದಲೇ ಕೇಳಿಬಂತು. ವಿಜಯೇಂದ್ರ ಬೆಂಬಲಿಗರ ಗುಂಪು ಅವರ ಸರಿ ವಯಸ್ಸಿನವರೇ ಆಗಿದ್ದರು. ಹಿರಿಯರ ಗುಂಪು ಅವರನ್ನು ಸದಾ ಟೀಕಿಸುತ್ತಲೇ ಬಂದಿದೆ. ವಿಧಾನಸಭೆ ಚುನಾವಣೆಯ ಹೀನಾಯ ಸೋಲು, ಲೋಕಸಭೆಯಲ್ಲಿ ಕಳೆದ ಚುನಾವಣೆಗಿಂತ ಕಳಪೆ ಪ್ರದರ್ಶನ, ಉಪ ಚುನಾವಣೆಯಲ್ಲಿ ಆದ ತೀವ್ರ ಮುಖಭಂಗ ವಿಜಯೇಂದ್ರ ಅವರ ನೇತೃತ್ವವನ್ನು ಬೊಟ್ಟು ಮಾಡಿ ತೋರಿಸಿತ್ತು. ಬಿಜೆಪಿ ಎಂದಿಗಿಂತಲೂ ಅಂತ್ಯಂತ ಕೆಳಮಟ್ಟಕ್ಕೆ ಇಳಿಯುವಂತಾಗಿ ಬರೀ ವೈಯಕ್ತಿಕ ಟೀಕೆಯಿಂದಲೇ ಮುಳುಗಿ ಹೋಯಿತು. ಆಡಳಿತರೂಢ ಪಕ್ಷದೊಂದಿಗೆ ಪ್ರಬುದ್ಧ ಸಂವಾದಕ್ಕೆ ಬಿಜೆಪಿ ತೆರೆದುಕೊಳ್ಳುವುದಕ್ಕೆ ಎಲ್ಲಿಯೂ ಪ್ರಯತ್ನದ ಹಾದಿಯನ್ನು ಹಿಡಿಯಲಿಲ್ಲ. ಅಪ್ರಬುದ್ಧ ಟೀಕೆಗಳನ್ನು ಮಾಡಿ ಆಡಳಿತರೂಢ ಕಾಂಗ್ರೆಸ್‌ ಮುಂದೆ ಮತ್ತೆ ಮತ್ತೆ ಅಧ್ವಾನ ಅನುಭವಿಸಿತು. ರಾಜ್ಯ ಬಿಜೆಪಿಯ ಅಸಮರ್ಥ ನಾಯಕತ್ವದ ಮುಂದೆ ಪಕ್ಷದ  ಮೌಲ್ಯಗಳು ನೆಲಕಚ್ಚಿದವು.

ರಾಜ್ಯ ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಫಲ್ಯವನ್ನು ವಿರೋಧಿಸುವಲ್ಲಿ ರಾಜ್ಯ ಬಿಜೆಪಿ ತೋರಿದ ಅಪ್ರಬುದ್ಧತೆ, ವೈಯಕ್ತಿಕ ಟೀಕೆಗಳಿಗಾಗಿ ಮಾಡುತ್ತಿರುವ ತೀರಾ ಹಾಸ್ಯಾಸ್ಪದ ಪ್ರಹಸನಗಳು, ವಿರೋಧಿಸುವ ಉದ್ದೇಶದಲ್ಲಿ ಬಳಸುತ್ತಿರುವ ಅತಿಯಾದ ಸುಳ್ಳುಗಳೆಲ್ಲಾ ಜನರಲ್ಲಿ ರಾಜ್ಯ ಬಿಜೆಪಿ ಬಗ್ಗೆ ಅಸಹ್ಯ ಎನ್ನುವಷ್ಟರ ಮಟ್ಟಿಗೆ ತಲುಪಿದೆ ಎಂದರೇ ತಪ್ಪಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ಮುಡಾ ಹಗರಣ, ವಕ್ಫ್‌ ಆಸ್ತಿ ವಿವಾದ ಸೇರಿದಂತೆ ಬಿಜೆಪಿ ಮಾಡಿದ ಎಲ್ಲಾ ಆರೋಪಗಳು ಸಾರ್ವಜನಿಕ ವಲಯದಲ್ಲಿ ತನಗೆ ಲಾಭವಾಗುವ ಹಾಗೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರಲಿಲ್ಲ. ಬಹುಶಃ ಇದು ಆಡಳಿತ ಕಾಂಗ್ರೆಸ್‌ ಸರ್ಕಾರಕ್ಕೂ ಬಲವಾದ ಪೆಟ್ಟು ಬೀಳಲಿಲ್ಲ. ಎನ್ನುವಲ್ಲಿಗೆ ಒಂದು ಸಮರ್ಥ ವಿರೋಧ ಪಕ್ಷವಾಗಿಯೂ ಬಿಜೆಪಿ ಕೆಲಸ ಮಾಡುತ್ತಿಲ್ಲ ಎನ್ನುವುದೇ ಇದರ ಅರ್ಥ.

ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಟೀಕಿಸುವ ಸ್ವಪಕ್ಷೀಯರ ಬಣದಲ್ಲಿರುವವರು ಕೂಡ ಸಮರ್ಥರೆಂದೇನಲ್ಲ. ಅಲ್ಲಿಯೂ ಬರೀ ಟೊಳ್ಳುಗಳೇ ಹೆಚ್ಚು ಕಾಣಿಸುತ್ತಿವೆ. ಬಹುಶಃ ಟೀಕೆಯಷ್ಟೇ ಒಬ್ಬ ನಾಯಕನ ಸಾಮರ್ಥ್ಯವನ್ನು ನಿರ್ಧರಿಸುವುದಿಲ್ಲ. ನಾಯಕತ್ವಕ್ಕೆ ಒಂದು ಗುರಿ, ಸಿದ್ದಾಂತ, ಉದ್ದೇಶ, ಯೋಜನೆ ಹಾಗೂ ತಂತ್ರಗಾರಿಕೆಯೂ ಮುಖ್ಯ. ಸಂಘಟನಾತ್ಮಕವಾಗಿ ಪಕ್ಷವನ್ನು ಬಲಗೊಳಿಸುವ ಹೆಚ್ಚುಗಾರಿಕೆಯೂ ರಾಜಕೀಯ ನಾಯಕತ್ವಕ್ಕೆ ಮುಖ್ಯವಾಗುತ್ತದೆ. ಅಂತಹದ್ದೇನೂ ಇಲ್ಲದೆ ಇರುವ ಒಂದು ನಾಯಕತ್ವ ಅದು ಒಂದು ನಿರ್ದಿಷ್ಟ ಸಂದರ್ಭದಲ್ಲಿ ಸ್ವಾರ್ಥಕ್ಕಾಗಿ, ಅಧಿಕಾರಕ್ಕಾಗಿ ಹಪಹಪಿಸುವ ನಾಯಕತ್ವ ಅಷ್ಟೇ ಆಗಿ ಉಳಿಯುತ್ತದೆ. ಇದು ಕೊರತೆ ಕಾಂಗ್ರೆಸ್‌ನಲ್ಲಿಯೂ ಇದೆ ಎನ್ನುವುದನ್ನು ಖಂಡಿತ ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ. ಬಹುಶಃ ರಾಜ್ಯ ಬಿಜೆಪಿಯಲ್ಲಿ ಇದು ಹೆಚ್ಚಾಗಿ ಕಾಣಿಸುತ್ತಿರುವುದೇ ರಾಜ್ಯದಲ್ಲಿ ಒಮ್ಮೆಯೂ ತನ್ನ ಸ್ವಂತ ಬಲದಲ್ಲಿ ಬಿಜೆಪಿ ಅಧಿಕಾರಕ್ಕೆ ಏರುವುದಕ್ಕೆ ಸಾಧ್ಯವಾಗದೆ ಇರುವುದಕ್ಕೆ ಕಾರಣ. ಇದೇ ಸ್ಥಿತಿ ಮುಂದುವರಿದರೇ ರಾಜ್ಯ ಬಿಜೆಪಿ ಪಾಲಿಗೆ ಮೈತ್ರಿಯೋ, ಆಪರೇಷನ್‌ ಕಮಲವೋ ಅಷ್ಟೇ ಗತಿ.

ಬರೀ ಹಿಂದುತ್ವದ ಹೆಸರಿನಲ್ಲಿ ಸಾಧಿಸಿದ ಜಯ ಬಹುಶಃ ಸುಧೀರ್ಘ ಕಾಲದವರೆಗೆ ರಾಜಕೀಯ ಅಸ್ತ್ರವಾಗಿ ಬಿಜೆಪಿಯೊಂದಿಗೆ ಇರಲಾರದು. ರಾಜಕೀಯದ ಶಾಶ್ವತ ಯಶಸ್ಸಿಗೆ ಬೌದ್ಧಿಕ ಶ್ರೀಮಂತಿಕೆಯೂ ಮುಖ್ಯ. ಬೌದ್ಧಿಕ ಬಡತನದಿಂದ ಬಿಜೆಪಿ ಹೊರಬರಬೇಕಿರುವ ತುರ್ತಿದೆ. ಅಟಲ್‌ ಬಿಹಾರಿ ವಾಜಪೇಯಿ ಅವರ ಆದರ್ಶ ರಾಜಕಾರಣವನ್ನು, ಸಭ್ಯ ರಾಜಕಾರಣವನ್ನು, ಶಿಸ್ತಿನ ರಾಜಕಾರಣವನ್ನು, ಪ್ರಬುದ್ಧ ರಾಜಕಾರಣವನ್ನು ಪಾಲಿಸುವ ಮನೋಧರ್ಮ ಈಗಿನ ಬಿಜೆಪಿಯ ನಾಯಕರು ಬೆಳೆಸಿಕೊಳ್ಳುವ ಅಗತ್ಯವಿದೆ. ಬಹುಶಃ ಇದರ ಮೇಲೂ ಬಿಜೆಪಿಯ ಭವಿಷ್ಯ ನಿರ್ಧಾರವಾಗುತ್ತದೆ.

ಬರೀ ದ್ವೇಷವೇ ರಾಜಕಾರಣವಲ್ಲ. ಟೀಕೆಗಳೇ ರಾಜಕಾರಣವಲ್ಲ. ಆರೋಪಗಳೇ ರಾಜಕಾರಣವಲ್ಲ. ಅದಕ್ಕೂ ಮೀರಿದ ಪ್ರಬುದ್ಧತೆ ರಾಜಕಾರಣಕ್ಕೆ ಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳುವವರೆಗೆ ಬಹುಶಃ ಇದೇ ಸ್ಥಿತಿಯಲ್ಲಿ ರಾಜ್ಯ ಬಿಜೆಪಿ ಇರಲಿದೆ ಅನ್ನಿಸುತ್ತದೆ. ಉಳಿದದ್ದು ನಿಮ್ಮ ಯೋಚನೆಗೆ ಬಿಟ್ಟಿದ್ದು.

ಶ್ರೀರಾಜ್‌ ವಕ್ವಾಡಿ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!