spot_img
Sunday, February 15, 2026
spot_img

ʼಸುʼ ಅಂದ್ರೆ ಸುಕ್ಕಿನುಂಡೆ ಎನ್ನುವ ಬಿಜೆಪಿ ಮತ್ತು ದುರ್ಬಲಗೊಂಡ ಕಾಂಗ್ರೆಸ್‌ !

ಉಪಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮುಂದಿದೆ ಮರ್ಯಾದೆ ಪ್ರಶ್ನೆ.

ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗಾಗಿ ಉಪ ಚುನಾವಣೆ ನಡೆಯಲಿದ್ದು, ಚುನಾವಣೆಯ ಬಿಸಿ ಏರಿದೆ. ಆಡಳಿತರೂಢ ಕಾಂಗ್ರೆಸ್‌ ಗೆ ಇದು ಅಕ್ಷರಶಃ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್‌ ಗೂ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಮೈತ್ರಿ ಸಂಬಂಧವನ್ನು ಹೊಂದಿರುವುದರಿಂದ ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಸೀಟು ಹಂಚಿಕೆ ಹಾಗೂ ಚುನಾವಣಾ ಕಾರ್ಯತಂತ್ರದ ಬಗ್ಗೆ ಭಿನ್ನಾಭಿಪ್ರಾಯ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣ, ವಾಲ್ಮೀಕಿ ಅಕ್ರಮ ಹಣ ವರ್ಗಾವಣೆ ವಿವಾದ, ವಕ್ಫ್‌ ಆಸ್ತಿ ವಿವಾದವನ್ನು ಎದರಿಸುತ್ತಿದೆ. ಆದಾಗ್ಯೂ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ. ಕೆ ಶಿವಕುಮಾರ್‌ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಉಪ ಚುನಾವಣೆಯನ್ನು ಸಮರ್ಥವಾಗಿ ಎದರಿಸಬೇಕೆಂಬ ನಿಟ್ಟಿನಲ್ಲಿ ಮುನ್ನುಗ್ಗುತ್ತಿದೆ.‌ ಕಾಂಗ್ರೆಸ್‌ ಪ್ರತಿಪಕ್ಷಗಳಿಂದ ದೊಡ್ಡ ಮಟ್ಟದ ಆರೋಪಗಳನ್ನು ಎದುರಿಸುತ್ತಿದ್ದರೂ, ಅತಿಯಾದ ಆತ್ಮ ವಿಶ್ವಾಸದಲ್ಲಿ ಕಾಂಗ್ರೆಸ್‌ ಇದೆ ಎಂಬಂತೆ ಕಾಣಿಸುತ್ತಿದೆ. ಆಡಳಿತರೂಢ ಪಕ್ಷ ಕಾಂಗ್ರೆಸ್‌ ನಲ್ಲಿನ ಕೆಲವು ವೈಫಲ್ಯವನ್ನು ಬಿಜೆಪಿ, ಜೆಡಿಎಸ್‌ ರಾಜಕೀಯವಾಗಿ ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕೆಂಬ ದೃಷ್ಟಿಯಲ್ಲಿ ಮಾಡಿದ ಸರ್ವ ಪ್ರಯತ್ನ ದೊಡ್ಡ ಮಟ್ಟದಲ್ಲೇನೂ ಪರಿಣಾಮಕಾರಿಯಾಗಿ ಪ್ರಭಾವಿಸಲಿಲ್ಲ.

ಈ ಉಪ ಚುನಾವಣೆಗೂ ವಿಪಕ್ಷಗಳು ಇವನ್ನೇ ಅಸ್ತ್ರಗಳನ್ನಾಗಿ ಬಳಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ʼಸು ಎಂದರೇ ಸುಕ್ಕಿನುಂಡೆ ಎನ್ನುವ ಬಿಜೆಪಿ ಎದುರು ಪಕ್ಷ ಸಂಘಟನೆಯಲ್ಲಿ ನಿತ್ಯ ದುರ್ಬಲಗೊಳ್ಳುತ್ತಿರುವ  ಕಾಂಗ್ರೆಸ್‌ ನಡುವಿನ ಈ ಪ್ರತಿಷ್ಠೆಯ ಹಣಾಹಣಿ ಬಾರಿ ಕುತೂಹಲ ಮೂಡಿಸಿದೆ. ಚನ್ನಪಟ್ಟಣ, ಶಿಗ್ಗಾಂವ್‌ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ರಾಜ್ಯ ಮಟ್ಟದ ನಾಯಕರು ಬೀಡುಬಿಟ್ಟಿದ್ದಾರೆ. ಆರೋಪ ಪ್ರತ್ಯಾರೋಪಗಳ ನಡುವೆ ಉಪ ಚುನಾವಣೆ ರಂಗೇರುತ್ತಿದೆ.

ಕಾಂಗ್ರೆಸ್‌ ಗ್ಯಾರಂಟಿಗಳಿಗೆ ಕೇಂದ್ರದಲ್ಲೇ ಕೂತು ಮೋದಿ ಬಾಣ ಬಿಟ್ಟಿದ್ದು, ದೊಡ್ಡ ಮಟ್ಟದಲ್ಲಿ ಈ ಮೂರು ಕ್ಷೇತ್ರಗಳಲ್ಲಿ ಪರಿಣಾಮ ಬೀರದೆ ಇದ್ದರೂ, ಮೋದಿ ಹೇಳಿರುವ ಕಾರಣಕ್ಕೆ ಒಂದಿಷ್ಟು ಚರ್ಚೆಯಾಗುವ ಸಾಧ್ಯತೆ ಇದೆ. ಮೋದಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರಾದರೂ, ಕಾಂಗ್ರೆಸ್‌ ವೈಫಲ್ಯವೇ ಎದ್ದು ಕಾಣಿಸುತ್ತಿರುವುವಾಗ ಈ ಗ್ಯಾರಂಟಿ ಯೋಜನೆಗಳೂ ಈ ಬಾರಿಯ ಉಪ ಚುನವಣೆಯಲ್ಲಿ ಬಹಳ ದೊಡ್ಡ ಬದಲಾವಣೆ ತಂದುಕೊಡಲಿದೆ ಎಂದು ತೀರಾ ಸುಲಭದಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ. ಮೂರು ಕ್ಷೇತ್ರಗಳಲ್ಲಿ ವೈಯಕ್ತಿಕ ಪ್ರತಿಷ್ಠೆಯ ಆರೋಪ, ಪ್ರತ್ಯಾರೋಪಗಳು ಆಗುತ್ತಿವೆ ಹೊರತು, ಬೇರೆ ಏನೂ ಆಗುತ್ತಿಲ್ಲ.

ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗಳು ಹಾಗೂ ವಿವಾದಗಳು ಮುಖ್ಯಮಂತ್ರಿ ಬದಲಾವಣೆಯವರೆಗೆ ತಂದು ನಿಲ್ಲಿಸಿರುವ ಕಾರಣಕ್ಕೆ ಈ ಮೂರು ವಿಧಾನಸಭಾ ಕ್ಷೇತ್ರಗಳ ಚುನಾವಣೆ ಕಾಂಗ್ರೆಸ್‌ ಪಾಲಿಗೆ ʼಮರ್ಯಾದೆ ಉಳಿಸಿಕೊಳ್ಳುವ ಚುನಾವಣೆʼ ಅಷ್ಟೇ ಅಲ್ಲದೇ, ಸಿದ್ದರಾಮಯ್ಯ ಅವರ ರಾಜಕೀಯ ಜೀವನದಲ್ಲಿ ಎಂದೂ ಅಂಟದ ಕಳಂಕವನ್ನು ಅಳಿಸುವ ಚುನಾವಣೆಯೂ ಹೌದು. ಹಾಗಾಗಿ ಕಾಂಗ್ರೆಸ್‌ ತುಸು ಹೆಚ್ಚೇ ಹುಮ್ಮಸ್ಸಿನಿಂದ ಗೆಲುವಿಗಾಗಿ ಹೋರಾಡುತ್ತಿದೆ. ಪಂಚ ಗ್ಯಾರಂಟಿಗಳ ನಾಗಾಲೋಟದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್‌ ಸರ್ಕಾರಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣ, ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ವಿವಾದ, ವಕ್ಫ್‌ ನೋಟೀಸ್‌ ಹಗರಣಗಳು ಕಾಂಗ್ರೆಸ್‌ ನ ಆಡಳಿತ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿವೆ. ಬಹುಮತದಲ್ಲಿ ಗೆದ್ದು ಅಧಿಕಾರಕ್ಕೆ ಏರಿದ ಕಾಂಗ್ರೆಸ್‌ ಗೆ ಈ ಮೂರು ವಿಧಾನ ಸಭಾ ಕ್ಷೇತ್ರಗಳಲ್ಲಿ ಸೋತರೂ ಸರ್ಕಾರವೇನೂ ಉರುಳಿ ಬೀಳುವುದಿಲ್ಲ. ಆದರೆ, ಒಂದು ಕ್ಷೇತ್ರದಲ್ಲಿ ಸೋತರೂ ಪ್ರತಿಪಕ್ಷಗಳು ಕಾಂಗ್ರೆಸ್‌ ಮೇಲೆ ರಾಜ್ಯದ ಜನರು ಇರಿಸಿದ ಅಭಿಪ್ರಾಯವನ್ನು ಬದಲಾಯಿಸುವಲ್ಲಿ ಶತ ಪ್ರಯತ್ನ ಮಾಡುವಲ್ಲಿ ಅನುಮಾನವಿಲ್ಲ. ಮಾತ್ರವಲ್ಲದೇ, ಸಿದ್ದರಾಮಯ್ಯ ಅವರ ಮೇಲಿದ್ದ ಅಭಿಪ್ರಾಯ ಕಾಂಗ್ರೆಸ್‌ ಹೈಕಮಾಂಡ್‌ ಅವರಲ್ಲಿಯೂ ಬದಲಾಗುವ ಎಲ್ಲಾ ಸಾಧ್ಯತೆಗಳು ಹೆಚ್ಚಿವೆ ಎಂದು ಕಾಣಿಸುತ್ತಿದೆ.

ಉಪ ಚುನಾವಣೆಯ ಬಳಿಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಂದು ರಾಜಕೀಯ ವಲಯದಲ್ಲೇ ಗುಲ್ಲೆದ್ದಿದೆ. 2023ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದ ಕಾಂಗ್ರೆಸ್‌ ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆದಿತ್ತು. ಎರಡುವರೆ ವರ್ಷಗಳ ಒಪ್ಪಂದದ ಮೇರೆಗೆ ಮುಖ್ಯಮಂತ್ರಿಯನ್ನಾಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಚರ್ಚೆ ದೊಡ್ಡ ಮಟ್ಟದಲ್ಲಾಗಿತ್ತು. ಆದರೇ, ಸಿದ್ದರಾಮಯ್ಯ ಅವರು ಅನೇಕ ಬಾರಿ ಐದು ವರ್ಷಗಳು ತಾವೇ ಮುಖ್ಯಮಂತ್ರಿಯಾಗಿ ಇರಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆದಾಗ್ಯೂ ಮುಖ್ಯಮಂತ್ರಿ ಬದಲಾವಣೆ ವಿಚಾರ ಮೇಲೆ ಬಂದಿದೆ. ಕಾಂಗ್ರೆಸ್‌ ನ ಹೈಕಮಾಂಡ್‌ ಮುಖ್ಯಮಂತ್ರಿ ಬದಲಾವಣೆ ಮಾಡುವ ಯಾವ ಮನಸ್ಥಿತಿಯಲ್ಲಿ ಇಲ್ಲ ಎಂದೇ ಅನ್ನಿಸುತ್ತದೆ. ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಆಗಲೇಬೇಕಾದರೂ ಮೊದಲು ಕಾಣಿಸುವುದು ಡಿಕೆಶಿ. ಡಿಕೆಶಿ ಹೊರತಾಗಿ ಯಾರನ್ನೇ ಮುಖ್ಯಮಂತ್ರಿ ಮಾಡಿದರೂ ಡಮ್ಮಿ ಆಗಿಯೇ ಉಳಿಯುತ್ತಾರೆ. ಇದು ಕಾಂಗ್ರೆಸ್‌ ನ ವೈಫಲ್ಯ ಕೂಡ. ಸಿಎಂ ಸ್ಥಾನಕ್ಕೆ ಸೂಕ್ತವೆನ್ನುವ ಮಟ್ಟಕ್ಕೆ ಕಾಂಗ್ರೆಸ್‌ ಹೊಸ ನಾಯಕರನ್ನು ಬೆಳೆಸಿಲ್ಲ ಎನ್ನುವುದು ಸತ್ಯ. ಹಾಗಾಗಿ ಸದ್ಯಕ್ಕೆ, ಡಿಕೆಶಿ ಅವರಿಗಿಂತ ಸಿದ್ದರಾಮಯ್ಯ ಸಾವಿರ ಪಟ್ಟು ಓಕೆ ಎನ್ನುವ ಮನಸ್ಥಿತಿಯಲ್ಲೇ ಹೈಕಮಾಂಡ್‌ ಇದೆ. ಹಾಗಾಗಿ ಮುಡಾ ಹಗರಣದ ತೀರ್ಪು ಬರುವಲ್ಲಿಯವರೆಗೆ ಮುಖ್ಯಮಂತ್ರಿ ಬದಲಾವಣೆಯ ವಿಚಾರಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಗಮನ ನೀಡುವುದಿಲ್ಲ ಎನ್ನುವ ಎಲ್ಲಾ ಲಕ್ಷಣಗಳು ನೇರವಾಗಿಯೇ ಕಾಣಿಸುತ್ತಿದೆ. ಆದ್ದರಿಂದ ಉಪ ಚುನಾವಣೆ ಆದ ಬಳಿಕವೂ ಮುಖ್ಯಮಂತ್ರಿ ಬದಲಾವಣೆ ವಿಚಾರ ಕಾಂಗ್ರೆಸ್‌ ಪಾಲಿಗೆ ಅಪ್ರಸ್ತುತವಾಗಿಯೇ ಕಾಣಿಸಲಿದೆ ಎಂದೇ ಹೇಳಬಹುದು.

ಮೂರು ಕ್ಷೇತ್ರಗಳ ಪ್ಲಸ್‌ ಮೈನಸ್‌ :

ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರ್‌ ಸ್ವಾಮಿ ಪರ ಬಿಎಸ್‌ವೈ-ಹೆಚ್‌ಡಿಕೆ ಪ್ರಚಾರ ಜಂಟಿಯಾಗಿ ಪ್ರಚಾರ ನಡೆಸಿದ್ದರೂ ನಿಲುವು ಬಿಜೆಪಿಯಲ್ಲಿ ಈವರೆಗೂ ಅಷ್ಟಾಗಿ ಕಾಣಿಸುತ್ತಿಲ್ಲ. ಚೆನ್ನಪಟ್ಟಣದಲ್ಲಿ ಹಿರಿಗೌಡರ ಕುಟುಂಬ ವರ್ಸಸ್‌ ಡಿಸಿಎಂ ಶಿವಕುಮಾರ್‌ ಅವರ ನಡುವಿನ ಪ್ರತಿಷ್ಠೆಯ ಹೋರಾಟವಾಗಿಯೇ ಕಾಣಿಸುತ್ತಿದೆ. ಜೆಡಿಎಸ್‌ ಪ್ರಭಾವ ಹೆಚ್ಚಿದೆ ಎಂದು ಕಾಣಿಸಿಕೊಂಡರೂ, ಡಿಕೆಶಿ ಜಾತಿ ಪ್ರಭಾವವೂ ಚೆನ್ನಪಟ್ಟಣದಲ್ಲಿದೆ. ಒಕ್ಕಲಿಗ ಮತದಾರರ ಬಲ ಹೊಂದಿರುವ ಈ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಎರಡನೇ ಸ್ಥಾನದಲ್ಲಿದ್ದರೆ ದಲಿತರು ಮೂರನೇ ಸ್ಥಾನದಲ್ಲಿದ್ದು ನಿರ್ಣಾಯಕವಾಗಿವೆ. ಜಾತಿ ಲೆಕ್ಕಾಚಾರದಲ್ಲಿ ನೋಡುವುದಾದರೆ, ಒಕ್ಕಲಿಗರು, ಪರಿಶಿಷ್ಟ ಜಾತಿ, ಮುಸ್ಲಿಂ ಸಮುದಾಯ, ಲಿಂಗಾಯತರ, ಹಾಗೂ ಕುರುಬರು ಇಲ್ಲಿ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ ಯೋಗೇಶ್ವರ ಪರವಾದ ಒಲವು ಕಾಣಿಸುತ್ತಿದೆ. ಆದರೂ ನಿಖಿಲ್‌ ಕುಮಾರಸ್ವಾಮಿ ಅವರನ್ನು ತೀರಾ ಏನೂ ಅಲ್ಲ ಎಂಬಂತೆ ಅಲ್ಲಗಳೆಯುವಂತಿಲ್ಲ.

ಶಿಗ್ಗಾವಿಯಲ್ಲಿ ಪಂಚಮಸಾಲಿ ಲಿಂಗಾಯತರೇ ಬಿಜೆಪಿ ಮೇಲೆ ಮುನಿಸಿಕೊಂಡಿದ್ದಾರೆ. ಪ್ರಬಲ ಪಂಚಮಸಾಲಿ ಲಿಂಗಾಯತರ ಪ್ರಭಾವ ಹೆಚ್ಚಿರುವ ಕ್ಷೇತ್ರದಿಂದ ಮಾಜಿ ಸಿಎಂ ಬಸವರಾಜ್‌ ಬೊಮ್ಮಾಯಿ ಪುತ್ರ ಭರತ್‌ ಅಭ್ಯರ್ಥಿ, ಕಾಂಗ್ರೆಸ್‌ ನಿಂದ ಪಠಾಣ್‌ ಕಣದಲ್ಲಿದ್ದಾರೆ. ಸವಣೂರು ಹೋಬಳಿಯಲ್ಲಿ ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಲಿಂಗಾಯತ ಮತ್ತು ಮುಸ್ಲಿಂ ಸಮುದಾಯ ಹೊರತುಪಡಿಸಿ ಇತರ ಸಮುದಾಯದವರ ಪ್ರಭಾವ ಇಲ್ಲಿ ಕಡಿಮೆ. ಲಿಂಗಾಯತ ಸಮುದಾಯದವರು, ಮುಸ್ಲಿಂ ಸಮುದಾಯದವರು, ಕುರುಬ ಸಮುದಾಯದವರು, ಎಸ್‌ಟಿ-ಎಸ್‌ಟಿ, ಲಂಬಾಣಿ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಬಾರಿ ಸ್ವಲ್ಪ ಮೇಲ್ನೋಟಕ್ಕೆ ಕಾಂಗ್ರೆಸ್‌ ಪರವಾದ ವಾತಾವರಣ ಕಾಣಿಸುತ್ತಿದೆ.

ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಹಳೆ ದೋಸ್ತಿಗಳು ಈ ಬಾರಿ ಒಂದಾಗಿದ್ದಾರೆ. ಮಾಜಿ ಸಚಿವ ಜನಾರ್ದನ್‌ ರೆಡ್ಡಿ ಹಾಗೂ ಮಾಜಿ ಸಚಿವ ಶ್ರೀರಾಮಲು ವೈಮನಸ್ಸು ಮುರಿದು ಒಂದಾಗಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವುದರಿಂದ ಬಿಜೆಪಿಯಲ್ಲಿ ಒಂದು ಸಣ್ಣ ವಿಶ್ವಾಸವಿದೆ. ಕಾಂಗ್ರೆಸ್‌ ಸಂಸದ ತುಕಾರಾಮ್‌ ಅವರಿಗೆ ತಮ್ಮ ಪತ್ನಿಯೇ ಅಭ್ಯರ್ಥಿಯಾಗಿರುವುದರಿಂದ ಗೆಲ್ಲಿಸಿಕೊಡಲೇಬೇಕಾದ ಅನಿವಾರ್ಯಕ್ಕೆ ಎದುರಾಗಿದ್ದಾರೆ. ಪರಿಶಿಷ್ಟ ಪಂಗಡದ ಪ್ರಾಬಲ್ಯ ಹೊಂದಿರುವ ಈ ಕ್ಷೇತ್ರದಲ್ಲಿ ಇವರೇ ಬಹುಸಂಖ್ಯಾತರು. ಬಳಿಕ ದಲಿತ ಸಮುದಾಯ, ಮುಸಲ್ಮಾನ, ಈಡಿಗ, ಕುರುಬ ಸಮುದಾಯಗಳು ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಒಟ್ಟಿನಲ್ಲಿ, ಈ ಉಪ ಚುನಾವಣೆ ಕೆಲವರ ಪ್ರತಿಷ್ಠೆ, ಮುಖ್ಯಮಂತ್ರಿ ಬದಲಾವಣೆ, ಕುಟುಂಬ ರಾಜಕಾರಣ, ಆಡಳಿತ ಸರ್ಕಾರ ಮತ್ತು ವಿಪಕ್ಷಗಳ ಮರ್ಯಾದೆ ಪ್ರಶ್ನೆಯನ್ನು ಮುಂದಿರಿಸಿದೆ. ಚುನಾವಣೆ ಮತ್ತು ಚುನಾವಣೆ ಬಳಿಕವೂ ನಡೆಯುವ ವಿದ್ಯಮಾನಗಳ ಬಗ್ಗೆ ಕುತೂಹಲವಂತೂ ಇದೆ. ಕಾದು ನೋಡೋಣ.

-ಶ್ರೀರಾಜ್‌ ವಕ್ವಾಡಿ  

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!