Friday, October 18, 2024

ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಸ್ಥಿತಿ ಚಂದ್ರನ್‌ ಮುಖಕ್‌ ಉಗ್ದಂಗೆ !

ಉಸ್ತುವಾರಿ ಮೇಲೆ ತಣ್ಣಗಾಗದ ಸ್ವಪಕ್ಷೀಯರ ಮುನಿಸು | ಅಶಕ್ತವಾದ ಕಾಂಗ್ರೆಸ್‌  

ಹಾವು ಸಾಯಬಾರದು, ಕೋಲು ಮುರಿಯಬಾರದು ಎನ್ನುವ ಮಾತು ಉಡುಪಿ ಜಿಲ್ಲಾ ಕಾಂಗ್ರೆಸ್‌ಗೆ ಸದ್ಯಕ್ಕೆ ಸಾರ್ಥಕವಾಗಿ ಒಪ್ಪುತ್ತದೆ. ಹೌದು, ಜಿಲ್ಲೆಯ ಕಾಂಗ್ರೆಸ್‌ಗೆ ತಮ್ಮದೆ ಸರ್ಕಾರವೇ ನೇಮಿಸಿರುವ ಜಿಲ್ಲಾ ಉಸ್ತುವಾರಿ ಸಚಿವರನ್ನು ವಿರೋಧಿಸುವ ಹಾಗೆಯೂ ಇಲ್ಲ, ಸಮರ್ಥಿಸಿಕೊಳ್ಳುವ ಹಾಗೆಯೂ ಇಲ್ಲದಂತಾಗಿದೆ. ತ್ರಿಶಂಕು ಸ್ಥಿತಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಇದೆ.

ಜಿಲ್ಲಾ ಮಟ್ಟದಲ್ಲಿ ಆಡಳಿತಾತ್ಮಕ ಅನುಕೂಲವಾಗಬೇಕು ಎಂಬ ದೃಷ್ಟಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಡಳಿತಾರೂಢ ಸರ್ಕಾರ ನೇಮಿಸುವ ಪದ್ಧತಿ ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಇದೆ. ಸ್ಥಳಿಯಾಡಳಿತಕ್ಕೂ ಹಾಗೂ ರಾಜ್ಯ ಸರ್ಕಾರಕ್ಕೂ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕೊಂಡಿಯಾಗಿ ಇರಬೇಕು. ಆದರೇ, ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರು ಇದನ್ನು ಸಂಪೂರ್ಣವಾಗಿ ಮರೆತಿರುವಂತೆ ಕಾಣಿಸುತ್ತಿದೆ.

ಸ್ವತಃ ಆಡಳಿತಾರೂಢ ಕಾಂಗ್ರೆಸ್‌ನ ಉಡುಪಿ ಜಿಲ್ಲೆಯ ಕಾರ್ಯಕರ್ತರೇ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಅಸಮಾಧಾನದಿಂದಿದ್ದಾರೆ. ಅದು ಇಲ್ಲಿಯ ಬಿಜೆಪಿಗೆ ರಾಜಕೀಯ ಸರಕಾಗಿಯೂ ದೊರಕಿದೆ. ಕಾರ್ಯಕರ್ತರು ಸ್ವತಃ ಜಿಲ್ಲಾ ಉಸ್ತುವಾರಿಗಳ ಮುಂದೆಯೇ ಆಕ್ರೋಶ ಹೊರ ಹಾಕಿದ್ದರು. ಕಾಂಗ್ರೆಸ್‌ ಅದನ್ನು ಪಕ್ಷದೊಳಗಿನ ಆಂತರಿಕ ವಿಷಯ ಎಂದು ಸಮರ್ಥಿಸಿಕೊಂಡಿತ್ತು. ಲೋಕಸಭಾ ಚುನಾವಣೆಯ ಹೊತ್ತಿಗೆ ತಣ್ಣಗಾಗಿತ್ತು ಎಂದು ತೋರಿದ್ದ ಈ ಉಸ್ತುವಾರಿಗಳ ಮೇಲಿನ ಅಸಮಾಧಾನ ಮತ್ತೆ ಹೆಚ್ಚಾಗಿದೆ.

ನಿರಂತರ ಎಲ್ಲಾ ಚುನಾವಣೆಗಳ ಸೋಲು ಜಿಲ್ಲಾ ಕಾಂಗ್ರೆಸ್‌ಗೆ ತೀರ್ವ ಮುಖಭಂಗಕ್ಕೆ ಕಾರಣವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆಯವರಂತಹ ಸಮರ್ಥ ಅಭ್ಯರ್ಥಿ ಇದ್ದರೂ ಜಿಲ್ಲೆಯ ಪ್ರಮುಖ ತಾಲೂಕುಗಳಾದ ಉಡುಪಿ, ಕುಂದಾಪುರಗಳಲ್ಲೇ ಲೀಡ್‌ ತಂಡುಕೊಡುವುದಕ್ಕಾಗದೇ ʼತಾನು ಅಸಮರ್ಥʼ ಎಂದು ಜಿಲ್ಲಾ ಕಾಂಗ್ರೆಸ್ ತೋರಿಸಿಕೊಟ್ಟಂತಿದೆ. ಈಗ ಉಸ್ತುವಾರಿಗಳ ಬಗ್ಗೆ ಅಸಮಾಧಾನದ ಧ್ವನಿ ಎತ್ತುವುದಕ್ಕೂ ನೈತಿಕತೆ ಕಳೆದುಕೊಂಡ ಸ್ಥಿತಿ ಅನುಭವಿಸುತ್ತಿದೆ.‌ ಒಂದೆಡೆ ರಾಜ್ಯದಾದ್ಯಂತ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ ಎಂಬ ವಿಪಕ್ಷಗಳ ಆರೋಪಗಳ ನಡುವೆ ಸರ್ಕಾರವನ್ನು ಸಮರ್ಥಿಸಿಕೊಳ್ಳುವಲ್ಲಿಯೂ ಜಿಲ್ಲಾ ಕಾಂಗ್ರೆಸ್‌ ಅಶಕ್ತವಾಗಿದೆ.

ಸಂಘಟನೆಯ ಕೊರತೆಯನ್ನು ಜಿಲ್ಲಾ ಕಾಂಗ್ರೆಸ್‌ ಅಕ್ಷರಶಃ ಅನುಭವಿಸುತ್ತಿದೆ. ಜಿಲ್ಲೆಯಲ್ಲಿನ ನಿರಂತರ ಸೋಲಿನ ಕಾರಣದಿಂದ ಕಾಂಗ್ರೆಸ್ ತನ್ನ ಎಲುಬುಗಳನ್ನು ಕಳೆದುಕೊಂಡಿದೆ. ನಾಯಕರುಗಳ ನಡುವಿನ ಪ್ರತಿಷ್ಠೆ, ವೈಮನಸ್ಸು ಕಾಂಗ್ರೆಸ್‌ ಸೊರಗುವುದಕ್ಕೆ ಮೂಲ ಕಾರಣ. ಉಸ್ತುವಾರಿ ಸಚಿವರು ನಿಜವಾಗಿಯೂ ಇಚ್ಛಾಶಕ್ತಿಯಿಂದ ಕೆಲಸ ಮಾಡಿದ್ದಾದರೇ, ಇಡೀ ಜಿಲ್ಲೆಯಲ್ಲಿ ತಮ್ಮ ಆಡಳಿತ ವರ್ಚಸ್ಸು ಹಾಗೂ ಆಡಳಿತ ಸರ್ಕಾರದ ಪ್ರಭಾವವನ್ನು ಜಿಲ್ಲೆಯಲ್ಲಿ ಬೀರಬಹುದಾಗಿತ್ತು. ಪಕ್ಷವನ್ನು ಮರಳಿ ಚೇತರಿಸಿಕೊಳ್ಳುವ ಹಾಗೆ ಮಾಡಬಹುದಾಗಿತ್ತು. ಕಾಂಗ್ರೆಸ್‌ ಅಧಿಕಾರ ಹಿಡಿದು ಲೋಕಸಭಾ ಚುನಾವಣೆಗೆ ಒಂದು ವರ್ಷ ಕಾಲ ಇದ್ದಿತ್ತು. ಜಿಲ್ಲೆಯಲ್ಲಿ ಪ್ರಮುಖ ಎರಡು ವಿವಾದಗಳಾದ ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ ಹಗರಣ ಹಾಗೂ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಹಗರಣಗಳ ಬಗ್ಗೆ ಆಡಳಿತವನ್ನು ಬಳಸಿಕೊಂಡು ಸಮರ್ಥವಾಗಿ ವಿರೋಧಿಸಿದ್ದರೇ, ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಹಾಗೆ ಮಾಡಿದ್ದರೇ, ಜಿಲ್ಲೆಯಲ್ಲಿ ಕಾಂಗ್ರೆಸ್‌ ಮರಳಿ ಚೇತರಿಸಿಕೊಳ್ಳುವುದಕ್ಕೆ ಖಂಡಿತ ಸಾಧ್ಯವಿತ್ತು. ಇಲ್ಲಿನ ಉಸ್ತುವಾರಿಗಳೂ ಕೂಡ ಈ ಎರಡು ಹಗರಣಗಳಲ್ಲಿ ತಾವೂ ಶಾಮೀಲಾದವರಂತೆ, ಏನೂ ಆಗಿಲ್ಲ ಎಂಬಂತೆ ನಡೆದುಕೊಂಡರು ಎಂದು ಸ್ವತಃ ಕಾಂಗ್ರೆಸ್‌ ಕಾರ್ಯಕರ್ತರೇ ಹೇಳಿಕೊಂಡಿರುವುದು ದುರಂತವೇ ಸರಿ. ಮಾಡುವ ಕಾಲಕ್ಕೆ ಏನೂ ಮಾಡದೇ ಬಾಯಿ ಮುಚ್ಚಿ ಕುಳಿತ ಕಾಂಗ್ರೆಸ್‌ ಈಗ ನಿದ್ದೆಯಿಂದ ಎದ್ದಂತಿದೆ.

ಕಾಂಗ್ರೆಸ್‌ ಸ್ಥಿತಿ ಜೆಪಿ ರಾಜರತ್ನಂ ಹೇಳಿದ ಹಾಗೆ ʼಚಂದ್ರನ್‌ ಮುಖಕ್‌ ಉಗ್ದಂಗೆʼ ಎಂಬಂತಾಗಿದೆ. ʼಚಂದ್ರನಿಗೆ ಉಗಿಯುವ ಉಗುಳು ಉಗಿಯುವವರ ಮುಖದ ಮೇಲೆಯೇ ಬೀಳುತ್ತದೆʼ. ಒಂದೆಡೆ ಜಿಲ್ಲೆಯಲ್ಲಿ ಅಭಿವೃಧ್ಧಿಯಾಗುತ್ತಿಲ್ಲ ಎಂದು ಸರ್ಕಾರವನ್ನು ವಿರೋಧಿಸುವುದಕ್ಕೂ ಸಾಧ್ಯವಿಲ್ಲ, ಇನ್ನೊಂದೆಡೆ ಉಸ್ತುವಾರಿಗಳನ್ನು ಪ್ರಶ್ನಿಸುವಂತೆಯೂ ಇಲ್ಲ. ಬಿಜೆಪಿಯ ಶಾಸಕರನ್ನು ಸಮರ್ಥವಾಗಿ ವಿರೋಧಿಸುವಲ್ಲಿಯೂ ಇಲ್ಲಿನ ಕಾಂಗ್ರೆಸ್ ನಾಯಕತ್ವ ಹೀನಾಯವಾಗಿ ಸೋತಿದೆ. ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷ ನಿಷ್ಕ್ರಿಯವಾಗಿರುವುದು ಇದರಿಂದಲೇ ತಿಳಿಯುತ್ತದೆ.

ಉಡುಪಿ ಜಿಲ್ಲೆಯ ಉಸ್ತುವಾರಿಯಾಗಿ ಲಕ್ಷ್ಮೀ ಹೆಬ್ಬಾಳ್ಕರ್‌ ನೇಮಕಗೊಂಡಾಗ ಒಂದೇ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲ್ಲುವುದಕ್ಕೆ ಸಾದ್ಯವಾಗಿಲ್ಲ ಎಂಬ ವಿಚಾರಕ್ಕೆ ಮುನಿಸಿಕೊಂಡು ಇಲ್ಲಿನ ಕಾರ್ಯಕರ್ತರು ಮತ್ತು ಪ್ರಮುಖ ಕಾಂಗ್ರೆಸ್‌ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದು ಕಾರ್ಯಕರ್ತರಲ್ಲಿ ಭ್ರಮನಿರಸನ ಉಂಟು ಮಾಡಿತ್ತು. ಬಳಿಕ ನಡೆದ ಕಾರ್ಯಕರ್ತರ ಸಭೆಗಳಲ್ಲಿ ಕಾರ್ಯಕರ್ತರು ಉಸ್ತುವಾರಿಗಳ ಮೇಲೆಯೇ ತಿರುಗಿ ಬಿದ್ದಿದ್ದರು. ಕಾರ್ಯಕರ್ತರಿಗೆ ಬೇಕಾದ ಸವಲತ್ತುಗಳನ್ನು ಪಕ್ಷ ಒದಗಿಸುವುದಿಲ್ಲ. ಚುನಾವಣೆ ಬಂದಾಗ ನಾಯಕರಿಗೆ ಕಾರ್ಯಕರ್ತರು ಬೇಕು. ಕಾರ್ಯಕರ್ತರು ನಾಯಕರ ಗುಲಾಮರಾ ? ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದರು. ಹೀಗೆ ಕಾರ್ಯಕರ್ತರು ಹಾಗೂ ಉಸ್ತುವಾರಿ ಸಚಿವರ ನಡುವೆ ಅಸಮಾಧಾನ ಮುಂದುವರಿದಿತ್ತು. ಉಸ್ತುವಾರಿಗಳ ಬಗ್ಗೆ  ಬಿಜೆಪಿ ಶಾಸಕರೂ ಕೂಡ ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕರೊಂದಿಗೆ ಉಸ್ತುವಾರಿಗಳು ಮೃದು ಧೋರಣೆಯಿಂದ ನಡೆದುಕೊಂಡಿದ್ದರು. ಇದು ಕೂಡ ಕಾರ್ಯಕರ್ತರ ಸಿಟ್ಟಿಗೆ ಕಾರಣವಾಗಿತ್ತು. ಈಗ ಬಿಜೆಪಿ ಶಾಸಕರಿಂದಲೇ ಉಸ್ತುವಾರಿ ಸಚಿವರ ಮೇಲೆ ಟೀಕೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಕಾಂಗ್ರೆಸ್‌ ಕಾರ್ಯಕರ್ತರ ವರಸೆ ಬದಲಾದಂತೆ ಕಾಣಿಸುತ್ತಿದೆ. ಉಸ್ತುವಾರಿಗಳ ಮೇಲೆ ಉಡುಪಿ ಶಾಸಕರ ಅಭಿಪ್ರಾಯವೇ ಕಾಂಗ್ರೆಸ್‌ ಕಾರ್ಯಕರ್ತರಲ್ಲಿಯೂ ಇದೆ. ಆದರೇ, ಉಸ್ತುವಾರಿ ಸಚಿವರನ್ನು ಸಮರ್ಥಿಸಿಕೊಳ್ಳಲೇ ಬೇಕಾದ ಸ್ಥಿತಿಯಲ್ಲಿದ್ದಾರೆ. ಉಸ್ತುವಾರಿ ವಿರುದ್ಧ ಯಾವ ಸ್ವಪಕ್ಷೀಯ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದರೋ, ಅವರೇ ಈಗ ಉಸ್ತುವಾರಿಗಳನ್ನು ಸಮರ್ಥಿಸಿಕೊಳ್ಳುತ್ತಿರುವುದು ಹಾಸ್ಯಾಸ್ಪದವೇ ಸರಿ. ನಾಯಕರ ತಪ್ಪುಗಳನ್ನು ಗುರುತಿಸಿ ಅದನ್ನು ಸರಿಮಾಡಬೇಕಾಗಿರುವ ಕಾರ್ಯಕರ್ತರು, ಸಮರ್ಥಿಸಿಕೊಳ್ಳುವ ಇರಾದೆ ತೋರಿಸುತ್ತಿರುವುದು ಜಿಲ್ಲಾ ಕಾಂಗ್ರೆಸ್‌ನ ದಯನೀಯ ಸ್ಥಿತಿಯೂ ಹೌದು.

ರಾಜ್ಯದ ಅಧಿಕಾರರೂಢ ಕಾಂಗ್ರೆಸ್ ಸರ್ಕಾರ ಆಂತರಿಕ ಕಚ್ಚಾಟದಲ್ಲಿಯೇ ಮುಳುಗಿದ್ದು, ರಾಜ್ಯದ ಪ್ರಗತಿಯನ್ನು ಮರೆತಿದೆ. ಆಡಳಿತ ನಿಷ್ಕ್ರಿಯಗೊಂಡಿದೆ. ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಬೇಕು. ಆದರೆ ಜಿಲ್ಲಾ ಮಟ್ಟದಲ್ಲಿ ತಾಲೂಕು ಮಟ್ಟಗಳಲ್ಲಿ ನಡೆಯಬೇಕಾದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗಳು ನಡೆದೇ ಇಲ್ಲ. ಖಾಸಗಿ ಕಾರ್ಯಕ್ರಮಗಳಿಗೆ ಸರಿಯಾದ ಸಮಯಕ್ಕೆ ಹಾಜರಿರುವ ಉಸ್ತುವಾರಿಗಳು ಈ ಬಗ್ಗೆ ಗಮನವೇ  ಕೊಟ್ಟಿಲ್ಲ.

ಮಳೆಗಾಲ ಬಂದರೇ, ಹತ್ತಿರದ ಸಮುದ್ರ ತೀರಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಒಂದು ಫೋಟೋ ತೆಗೆಸಿಕೊಂಡರೇ ಉಸ್ತುವಾರಿಗಳ ಪರಿಶೀಲನೆ ಮುಗಿಯಿತು. ಜಿಲ್ಲೆಯಾದ್ಯಂತ ತೀವ್ರ ಮಳೆಯಾಗುತ್ತಿದೆ. ಕೆಲವೆಡೆ ನೆರೆ ಸೃಷ್ಟಿಯಾಗಿದೆ. ನೆರೆ ಪರಿಹಾರವೂ ಸರಿಯಾಗಿ ವಿನಿಯೋಗವಾಗುತ್ತಿಲ್ಲ. ಸರ್ಕಾರವೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಉಡುಪಿ ಜಿಲ್ಲೆಯಲ್ಲಿ ಮಳೆಯಿಂದ ಉಂಟಾಗಿರುವ ಬೆಳೆಹಾನಿ ಮತ್ತು ಬೈಂದೂರು, ಕಾರ್ಕಳ, ಕುಂದಾಪುರ, ಹೆಬ್ರಿ ತಾಲೂಕುಗಳ ಸಮಸ್ಯೆಗಳ ಬಗ್ಗೆ ಅರಿವೇ ಇಲ್ಲವೇನೋ, ಮಳೆಗಾಲ ಬಂತೆಂದರೇ ಈ ಭಾಗಗಳಲ್ಲಿ ಜನಜೀವನ ಹೈರಾಣಾಗುತ್ತದೆ. ಎಷ್ಟೋ ತಗ್ಗು ಪ್ರದೇಶಗಳಲ್ಲಿ ನೆರೆಯಿಂದ ಊರಿಗೆ ಊರೇ ಮುಳುಗಿ ಹೋಗುತ್ತವೆ. ನೂರಾರು ಕಡೆಗಳಲ್ಲಿ ಉಕ್ಕಿ ಹರಿಯುವ ಹಳ್ಳ, ತೊರೆಗಳಿಗೆ ಸುಸಜ್ಜಿತ ಕಾಲುಸಂಕವೇ ಇಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಶಾಸಕರು, ಅಧಿಕಾರಿಗಳು ಉಸ್ತುವಾರಿಗಳಿಗೆ ತಿಳಿಸಿರಲಿಕ್ಕಿಲ್ಲ. ಉಸ್ತುವಾರಿ ಸಚಿವರೂ ಈ ಬಗ್ಗೆ ಕೇಳಿ ಮಾಹಿತಿ ಪಡೆದಿರಲಿಕ್ಕಿಲ್ಲ. ಅಧಿಕಾರಿಗಳ ವೈಫಲ್ಯ, ಶಾಸಕರ ವೈಫಲ್ಯವನ್ನು ಸಮರ್ಥವಾಗಿ ಪ್ರಶ್ನಿಸಬೇಕಾಗಿರುವ ಕಾಂಗ್ರೆಸ್‌ ತಾನು ಮಾಡಬೇಕಿರುವ ಪ್ರಾಥಮಿಕ ಕೆಲಸವನ್ನೂ ಸರಿಯಾಗಿ ಮಾಡದೇ ಜಿಲ್ಲೆಯಲ್ಲಿ ಮೂಲೆಗೆ ಸರಿಯುತ್ತಿರುವುದು ವಿಷಾದನೀಯವೇ ಸರಿ.

ಇನ್ನು, ಎಲ್ಲಾ ತಾಲೂಕುಗಳಲ್ಲಿ ಕೆಡಿಪಿ ರಚನೆಯಾಗಿದೆ. ಈವರೆಗೆ ಒಂದೇ ಒಂದು ಕೆಡಿಪಿ ಸಭೆ ಕರೆದಿಲ್ಲ. ಜಿಲ್ಲಾ ಮಟ್ಟದಲ್ಲಿಯೂ ಕೆಡಿಪಿ ಸಭೆಯಾಗಿಲ್ಲ. ಉಸ್ತುವಾರಿಗಳ ಮೇಲೆ ಸ್ವಪಕ್ಷೀಯರ ಮುನಿಸು ಇಲ್ಲಿ ಉಪಶಮನವಾಗುವ ಹಾಗೆ ಕಾಣಿಸುತ್ತಿಲ್ಲ, ಕಾಂಗ್ರೆಸ್‌ ಕೂಡ ಚೇತರಿಸಿಕೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!