Friday, October 18, 2024

ನಿರಾಸೆ ಮೂಡಿಸಿದ ರಾಜ್ಯ ಕಾಂಗ್ರೆಸ್‌ ಸರ್ಕಾರ

ಬಹುಮತದಿಂದ ಗೆದ್ದು ಸಮರ್ಥ ಆಡಳಿತ ನೀಡುವಲ್ಲಿ ಸೋತ ಕಾಂಗ್ರೆಸ್‌ !

ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್‌ಗೆ ಅಧಿಕಾರ ನೀಡುವುದರ ಹಿಂದೆ ಮತದಾರರ ಸ್ಪಷ್ಟ ಸಂದೇಶವಿದ್ದಿತ್ತು. ಭ್ರಷ್ಟಾಚಾರ, ಸಾರ್ವಜನಿಕ ಸಂಘರ್ಷದಿಂದ ನಾಡಿನ ಜನತೆ ಮುಕ್ತಿಯನ್ನು ಬಯಸಿದ್ದರು. ಇನ್ನೂ ನಿಖರವಾಗಿ ಹೇಳಬೇಕು ಎಂದರೇ, ಸ್ವಾಸ್ಥ್ಯ ಸಮಾಜದ ಬೇಡಿಕೆ ಕಾಂಗ್ರೆಸ್‌ ಪಕ್ಷ ಅಧಿಕಾರ ಹಿಡಿಯಬೇಕು ಎಂದು ಮತಹಾಕಿದವರದ್ದಾಗಿತ್ತು.

ಕಾಂಗ್ರೆಸ್‌ ಬಗ್ಗೆ ಬಹಳ ದೊಡ್ಡ ನಿರೀಕ್ಷೆಯಿಟ್ಟುಕೊಂಡೇ ಜನರು ಅಧಿಕಾರಕ್ಕೇರಿಸಿದ್ದರು. ಅಧಿಕಾರ ವಹಿಸಿಕೊಂಡ ಒಂದು ವರ್ಷದೊಳಗೆ ಕಾಂಗ್ರೆಸ್‌ ಸರ್ಕಾರ ಎರಡು ದೊಡ್ಡ ಭ್ರಷ್ಟಾಚಾರದ ಪ್ರಕರಣಗಳನ್ನು ಎದುರಿಸುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಹಾಗೂ ಮೈಸೂರಿನ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ವ್ಯಾಪಕ ಅಕ್ರಮಗಳ ಪ್ರಕರಣ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ವಿಧಾನಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಬಹುಮತದಿಂದ ಅಧಿಕಾರಕ್ಕೇರಲೇಬೇಕೆಂಬ ದೃಷ್ಟಿಯಲ್ಲಿ ಬಿಜೆಪಿ ಈ ಎರಡೂ ಪ್ರಕರಣಗಳ ವಿರುದ್ಧ ದೊಡ್ಡ ಹೋರಾಟವನ್ನೇ ಆರಂಭಿಸಿದೆ. ವಿಧಾನಮಂಡಲ ಅಧಿವೇಶನದಲ್ಲೂ ಬಿಜೆಪಿ ಈ ಪ್ರಕರಣಗಳನ್ನೇ ಎತ್ತುತ್ತಿದೆ.

ಬಿಜೆಪಿ ಸರ್ಕಾರದ ವಿರುದ್ಧ  ಸರ್ಕಾರಿ ಕಾಮಗಾರಿಗಳ ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ವಸೂಲಾತಿ, ಬಿಟ್ ಕಾಯಿನ್ ಹಗರಣಗಳ ಬಗ್ಗೆ ತೀವ್ರ ಟೀಕಾಸ್ತ್ರ ಬಳಸಿ, ಚುನಾವಣೆಗೆ ಅವನ್ನೇ ಮುಖ್ಯಾಸ್ತ್ರಗಳನ್ನಾಗಿ ಬಳಸಿಕೊಂಡು ಗೆದ್ದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಸರ್ಕಾರಕ್ಕೆ ಒಂದು ವರ್ಷದ ಅವಧಿ ಪೂರ್ಣಗೊಂಡ ಸಂದರ್ಭದಲ್ಲೇ ಈ ಎರಡು ಹಗರಣಗಳು ನುಂಗಲಾರದ ತುತ್ತಾಗಿ ಪರಿಣಮಿಸಲಾರಂಭಿಸಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದ ರಾಜಕೀಯ ವಿದ್ಯಮಾನ ಅನೇಕ ಅನಿರೀಕ್ಷಿತ ಬೆಳವಣಿಗೆಗಳಿಗೆ ಸಾಕ್ಷಿಯಾದರೂ ಆಶ್ಚರ್ಯವೇನಿಲ್ಲ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಬಿಜೆಪಿ ವಿರೋಧ ಪಕ್ಷದಲ್ಲಿದ್ದು, ತನ್ನ ಪಾತ್ರವನ್ನು ತಾನು ಬಹಳ ಸಮರ್ಥವಾಗಿಯೇ ನಿಭಾಯಿಸುತ್ತಿದೆ ಎಂದರೇ ತಪ್ಪಿಲ್ಲ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಹಿಡಿದಿದ್ದು ಇದ್ದರೇ, ಅದು ಜನಾದೇಶವನ್ನು ಮೀರಿಯೇ ಹೊರತು, ಬಹುಮತವನ್ನು ಪಡೆದು ಅಧಿಕಾರ ಹಿಡಿದ ಉದಾಹರಣೆಯೇ ಈ ರಾಜ್ಯದ ರಾಜಕೀಯ ಇತಿಹಾಸದಲ್ಲಿಲ್ಲ. ಏನೇ ಆದರೂ, ಅಧಿಕಾರ ಹಿಡಿದಾಗ ಬಿಜೆಪಿ ತನ್ನ ಆಡಳಿತ ರೂಪುರೇಷೆಗಳ ಬಗ್ಗೆ ಸ್ಪಷ್ಟತೆಯನ್ನು ಹೊಂದಿತ್ತು. ವಿರೋಧ ಪಕ್ಷದಲ್ಲಿದ್ದಾಗ ಆಡಳಿತ ಪಕ್ಷದ ತಪ್ಪನ್ನು ಸಮರ್ಥವಾಗಿಯೇ ಟೀಕಿಸಿತ್ತು. ಈಗ ಪ್ರಬುದ್ಧತೆಯನ್ನು ಕಳೆದುಕೊಂಡಿರುವುದು ಬೇರೆ ವಿಷಯ. ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ರಾಜಕೀಯ ದೊಡ್ಡ ಅಭಿಯಾನವನ್ನೇ ಸೃಷ್ಟಿಸಿ ಚುನಾವಣೆಯನ್ನು ಗೆದ್ದ ಕಾಂಗ್ರೆಸ್‌ನ ಪರಿಸ್ಥಿತಿ ಈಗ ʼಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆʼ.

ರಾಜಕೀಯದ ಹಣೆಬರಹವೇ ಅಷ್ಟೇ ಬಿಡಿ. ಆಡಳಿತ ಪಕ್ಷದಲ್ಲಿರುವವರು ತಪ್ಪು ಮಾಡಿದಾಗ ವಿರೋಧ ಪಕ್ಷದಲ್ಲಿರುವವರು ಆಡಳಿತದ ತಪ್ಪನ್ನು ಎತ್ತಿಹಿಡಿದು ಹೋರಾಟ ಮಾಡುತ್ತಾರೆ. ವಿರೋಧ ಪಕ್ಷದಲ್ಲಿರುವವರಿಗೆ ಮತ್ತೆ ಅಧಿಕಾರದ ಯೋಗ ಮತದಾರ ಕಲ್ಪಿಸಿಕೊಡುತ್ತಾನೆ. ಚುನಾವಣೆಯಲ್ಲಿ ಗೆದ್ದು ಆಡಳಿತವನ್ನು ಹಿಡಿಯುವ ಪಕ್ಷ ಮತ್ತದೆ ತಪ್ಪನ್ನು ಮಾಡುತ್ತದೆ. ಹೀಗೆ ರಾಜಕೀಯದಲ್ಲಿ ಈ ಪದ್ಧತಿ ಸರ್ವೇಸಾಮಾನ್ಯ.

ಕಾಂಗ್ರೆಸ್‌ನ ಆಂತರಿಕ ಅಸಮಾಧಾನದ ಬೆಳವಣಿಗೆಗಳ ನಡುವೆ ಈ ಎರಡು ಪ್ರಕರಣಗಳು ಪ್ರತಿಪಕ್ಷಗಳಿಗೆ ಸುಲಭವಾಗಿ ಸಿಕ್ಕ ಸರಕಾಗಿವೆ. ಕಾಂಗ್ರೆಸ್‌ ಒಳಗಿನ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಎದ್ದ ಧ್ವನಿಗಳು ಕಾಂಗ್ರೆಸ್‌ ಆಡಳಿತದಲ್ಲಿ ಹಳಿತಪ್ಪುತ್ತಿರುವುದನ್ನು ಬಯಲುಗೊಳಿಸಿತು. ನಂತರ ಬೆಳಕಿಗೆ ಬಂದ ವಾಲ್ಮೀಕಿ ನಿಗಮದಲ್ಲಿ ನಡೆದ ಬಹುಕೋಟಿ ಭ್ರಷ್ಟಾಚಾರ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅಕ್ರಮಗಳು ವಿವಾದವಾಗಿವೆ. ಎಸ್‌ಸಿ ಹಾಗೂ ಎಸ್‌ಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್‌ ಸರ್ಕಾರ ಬಳಕೆ ಮಾಡಿಕೊಳ್ಳುತ್ತಿದೆ ಎಂಬ ವಿಚಾರ ರಾಜ್ಯ ಮಾತ್ರವಲ್ಲದೇ, ರಾಷ್ಟ್ರಮಟ್ಟದಲ್ಲಿಯೂ ಚರ್ಚಗೆ ಗ್ರಾಸವಾಯಿತು. ವಿರೋಧ ಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ ಕಾಂಗ್ರೆಸ್‌ ಮೇಲೆ ಮುಗಿಬಿದ್ದಿವೆ. ಕಾಂಗ್ರೆಸ್‌ ನೈತಿಕವಾಗಿ ಈ ಪ್ರಕರಣಗಳೆರಡನ್ನು ಎದುರಿಸಲಾಗದ ಸ್ಥಿತಿಯನ್ನು ಅನುಭವಿಸುತ್ತಿದೆ. ಕಾಂಗ್ರೆಸ್‌ ತನ್ನ ಆಡಳಿತವನ್ನು ಇನ್ನೂ ಅರ್ಥಮಾಡಿಕೊಂಡಿಲ್ಲ ಎಂಬಂತೆ ಕಾಣಿಸುತ್ತಿದೆ.

ಬೆಲೆ ಏರಿಕೆಯ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದ ಕಾಂಗ್ರೆಸ್‌ ಸರ್ಕಾರವೇ ಪೆಟ್ರೋಲ್‌, ಡಿಸೇಲ್‌ ದರ ಏರಿಕೆ ಮಾಡಿತು. ಗ್ಯಾರಂಟಿ ಯೋಜನೆಗಳ ಅಸಮರ್ಥ ನಿರ್ವಹಣೆ ಹಾಗೂ ಬೆಲೆ ಏರಿಕೆಯನ್ನೇ ರಾಜಕೀಯಕ್ಕೆ ಬಳಸಿಕೊಳ್ಳಬೇಕು ಎಂದು ಕಾಯುತ್ತಿದ್ದ ಬಿಜೆಪಿ ಬೆಲೆ ಏರಿಕೆಯ ವಿರುದ್ಧ ಜನರಲ್ಲಿ ʼಕಾಂಗ್ರೆಸ್‌ ಜನವಿರೋಧಿ ಸರ್ಕಾರʼ ಎಂದು ಬಿಂಬಿಸುವಲ್ಲಿ ಯಶಸ್ವಿಯಾಯಿತು. ಇಂಧನ ಬೆಲೆ ಏರಿಕೆಯಿಂದ ಸರಕು ಸಾಗಾಟದ ಮೇಲೆ ನೇರ ಪರಿಣಾಮ ಬೀರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾಂಗ್ರೆಸ್‌ ಸರ್ಕಾರಕ್ಕೆ ಈ ವಿಚಾರ ಗೊತ್ತಿಲ್ಲದ ವಿಚಾರವೇನಲ್ಲ. ಬೆಲೆ ಏರಿಕೆಯಿಂದ ರಾಜ್ಯದ ಅಭಿವೃದ್ಧಿಗೆ ಬಳಸಿಕೊಳ್ಳುತ್ತೇವೆ ಎಂಬ ಸಮರ್ಥನೆಯನ್ನೂ ಕಾಂಗ್ರೆಸ್‌ ಮಾಡಿಕೊಂಡಿತ್ತು. ಅಧಿಕಾರದಲ್ಲಿ ಇಲ್ಲದೇ ಇರುವಾಗ ಇದೇ ವಿಚಾರವನ್ನು ವಿರೋಧಿಸುವುದಕ್ಕೆ ಬಳಸಿಕೊಂಡಿದ್ದ ಕಾಂಗ್ರೆಸ್‌, ಈಗ ತನ್ನನ್ನೇ ತಾನು ಸಮರ್ಥಿಸಿಕೊಂಡಿರುವುದನ್ನು ನೋಡಿರುವುದು ಹಾಸ್ಯಾಸ್ಪದವೇ ಸರಿ. ಇಂಧನ ಬೆಲೆ ಏರಿಕೆ ಅಗತ್ಯ ವಸ್ತುಗಳ ಬೆಲೆ ಏರಿಸುತ್ತದೆ. ಅದು ಬಡವರು ಮತ್ತು ಮಧ್ಯಮವರ್ಗದವರ ಜೇಬಿಗೆ ಕತ್ತರಿ ಹಾಕುತ್ತದೆ. ಅದರ ಪ್ರಮಾಣ ಎಷ್ಟು ಎನ್ನುವುದು ಅಂದಾಜಿಗೂ ಸಿಗುವುದಿಲ್ಲ. ಹಾಗಾಗಿ ಇದು ಸರ್ಕಾರದ ಸರಿಯಾದ ನಡೆಯಲ್ಲ ಎನ್ನುವುದು ಸ್ಪಷ್ಟ. ಇನ್ನು, ಈ ನಡುವೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ಮೇಲೆ ವರ್ಗಾವಣೆಯನ್ನು ‘ದಂಧೆ’ಯ ಆರೋಪವೂ ಬಹಳ ದೊಡ್ಡ ಮಟ್ಟದಲ್ಲೇ ಕೇಳಿಬಂತು.

ಹೀಗೆ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಒಂದು ವರ್ಷದೊಳಗೆ ಈ ರೀತಿಯ ಆಡಳಿತವನ್ನು ನೀಡುತ್ತದೆ ಎಂಬ ಊಹೆ ಆ ಪಕ್ಷ ಅಧಿಕಾರಕ್ಕೆ ಬರಲಿ ಎಂದು ಮತ ಹಾಕಿದವರಲ್ಲಿಯೂ ಇದ್ದಿರಲಿಕ್ಕಿಲ್ಲ. ಹೊಸ ಸರ್ಕಾರವೊಂದು ಅಧಿಕಾರ ಹಿಡಿದಾಗ ಆ ಪಕ್ಷದಲ್ಲಿ ಆಂತರಿಕವಾಗಿ ಆಗುವ ಕೆಲವು ಬದಲಾವಣೆಗಳು ಹಾಗೂ ಆಡಳಿತದಲ್ಲಿ ಕಾಣುವ ಕೆಲವು ನಡೆಗಳು ಆ ಸರ್ಕಾರದ ಭವಿಷ್ಯವನ್ನು ಹೇಳುತ್ತದೆ. ಕಾಂಗ್ರೆಸ್ ಸರ್ಕಾರದ ಈವರೆಗಿನ ಆಡಳಿತವನ್ನು ನೋಡಿದರೆ, ರಾಜ್ಯದ ಜನ ನಿರೀಕ್ಷಿಸಿದ ಮಟ್ಟದಲ್ಲಿ ಕಾಂಗ್ರೆಸ್‌ ನಡೆದುಕೊಂಡಿಲ್ಲ ಎಂದೇ ಕಾಣಿಸುತ್ತಿದೆ. ಸಮರ್ಥನೀಯವಲ್ಲದ ಆಡಳಿತವನ್ನೇ ರಾಜ್ಯ ಕಾಂಗ್ರೆಸ್‌ ಸರ್ಕಾರ ರಾಜ್ಯದ ಜನರಿಗೆ ತೋರಿಸಿದೆ.

ಬಿಜೆಪಿ ಸರ್ಕಾರದ ಅಧಿಕಾರವಧಿಯಲ್ಲಿ ಸರ್ಕಾರಿ ಕಾಮಗಾರಿಗಳ ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ದಂಧೆಯು ಸೇರಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಎಲ್ಲಾ ಭ್ರಷ್ಟಾಚಾರಗಳ ತನಿಖೆ ನಡೆಸುತ್ತೇವೆ ಎಂದು ಹೇಳಿದ ಕಾಂಗ್ರೆಸ್‌ ಈಗ ಭ್ರಷ್ಟಾಚಾರದ ಆರೋಪದ ಸುಳಿಯಲ್ಲಿ ಸಿಲುಕಿರುವುದು ದುರಂತವೇ ಸರಿ. ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್‌ ಕುಮಾರ್‌ ಅವರ ನೇತೃತ್ವದಲ್ಲಿ ನಡೆದಿದೆ ಎನ್ನಲಾಗುತ್ತಿರುವ ನಕಲಿ ಪರಶುರಾಮ ಮೂರ್ತಿ ಹಾಗೂ ಥೀಂ ಪಾರ್ಕ್‌ನಲ್ಲಿ ನಡೆದಿದೆ ಎನ್ನಲಾಗುತ್ತಿರುವ ಹಗರಣಗಳ ಬಗ್ಗೆ ಸ್ಥಳೀಯ ಹೋರಾಟಗಾರರು ಧ್ವನಿ ಎತ್ತಿದ ಕಾರಣ ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ ಪ್ರಕರಣ ರಾಜ್ಯದಾದ್ಯಂತ ಸುದ್ದಿಯಾಯಿತು, ಕಾಂಗ್ರೆಸ್‌ ಸರ್ಕಾರ ತನಗೆ ಈ ಬಗ್ಗೆ ಅರಿವೇ ಇಲ್ಲವೆಂಬಂತೆ ವರ್ತಿಸಿತು. ಕಾಟಾಚಾರಕ್ಕೆ ಈಗ ಸಿಒಡಿ ತನಿಖೆಗೆ ಒಪ್ಪಿಸಿದೆ. ಬ್ರಹ್ಮಾವರದ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಗಮನವೂ ನೀಡಿಲ್ಲ. ಇವನ್ನೆಲ್ಲಾ ಅಸಮರ್ಥನೀಯ ನಡೆ ಎನ್ನದೆ ಮತ್ತೇನೆಂದು ಹೇಳಬೇಕು ? ಇಲಾಖೆಗಳು ನಿದ್ರೆಗೆ ಜಾರಿವೆ, ಪ್ರಗತಿ ಪರಿಶೀಲನಾ ಸಮಿತಿ ಕೆಡಿಪಿ ಇದೆಯೇ ಇಲ್ಲವೋ ಎನ್ನುವುದನ್ನು ನೋಡಬೇಕಿದೆ. ಇಷ್ಟಾಗ್ಯೂ ಕಾಂಗ್ರೆಸ್‌ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಿರುವುದನ್ನು ನೋಡಿದರೇ, ಪ್ರಜಾಪ್ರಭುತ್ವದ ಅಣಕದಂತೆ ತೋರುತ್ತಿದೆ.

-ಶ್ರೀರಾಜ್‌ ವಕ್ವಾಡಿ   

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!