Tuesday, April 30, 2024

ಪ್ರಜಾಪ್ರಭುತ್ವದ ತೊಟ್ಟಿಲನ್ನು ಕಸದ ಬುಟ್ಟಿಗೆ ಎಸೆಯುತ್ತಿರುವುದು ಯಾವ ನ್ಯಾಯ?

ಭಾರತದಲ್ಲಿ ಸ್ಥಳೀಯ ಆಡಳಿತಕ್ಕೆ ತನ್ನದೇ ಆದ ಇತಿಹಾಸವಿದೆ, ಮಹತ್ವವೂ ಇದೆ ಅದಕ್ಕೊಂದು ಜೀವಂತಿಕೆಯೂ ಇದೆ. ಪ್ರಾಚೀನ ಭಾರತದ ಆಡಳಿತದಿಂದ ಹಿಡಿದು ಬ್ರಿಟಿಷ್ ಆಡಳಿತ ಕಾಲದಲ್ಲೂ ಈ ಸ್ಥಳೀಯ ಆಡಳಿತವನ್ನು ಗುರುತಿಸಿ ಅದಕ್ಕೊಂದು ಸ್ವರೂಪವನ್ನು ನೀಡಿದ ಇತಿಹಾಸವು ನಮ್ಮ ಮುಂದಿದೆ.

ಸ್ವಾತಂತ್ರ್ಯದ ಅನಂತರದಲ್ಲಿ ಸಂವಿಧಾನದಲ್ಲಿ ಕೂಡಾ ಸ್ಥಳೀಯ ಆಡಳಿತ ಅರ್ಥಾತ್ ಗ್ರಾಮ ರಾಜ್ಯ, ರಾಮ ರಾಜ್ಯ ಸ್ವರಾಜ್ಯ ಅನ್ನುವ ಗಾಂದೀಜಿಯವರ ಕನಸಿನ ಗ್ರಾಮ ಆಡಳಿತವನ್ನು ತರುವ ನಿಟ್ಟಿನಲ್ಲಿ ಭಾರತ ಸಂವಿಧಾನದ ಭಾಗ lV ಅನುಚ್ಛೇದ 40ರಲ್ಲಿ ಸ್ಥಳೀಯ ಆಡಳಿತದ ಕುರಿತಾಗಿ ಸ್ವಷ್ಟವಾಗಿ ಉಲ್ಲೇಖಿಸಲಾಗಿದೆ.

ಈ ನಿಟ್ಟಿನಲ್ಲಿ ಸ್ಥಳೀಯ ಸರ್ಕಾರವನ್ನು ರೂಪಿಸುವ ನಿಟ್ಟಿನಲ್ಲಿ ಕಾಲ ಕಾಲಕ್ಕೆ ಕೆಲವೊಂದು ಸಮಿತಿಗಳನ್ನು ರಚಿಸಿ ಅದರ ವರದಿಯನ್ನು ಆಧರಿಸಿ ಸ್ಥಳೀಯ ಸರ್ಕಾರ ಸ್ಥಾಪನೆ ಮಾಡುವ ಪ್ರಯೇೂಗವನ್ನು ಮುಂದುವರಿಸಿಕೊಂಡು ಬರಲಾಗಿದೆ .

1957ರಲ್ಲಿ ಬಲವಂತ ರಾಯ್ ಮೆಹತಾ ಕಮಿಟಿ 1977ರಲ್ಲಿ ಅಶೇೂಕ ಮೆಹತಾ ಕಮಿಟಿ, 1985 ರಲ್ಲಿ  ಜಿ.ವಿ.ಕೆ.ರಾವ್ ಕಮಿಟಿ, 1988ರಲ್ಲಿ ಎಲ್.ಎಂ.ಸಿಂಗ್‌ ನವಿ ಕಮಿಟಿ ರಚಿಸಿ  ಈ ಎಲ್ಲಾ ಕಮಿಟಿಗಳು ನೀಡಿದ ವರದಿಯ ಆಧಾರದಲ್ಲಿ ಸ್ಥಳೀಯ ಆಡಳಿತವನ್ನು ಹಂತ ಹಂತವಾಗಿ ಪ್ರಯೇೂಗಾತ್ಮಕವಾಗಿ ಅನುಷ್ಠಾನಗೊಳಿಸಲಾಯಿತು.

ಈ ಎಲ್ಲಾ ಗ್ರಾಮ ರಾಜ್ಯದ ಪ್ರಯೇೂಗಗಳು ಕೆಲವೊಂದು ನ್ಯೂನತೆಗಳಿಂದಾಗಿ ಸಂಪೂರ್ಣವಾದ ಯಶಸ್ವಿ ಕಾಣಲು ವಿಫಲವಾಯಿತು.

1992 ರಲ್ಲಿ ಸಂವಿಧಾನದಲ್ಲಿ  73 ಮತ್ತು 74 ನೇ ತಿದ್ದುಪಡಿ ತರುವುದರ ಮೂಲಕ ಪಂಚಾಯತ್ ರಾಜ್ಯ ವ್ಯವಸ್ಥೆಗೆ ಮರುಜೀವ ನೀಡಿದ ಸಂಕ್ರಮಣ ಕಾಲ. ಇದುವರೆಗೂ ಸ್ಥಳೀಯ ಆಡಳಿತವೆಂದರೆ ಅದೊಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧೀನದಲ್ಲಿರಬೇಕಾದ ಹಂಗಿನ ಸಂಸ್ಥೆ ಅನ್ನುವ    ಕಾಟಾಚಾರದ ವ್ಯವಸ್ಥೆ ಅನ್ನಿಸಿಕೊಂಡಿತ್ತು. ಆದರೆ ಭಾರತದ ಸಂವಿಧಾನಕ್ಕೆ ಪ್ರಮುಖವಾಗಿ 73 ಮತ್ತು 74 ನೇ ಸಂವಿಧಾನ  ತಿದ್ದುಪಡಿ ತರುವುದರ ಮೂಲಕ 11 ಮತ್ತು 12 ಎರಡು  ಶೆಡ್ಯೂಲ್ಸಗಳನ್ನು ಸೇರಿಸುವುದರ ಮೂಲಕ ಗ್ರಾಮೀಣ ಮತ್ತು ನಗರ ವ್ಯಾಪ್ತಿಯಲ್ಲಿ ಸ್ಥಳೀಯ ಆಡಳಿತಕ್ಕೊಂದು ಶಾಶ್ವತವಾದ ಹೊಸ ದಿಕ್ಕನ್ನು ನೀಡುವ ಸಂವಿಧಾನದ ಬಲವನ್ನು ನೀಡುವ ಕ್ರಮಕ್ಕೆ ಭಾರತದ ಸಂಸತ್ತು ಸಾಕ್ಷ್ಯೀಯಾಯಿತು.

ಭಾರತದ ಆಡಳಿತ ವ್ಯವಸ್ಥೆಯಲ್ಲಿ ಮೂರು ಗಾಲಿಗಳನ್ನು ಗುರುತಿಸುವ ಅವಕಾಶ ನಮ್ಮದಾಯಿತು(three tire system). ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಆಡಳಿತ ಇದೊಂದು ಪರಿಪಕ್ವವಾದ ಒಕ್ಕೂಟ ವ್ಯವಸ್ಥೆ  ಅನ್ನುವ ಮಟ್ಟಿಗೆ ನಾವು ಹೆಮ್ಮೆ ಪಡುವ ಸಂವಿಧಾನದ ಆಶಯವಾಗಿತ್ತು. ಅಂದರೆ ಕೇಂದ್ರ ರಾಜ್ಯ ಸರ್ಕಾರಗಳಿಗೆ ಹೇಗೆ ಜನ ಪ್ರತಿನಿಧಿಗಳು ಆಯ್ಕೆಗೊಳ್ಳುತ್ತಾರೆ ಸರ್ಕಾರ ಹೇಗೆ ಐದು ವರುಷಗಳಿಗೊಮ್ಮೆ ರಚನೆಯಾಗುತ್ತದೆ ಅದೇ ತರದಲ್ಲಿ ಈ ಮೂರು ಚಕ್ರಗಳು ಯಾವುದೇ ಅಡೆತಡೆ ಇಲ್ಲದೆ ಸಾಂಗವಾಗಿ ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಬಹುದೆಂಬ ನಂಬಿಕೆ ನಮ್ಮದಾಗಿತ್ತು.

ಆದರೆ ಇಂದಿನ ಸ್ಥಳೀಯ ಆಡಳಿತದ ವ್ಯವಸ್ಥೆ ಸ್ಥಿತಿ ಗತಿ ನೇೂಡಿದರೆ  ನಿಜಕ್ಕೂ ಈ ಸಂವಿಧಾನದ ತಿದ್ದುಪಡಿ ಅಗತ್ಯವಿತ್ತಾ ಅನ್ನುವ ಪ್ರಶ್ನೆ ಮತ್ತೆ ಹುಟ್ಟಿ ಬರುವಂತಿದೆ. ಹಾಗಾದರೆ ಈ ಸಂವಿಧಾನದ  73 ಮತ್ತು 74ನೇ ತಿದ್ದುಪಡಿಗಿರುವ ಮರ್ಯಾದೆ ಏನು? ಚುನಾವಣೆ ನಡೆಸಿದರೂ ಸ್ಥಳೀಯ ಮಟ್ಟದಲ್ಲಿ ಆಡಳಿತ ನಡೆಸದ ಅತಂತ್ರ ಪರಿಸ್ಥಿತಿ ಕಾಲ ಕಾಲಕ್ಕೆ ಚುನಾವಣೆ ನಡೆಸಲು ಸಾಧ್ಯವಾಗದೇ ಗಾಂಧಿಯವರ ಕನಸಿನ ಭಾರತದ ಗ್ರಾಮರಾಜ್ಯವನ್ನು ಕೇೂಮ ಸ್ಥಿತಿಯಲ್ಲಿ ತಂದಿಡಬೇಕಾದ ದಾರುಣ ಪರಿಸ್ಥಿತಿ  ಸಂವಿಧಾನದ ಬಿಕ್ಕಟ್ಟಿನಲ್ಲಿ ತಳ್ಳಬೇಕಾದ ಸಂದಿಗ್ಧ ಪರಿಸ್ಥಿತಿ, ಹಾಗಾದರೆ ಇಷ್ಟೊಂದು ಖರ್ಚಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಬಹುದೊಡ್ಡ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದೇವೆ ಅನ್ನುವ ಸಾಧನೆಯ ಪಟ್ಟಿ ಯಾರಿಗಾಗಿ ಯಾವ ಮುಖದಲ್ಲಿ ಮುಂದಿಡಬೇಕು ನಾವು?.

ಇದೊಂದು ಸಂವಿಧಾನ ಬದ್ಧವಾಗಿ ರಚಿಸಿದ ಸ್ಥಳೀಯ ಸಂಸ್ಥೆ ಅನ್ನುವುದಾದರೆ, ಹಾಗಾದರೆ ಇದೇ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಲ್ಲಿ ತಂದು ಕೂರಿಸಲು ತಾವು ಸಿದ್ಧರಿದ್ದೀರಾ? ಅಲ್ಲಿ ಒಂದು ಎಂ.ಎಲ್.ಎ. ಮತ್ತು ಎಂ.ಪಿ.ಸೀಟ್ ಒಂದು ದಿನಖಾಲಿ ಇಡಲು ಸಾಧ್ಯವಿಲ್ಲ. ನಮ್ಮ ನ್ಯಾಯಾಂಗ ಕೂಡಾ ಅಷ್ಟೇ  ಹಗಲು ರಾತ್ರಿಯ ಕಾಲದಲ್ಲಿ ಕೂತಾದರೂ ಅಂತಹ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಮುಂದಾಗುತ್ತದೆ. ಅದೇ ಸ್ಥಳೀಯ ಆಡಳಿತದ ಮೀಸಲಾತಿ ಸಮಸ್ಯೆಗಳನ್ನು  ಇತ್ಯರ್ಥಪಡಿಸಲು ವರುಷ ಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ ಅಂದರೆ ಇದರ ಅರ್ಥವೇನು.? ಈ ಮೀಸಲಾತಿ ಕುರಿತಾಗಿ ಕೂಡಲೇ ನಿರ್ಧಾರ ತೆಗೆದುಕೊಂಡು ಸ್ಥಳೀಯ ಆಡಳಿತದ ರಚನೆಗೆ ಕೂಡಲೇ ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೇೂಗ ಮುಂದಾಗ ಬಹುದಿತ್ತಲಾ? ಇದನ್ನು ರಾಜ್ಯ ಸರಕಾರಗಳ ತೀರ್ಮಾನಕ್ಕೆ ಬಿಡಲೇ ಬಾರದಿತ್ತು. ಇದೊಂದು ಸಂವಿಧಾನ ಬದ್ಧವಾಗಿ ರಚನೆಯಾದ ಆಡಳಿತ ಸಂಸ್ಥೆಯಾದ ಕಾರಣ ಸುಪ್ರೀಂ ಕೇೂರ್ಟ್ ನೇರವಾಗಿ ಹಸ್ತಕ್ಷೇಪ ಮಾಡಬಹುದು. ಯಾಕೆ ಮಾಡುತ್ತಿಲ್ಲ ಅನ್ನುವುದು ಅರ್ಥವಾಗುತ್ತಿಲ್ಲ?

ಸ್ಥಳೀಯ ಆಡಳಿತದ ಸಂಸ್ಥೆ ಅಂದರೆ ಪ್ರಜಾಪ್ರಭುತ್ವದ ತೊಟ್ಟಿಲು ಅನ್ನುವ ಕೀರ್ತಿಯೂ ಇದೆ. ಇದನ್ನು ನಮ್ಮ ರಾಜ್ಯ ಸರ್ಕಾರಗಳು ಈ ತೊಟ್ಟಿಲನ್ನು ಕಸದ ಬುಟ್ಟಿಗೆ ಹಾಕುವ ಮನ:ಸ್ಥಿತಿಯಲ್ಲಿ ಇದ್ದಾವೆ ಅನ್ನುವುದು ಇಂದಿನ ಸ್ಥಳೀಯ ಸಂಸ್ಥೆಗಳ ಚಿಂತಾಜನಕ ಪರಿಸ್ಥಿತಿಯೇ ಸಾಕ್ಷಿ ನೀಡುತ್ತಿದೆ.

-ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ, ಉಡುಪಿ.

Related Articles

Stay Connected

21,961FansLike
3,912FollowersFollow
21,700SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!