Sunday, September 8, 2024

ಲೋಕಸಭಾ ಚುನಾವಣೆ : ರಾಮ ಮಂದಿರ, ಮೋದಿಗಾಗಿ ನಿಮ್ಮ ಮತ ಚಲಾಯಿಸಿ : ಕೋಟ ಶ್ರೀನಿವಾಸ ಪೂಜಾರಿ

ಜನಪ್ರತಿನಿಧಿ (ಕೋಟೇಶ್ವರ) : ಶಾಸಕರು, ಮಾಜಿ ಶಾಸಕರು, ಕಾರ್ಯಕರ್ತರು ತಾನೇ ಲೋಕಸಭಾ ಅಭ್ಯರ್ಥಿಯಾಗಿ ಚುನಾವಣೆಗಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆ ಇದೆ. ಈ ಚುನಾವಣೆ ಭಾರತ ದೇಶದ ಭವಿಷ್ಯವನ್ನು ಬರೆಯುವ ಚುನಾವಣೆ. ದೇಶವನ್ನು ಸುಭದ್ರವಾಗಿ ಆಳುವ ಒಬ್ಬ ನಾಯಕ ಪ್ರಧಾನಿ ಮೋದಿ ಹಾಗೂ ರಾಮ ಮಂದಿರಕ್ಕಾಗಿ ನಿಮ್ಮ ಅಮೂಲ್ಯ ಮತ ಚಲಾವಣೆ ಮಾಡಿ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಇಂದು (ಶುಕ್ರವಾರ) ನಡೆದ ಭಾರತೀಯ ಜನತಾ ಪಾರ್ಟಿ, ಕುಂದಾಪುರ ಮಂಡಲದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ನವರು ರಾಮ ಎನ್ನುವುದೇ ಸುಳ್ಳು, ರಾಮ ಎನ್ನುವುದು ಕಾಲ್ಪನಿಕ ಎಂದು ಹೇಳಿಲ್ಲವೇ ? ಇದೇ ವಿಚಾರವಾಗಿ ಕಾಂಗ್ರೆಸ್ ಸಂಸತ್ತಿಗೆ ಕಪ್ಪು ಬಟ್ಟೆ ಧರಿಸಿ ಬರಲಿಲ್ಲವೇ ? ರಾಮ ಮಂದಿರ ದೇಶದಲ್ಲಿ ನಿರ್ಮಾಣವಾದರೇ ರಕ್ತದೋಕುಳಿ ಹರಿಯುತ್ತದೆ ಎಂದು ಹೇಳಿದವರು ಇದೇ ಕಾಂಗ್ರೆಸ್ ಅವರಲ್ಲವೇ ? ಅಲ್ಲ ಎಂದು ತಾಕತ್ತಿದ್ದರೇ ಕಾಂಗ್ರೆಸ್ನವರು ಹೇಳಿಲಿ ನೋಡುವ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಸಹಸ್ರಾರು ರಾಮ ಭಕ್ತರ ಕನಸು ನನಸು ಮಾಡಿದವರು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು. ಇಂತಹ ಸಮರ್ಥ ನಾಯಕನ ಆಳ್ವಿಕೆಗೆ ಈ ದೇಶದ ಅಧಿಕಾರವನ್ನು ಮರಳಿ ಕೊಡಬೇಕಾದರೇ ಕಾರ್ಯಕರ್ತರು ಮನೆಮನೆಗೆ  ತೆರಳಿ ನಮ್ಮ ಪ್ರಧಾನಿಗಳ ಯೋಜನೆಗಳನ್ನು, ನಮ್ಮ ಸರ್ಕಾರದ ಕೆಲಸವನ್ನು ತಲುಪಿಸುವ ಅಗತ್ಯವಿದೆ. ಆ ಮೂಲಕ ಮತಗಳನ್ನು ಯಾಚಿಸಬೇಕಿದೆ ಎಂದು ಹೇಳಿದರಲ್ಲದೇ, ದಾಖಲೆಯ ಮಟ್ಟದಲ್ಲಿ ಈ ಕ್ಷೇತ್ರದಲ್ಲಿ ನನ್ನ ಮತ್ತು ಕಾರ್ಯಕರ್ತರ ಗೆಲುವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಮಾತ್ರವಲ್ಲದೇ, ಮತದಾರರು ಮತಗಳಿಗಾಗಿ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಪ್ರಧಾನಿಯವರಿಗಾಗಿ ದುಡಿಯಬೇಕಾಗಿದೆ ಎಂದು ಅವರು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಸುಮಾರು ಎಪ್ಪತ್ತಾರು ಸಾವಿರಗಳಿಗಿಂತಲೂ ಹೆಚ್ಚು ಮತಗಳಿಂದ ನಮ್ಮ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸಿದ್ದೇವು. ಈ ಬಾರಿಯೂ ಅತಿದೊಡ್ಡ ಅಂತರದಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಡುತ್ತೇವೆ ಎಂದು ಅವರು ಹೇಳಿದರು.

ಇನ್ನು, ಇದೇ ಸಂದರ್ಭದಲ್ಲಿ ಕುಂದಾಪುರ ಮಂಡಲದ ನೂತನ ಅಧ್ಯಕ್ಷ ಬೀಜಾಡಿ ಸುರೇಶ್ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ವಿವಿಧ  ಮೋರ್ಚಾಗಳ ನೂತನ ಅಧ್ಯಕ್ಷರು, ಪದಾಧಿಕಾರಿಗಳು ಅಧಿಕಾರ ಸ್ವೀಕಾರ ಮಾಡಿದರು.

ಸಭೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಕಿಶೋರ್ ಕುಂದಾಪುರ, ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ್, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಕಾಪು ವಿಧಾನಸಭಾ ಕ್ಷೇತ್ರದ ಶಾಸಕ  ಗುರ್ಮೆ ಸುರೇಶ್ ಶೆಟ್ಟಿ, ಮಂಗಳೂರು ಚುನಾವಣಾ ಪ್ರಭಾರಿ ಉದಯ್ ಶೆಟ್ಟಿ, ಮಂಗಳೂರು ವಿಭಾಗದ ಪ್ರಭಾರಿ ಉದಯ್‌ ಶೆಟ್ಟಿ, ಮಂಗಳೂರು ವಿಭಾಗದ ಸಹ ಪ್ರಭಾರಿ ರಾಜೇಶ್ ಕಾವೇರಿ ಸೇರಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಸುಧೀರ್ ಕೆ. ಎಸ್ ಸ್ವಾಗತಿಸಿ, ಕುಂದಾಪುರ ಬಿಜೆಪಿ ಮಂಡಲದ ನಿಕಟಪೂರ್ವ ಅಧ್ಯಕ್ಷ ಶಂಕರ್ ಅಂಕದಕಟ್ಟೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸತೀಶ್ ಪೂಜಾರಿ ವಕ್ವಾಡಿ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!