Sunday, September 8, 2024

ಭವಿಷ್ಯದಲ್ಲಿ ರೈತರಿಗೆ ವಾರಾಹಿ ನೀರು ಮಾತ್ರ ಆಸರೆ -ಕೆ.ಪ್ರತಾಪಚಂದ್ರ ಶೆಟ್ಟಿ

ಅಂಪಾರಿನಲ್ಲಿ ವಾರಾಹಿ ಬಲದಂಡೆ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರ ಸಭೆ



ಕುಂದಾಪುರ: ವಾರಾಹಿ ನೀರಾವರಿ ಯೋಜನೆ ಆರಂಭವಾಗಿ 41 ವರ್ಷ ಕಳೆದರೂ ಕೂಡಾ ಅದು ಚುರುಕು ಪಡೆದುಕೊಂಡಿದ್ದು 2000ನೇ ಇಸವಿಯ ನಂತರ. ಕೇವಲ ರೈತರಿಗೆ ನೀರಿನ ಉದ್ದೇಶದಿಂದ ಯೋಜನೆ ಆರಂಭಗೊಂಡರೂ ಕೂಡಾ ವಿದ್ಯುತ್ ಉತ್ಪಾದನೆಗಳಿಗೆ ಬಳಕೆಯಾಗಿದ್ದು ವಿಪರ್ಯಾಸ. ಮೂಲ ಯೋಜನೆಯಲ್ಲಿರುವ ಬಲ ದಂಡೆ ಕಾಮಗಾರಿ ಆರಂಭವಾಗಿಲ್ಲ. ಆದರೆ ನಂತರದ ಸೌಕೂರು ಏತನೀರಾವರಿ ಕಾಮಗಾರಿ ಆರಂಭಗೊಂಡಿದೆ. ಬಲದಂಡೆ ಕಾಮಗಾರಿ ಕೂಡಲೇ ಆರಂಭವಾಗಬೇಕಾಗಿದ್ದು ಮೂಲ ಯೋಜನೆಯಲ್ಲಿರುವ ಪ್ರತೀ ಫಲಾನುಭವಿಗಳಿಗೂ ನೀರು ಸಿಗಬೇಕು. ಭವಿಷ್ಯದಲ್ಲಿ ರೈತರಿಗೆ ವಾರಾಹಿ ನಾಲೆಯಿಂದ ಬರುವ ನೀರು ಮಾತ್ರ ಆಸರೆಯಾಗಲಿದೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.


ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಸೆ.3ರಂದು ಅಂಪಾರು ಶ್ರೀ ರಾಮ ಸಭಾಭವನ, ಕಂಚಾರು ಇಲ್ಲಿ ನಡೆದ ವಾರಾಹಿ ಬಲದಂಡೆ ನೀರಾವರಿ ಯೋಜನೆ ಅಚ್ಚುಕಟ್ಟು ಪ್ರದೇಶದ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.


ಮುಂದಿನ ವರ್ಷಗಳಲ್ಲಿ ರೈತರ ನೀರಾವರಿ ಪಂಪ್ ಸೆಟ್‍ಗಳಿಗೂ ಬಿಲ್ ಪಾವತಿಸುವ ಸಂದರ್ಭ ಬರುತ್ತದೆ. ಆಗ ವಿದ್ಯುತ್ ಬಿಲ್ ಪಾವತಿಸಿ ಕೃಷಿ ಮಾಡಿದರೆ ನಿರೀಕ್ಷಿತ ಲಾಭ ಅಸಾಧ್ಯ. ಅಂತಹ ಸಂದರ್ಭದಲ್ಲಿ ನಾಲೆಯ ಮೂಲಕ ಹರಿದು ಬರುವ ವಾರಾಹಿ ರೈತರನ್ನು ರಕ್ಷಿಸಲಿದೆ. ಹಾಗಾಗಿ ಮೂಲ ಯೋಜನೆಯಲ್ಲಿ ಯಾವ ಸರ್ವೇ ನಂಬರ್‍ಗಳ ಕೃಷಿಭೂಮಿಗೆ ನೀರು ಬರುತ್ತದೋ ಅದನ್ನು ರೈತರು ಪಡೆದುಕೊಳ್ಳುವಲ್ಲಿ ನಿರ್ಲಕ್ಷ್ಯ ತಾಳಬಾರದು ಎಂದರು.


ಮುಂದಿನ ಜನಾಂಗ ನಮ್ಮನ್ನು ಜರಿಯಬಾರದು. ಚುನಾಯಿತ ಪ್ರತಿನಿಧಿಗಳಾದ ನಾವು ನಮ್ಮ ಜವಬ್ದಾರಿ, ಕರ್ತವ್ಯಗಳನ್ನು ಮರೆಯಬಾರದು. ಇಲ್ಲಿ ಸಂಸದರು, ಶಾಸಕರು, ಮಾಜಿ ಶಾಸಕರು ಎಲ್ಲರೂ ಬಲದಂಡೆ ಯೋಜನೆ ಕಾಮಗಾರಿ ಆರಂಭಕ್ಕೆ ಪ್ರಯತ್ನಿಸಬೇಕು. ಮುಖ್ಯಮಂತ್ರಿಗಳು ಈ ಬಗ್ಗೆ ಆಸಕ್ತಿ ವಹಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದರು.


ಉಡುಪಿಯಲ್ಲಿ ಇವತ್ತು ಐದು ನದಿಗಳು ಹರಿಯುತ್ತಿವೆ. ಆದರೂ ಇಲ್ಲಿಂದ ನೀರನ್ನು ತಗೆದುಕೊಂಡ ಹೋಗಲಾಗುತ್ತಿದೆ. ಇದಕ್ಕೆ ನಮ್ಮ ಆಕ್ಷೇಪವಿಲ್ಲ, ಆದರೆ ಮೂಲ ಯೋಜನೆಗೆ ಹಿನ್ನೆಡೆಯಾಗಬಾರದು ಎಂದ ಅವರು ಯಾವ ಸರ್ವೇ ನಂಬರ್‍ಗೆ ನೀರು ಹೋಗುತ್ತದೆ ಎನ್ನುವ ಮಾಹಿತಿಯನ್ನು ಆಯಾಯ ಗ್ರಾಮ ಪಂಚಾಯಿತಿಗಳಿಗೆ ತಕ್ಷಣ ಒದಗಿಸಿ ಎಂದು ವಾರಾಹಿ ಅಧಿಕಾರಿಗಳಿಗೆ ಸೂಚನೆ ನೀಡಿದರು.


ನಾಲಾ ಪಥ ಪರಿಷ್ಕಾರ, ನೀರಿನ ಸೇತುವೆ ನಿರ್ಮಾಣ:
ವಾರಾಹಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿ, ಬಲದಂಡೆ ಯೋಜನೆ 1900 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಿದೆ. ಇದರ ಮೂಲ ನಾಲಾ ಪಥದಲ್ಲಿ ರಕ್ಷಿತಾರಣ್ಯ, ಡೀಮ್ಡ್ ಫಾರೆಸ್ಟ್, ಬೆಟ್ಟಗುಡ್ಡಗಳು ಇರುವುದರಿಂದ ಮುಖ್ಯನಾಲೆಯ ವಿನ್ಯಾಸದಲ್ಲಿ ಒಂದಿಷ್ಟು ಬಲದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಇದರಿಂದ ಮೂಲ ಅಚ್ಚುಕಟ್ಟು ಪ್ರದೇಶಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಪರಿಷ್ಕೃತ ನಾಲಾ ಪಥದಲ್ಲಿ ನೀರಿನ ಸೇತುವೆಗಳ ವಿನ್ಯಾಸ ಅಳವಡಿಸಲಾಗಿದೆ. ಶಂಕರನಾರಯಣ-ಹಳ್ನಾಡು 9.5 ಕಿ.ಮೀ ಮುಖ್ಯ ಕಾಲುವೆಯಾಗಿದ್ದು ಅಂಪಾರು ಸರ್ಕಲ್ ನಿಂದ ಉಪ ಕಾಲುವೆಗಳ ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ ಎಂದರು.


ರೈತ ಸಂಘದ ಕಾರ್ಯದರ್ಶಿ ಸಂತೋಷಕುಮಾರ ಶೆಟ್ಟಿ ಬಲಾಡಿ ಮಾತನಾಡಿ, ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ವಾರಾಹಿ ನೀರಾವರಿ ಯೋಜನೆಗೆ ಸಂಬಂಧಪಟ್ಟಂತೆ ಇದು 5ನೇ ಸಭೆಯಾಗಿದೆ. ರೈತರಿಗೆ ಯೋಜನೆಯ ಬಗ್ಗೆ ಅರಿವು ಮೂಡಿದೆ. ರೈತರ ಸಂದೇಹಗಳು, ಆತಂಕಗಳ ಪರಹಾರಕ್ಕೆ ಉತ್ತಮ ವೇದಿಕೆಯಾಗಿದೆ ಎಂದರು.


ಕೃಷಿಕ ದಿನಕರ ಶೆಟ್ಟಿ ಮುಂಬಾರು ಮಾತನಾಡಿ, ವಾರಾಹಿ ಬಲದಂಡೆ ಯೋಜನೆಗೆ ಹಿಂದೊಮ್ಮೆ ಸರ್ವೇ ಮಾಡಿ ಗುರುತು ಕಲ್ಲುಗಳನ್ನು ಹಾಕಿದ್ದರು. ಈಗ ವಿನ್ಯಾಸ ಬದಲಾವಣೆ ಎನ್ನಲಾಗುತ್ತಿದೆ. ಈಗ ಯಾವ ಮಾರ್ಗದಲ್ಲಿ ಹಾದು ಹೋಗುತ್ತದೆ ಎನ್ನುವ ಗೊಂದಲ ರೈತರಲ್ಲಿದೆ. ಬಲದಂಡೆ ಯೋಜನೆ ಕೂಡಲೇ ಅನುಷ್ಠಾನವಾಗದೇ ಇದ್ದರೆ ಮುಂದೆ ಉಚಿತ ವಿದ್ಯುತ್ ಸಿಗದೆ ರೈತರು ನೀರಿನ ಅಭಾವಕ್ಕೆ ಗುರಿಯಾಗುವ ಸಾಧ್ಯತೆ. ಹಾಗಾಗಿ ಈ ಯೋಜನೆ ಕೂಡಲೇ ಕಾರ್ಯಗತಗೊಳ್ಳಬೇಕು ಎಂದರು.


ಕಿರಣ್ ಹೆಗ್ಡೆ ಅಂಪಾರು ಮಾತನಾಡಿ ಯೋಜನೆಯ ಮುಖ್ಯ ಕಾಲುವೆ ಪಥ ಬದಲಾವಣೆಯಿಂದ ಮೂಲ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನ್ಯಾಯವಾಗಬಾರದು. ಮುಂದೆ ಅದು ಗೊಂದಲಕ್ಕೆ ಕಾರಣವಾಗಬಾರದು. ಈ ಬಗ್ಗೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದರು.


ಸಭೆಯಲ್ಲಿ ವಾರಾಹಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಪ್ರವೀಣ್, ಸಹಾಯಕ ಇಂಜಿನಿಯರ್ ಪ್ರಸನ್ನ, ಕಿರಣ್ ಮಾಹಿತಿ ಒದಗಿಸಿದರು. ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ ಬೆಳ್ವೆ, ರೈತ ಸಂಘದ ವಕ್ತಾರ ವಿಕಾಸ್ ಹೆಗ್ಡೆ, ಪ್ರದೀಪ ಕುಮಾರ್ ಶೆಟ್ಟಿ ಗುಡಿಬೆಟ್ಟು, ಸದಾಶಿವ ಶೆಟ್ಟಿ ಶಂಕರನಾರಾಯಣ, ಶರತಚಂದ್ರ ಶೆಟ್ಟಿ, ಕೃಷ್ಣದೇವ ಕಾರಂತ ಕೋಣಿ, ಅಶೋಕ ಕುಮಾರ್ ಶೆಟ್ಟಿ ಚೋರಾಡಿ, ರಮೇಶ ಗಾಣಿಗ ಕೊಲ್ಲೂರು, ದೇವಾನಂದ ಶೆಟ್ಟಿ, ರೋಹಿತ್ ಶೆಟ್ಟಿ, ವಿಜಯ ಪುತ್ರನ್, ಗಣಪಯ್ಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.


ವಾರಾಹಿ ಬಲದಂಡೆ ನೀರಾವರಿ ಯೋಜನೆಯು ಶಂಕರನಾರಾಯಣ-1177.18 ಎಕರೆ, ಕುಳುಂಜೆ-600.20 ಎಕರೆ, ಕಾವ್ರಾಡಿ-698.11 ಎಕರೆ, ಹಳ್ಳಾಡು-505.78 ಎಕರೆ, ಅಂಪಾರು-1048.91 ಎಕರೆ, ಗ್ರಾಮಗಳ ಅಂದಾಜು-4030.68 ಎಕರೆ ಕೃಷಿ ಜಮೀನಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!