spot_img
Monday, July 13, 2026
spot_img

ಹಂದಿಗಳ ಸರಣಿ ಸಾವು, ರೋಗ ನಿಯಂತ್ರಣಕ್ಕೆ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಲಿ-ಶಾಸಕ ಗುರುರಾಜ ಗಂಟಿಹೊಳೆ

ಕುಂದಾಪುರದಲ್ಲಿ ಅಧಿಕಾರಿಗಳ ವಿಶೇಷ ಸಭೆ
ಕುಂದಾಪುರ: ಹಂದಿಗಳ ಸರಣಿ ಸಾವುಗಳ ಬಗ್ಗೆ ಸ್ಥಳೀಯ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಹಂದಿಗಳು ಕೊಳೆತು ವಾಸನೆಯಿಂದ ಸುತ್ತ ಮುತ್ತಲಿನ ಪರಿಸರದಲ್ಲಿ ಓಡಾಡಲು ಆಗದೇ ಇರುವುದು ಹಾಗೂ ಹಂದಿಗಳ ಸಾವಿನ ಹಿಂದಿರುವ ರೋಗದಿಂದ ಇತರೆ ಸಾಕು ಪ್ರಾಣಿಗಳಿಗೆ ಹಾಗೂ ಮನುಷ್ಯರಿಗೆ ತೊಂದರೆ ಆಗುವ ಬಗ್ಗೆ ಗೊಂದಲದಲ್ಲಿ ಗ್ರಾಮಸ್ಥರು ಇದ್ದಾರೆ. ಹಾಗಾಗಿ ಸ್ಥಳೀಯಾಡಳಿತ ಸಂಸ್ಥೆಗಳು ಇತರೆ ಇಲಾಖೆಗಳ ಸಲಹೆ ಪಡೆದು ಜನರ ಆತಂಕ ದೂರ ಮಾಡುವ ನಿಟ್ಟಿನಲ್ಲಿ ವ್ಯಾಪಕ ಮುಂಜಾಗೃತ ಕ್ರಮ ಕೈಗೊಳ್ಳಲು ಎಲ್ಲಾ ಇಲಾಖೆಗಳಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಸೂಚನೆ ನೀಡಿದರು.

ಬೈಂದೂರು, ಕುಂದಾಪುರ ತಾಲೂಕಿನಾದ್ಯಾಂತ ಕಾಡು ಹಂದಿಗಳು ಸಾವಿನ ಬಗ್ಗೆ ಇಲಾಖೆಗಳು ಕೈಗೊಳ್ಳುತ್ತಿರುವ ಮುಂಜಾಗೃತ ಕ್ರಮಗಳ ಬಗ್ಗೆ ಅವರು ಸೋಮವಾರ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆರೋಗ್ಯ, ಪಶು ವೈದ್ಯಕೀಯ ಹಾಗೂ ಅರಣ್ಯ ಇಲಾಖೆ ಮತ್ತು ಸ್ಥಳಿಯಾಡಳಿತದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಪ್ರಸ್ತುತ ಬೈಂದೂರು ಕ್ಷೇತ್ರದ ನಾಡ, ಹಟ್ಟಿಯಂಗಡಿ, ಆಲೂರು, ಹೆಮ್ಮಾಡಿ ಹಾಗೂ ಹಕ್ಲಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಈವರೆಗೆ ೮ ಹಂದಿಗಳ ಕಳೇ ಬರ ಪತ್ತೆಯಾಗಿದ್ದು, ಅದರಲ್ಲಿ ಕಾಡು ಹಂದಿಗಳ ಜೊತೆಗೆ ನಾಡ ಹಂದಿಗಳೂ ಇರುವುದಾಗಿದೆ. ಪತ್ತೆಯಾದ ಸಂಪೂರ್ಣ ಕೊಳೆತು ಹೋದವುಗಳನ್ನು ಹೊರತು ಪಡಿಸಿ ಉಳಿದ ಮೃತ ಹಂದಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸ್ಯಾಂಪಲ್ ಪಡೆದುಕೊಂಡು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಮೇಲೆ ಸಾವಿಗೆ ನಿಖರ ಕಾರಣ ಹಾಗೂ ಉಳಿದ ಕ್ರಮ ಕೈಗೊಳ್ಳಲಾಗುವುದು ಎಂದು ಕುಂದಾಪುರ ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಇದಕ್ಕುತ್ತರಿಸಿದ ಶಾಸಕರು ಪ್ರಯೋಗಾಲಯದ ವರದಿ ಬರುವ ಮುನ್ನ ಈ ರೋಗವು ವ್ಯಾಪಕವಾಗಿ ಹರಡದಂತೆ ನಾಲ್ಕು ಇಲಾಖೆಗಳೂ ಪರಸ್ಪರ ಹೊಣೆಯರಿತು ತಂಡವಾಗಿ ಕಾರ್ಯ ಪ್ರವೃತ್ತರಾಗಲು ಸೂಚಿಸಿದರು.

ಹಂದಿ ಸಾಕಾಣಿಕೆ ಕೇಂದ್ರಗಳ ಮೇಲೆ ನಿಗಾ ಇರಲಿ:
ಸಾಕು ಹಂದಿಗಳ ಸಾವಿನ ವರದಿ ಆಗುತ್ತಿರುವ ಹಿನ್ನಲೆಯಲ್ಲಿ ಹಂದಿ ಸಾಕಾಣಿಕ ಕೇಂದ್ರಗಳ ಮೇಲೆ ನಿಗಾವಹಿಸಲು ಹಾಗೂ ಸದ್ರಿ ಕೇಂದ್ರಗಳು ವೈಜ್ಞಾನಿಕವಾಗಿ ನಿರ್ವಹಣೆ ಆಗುತ್ತಿರುವುದನ್ನ ಖಾತ್ರಿ ಪಡಿಸುವುದು ಹಾಗೂ ಸುತ್ತ ಮುತ್ತಲಿನ ಪರಿಸರದಲ್ಲಿ ನೈರ್ಮಲ್ಯಕ್ಕೆ ಹೆಚ್ಚು ಒತ್ತು ನೀಡುವ ಕಡೆಗೆ ಸಂಬಂಧ ಪಟ್ಟ ಇಲಾಖೆಯ ಮೂಲಕ ಕ್ರಮವಾಗಬೇಕೆಂದರು.

ಪಶು ಇಲಾಖೆ ನೇತೃತ್ವದಲ್ಲಿ ಕಾರ್ಯಾಚರಣೆ ತಂಡ:
ಹಂದಿಗಳ ಸರಣಿ ಸಾವಿನ ಹಿನ್ನಲೆಯಲ್ಲಿ ಜನರಲ್ಲಿ ಇರುವ ಆತಂಕ ಹಾಗೂ ಗೊಂದಲಗಳನ್ನು ನಿವಾರಣೆ ಮಾಡಲು ಮತ್ತು ಸಾವಿನ ಪ್ರಮಾಣ ಶೂನ್ಯಕ್ಕೆ ಇಳಿಸಿ, ಮತ್ತು ಪ್ರಕರಣಗಳು ಮರು ಕಳಿಸದಂತೆ ನಿಗಾ ವಹಿಸಲು ಹಾಗೂ ಸಾವಿನ ವರದಿ ಸಕಾಲದಲ್ಲಿ ಇಲಾಖೆಗಳ ಗಮನಕ್ಕೆ ಬರುವ ನಿಟ್ಟಿನಲ್ಲಿ ಪಶು ವೈದ್ಯಕೀಯ ಇಲಾಖೆಯ ನೇತೃತ್ವದಲ್ಲಿ ಆರೋಗ್ಯ, ಅರಣ್ಯ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳ ಜೊತೆ ಕಾರ್ಯಾಚರಣೆ ತಂಡ ರಚಿಸಿ ಸಮಾರೋಪಾದಿಯಲ್ಲಿ ಹಂದಿಗಳಿಗೆ ತಗುಲಿರುವ ರೋಗವನ್ನು ಹಿಮ್ಮೆಟ್ಟಿಸುವುದರೊಂದಿಗೆ ವ್ಯಾಪಕ ಜಾಗೃತಿಯೊಂದಿಗೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಅಧಿಕಾರಿಗಳಿಗೆ ಸಲಹೆ ನೀಡಿದರು.

ಸಭೆಯಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕು ಅರೋಗ್ಯ ಅಧಿಕಾರಿ ಡಾ. ಪ್ರೇಮಾನಂದ, ಬೈಂದೂರು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನಾಗಶಯನ, ಕುಂದಾಪುರ ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ.ಅರುಣ್ ಹೆಗ್ಡೆ, ಬೈಂದೂರು ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ.ಅರುಣ್ ಕುಮಾರ್ ವೈ.ಕೆ, ಕುಂದಾಪುರ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಬೈಂದೂರು ವಲಯ ಅರಣ್ಯಾಧಿಕಾರಿ ಜ್ಯೋತಿ, ಶಂಕರ ನಾರಾಯಣ ವಲಯ ಅರಣ್ಯಾಧಿಕಾರಿ ಸಂದೇಶ್, ಕಾಡು ಹಂದಿಗಳ ಸಾವು ಕಂಡು ಬಂದ ಗ್ರಾಮ ವ್ಯಾಪ್ತಿಗಳ ಪಶು ವೈದ್ಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಗ್ರಾಮ ಪಂಚಾಯತ್ ಆಡಳಿತಾಧಿಕಾರಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!