spot_img
Friday, May 23, 2025
spot_img

ಸಿದ್ದರಾಮಯ್ಯ ರಾಜಕೀಯಕ್ಕೆ ಅಂಟಿದ ಕೊಳೆ !

ಮುಡಾ ತಂದ ಆಪತ್ತಿನಿಂದ ಕಾಂಗ್ರೆಸ್ಸಿನ ಸಂದಿಗ್ದತೆ !     

ನಿಷ್ಕಳಂಕ ರಾಜಕೀಯ ವರ್ಚಸ್ಸನ್ನು ಹೊಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೇಡವೆಂದರೂ ಬಂದು ಅಂಟಿಕೊಂಡ ಕೊಳೆ ಎಂದರೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಕ್ರಮ ನಿವೇಶನ ಹಂಚಿಕೆ ವಿವಾದ. ಬಹುಶಃ ಸಿದ್ದರಾಮಯ್ಯ ಅವರು ಕಂಡ ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರದ ಆರೋಪ ಹೊರುವ ಹಾಗೆ ಮಾಡಿ, ವಿಪಕ್ಷಗಳ ಬಾಯಿಗೆ ಆಹಾರ ಆಗಿದ್ದು ಇದೇ ಮೊದಲು ಅಂತನ್ನಿಸುತ್ತದೆ. ಕಾಂಗ್ರೆಸ್‌ನ ಹೈಕಮಾಂಡ್‌ ಸೇರಿ ಸ್ವತಃ ಸಿಎಂ ಸಿದ್ದರಾಮಯ್ಯ ಅವರೂ ಕೂಡ ಹೀಗೊಂದು ಅಪವಾದ ತನ್ನ ಮೇಲೆ ಬಂದು ಬಿಡುತ್ತದೆ ಎಂಬ ಯಾವ ಊಹೆಯಲ್ಲಿಯೂ ಇದ್ದಿರಲಿಕ್ಕಿಲ್ಲ.

ರಾಜಕೀಯ ವಲಯದಲ್ಲಿ ಸಿದ್ದಾಂತ ಹಾಗೂ ನಿಲುವು, ರಾಜಕೀಯ ನಡೆಗಳ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಬಗ್ಗೆ ಒಂದಿಷ್ಟು ಭಿನ್ನ ಅಭಿಪ್ರಾಯಗಳಿದ್ದರೂ, ಈವರೆಗೆ ಭ್ರಷ್ಟಾಚಾರ ಆರೋಪವನ್ನು ಅವರು ಎದುರಿಸಿಲ್ಲ. ರಾಜಕೀಯ ವರ್ಚಸ್ಸಿಗೆ ಯಾವುದೇ ಧಕ್ಕೆ ಆಗದಿರುವ ಹಾಗೆ ಸಿದ್ದರಾಮಯ್ಯ ನೋಡಿಕೊಂಡಿದ್ದರು ಎನ್ನುವುದು ಕೂಡ ಸತ್ಯ. ರಾಜಕೀಯ ಅಂದಮೇಲೆ ಸಣ್ಣಪುಟ್ಟ ಆರೋಪಗಳು ಸಹಜ. ಅದು ರಾಜಕೀಯ ದುರುದ್ದೇಶದಿಂದಲೂ ಆಗಬಹುದು/ಆಗಿರಬಹುದು. ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದಲ್ಲಿ ಇಂತಹ ಪ್ರಸಂಗಗಳು ಎದುರಾಗುವುದಕ್ಕೆ ಅವಕಾಶ ಮಾಡಿಕೊಟ್ಟವರಲ್ಲ. ಆದರೇ, ಇದೊಂದು ಪ್ರಕರಣ ಅವರರನ್ನು ಯಾವ ರೀತಿಯಲ್ಲಿ ಆವರಿಸಿಕೊಂಡಿತ್ತು ಎನ್ನುವ ಬಗ್ಗೆ ಅವರನ್ನು ವಿಪರೀತವಾಗಿ ಬೆಂಬಲಿಸುವ ವರ್ಗದವರಲ್ಲಿ ನಿಜಕ್ಕೂ ಆಶ್ಚರ್ಯ ಮೂಡಿಸಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನ್ಯಾಯಾಲಯದಲ್ಲಿ ಪ್ರಾಥಮಿಕ ಹಂತದಲ್ಲಿ ಭಾರೀ ಹಿನ್ನಡೆಯಾಗಿದೆ. ಅವರ ನೇತೃತ್ವದ ಸರ್ಕಾರಕ್ಕೆ ಇದೊಂದು ಕಪ್ಪು ಚುಕ್ಕಿಯೇ ಸರಿ. ಮೈಸೂರಿನಲ್ಲಿ ಸಿಎಂ ಪತ್ನಿ ಪಾರ್ವತಿ ಅವರಿಗೆ 14 ನಿವೇಶನಗಳನ್ನು ಕಾನೂನುಬಾಹಿರವಾಗಿ ಹಂಚಿಕೆ ಮಾಡಲಾಗಿದೆ ಎಂಬ ಪ್ರಕರಣದಲ್ಲಿ ರಾಜ್ಯಪಾಲರು ಆಗಸ್ಟ್ 16ರಂದು ಸಿಎಂ ವಿರುದ್ಧ ಕ್ರಮಕ್ಕೆ ಆದೇಶಿಸಿರುವುದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿರುವುದು ಸಿದ್ದರಾಮಯ್ಯ ಅಂತಹ ಮುತ್ಸದ್ದಿ ರಾಜಕಾರಣಿಯ ಪಾಲಿಗೆ ದೊಡ್ಡ ಹಿನ್ನಡೆಯೇ ಸರಿ.

ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿದ್ದರಾಮಯ್ಯ ತಮಗೆ ಅನುಕೂಲಕರವಾಗಿ ಬರುವ ತೀರ್ಪಿನ ನಿರೀಕ್ಷೆಯಲ್ಲಿದ್ದರು. ಊಹೆಗೂ ಮೀರಿ ಹೈಕೋರ್ಟ್‌ ತೀರ್ಪು ಕೊಟ್ಟಿತ್ತು. ಈಗ ಇದು ರಾಷ್ಟ್ರಮಟ್ಟದ ಸುದ್ದಿಯಾಯಿತು. ವಿಧಾನಸಭಾ ಚುನಾವಣೆಯಾಗಲಿ ಅಥವಾ ಲೋಕಸಭಾ ಚುನಾವಣೆಯಾಗಲಿ ರಾಜ್ಯದ ಪಾಲಿಗೆ ಕಾಂಗ್ರೆಸ್‌ ವರ್ಸಸ್ ಬಿಜೆಪಿ ಎನ್ನುವುದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯ ವರ್ಸಸ್‌ ಮೋದಿ ಎನ್ನುವ ಹಾಗೆಯೇ ನಡೆದಿದ್ದವು. ಸಿದ್ದರಾಮಯ್ಯ ಎದರು ಬಿಜೆಪಿಯಲ್ಲಿ ಯಾವ ರಾಜಕೀಯದ ವರ್ಚಸ್ವಿ ಮುಖವಿಲ್ಲ ಎನ್ನುವುದು ಕೂಡ ಇದರ ಒಳಾರ್ಥ. ಈ ಮೂಲಕ ಸಿದ್ದರಾಮಯ್ಯ ರಾಷ್ಟ್ರಮಟ್ಟದಲ್ಲಿಯೂ ಪ್ರಭಾವಿ ನಾಯಕ ಎಂದು ಗುರುತಿಸಿಕೊಂಡಿದ್ದರು. ಹಾಗಾಗಿ ಹೇಗಾದರೂ ಮಾಡಿ ಸಿದ್ದರಾಮಯ್ಯ ಅವರ ರಾಜಕೀಯ ವರ್ಚಸ್ಸನ್ನು ಕುಗ್ಗಿಸಬೇಕೆಂಬ ಬಯಕೆ ಬಿಜೆಪಿಯಲ್ಲಿ ಸಹಜವಾಗಿತ್ತು, ಅದಕ್ಕೆ ಸರಿಯಾಗಿ ಎಂಬಂತೆ ಈ ಮುಡಾ ಹಗರಣ ಮುನ್ನೆಲೆಗೆ ಬಂದಿದ್ದು, ಬಿಜೆಪಿ ಪಾಲಿಗೆ ಸಿಕ್ಕ ದೊಡ್ಡ ಗ್ರಾಸವೇ ಆಯಿತು.

ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾರಕ್ಕೇರಿದ ಕಾಂಗ್ರೆಸ್‌ಗೆ ಈ ಪ್ರಕರಣ ತಲೆನೋವಾಗಿ ಪರಿಣಮಿಸಿದೆ. ಸಿದ್ದರಾಮಯ್ಯ ಅವರು ಪ್ರಾಮಾಣಿಕರಿರಬಹುದು ಆದರೇ, ಆರೋಪವನ್ನು ತೀರಾ ಏನೂ ಇಲ್ಲ ಎನ್ನುವಂತೆ ತಳ್ಳಿ ಹಾಕುವಂತೆಯೂ ಇಲ್ಲವಲ್ಲ. ಸಿದ್ದರಾಮಯ್ಯ ಪ್ರಶ್ನಾತೀತರೂ ಅಲ್ಲವಲ್ಲ. ಹಾಗಾಗಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಈ ಪ್ರಕರಣವನ್ನು ಎದುರಿಸಲೇಬೇಕಿದೆ. ರಾಷ್ಟ್ರಮಟ್ಟದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮರಳಿ ಚೇತರಿಸಿಕೊಂಡ ಕಾಂಗ್ರೆಸ್‌ ಗೆ ತನ್ನದೇ ಸರ್ಕಾರ ಅಧಿಕಾರವಿರುವ ಕರ್ನಾಟಕದಲ್ಲಿ ಪಕ್ಷದ ಮುಖ್ಯಮಂತ್ರಿಯೇ ಇಂತಹದ್ದೊಂದು ಆರೋಪವನ್ನು ಎದರಿಸುತ್ತಿರುವುದು ಗಂಟಲಲ್ಲಿನ ಬಿಸಿ ತುಪ್ಪದಂತಾಗಿದೆ. ಸಿದ್ದರಾಮಯ್ಯ ಅವರನ್ನು ಹೊರತಾಗಿ ಅಷ್ಟೇ ಸಮರ್ಥವಾಗಿ ನಿಭಾಯಿಸಬಲ್ಲ ಅನುಭವಿ ರಾಜಕೀಯ ನಾಯಕರೂ ಕಾಂಗ್ರೆಸ್‌ನಲ್ಲಿ ಇಲ್ಲ ಎನ್ನುವುದು ಕೂಡ ಸತ್ಯ. ಸಿದ್ದರಾಮಯ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡಬೇಕೆಂಬ ಪ್ರತಿಪಕ್ಷಗಳ ಒತ್ತಡದ ನಡುವೆಯೂ ಕಾನೂನಿನ ಸಮರಕ್ಕಿಳಿದಿರುವುದರಿಂದ ಕಾಂಗ್ರೆಸ್‌ ಹೈಕಮಾಂಡ್‌ ಗೂ ರಾಜೀನಾಮೆ ಕೊಡಿಸಿ ಕೆಳಗಿಳಿಸಿದರೇ, ಅದು ಇನ್ನೊಂದು ರಾಜಕೀಯ ತಿರುವು ಪಡೆದುಕೊಳ್ಳಬಹುದೆಂಬ ಭಯ ಒಳಗಿಂದಲೇ ಕಾಡುತ್ತಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಕಾಂಗ್ರೆಸ್ಸಿನ ಸಂದಿಗ್ಧ ಪರಿಸ್ಥಿತಿ :

ಕಾಂಗ್ರೆಸ್ ನಾಯಕತ್ವಕ್ಕೆ, ಈ ಬಿಕ್ಕಟ್ಟು ಅದರ ರಾಜಕೀಯ ತೀಕ್ಷ್ಣತೆಯ ಪರೀಕ್ಷೆಯಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಸಿದ್ದರಾಮಯ್ಯ ಅವರಂತಹ ಹಿರಿಯ ʼಸಮುದಾಯ ನಾಯಕʼರನ್ನು ರಾಜೀನಾಮೆ ಕೊಡಿಸಿದರೇ, ಕಾಂಗ್ರೆಸ್‌ ಪಾಲಿಗೆ ಸಿದ್ದರಾಮಯ್ಯ ಅವರ ಕಾರಣಕ್ಕಾಗಿ ಬಹುದೊಡ್ಡ ಮಟ್ಟದಲ್ಲಿ ಮತದಾನದ ಮೂಲಕ ಪರವಾಗಿ ನಿಂತ ʼಅಹಿಂದʼ ವರ್ಗ ಮುನಿಸಿಕೊಳ್ಳಬಹುದು ಎಂಬ ಆತಂಕವಿದೆ. ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ರಾಜೀನಾಮೆ ನೀಡಿಸಿದರೇ, ಅದು ಇನ್ನಷ್ಟು ಪ್ರತಿಪಕ್ಷಗಳ ದಾಳಿಗೆ ಆಹ್ವಾನ ನೀಡುತ್ತದೆ. ಹಾಗೆ ಮಾಡದಿದ್ದರೆ, ಅದು ನೈತಿಕತೆಯ ಪ್ರಶ್ನೆಯಾಗಿಯೂ ಕಾಡುತ್ತದೆ. ರಾಜಕೀಯ ಅಸ್ಥಿರತೆಗೆ ತನ್ನನ್ನು ತಾನೇ ಮೈಯೊಡ್ಡಿ ನಿಂತಂತಾಗುತ್ತದೆ. ರಾಜಕೀಯದಲ್ಲಿ ಕಾಂಗ್ರೆಸ್‌ ಸಂಭಾವ್ಯ ಬಲುದೊಡ್ಡ ಸಮಸ್ಯೆಯನ್ನೂ ಎದುರಿಸಬೇಕಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಈ ಎಲ್ಲದರ ನಡುವೆ ಕಾಂಗ್ರೆಸ್‌ ನಿಜಕ್ಕೂ ಸಂದಿಗ್ಧತೆಯನ್ನು ಎದುರಿಸುತ್ತಿದೆ.

ಯಾವುದೇ ಬಲವಂತದ ನಾಯಕತ್ವ ಬದಲಾವಣೆಯು ಸಿದ್ದರಾಮಯ್ಯನವರನ್ನು ಬೆಂಬಲಿಸುವ ಅಹಿಂದಾ (ಅಲ್ಪಸಂಖ್ಯಾತರು, ಒಬಿಸಿ ಮತ್ತು ದಲಿತ-ಸಂಕ್ಷಿಪ್ತ ರೂಪ) ಮತದಾರರನ್ನು ದೂರವಿಡಬಹುದು ಎಂಬ ಕಾರಣದಿಂದಾಗಿ ಇದು ಕಾಂಗ್ರೆಸ್‌ಗೆ ಸೂಕ್ಷ್ಮವಾದ ಹೈ ವೈರ್ ಆಕ್ಟ್ ಆಗಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗಿಂತ ಪಕ್ಷದ ಶಾಸಕರ ಬೆಂಬಲ ಸಿದ್ದರಾಮಯ್ಯ ಅವರ ಕಡೆಯಿದೆ. ಒಂದುವೇಳೆ ಕಾಂಗ್ರೆಸ್ ಮೂರನೇ ಆಯ್ಕೆಗೆ ಮುಂದಾದರೆ ಶಿವಕುಮಾರ್ ತಮ್ಮ ಜಾತಿ, ಸಂಘಟನಾ ಶಕ್ತಿ, ರಾಜಕೀಯ ಪ್ರಭಾವ ತೋರಿಸಬಹದು. ಸದ್ಯಕ್ಕೆ ಶಿವಕುಮಾರ್ ಒಗ್ಗಟ್ಟಾಗಿದ್ದೇವೆ, ಸಿದ್ದರಾಮಯ್ಯ ಪರವಾಗಿದ್ದೇವೆಂದು  ಸಾರ್ವಜನಿಕವಾಗಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಿದ್ದಾರೆ. ಪಕ್ಷವು “ಸಿದ್ದರಾಮಯ್ಯ ಅವರೊಂದಿಗೆ ನಿಂತಿದೆ” ಎನ್ನುವುದು ಸದ್ಯದ ಕಾಂಗ್ರೆಸ್ ನಿಲುವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಹೋರಾಟಗಾರ, ಅವರಿಗೆ ಹೈಕಮಾಂಡ್ ಬೆಂಬಲವಿದೆ ಎಂದು ಅವರ ಆಪ್ತರು ಕೂಡ ವಿಶ್ವಾಸದಲ್ಲಿದ್ದಾರೆ.

ಇನ್ನು, ಸಿದ್ದರಾಮಯ್ಯ ಅವರ ಪತ್ನಿ ನಿವೇಶನ ವಾಪಾಸ್‌ ಮಾಡಿದ್ದು ಭಾವನಾತ್ಮಕವಾಗಿ ರಾಜಕೀಯವಾಗಿ ಹೇಗೆ ತಿರುವು ಪಡೆದುಕೊಳ್ಳುತ್ತದೆ ಹಾಗೂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರನ್ನು ಪ್ರಕರಣದ ಆರೋಪ ಪಟ್ಟಿಗೆ ಸೇರಿಸಿಕೊಳ್ಳಬೇಕೆಂಬ ಕೂಗೂ ಕೇಳಿಬಂದಿದೆ. ಯತೀಂದ್ರ ಅವರ ಮೇಲೆ ʼಸೂಪರ್ ಸಿಎಂʼ ಎಂಬ ಆರೋಪವು ಕೇಳಿ ಬಂದಿತ್ತು. ಸಿದ್ದರಾಮಯ್ಯ ಅವರ ಪಾಲು ಈ ಪ್ರಕರಣದಲ್ಲಿ ಇಲ್ಲದೇ ಇದ್ದರೂ, ಯತೀಂದ್ರ ಅವರ ಪ್ರಭಾವ ಇರಬಹುದು ಎಂಬ ಚರ್ಚೆ ಕೂಡ ಇದೆ. ಒಂದು ವೇಳೆ ಯತೀಂದ್ರ ಈ ಪ್ರಕರಣದಲ್ಲಿ ಪಾಲುದಾರರಾಗಿರುವುದು ಸಾಬೀತಾದರೇ, ಕಾಂಗ್ರೆಸ್‌ ಹೈಕಮಾಂಡ್‌, ಸಿದ್ದರಾಮಯ್ಯ ಅವರಿಗೆ ತೋರಿದ ಮೃದು ಧೋರಣೆಯನ್ನಂತೂ ತೋರಿಸುವುದಿಲ್ಲ ಎನ್ನುವುದು ದಿಟ.

ಕಾಂಗ್ರೆಸ್ ಅನ್ನು ಈ ವಿವಾದ ತುಸು ದುರ್ಬಲಗೊಳಿಸಿದೆ, ಸದ್ಯದ ಮಟ್ಟಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಯೇ ಉದ್ಭವಿಸದಿರಬಹುದು. ಆದರೆ, ಪಕ್ಷದಲ್ಲಿ ಕೆಲವು ಗೊಂದಲಗಳು ಎದುರಾಗುವ ಸಾಧ್ಯತೆಯಂತೂ ಎದ್ದು ಕಾಣಿಸುತ್ತಿದೆ. ಈ ಸಂದಿಗ್ದತೆಯಲ್ಲಿ ತನ್ನ ಕಾರ್ಯಕರ್ತರು ಮತ್ತು ಶಾಸಕರನ್ನು ಕಾಂಗ್ರೆಸ್‌ ಹೇಗೆ ನಿಯಂತ್ರಿಸುತ್ತದೆ ಎಂಬುದು ಪ್ರಶ್ನೆಯಾಗಿದೆ. ಈ ನಡುವೆ ಅಕ್ರಮ ಹಣ ವರ್ಗಾವಣೆಯಾಗಿದೆ ಎಂಬ ಆರೋಪದ ಮೇಲೆ ಸಿಎಂ ವಿರುದ್ಧ ಇಡಿ ಪ್ರಕರಣವೂ ದಾಖಲಾಗಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ಕರ್ನಾಟಕದಲ್ಲಿ ಕಾಂಗ್ರೆಸ್‌ ಪಾಲಿಗೆ ದೂರಗಾಮಿ ಪರಿಣಾಮಗಳನ್ನು ಉಂಟುಮಾಡಬಹುದು. ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ, ಆರ್.‌ ಅಶೋಕ್‌ ಅವರ ಆರೋಪಗಳನ್ನೆಲ್ಲಾ ಸಿದ್ದರಾಮಯ್ಯ ಲೆಕ್ಕಕ್ಕೆ ತೆಗೆದುಕೊಳ್ಳದೇ ಹೋದರೂ, ಇದರಿಂದಾಗಿ ಕಾಂಗ್ರೆಸ್ ಸುದೀರ್ಘ ರಾಜಕೀಯ ಪರಿಣಾಮವನ್ನು ಅನುಭವಿಸಬಹುದು, ಪ್ರತಿಪಕ್ಷದ ಬಿಸಿ ಎದುರಿಸಬಹುದು. ಹಾಗಾಗಿ ತನ್ನ ಮುಂದಿರುವ ಸವಾಲುಗಳನ್ನು  ಎದುರಿಸಲು ಕಾಂಗ್ರೆಸ್‌ ತುರ್ತಾಗಿ ಕಾರ್ಯತಂತ್ರವನ್ನು ರೂಪಿಸಲೇಬೇಕಿದೆ.

ಶ್ರೀರಾಜ್‌ ವಕ್ವಾಡಿ 

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!