Tuesday, October 22, 2024

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ : ಶಿರೂರು ಟೋಲ್‌ ಗೇಟ್‌ ನಿಂದ ಕಾಪು ಹೆಜಮಾಡಿ ಸೇತುವೆವರೆಗೆ ʼಮಾನವ ಸರಪಳಿ ಕಾರ್ಯಕ್ರಮ : ಜಿಲ್ಲಾಧಿಕಾರಿ

ಜನಪ್ರತಿನಿಧಿ (ಉಡುಪಿ) : ಸರ್ಕಾರದ ನಿರ್ದೇಶನದಂತೆ ೧೫.೦೯.೨೦೨೪ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲೆಯಲ್ಲಿ ಶಿರೂರು ಟೋಲ್‌ ಗೇಟ್‌ ನಿಂದ ಕಾಪು ಹೆಜಮಾಡಿ ಸೇತುವೆವರೆಗೆ ಸುಮಾರು ೧೦೭ ಕಿ.ಮೀ ವರೆಗೆ ಮಾನವ ಸರಪಳಿ ರಚಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ತಿಳಿಸಿದರು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು/ನಿಬ್ಬಂಧಿಗಳು ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಸದಸ್ಯರು ಜಿಲ್ಲೆಯ ಶಾಲಾ ಕಾಲೇಜು ಬೋಧಕ/ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸಹಕಾರಿ ಸ್ವ ಸಹಾಯ ಸಂಘಗಳ ಪದಾಧಿಕಾರಿಗಳು/ಸದಸ್ಯರುಗಳು ರೋಟರಿ, ಲಯನ್ಸ್‌, ರೆಡ್‌ ಕ್ರಾಸ್‌, ಸಂಸ್ಥೆಗಳ ಪದಾಧಿಕಾರಿಗಳು/ಸದಸ್ಯರು ಸೇರಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಅವರು ಮಾಹಿತಿ ನೀಡಿದರು.

ಜಿಲ್ಲಾ ಮಟ್ಟದಲ್ಲಿ ಅಪರ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್‌ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಸಿದ್ಧತೆಯ ಬಗ್ಗೆ ಮೇಲುಸ್ತುವಾರಿ ವಹಿಸಲು ಸಮಿತಿ ರಚಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಹಲವು ಸಭೆಗಳನ್ನು ನಡೆಸಲಾಗಿದೆ. ಪ್ರಜಾಪ್ರಭುತ್ವ ಮೌಲ್ಯಗಳನ್ನು ಸಾರುವ ಬ್ಯಾನರ್‌ ಅನ್ನು ಕಿನ್ನಿಮೂಲ್ಕಿ ಸಮೀಪ ಬ್ಯಾನರ್‌ ಪ್ರದರ್ಶನ ಮಾಡಲಾಗಿದೆ. ಮಾನವ ಸರಪಳಿ ಕಾರ್ಯಕ್ರಮದಲ್ಲಿ ಸಂವಿಧಾನ ಕುರಿತು ಪ್ಲಕಾರ್ಡ್‌ಗಳ ಪ್ರದರ್ಶನ ಮಾಡಲಾಗುವುದು ಎಂದು ಅವರು ಹೇಳಿದರು.

ಕಿನ್ನಿಮುಲ್ಕಿ ಸ್ವಾಗತ ಗೋಪುರದ ಬಳಿ ಜಿಲ್ಲಾ ಮಟ್ಟದ ಕಾರ್ಯಕ್ರಮ
ಕಾರ್ಯಕ್ರಮದ ಬಗ್ಗೆ ವಿವರಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಕಿನ್ನಿಮುಲ್ಕಿ ಸ್ವಾಗತ ಗೋಪುರದ ಬಳಿ ಆಯೋಜಿಸಲಾಗಿದ್ದು, ಜಿಲ್ಲಾ ಕೇಂದ್ರದಲ್ಲಿ ಸುಮಾರು ಐನೂರು ಮೀಟರ್‌ ಉದ್ದದ ಹಾಗೂ ಮೂರು ಮೀಟರ್‌ ಅಗಲದ ಭಾರತ ಹಾಗೂ ಕರ್ನಾಟಕದ ಧ್ವಜ ಪ್ರದರ್ಶನ ಮಾಡಲಾಗುವುದು ಎಂದು ತಿಳಿಸಿದರು.

ಮರವಂತೆ, ಕುಂದಾಪುರ ಟೌನ್‌, ಕಿನ್ನಿಮುಲಕಿ, ಉಚ್ಚಿಲ ಇಲ್ಲಿ ಕಾರ್ಯಕ್ರಮವನ್ನು ಡ್ರೋನ್‌ ಮೂಲಕ ಫೋಟೋ ಶೂಟ್‌ ಮಾಡಲಾಗುವುದು ಕಾರ್ಯಕ್ರಮಕ್ಕೆ ಹೆಚ್ಚಿನ ಜನರನ್ನು ಆಕರ್ಷಿಸಲು ಆಡಿಯೋ ಜಿಂಗಲ್‌ ಸಿದ್ಧಪಡಿಸಲಾಗಿದ್ದು, ಎಸ್‌.ಎಲ್.‌ ಆರ್‌ ಘಟಕದ ವಾಹನ ಮೂಲಕ ಎಲ್ಲಾ ಗ್ರಾಮ ಪಂಚಾಯತ್‌,ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಚಾರ ಮಾಡಲಾಗಿದೆ ಎಂದು ತಿಳಿಸಿದರು. ೧೩.೦೯.೨೦೨೪ರಂದು ಬೆಳಗ್ಗೆ ಏಳು ಗಂಟೆಗೆ ಕಾರ್ಯಕ್ರಮದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡು ಕುಂಜಾರುಗಿರಿಯಲ್ಲಿ ಟ್ರೆಕ್ಕಿಂಗ್‌ ಏರ್ಪಡಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಇನ್ನು, ಅಂಬೇಡ್ಕರ್‌, ಬುದ್ಧ, ಬಸವ ಇತ್ಯಾದಿ ನಾಯಕರ ವೇಷಭೂಷಣ ಜೊತೆಗೆ ಜಿಲ್ಲೆಯ ವಿವಿಧ ಸಾಂಸ್ಕೃತಿಕ ವೇಷಭೂಷಣಗಳಾದ ಯಕ್ಷಗಾನ ಹಾಗೂ ಇನ್ನಿತರೆ ಸ್ಥಳೀಯ ಜಾನಪದ ಕಲಾತಂಡಗಳಿಂದ ನೃತ್ಯ ಪ್ರದರ್ಶನ ಮಾಡಿಸಲು ಉದ್ದೇಶಿಸಲಾಗಿದೆ. ಪ್ರತಿ ನೂರು ಮೀಟರ್‌ಗೆ ಒಬ್ಬರು ಸೆಕ್ಷನ್‌ ಆಫಿಸರ್‌, ಪ್ರತಿ ಒಂದು ಕಿ.ಮೀ ಗೆ ತಾಲೂಕು ಮಟ್ಟದ ಒಬ್ಬರು ಏರಿಯಾ ಆಫೀಸರನ್ನು ಹಾಗೂ ಪ್ರತಿ ಐದು ಕಿ.ಮೀ ಗೆ ಜಿಲ್ಲಾ ಮಟ್ಟದ ಆಫೀಸರನ್ನು ನೇಮಕ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ ಹತ್ತು ಕಿ.ಮೀ ಗಳಿಗೆ ಅಂಬುಲೆನ್ಸ್‌ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!