Sunday, September 8, 2024

ನಿರೂಪಣೆಗೆ ಒಂದು ಹೊಸ ಗತ್ತು ನೀಡಿದ್ದ ಅಪರ್ಣಾ

ಸ್ಪಷ್ಟ ಧ್ವನಿಯ ಮೂಲಕ ಭಾಷಾ ಸ್ಪಷ್ಟತೆಯಿಂದಲೇ ಕನ್ನಡ ಪದಗಳನ್ನು ಮಧುರಗೊಳಿಸಿದ ಬೆರಗುಗಣ್ಣಿನ ಕೃಷ್ಣ ವರ್ಣದ ಚೆಲುವೆ ಅಪರ್ಣಾ, ಮಾನವರಿಲ್ಲದ ದೇವಲೋಕದ ನಿಲ್ದಾಣಕ್ಕೆ  ಪ್ರಯಾಣಿಸಿದ್ದು  ವಾರವೇ ಕಳೆದು ಹೋಯಿತು.

ಛೆ : ದೇವರು ಅಷ್ಟು ಬೇಗನೆ ಕರೆದುಕೊಳ್ಳುವ ಅವಸರ ಏಕೆ ಮಾಡಿದನು ಅನ್ನುವ ಜಿಜ್ಞಾಸೆಯೊಂದಿಗೆ ಕಂಬನಿ ಸುರಿಸಿದ ಅಭಿಮಾನಿಗಳ ಸಂಖ್ಯೆ ಅಪಾರ. ಇವರು ನಟಿಸಿರುವ ಚಿತ್ರಗಳ ಸಂಖ್ಯೆ ಕೇವಲ11. ಅದು ವಿರಾಳ  ಎನಿಸಿದರೂ ಜನ ಗುರುತಿಸಿದ್ದು ಮಾತ್ರ ಅವರ ಧ್ವನಿಯನ್ನು..ಪುಟ್ಟಣ್ಣ ಕಣಗಾಲ್ ಅವರ ಶೋಧನೆಯಲ್ಲಿ ಈ ಪ್ರತಿಭೆ ಅಂದು ಸ್ಯಾಂಡಲ್ ವುಡ್ ನಲ್ಲಿ  ಪುಷ್ಪ ವಾಗಿ ಅರಳಿದ್ದು ” ಮಸಣದ ಹೂ ” ಪಾರ್ವತಿ ಆಗಿ ಚಿತ್ರರಂಗ ಪ್ರವೇಶ.ಆದರೆ, ಪುಟ್ಟಣ್ಣನವರ ಈ ಚಿತ್ರವನ್ನು ಪೂರ್ಣಪ್ರಮಾಣದ ನಿರ್ದೇಶನಕ್ಕೆ ದೇವರು ಅವರಿಗೆ ಆಯುಷ್ಯವನ್ನು ನೀಡಲಿಲ್ಲ. ಚಿತ್ರವನ್ನು ಅರ್ಧಕ್ಕೆ ನಿರ್ದೇಶನ ಮಾಡಿ ಮಸಣವನ್ನು ಸೇರಿದ ಚಿತ್ರ ಬ್ರಹ್ಮನ ಉಳಿದಿರುವ ಅರ್ಧ ಚಿತ್ರವನ್ನು  ನಿರ್ದೇಶನ ಮಾಡಿದ್ದು ಅವರ ಶಿಷ್ಯ ಕೆ ಎಸ್ ಎಲ್ ಸ್ವಾಮಿ ( ರವಿ).

ನಿರೂಪಣೆಗೆ ಒಂದು ಹೊಸ ಗತ್ತು ನೀಡುತ್ತಿದ್ದ ಇವರು, ನಿರೂಪಣೆ ಟ್ರೆಂಡನ್ನು  ಬದಲಿಸಿ, ಮಾತು, ನಿರೂಪಣೆ, ಧ್ವನಿಯ ಮೂಲಕ ಸಭಾ ಕಾರ್ಯಕ್ರಮಕ್ಕೆ ಒಂದು ವ್ಯಕ್ತಿತ್ವವನ್ನು ರೂಪಿಸಿದ ಕಲಾವಿದೆ. ಧ್ವನಿಯಗೆ ತಕ್ಕಂತೆ ಹಾವ -ಭಾವ ಬದಲಿಸುವ ಸಹಜಾಭಿನಯದ ಅಪರ್ಣ ಅವರು ನಟಿಸಿದ ಚಿತ್ರಗಳಲ್ಲಿ ಅಭಿಮಾನಿಗಳು ಕಣ್ಣೀರು ಹಾಕುವಂತೆ ಮಾಡಿದರೆ, ಒನ್ ಅಂಡ್ ಓನ್ಲಿ ವರೂ ( ವರಲಕ್ಷ್ಮಿ )ವಾಗಿ “ಮಜಾ ಟಾಕೀಸ್ “ನಲ್ಲಿ ನಗೆ ಕಡಲಲ್ಲಿ ನಗಿಸಿ ಕಾಮಿಡಿ ನಟಿಯಾದರು . ಹಾಗೆ ಹೆಚ್ಚಿನ ವೇದಿಕೆ ಕಾರ್ಯಕ್ರಮದ ನಿರೂಪಣೆಯಲ್ಲಿ  ಯಾವುದೇ ಗೀತೆವಿರಲಿ  ವಿಷಯವಿರಲಿ ಅದರ ಇತಿಹಾಸವನ್ನು ಹೇಳುವ ವಿಶ್ವಕೋಶ ಅಂತ ಅನಿಸಿಕೊಂಡರು.ಅಕ್ಟೋಬರ್ 16-1966 ರಲ್ಲಿ ಚಿಕ್ಕಮಗಳೂರು ಕಡೂರಿನ ತಾಲೂಕಿನ ಪಂಚನಹಳ್ಳಿಯಲ್ಲಿ ಕೆ ಎಸ್ ನಾರಾಯಣಸ್ವಾಮಿ ಮತ್ತು ಪದ್ಮಾವತಿ ದಂಪತಿಗಳ ಸುಪುತ್ರಿಯಾಗಿ ಜನಿಸಿದ ಇವರತಂದೆ ಸಿನಿಮಾ ಪುರವಣಿಯ ಲೇಖಕರು( ಈ ದಂಪತಿಗಳಿಗೆ ಚೈತನ್ಯ ಎಂಬ ಇನ್ನೊಬ್ಬ ಮಗ ಇದ್ದಾನೆ )ಹಾಗಾಗಿ ಇವರ ಮೈ ಮನವೆಲ್ಲ ಅಚ್ಚಕನ್ನಡ ತುಂಬಿರುವುದಂತು ದಿಟ.

ಹುಟ್ಟಿದ್ದು ಹಳ್ಳಿಯಲ್ಲಿ ಆದರೆ ಬಾಲ್ಯದ ದಿನಗಳನ್ನು ಕಳೆದಿದ್ದು ಸಿಲಿಕಾನ್ ಸಿಟಿಯಲ್ಲಿ.. ಶಾಲಾ ಕಾಲೇಜುಗಳದಿನಗಳನ್ನುಬೆಂಗಳೂರಿನಲ್ಲಿ ಕಳೆದು,.ದೂರದರ್ಶನದಲ್ಲಿವಾರ್ತೆ ವಾಚಕಿಯಾಗಿ, ನಿರೂಪಕಿಯಾಗಿ, ಆಕಾಶವಾಣಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ರೇಡಿಯೋ ಜಾಕಿಯಾಗಿ ಸತತ ಎಂಟು ಗಂಟೆಗಳ ಕಾಲ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ  ದಾಖಲೆ ನಿರ್ಮಿಸಿದ ಇವರ ವೈಯಕ್ತಿಕ ಜೀವನದಲ್ಲಿ ಇಬ್ಬರ ಪ್ರವೇಶ. ಭಾರತೀಯ ಮೂಲದ ವಿದೇಶದಲ್ಲಿರುವ ಹುಡುಗನನ್ನು ಮದುವೆಯಾಗಿ ಸಂಸಾರ ಮಾಡಿದ್ದು ಕೇವಲ ಎರಡೇ ವರ್ಷವಾದರೂ ನಂತರ ಬಾಳ  ಜೀವನದಲ್ಲಿ ಪ್ರವೇಶ ಮಾಡಿದ್ದು ವಾಸ್ತುಶಿಲ್ಪಿ, ಲೇಖಕ ನಾಗರಾಜ್ ವಸ್ತಾರೆ.

ಅದಾಗಲೇ ಇವರಿಗೆ 39 ವರ್ಷವಾಗಿತ್ತು. ಮಕ್ಕಳಾಗುವ ವಯಸ್ಸು ಕೂಡ ಮೀರಿತ್ತು ಅನ್ನುವ ಕೊರಗು ಅಪರ್ಣರ ಮನಸಲ್ಲಿತ್ತು. ಚಿತ್ರಗಳಲ್ಲಿ ಅವಕಾಶ ಸಿಗದಿದ್ದಾಗ ಟಿಎಂ ಸೀತಾರಾಮ್ ನವರು ಧಾರವಾಹಿ ಮೂಲಕ ” ಮುಕ್ತ ” ಅವಕಾಶ ನೀಡಿದರೆ, ವೈಶಾಲಿ ಕಾಸರವಳ್ಳಿ  ಅವರ” ಮೂಡಲ ಮನೆ”ಯಲ್ಲಿ ಬೆಳಗಿದರು. ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡ ಅಪರ್ಣವರ ಜೀವನದ ಕೊನೆಯ ಬದುಕು ಪತಿಯ ಆರೈಕೆಯಲ್ಲಿ  ಮನೆಯಲ್ಲಿ ಕಳೆದು ಜೀವನದ ಅಂತಿಮ ಪ್ರಯಾಣ ಮಾಡಿದ್ದು ಕೊನೆಯ ನಿಲ್ದಾಣಕ್ಕೆ. ವಿಮಾನ, ಬಸ್ಸು ನಿಲ್ದಾಣ, ದೂರವಾಣಿ ಹಾಗು ಮೆಟ್ರೋ  ರೈಲಿಗೆ ಹತ್ತುವ ಮತ್ತುಇಳಿಯುವ ಮಾರ್ಗ ಸೂಚನೆ ನೀಡುತ್ತಿದ್ದ ಆ ಧ್ವನಿ ಕೋಟ್ಯಾಂತರ ಕನ್ನಡಿಗರನ್ನು ಆವರಿಸಿದ್ದಂತು ಸತ್ಯ. ಈ ರೈಲಿನ ಪ್ರಯಾಣ ಇಲ್ಲಿಗೆ ಕೊನೆಗೊಳ್ಳುತ್ತದೆ. ಹಾಗಾಗಿ ನೀವು ಮುಂದಿನ ನಿಲ್ದಾಣಕ್ಕೆ ಇನ್ನೊಂದು ರೈಲನ್ನು ಆಶ್ರಿಸಬೇಕಾಗುತ್ತದೆ ಅನ್ನುವ ಇವರ ವಾಕ್ಯ ಘೋಷಣೆ, ಇವರ ಜೀವನಕ್ಕೆ ಅನ್ವಯಿಸಲಿಲ್ಲ ಎಂಬುದು ವಿಧಿ ಆಟ.
-ಪಿ. ವಿಜಯ ಗಂಗೊಳ್ಳಿ      
“ಸ್ವಾಮಿ ಕೃಪಾ”

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!