Sunday, September 8, 2024

ಕುಂದಾಪುರ : ಕಾಟಚಾರ ಜನಸ್ಪಂದನ ಸಭೆ ನಡೆಸಿದ ಅಧಿಕಾರಿಗಳಿಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿ : ವಿಕಾಸ್‌ ಹೆಗ್ಡೆ ಒತ್ತಾಯ

ಜನಪ್ರತಿನಿಧಿ (ಕುಂದಾಪುರ) : ಸಾರ್ವಜನಿಕ ಕುಂದು ಕೊರತೆಗಳನ್ನು ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಸಹಾಯಕ ಆಯುಕ್ತರು, ತಹಶೀಲ್ದಾರ್‌ ನೇತೃತ್ವದಲ್ಲಿ ತಾಲೂಕ ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಕುಂದಾಪುರದ ಆರ್.‌ ಎನ್‌ ಶೆಟ್ಟಿ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು.

ಸಾರ್ವಜನಿಕವಾಗಿ ಅಧಿಕಾರಿಗಳು ಅಹವಾಲು ಸ್ವೀಕಾರ ಮಾಡಿಲ್ಲ ಮತ್ತು ಬಹಿರಂಗವಾಗಿ ಚರ್ಚಗೆ ಅವಕಾಶ ಮಾಡಿಕೊಟ್ಟಿಲ್ಲ ಎಂಬ ಕಾರಣಕ್ಕೆ ಗೊಂದಲ ಸೃಷ್ಟಿಯಾಯಿತು.

ಗೌಪ್ಯವಾಗಿಯೇ ಅಧಿಕಾರಿಗಳು ಅಹವಾಲು ಸ್ವೀಕರಿಸುತ್ತಿರುವುದರ ಬಗ್ಗೆ ಧ್ವನಿ ಎತ್ತಿದ ಸಾರ್ವಜನಿಕರು ಹಾಗೂ ಮಾಧ್ಯಮದವರ ಬಾಯಿ ಮುಚ್ಚಿಸುವ ಪ್ರಯತ್ನವನ್ನು ಜಿಲ್ಲಾಡಳಿತ ಮಾಡುತ್ತಿದೆ ಎಂಬ ಆಕ್ರೋಶ ವ್ಯಕ್ತವಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ಸಹಾಯಕ ಆಯುಕ್ತರಾದ ರಶ್ಮಿ ಎಸ್‌. ಆರ್‌, ತಹಶೀಲ್ದಾರ್‌ ಶೋಭಾಲಕ್ಷ್ಮೀ ಹಾಗೂ ಕುಂದಾಪುರದ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ, ಬೈಂದೂರಿನ ಶಾಸಕ ಗುರುರಾಜ್‌ ಶೆಟ್ಟಿ ಗಂಟಿಹೊಳೆ ಇದ್ದರು.

ಈ ಬಗ್ಗೆ ಜನಪ್ರತಿನಿಧಿ ಪತ್ರಿಕೆಗೆ ಪ್ರತಿಕ್ರಿಯಿಸಿದ ಜಿಲ್ಲಾ ಕಾಂಗ್ರೆಸ್‌ ವಕ್ತಾರ ವಿಕಾಸ್‌ ಹೆಗ್ಡೆ, ಇದು ಕಾಟಚಾರದ ಜನ ಸ್ಪಂದನ ಸಭೆ. ಕುಂದಾಪುರದ ಆರ್. ಏನ್. ಶೆಟ್ಟಿ ಹಾಲ್ ನಲ್ಲಿ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ನಡೆದ ಜನ ಸ್ಪಂದನ ಕಾರ್ಯಕ್ರಮ ಕೇವಲ ಕಾಟಚಾರದ ಸಭೆ. ಪತ್ರಿಕೆಯವರನ್ನು, ವಿವಿಧ ಸ್ಥರದ ಜನಪ್ರತಿನಿಧಿಗಳನ್ನು ಕಾಟಚಾರಕ್ಕೆ ಸಭೆಗೆ ಆಹ್ವಾನ ನೀಡಿ, ಸಭೆಯಲ್ಲಿ ಅರ್ಜಿಗಳ ವಿಲೇವಾರಿ ಹೆಸರಲ್ಲಿ ಮಾಧ್ಯಮದವರನ್ನು, ಜನಪ್ರತಿನಿಧಿಗಳನ್ನು, ಸಾರ್ವಜನಿಕರನ್ನು ಕತ್ತಲೆಯಲ್ಲಿ ಇಟ್ಟು ಅವರಷ್ಟಕ್ಕೆ ಅವರು ಸಭೆ ನಡೆಸಿದ್ದು ಸರ್ಕಾರದ ಜನಪರ ಕಾರ್ಯಕ್ರಮವಾದ ಜನ ಸ್ಪಂದನ ಕಾರ್ಯಕ್ರಮಕ್ಕೆ ಮಾಡಿದ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ಬಗ್ಗೆ ಕುಂದಾಪುರ ಹಾಗೂ ಬೈಂದೂರು ಶಾಸಕರ ಎದುರಲ್ಲಿ ಧ್ವನಿ ಎತ್ತಿದ ಸಾರ್ವಜನಿಕರು ಹಾಗೂ ಮಾಧ್ಯಮದವರ ವಿರುದ್ಧ ಜಿಲ್ಲಾಡಳಿತ ಬಾಯಿಮುಚ್ಚಿಸುವ ಪ್ರಯತ್ನ ಮಾಡಿದ್ದು ಜನವಿರೋಧಿ ಕ್ರಮ. ಮುಖ್ಯಮಂತ್ರಿಯವರ ಮಹತ್ವಕಾಂಕ್ಷಿ ಕಾರ್ಯಕ್ರಮವಾದ ಜನಸ್ಪಂದನ ಕಾರ್ಯಕ್ರಮವನ್ನು ಕಾಟಚಾರಕ್ಕೆ ಮಾಡಿದ ಸಂಬಂಧಿತ ಅಧಿಕಾರಿಗಳ ಮೇಲೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇನ್ನು, ಕಾಳಾವರ ಗ್ರಾಮ ಪಂಚಾಯತ್‌ ಸದಸ್ಯ ರಮೇಶ್‌ ಶೆಟ್ಟಿ ವಕ್ವಾಡಿ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ನೇತೃತ್ವದ ಸರಕಾರದ ಮಹತ್ವಾಕಾಂಕ್ಷೆಯ ಜನಸ್ಪಂದನೆ ಸಭೆಯನ್ನು ಉಡುಪಿ ಜಿಲ್ಲಾಧಿಕಾರಿಗಳು ಹಳ್ಳ ಹಿಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಗ್ರಾಮ ಸರ್ಕಾರದ ಜನಪ್ರತಿನಿಧಿಗಳಿಗೆ ಹಿಂದಿನ ಸಂಜೆ ಕಾರ್ಯಕ್ರಮದ ಮಾಹಿತಿ ಹೋಗಿದ್ದು, ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಅರ್ಜಿ ತಯಾರಿಸಿ ಕಡತ ತಯಾರಿಸಲು ಸಮಯವೇ ಇರಲಿಲ್ಲ, ಅರ್ಜಿ ಸಲ್ಲಿಸಿದವರೊಂದಿಗೆ ಮಾತ್ರ ಗುಪ್ತ ಮಾತುಕಥೆ ನಡೆದಿತ್ತು.  ಇದನ್ನು ಖಂಡಿಸಿದ ಪತ್ರಕರ್ತರಿಗೆ ಜಿಲ್ಲಾ ಪೋಲೀಸ್ ವರಿಷ್ಠಾಧಿಗಳು ದರ್ಪ ಪ್ರದರ್ಶಿಸಿದ್ದು ಜಿಲ್ಲಾ ಆಡಳಿತದ ನಿರಂಕುಶ ಆಡಳಿತದ ಪರಮಾವಧಿ. ಸಭೆಯಲ್ಲಿ ಇರುವ ಶಾಸಕರು ಕೂಡ ಮೌನವಾಗಿ ಇದ್ದಿದದ್ದು ವಿಪರ್ಯಾಸ. ಹಾಗೆಯೇ ಜನಸ್ಪಂದನ ಸಭೆಯನ್ನು ಗುಟ್ಟಾಗಿ ಅರ್ಜಿ ತೆಗೆದುಕೊಂಡು ಮಾಡುವ ಬದಲು ನಿಮ್ಮ ಕಛೇರಿಯಲ್ಲಿಯೇ ಸ್ವೀಕರಿಸಬಹುದಲ್ಲವೇ ಎಂದವರು ಪ್ರಶ್ನಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!