Sunday, September 8, 2024

ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿ, ನಾವುಂದ ನವೀಕೃತ ಪ್ರಧಾನ ಕಛೇರಿ ಮತ್ತು ಮೇಲಂತಸ್ತಿನ ಕಟ್ಟಡ ಉದ್ಘಾಟನೆ

ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರಿಗೆ ಮರವಂತೆ ಬಡಾಕೆರೆ ವ್ಯ.ಸೇ.ಸ.ಸಂಘದಿಂದ ‘ಸಹಕಾರ ಸಂವರ್ಧಕ ಪ್ರಶಸ್ತಿ’ ಪ್ರದಾನ

ಮರವಂತೆ, ಜೂ.15 (ಜನಪ್ರತಿನಿಧಿ ವಾರ್ತೆ) ಅವಿಭಜಿತ ದಕ ಜಿಲ್ಲೆಯ 170 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಲಾಭದಲ್ಲಿ ಮುನ್ನೆಡೆಯುತ್ತಿವೆ. ಕೃಷಿಸಾಲ ಮರುಪಾವತಿಯಲ್ಲಿಯೂ ಕೂಡಾ ಇಲ್ಲಿನ ಸಹಕಾರಿ ಸಂಘಗಳು ಶೇ.100 ಮರುಪಾವತಿಯೊಂದಿಗೆ ರಾಷ್ಟ್ರದಲ್ಲಿಯೇ ಗುರುತಿಸಲ್ಪಟ್ಟಿವೆ. ಸಹಕಾರ ಸಂಘಗಳಿಗೆ ಸೇವೆಯೇ ಉಸಿರು ಆದರೂ ಕೂಡಾ ಭವಿಷ್ಯದ ದೃಷ್ಟಿಯಿಂದ ಲಾಭದ ಬಗ್ಗೆಯೂ ಚಿಂತನೆಗಳನ್ನು ಹಾಕಿಕೊಳ್ಳುವುದು ಕೂಡಾ ಅಗತ್ಯ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು ಇದರ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿ, ಬೆಂಗಳೂರು ಇದರ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ಬೈಂದೂರು ತಾಲೂಕು ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿ, ನಾವುಂದ ನವೀಕೃತ ಪ್ರಧಾನ ಕಛೇರಿ ಮತ್ತು ಮೇಲಂತಸ್ತಿನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಇವತ್ತು ಸಹಕಾರಿ ಕ್ಷೇತ್ರದಲ್ಲಿ ನಾವು ಬೆಳೆದು ಇತರರನ್ನು ಬೆಳೆಸುವ ಕೆಲಸ ಮಾಡುತ್ತಿದೆ. ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘವು ಕೂಡಾ ಹಲವು ಏಳುಬೀಳುಗಳನ್ನು ಕಂಡು ಇವತ್ತು ಅಭಿವೃದ್ಧಿಯ ಪಥದಲ್ಲಿ ಮುನ್ನೆಡೆಯುತ್ತಿದೆ. ನಮ್ಮ ರಾಜ್ಯದ ಸಹಕಾರ ವ್ಯವಸ್ಥೆಯಲ್ಲಿ ನಮ್ಮ ಜಿಲ್ಲೆಯ ಸಹಕಾರಿಗಳಿಗೆ ವಿಶೇಷ ಸ್ಥಾನವಿದೆ. ಇವತ್ತಿನ ಅಗತ್ಯತೆಗೆ ಅನುಗುಣವಾಗಿ ಹವಾನಿಯಂತ್ರಿತ ಕಟ್ಟಡಗಳ ನಿರ್ಮಾಣ ಮಾಡಿಕೊಂಡು ಉತ್ತಮ ಸೇವೆ ನೀಡುತ್ತಿವೆ. ಸ್ಪರ್ಧಾತ್ಮಕವಾದ ದಿನಗಳಲ್ಲಿ ಪರಿರ್ವನೆಗೆ ಅನುಗುಣವಾಗಿ ನಮ್ಮ ಸಹಕಾರ ಕ್ಷೇತ್ರವೂ ಮುನ್ನಡೆಯುತ್ತಿದೆ ಎಂದರು.

ಸಹಕಾರದ ಜೊತೆಜೊತೆಯಲ್ಲಿ ಸ್ತ್ರೀಸಬಲೀಕರಣಕ್ಕೂ ಒತ್ತು ನೀಡಿದ್ದೇವೆ. ನವೋದಯ ಸ್ವಸಹಾಯ ಗುಂಪುಗಳು ಇವತ್ತು ಮಹಿಳಾ ಆರ್ಥಿಕ ಸಬಲೀರಣಕ್ಕೆ ಕಾರಣವಾಗಿದೆ. ಶಿಸ್ತು, ಜಾಗೃತಿ, ಅಭಿವೃದ್ಧಿಯ ಯೋಚನೆಗಳು ಮಹಿಳೆಯರಲ್ಲಿ ಮೂಡಿದೆ ಎಂದು ಹೇಳಿದ ಅವರು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವತಿಯಿಂದ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ರೂ ೧೦ ಲಕ್ಷ ನೀಡುವುದಾಗಿ ಘೋಷಿಸಿದರು.

ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಶಾಲೆಗಳಷ್ಟೇ ಸಹಕಾರ ಸಂಘಗಳಿಗೂ ಮಹತ್ವವಿದೆ. ಒಂದು ಗ್ರಾಮದಲ್ಲಿ ಜ್ಞಾನ ನೀಡುವ ಶಾಲೆ ಎಷ್ಟು ಮುಖ್ಯವೋ ಹಾಗೆಯೇ ಪ್ರತಿಯೊಂದು ಗ್ರಾಮದಲ್ಲಿ ವಿಶ್ವಾಸಾರ್ಹ ಹಣಕಾಸು ಸಂಸ್ಥೆಯಾಗಿರುವ ಸಹಕಾರ ಸಂಘಗಳು ಮುಖ್ಯ. ಸಹಕಾರ ವ್ಯವಸ್ಥೆ ಜನರ ವಿಶ್ವಾಸ ಪಡೆದುಕೊಂಡು ಬೆಳೆಯುತ್ತಿದೆ. ಅದಕ್ಕೆ ಪೂರಕವಾಗಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಛಾಪು ಮೂಡಿಸಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಬಿ.ಎಂ.ಸುಕುಮಾರ ಶೆಟ್ಟಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಂ.ಮಹೇಶ್ ಹೆಗ್ಡೆ,ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ಶ್ರೀಮತಿ ಲಾವಣ್ಯ ಕೆ.ಆರ್, ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್.ವಿ., ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ನಿ., ಕುಂದಾಪುರ ಇದರ ಅಧ್ಯಕ್ಷರಾದ ಎಚ್.ಹರಿಪ್ರಸಾದ್ ಶೆಟ್ಟಿ, ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಜಯರಾಜ್ ರೈ, ಮೊನಪ್ಪ ಶೆಟ್ಟಿ, ಹರಿಶ್ಚಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಘದ ಅಧ್ಯಕ್ಷರಾದ ಎಸ್.ರಾಜು ಪೂಜಾರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ, ಸಾಕಷ್ಟು ಹಿನ್ನೆಡೆ ಕಂಡ ಈ ಸಂಘ 17 ಲಕ್ಷ ನಷ್ಟದಲ್ಲಿತ್ತು. ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರ ವಿಶೇಷ ಸಹಕಾರ ಮಾರ್ಗದರ್ಶನದಿಂದ ಇವತ್ತು ಲಾಭದಾಯಕವಾಗಿ ಮುನ್ನಡೆಯುತ್ತಿದೆ. ಶಾಖೆಗಳು ಕೂಡಾ ಸ್ವಂತ ಕಟ್ಟಡವನ್ನು ಹೊಂದಿ ಕಾರ್ಯನಿರ್ವಹಿಸುತ್ತಿವೆ. ಕುಂದೋತ್ಸವ, ನವಕುಂದೋತ್ಸವ ಕಾರ್ಯಕ್ರಮಗಳಿಗೆ ನಾಯಕತ್ವ ನೀಡಿ ಸಹಕಾರ ವ್ಯವಸ್ಥೆಗೆ ಶಕ್ತಿ ಕೊಡುವ ಕೆಲಸವನ್ನು ರಾಜೇಂದ್ರ ಕುಮಾರ್ ಮಾಡಿದ್ದಾರೆ. ಸಂಘದ ಸದಸ್ಯರಿಗೆ ವಿವಿಧ ಕೊಡುಗೆಗಳು, ಕೊರೋನಾ ಸಮಯದಲ್ಲಿ ಕೂಡಾ ಸಂಘ ಸದಸ್ಯರಿಗೆ ಸ್ಪಂದಿಸಿದೆ. ಸದಸ್ಯರ ಅನುಕೂಲಕ್ಕಾಗಿ ಇದೀಗ ಪ್ರಧಾನ ಕಛೇರಿ ಮತ್ತು ಮೇಲಂತಸ್ತಿನ ಕಟ್ಟಡ ಉದ್ಘಾಟನೆಗೊಳಿಸಲಾಗಿದೆ ಎಂದರು.

ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಸಹಕಾರಿ ಸಂವರ್ಧಕ ಪ್ರಶಸ್ತಿ ನೀಡಿ, ಯಕ್ಷಕಿರೀಟ ತೊಡಿಸಿ ಸನ್ಮಾನಿಸಲಾಯಿತು. ಭಾಗವತ ಹೇರಂಜಾಲು ಗೋಪಾಲ ಗಾಣಿಗ ಬಳಗದವರಿಂದ ರಾಜೇಂದ್ರ ಕುಮಾರ್ ಅವರ ಪರಿಚಯವನ್ನು ಯಕ್ಷಗಾನ ಪದ್ಯ, ನೃತ್ಯದ ಮೂಲಕ ಪ್ರಸ್ತುತ ಪಡಿಸಿದರು. ಸಂಘದ ವ್ಯಾಪ್ತಿಯಲ್ಲಿ ೨೫ ವರ್ಷಗಳನ್ನು ಪೂರೈಸಿರುವ ಸ್ವಾತಿ ನವೋದಯ ಸ್ವಸಹಾಯ ಗುಂಪನ್ನು ಅಭಿನಂದಿಸಲಾಯಿತು. ಚೈತನ್ಯ ವಿಮಾ ಯೋಜನೆಯ ಪರಿಹಾರ ಮೊತ್ತವನ್ನು ವಿತರಿಸಲಾಯಿತು. ಮಹೇಶ್ ಆಚಾರ್ಯ ಪ್ರಾರ್ಥನೆ ಮಾಡಿದರು. ನಿರ್ದೇಶಕ ನರಸಿಂಹ ದೇವಾಡಿಗ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಾಯಕಿ ಗೀತಾ ಬೈಂದೂರು ಬಳಗದವರಿಂದ ಸಂಗೀತ ರಸಮಂಜರಿ, ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ ರಿ., ಉಡುಪಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ದಿ.ಕಾಳಿಂಗ ನಾವುಡ ವಿರಚಿತ ಯಕ್ಷಗಾನ ಪ್ರಸಂಗ ನಾಗಶ್ರೀ ಪ್ರದರ್ಶನಗೊಂಡಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!