Sunday, September 8, 2024

ಹಾಸನದ ಭವಿಷ್ಯ ಉಜ್ವಲವೋ, ಪ್ರಜ್ವಲವೋ !?!

ಹಾಸನದ ಭವಿಷ್ಯ ಉಲ್ವಲವೊ  ಪ್ರಜ್ವಲವೊ ಅನ್ನುವುದೇ ನಮ್ಮ ಮುಂದಿರುವ ಪ್ರಶ್ನೆಯಾಗಿದೆ. ಜೂನ್ ನಾಲ್ಕರಂದು ಕರ್ನಾಟಕದ 28 ಲೇೂಕಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಯಾವ ರೀತಿಯಲ್ಲಿ ಬರಬಹುದು ಎನ್ನುವುದು ಎಲ್ಲರಿಗೂ ಒಂದು ರೀತಿಯಲ್ಲಿ ಕುತೂಹಲಕಾರಿ ವಿಷಯ. ಆದರೆ ಈ ಇಪ್ಪತ್ತೆಂಟು ಕ್ಷೇತ್ರಗಳ ಪೈಕಿ ಅತೀ ಹೆಚ್ಚು ಚಿಂತೆಗೆ ಚರ್ಚೆಗೂ ಒಳ ಪಟ್ಟ ಕ್ಷೇತ್ರವಿದ್ದರೆ ಅದು ಹಾಸನ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹಾಸನದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದವರು ಪ್ರಜ್ವಲ ರೇವಣ್ಣ. ಅದೇ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಪರವಾಗಿ ಸೆಣಸಾಡಲು ನಿಂತವರು ಶ್ರೇಯಸ್ ಎಂ.ಪಟೇಲ್. ಈಗಿನ ಪರಿಸ್ಥಿತಿ ಬಿಜೆಪಿ ಜೆಡಿಎಸ್  ಮೈತ್ರಿ ಅಭ್ಯರ್ಥಿಯ ಹೆಸರು ಹೇಳಲು ನಾಚಿಕೆ ಪಡುವಷ್ಟಾಗಿದೆ. ಅವರ ಬೆಂಬಲಿತ ಪಕ್ಷಕ್ಕೂ ಮಾತ್ರವಲ್ಲ ಇಡಿ ರಾಜ್ಯವೇ ತಲೆತಗ್ಗಿಸಬೇಕಾದ ಪರಿಸ್ಥಿತಿ ನಮ್ಮ ರಾಜ್ಯಕ್ಕೆ ಬಂದಿದೆ ಅಂದರೂ ತಪ್ಪಾಗಲಾರದು.

ಎಲ್ಲಿಯವರೆಗೆ ಅಂದರೆ  ಆತನ ಮಾತೃ ಪಕ್ಷವರೇ ಗೇಟ್ ಪಾಸ್ ಕೊಟ್ಟು ಹೊರಗೆ ಕಳುಹಿಸಿದ್ದಾರೆ. ಕೈ ಹಿಡಿದು ಬೆಂಬಲಿಸಿದ ಪಕ್ಷ ಕೂಡಾ ಈ ಅಭ್ಯರ್ಥಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಸೇೂಡಾ ಚೀಟಿಕೊಟ್ಟು ಬಿಸಾಡಿದ್ದಾರೆ.

ಇಷ್ಟೆಲ್ಲಾ  ಅಶ್ಲೀಲಕಾರಿ ಬೆಳವಣಿಗೆ ನಡುವೆ  ಈಮೈತ್ರಿ ಸ್ಪರ್ಧಾಳು  ಮೈತ್ರಿ ಪಕ್ಷಕ್ಕೂ ಒಂದಿಷ್ಟು ಮಸಿ ಬಳಿದು ಮತಹಾಕಿದ ಮತದಾರರಿಗೂ ಕಣ್ಣಿಗೆ ಕಾಣದಂತೆ ಮಾಯವಾಗಿ ಬಿಟ್ಟಿದ್ದಾನೆ.

ಈಗ ನಮ್ಮ ಮುಂದಿರುವ ಅತಿ ಕುತೂಹಲಕಾರಿ ಪ್ರಶ್ನೆ ಅಂದರೆ  ಜೂನ್ ನಾಲ್ಕರಂದು ಫಲಿತಾಂಶ ಇದೇ ಪ್ರಜ್ವಲನ ಪರವಾಗಿ ಬಂದು ಬಿಟ್ಟರೆ ಹಾಸನ ಲೇೂಕಸಭಾ ಕ್ಷೇತ್ರದ ಸಂಸದನಾಗಿ ಪ್ರತಿಜ್ಞೆ ಸ್ವೀಕರಿಸುವ ಅರ್ಹತೆ ಪಡೆಯಬಹುದೇ? ಎನ್ನುವುದಾಗಿದೆ. ಕಾನೂನು  ಅವಕಾಶ ಮಾಡಿಕೊಟ್ಟರೂ ಹಾಸನದ ಮತದಾರರು ಈತನನ್ನು ತಮ್ಮ ಪ್ರತಿನಿಧಿಯಾಗಿ ಸ್ವೀಕರಿಸಿಲು ಮಾನಸಿಕವಾಗಿ ಸಿದ್ಧರಿದ್ದಾರೆಯೇ? ಇಂತಹ ಕಾನೂನಾತ್ಮಕ ಮತ್ತು ನೈತಿಕತೆಯ ಪ್ರಶ್ನೆ ನಮ್ಮೆಲ್ಲರನ್ನು ಕಾಡುವುದು ಸಹಜ ತಾನೆ?

ಕಾನೂನಿನ ದೃಷ್ಟಿಯಿಂದ ನೇೂಡಿದಾಗ ಗೆದ್ದು ಬಂದ ಅಭ್ಯರ್ಥಿಯನ್ನು ಅಷ್ಟು ಸುಲಭವಾಗಿ ಅನರ್ಹಗೊಳಿಸುವುದು ಕಷ್ಟ ಸಾಧ್ಯ. ಈ ವಿಚಾರಗಳನ್ನು ಕೇಂದ್ರ  ಚುನಾವಣಾ ಆಯೇೂಗ ರಾಷ್ಟ್ರಪತಿಗಳಿಗೆ ಮನವರಿಕೆ ಮಾಡಿ  ಫಲಿತಾಂಶವನ್ನು ತಡೆಹಿಡಿಯುವ ಪ್ರಯತ್ನ ಮಾಡ ಬಹುದು. ಆದರೆ ಸಂಬಂಧಿಸಿದ ಅಭ್ಯರ್ಥಿ ನ್ಯಾಯಾಂಗಕ್ಕೆ ಮೊರೆ ಹೇೂಗಬಹುದು. ಅಲ್ಲಿ ತಾನು ತಪ್ಪು ಮಾಡಿಲ್ಲ ಇನ್ನೂ ತನ್ನ  ಕೇಸು ನ್ಯಾಯಾಲಯದಲ್ಲಿ ವಾದದ ಹಂತದಲ್ಲಿ ಇರುವಾಗ ತನ್ನನ್ನು ಯಾವ ರೀತಿಯಲ್ಲಿ ಅನರ್ಹಗೊಳಿಸುತ್ತೀರಿ ತನಗೆ ಸಂಸತ್ತಿನಲ್ಲಿ ಕುಳಿತುಕೊಳ್ಳಲು ಅವಕಾಶವನ್ನು ಮಾಡಿಕೊಡಬೇಕೆಂದು ನಿವೇದಿಸಿಕೊಳ್ಳುವ ಸಾದ್ಯತೆಯೂ ಇದೆ. ಜೈಲಿನಲ್ಲಿರುವ ವ್ಯಕ್ತಿಗಳಿಗೆ ಮುಖ್ಯ ಮಂತ್ರಿಗಳಾಗಿ ಅಧಿಕಾರ ಚಲಾಯಿಸಲು ಅವಕಾಶವಿರುವಾಗ ತನಗೆ ಕನಿಷ್ಠ ಪಕ್ಷ ಸಂಸತ್ತಿನಲ್ಲಿ ಸದಸ್ಯನಾಗಿ ಕುಳಿತುಕೊಳ್ಳಲು ಅವಕಾಶವಿಲವೇ ಎಂದು ಪ್ರತಿಪಾದಿಸುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿ ಗೇೂಚರಿಸುತ್ತಿದೆ.

ಹಾಗಾದರೆ  ಒಂದು ವೇಳೆ ಗೆದ್ದು ಬಂದ ಮೇಲೆ ಪ್ರಜ್ವಲ ಎನ್ನುವ ವ್ಯಕ್ತಿ ಯಾವ ಪಕ್ಷಕ್ಕೆ ಸೇರಬೇಕು? ಅಥವಾ ಪಕ್ಷೇತರ ಸ್ಥಾನದಲ್ಲಿ ಗುರುತಿಸಿಕೊಳ್ಳಬೇಕೇ? ಎನ್ನುವುದು ಇನ್ನೊಂದು ಪ್ರಶ್ನೆ. ಇದಾಗಲೇ ಇವರನ್ನು ಜೆಡಿಎಸ್ ತಮ್ಮ ಪಕ್ಷ ಚಿಹ್ನೆಯ ಮೂಲಕ ಅಭ್ಯರ್ಥಿತನ ಘೇೂಷಿಸಿದೆ. ಆದರೆ ಈ ಕಳಂಕಧಾರಿಯನ್ನು ತಮ್ಮ ಪಕ್ಷ ದಿಂದ ಅಮಾನತುಗೊಳಿಸಿದೆ(suspension). ಇಲ್ಲಿ ಅಮಾನತು ಪದಕ್ಕೂ ವಜಾಗೊಳಿಸುವುದಕ್ಕೂ(dismiss )ಒಂದು ವ್ಯತ್ಯಾಸವಿದೆ. ಹಾಗಾಗಿ ಇದೇ  ಗೆದ್ದ ವ್ಯಕ್ತಿಯನ್ನು ಮುಂದೆ ಇದೇ ಜೆಡಿಎಸ್ ಯಾವ ರೀತಿಯಲ್ಲಿ ನಡೆಸಿಕೊಳ್ಳುತ್ತದೆ ಎನ್ನುವುದು ಕೂಡಾ ಅಷ್ಟೇ ಮುಖ್ಯ.

ಒಂದು ವೇಳೆ ಜೆಡಿಎಸ್ ಆತನನ್ನು ಸ್ವೀಕರಿಸದಿದ್ದರೆ ಸದನದಲ್ಲಿ ಪ್ರತ್ಯೇಕವಾಗಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದರೂ ಆಶ್ಚರ್ಯ ಪಡ ಬೇಕಾಗಿಲ್ಲ. ಆದರೆ ಇದಕ್ಕಿಂತಲೂ ನಮ್ಮ ಮುಂದಿರುವ ಬಹು ದೊಡ್ಡ ಪ್ರಶ್ನೆ ಇಷ್ಟೆಲ್ಲಾ ಕಳಂಕ ಹೊತ್ತುಕೊಂಡು ಸಂಸತ್ತಿನಲ್ಲಿ ಕುಳಿತುಕೊಂಡು ಮುಖ ತೇೂರಿಸುವುದಾರೂ ಹೇಗೆ? ಆದರೆ ನಮ್ಮ ರಾಜಕಾರಣಿಗಳಿಗೆ ಈ ನೈತಿಕತೆಯ ಮುಖದ ಪ್ರಜ್ಞೆ ಎಷ್ಟರ ಮಟ್ಟಿಗೆ ಮಾನಸಿಕವಾಗಿ ಕಾಡಬಹುದು ಎನ್ನುವುದು ಕೂಡಾ  ಅತಿ ದೊಡ್ಡ ಪ್ರಶ್ನೆ .? ಒಂದು ವೇಳೆ ಈ ಕಳಂಕಧಾರಿ ಅಭ್ಯರ್ಥಿ ಸೇೂತರಂತೂ ಇಲ್ಲಿ ಯಾವ  ಪ್ರಶ್ನೆ ಉದ್ಬವಿಸುವುದಿಲ್ಲ. ಕ್ಷೇತ್ರದ ಮತದಾರರು ಕ್ಷೇಮ ಬೆಂಬಲಿಸಿದ ಪಕ್ಷಗಳಿಗೂ ಸಮಾಧಾನಕಾರಿ ಸುದ್ದಿ. ಸಂಸತ್ತಿಗೂ ಗೌರವ. ಜೂನ್ ನಾಲ್ಕರ ತನಕ ಹಾಸನದ ಭವಿಷ್ಯ ಉಜ್ವಲವಾಗಿದೆಯಾ ಪ್ರಜ್ವಲವಾಗಿದೆಯಾ ಎನ್ನುವುದನ್ನು ಕಾದುನೋಡಬೇಕಿದೆ.

-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!