spot_img
Friday, May 23, 2025
spot_img

ಪಂಚಾಯತ್ ಪ್ರತಿನಿಧಿಗಳಿಗೆ ಹಕ್ಕು, ಕರ್ತವ್ಯಗಳ ಅರಿವು ಅತ್ಯಗತ್ಯ-ಎಸ್.ಜನಾರ್ದನ್ ಮರವಂತೆ

 

    

 

ಕುಂದಾಪುರದಲ್ಲಿ ಜನಾಧಿಕಾರ-ಜನಾರ್ದನ ಸಂವಾದ

ಕುಂದಾಪುರ: ಗ್ರಾಮ ಸ್ವರಾಜ್ಯದ ಆಶಯವು ಸಮಗ್ರ ಮತ್ತು ಸಮೃದ್ಧ ಸ್ವರೂಪದಲ್ಲಿ ಕಾರ್ಯರೂಪಕ್ಕಿಳಿಸುವ ಪಂಚಾಯಿತಿ ಪ್ರತಿನಿಧಿಗಳಿಗೆ ಗ್ರಾಮ ಪಂಚಾಯಿತಿಯ ಸಂವರಚನೆ, ಗುರಿ, ವ್ಯಾಪ್ತಿ, ಮಿತಿಗಳ, ಕಾರ್ಯವಿಧಾನಗಳ ಅರಿವು ಅಗತ್ಯ. ಕಾಯ್ದೆಯಲ್ಲಿ ನೀಡಿರುವ ಹಕ್ಕು, ಕರ್ತವ್ಯಗಳ ಪ್ರತಿಪಾದನೆಯ ತಿಳುವಳಿಕೆ ಹೊಂದಬೇಕು. ಗ್ರಾಮ ಪಂಚಾಯಿತಿ ವ್ಯವಸ್ಥೆಯ ಬಗ್ಗೆ ಉತ್ತಮ ಸೇವೆಯ ಮೂಲಕ ಜನರಲ್ಲಿ ವಿಶ್ವಾಸರ್ಹತೆ ಮೂಡಿಸುವ ಪ್ರಯತ್ನವಾಗಬೇಕು. ಜನಸಾಮಾನ್ಯರಲ್ಲಿ ಗ್ರಾಮ ಪಂಚಾಯತ್ ವ್ಯವಸ್ಥೆ ಬೇಡ ಎನ್ನುವ ಭಾವನೆ ಬರಬಾರದು ಎಂದು ಹಿರಿಯ ಪಂಚಾಯತ್ ರಾಜ್ ತಜ್ಞ ಎಸ್.ಜನಾರ್ದನ್ ಮರವಂತೆ ಹೇಳಿದರು.

ಮಾ.24ರಂದು ಕುಂದಾಪುರ ಕುಂದಾಪುರದ ಬಿ.ಇ.ಓ ಕಛೇರಿ ಹತ್ತಿರ ಇರುವ ರೋಟರಿ ಸಭಾಂಗಣದಲ್ಲಿ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ರಿ., cwc ಸಂಸ್ಥೆ ನಮ್ಮ ಭೂಮಿ, ಜನಪ್ರತಿನಿಧಿ ಪ್ರಕಾಶನ ಕುಂದಾಪುರ ವತಿಯಿಂದ ಪಂಚಾಯತ್ ರಾಜ್ ಪರಿಣಿತ ಎಸ್.ಜನಾರ್ದನ ಮರವಂತೆ ಅವರ 85ರ ಸಂಭ್ರಮದ ಅಂಗವಾಗಿ ಜನಾಧಿಕಾರ-ಜನಾರ್ದನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಂಚಾಯತ್‌ನಲ್ಲಿ ಸದಸ್ಯರು ಗ್ರಾಮ ಸ್ವರಾಜ್ಯ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳಬೇಕು. ಸಂಪನ್ಮೂಲ ಕೋಢೀಕರಣ, ವ್ಯವಸ್ಥೆ, ಸೇವೆ, ಗುಣಮಟ್ಟ ಎಲ್ಲದನ್ನು ಪರಿಗಣಿಸಬೇಕು, ಸದಸ್ಯರಿಗೆ ಗೌರವಧನ ಹೆಚ್ಚಳ, ಉಚಿತ ಬಸ್ ಪಾಸ್ ಇತ್ಯಾದಿ ಸೌಲಭ್ಯಗಳ ಬೇಡಿಕೆ ಇರುವುದು ಸ್ವಾಭಾವಿಕ. ಅಧಿಕಾರಿಗಳ ಹಸ್ತಾಕ್ಷೇಪವೂ ಕೂಡಾ ಅಷ್ಟೇ ಸಹಜ. ಗ್ರಾಮ ಪಂಚಾಯತ್ ಸದಸ್ಯರಿಗೆ ತಮ್ಮ ಜವಬ್ದಾರಿಯ ಅರಿವು ಇರಬೇಕು. ಆಗ ಬದಲಾವಣೆ ಸಾಧ್ಯವಾಗುತ್ತದೆ ಎಂದರು.

ಪಂಚಾಯತ್ ರಾಜ್ ತಜ್ಞ, ನ್ಯಾಯವಾದಿ ಟಿ.ಬಿ ಶೆಟ್ಟಿ ಸಂವಾದ ಪೂರ್ವದಲ್ಲಿ ಮಾತನಾಡಿ, ಒಂದು ವ್ಯವಸ್ಥೆಗೆ ನಾವು ನೀಡುವ ಸಲಹೆಗಳು ಕಾನೂನು ಸಮ್ಮತವಾಗಿರಬೇಕು. ವಸ್ತುನಿಷ್ಠವಾಗಿರಬೇಕು, ಅದು ಸುಪ್ರೀಂಕೋರ್ಟಿಗೆ ಹೋದರೂ ಅಲ್ಲಿ ಆ ಅಭಿಪ್ರಾಯ ಕಾನೂನು ಅಡಿಯಲ್ಲಿ ಕೂಡಾ ಸಮರ್ಥನೀಯವಾಗಿರಬೇಕು. ನನ್ನಲ್ಲಿ ಸಲಹೆ ಕೇಳಿ ಬಂದವರಿಗೆ ಅಂಥಹ ವಸ್ತುನಿಷ್ಠ ಸಲಹೆ ನೀಡುತ್ತೇನೆ. ಅದಕ್ಕೆ ಕಾರಣ ಎಸ್.ಜನಾರ್ದನರು. ಅಂಥಹ ಹಿನ್ನೆಲೆಯಲ್ಲಿ ಎಸ್ ಜನಾರ್ದನ ಅವರು ಜನಾಧಿಕಾರ ಪುಸ್ತಕದ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಸರಳವಾಗಿ, ವಸ್ತುನಿಷ್ಠವಾಗಿ ವಿವರಿಸಿದ್ದಾರೆ. ನಾನು ಮತ್ತು ಜನಾರ್ದನ್ ಅವರು ಗಂಭೀರ ವಿಚಾರಗಳು ಬಂದಾಗ ಸಾಕಷ್ಟು ಅಧ್ಯಯನ, ಚರ್ಚೆಯ ಮೂಲಕವೇ ವಿಷಯವೊಂದರ ಅಂತಿಮ ಸ್ವರೂಪಕ್ಕೆ ಬರುತ್ತೇವೆ. ಆ ಸಮನ್ವಯತೆಯನ್ನು ಕಾಯ್ದುಕೊಂಡಿದ್ದೇವೆ. ಜನಾರ್ದನ್ ಅವರ ೮೫ರ ಸಂದರ್ಭದಲ್ಲಿ ಸಂವಾದವನ್ನು ಆಯೋಜಿಸಿರುವುದು ಅರ್ಥಪೂರ್ಣವಾದುದು ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಅವರು ಮಾತನಾಡಿ, ಜನಾರ್ದನ್ ಮರವಂತೆ ಅವರು ವಿಭಿನ್ನ ಇಲಾಖೆಗಳಲ್ಲಿ ಕೆಲಸ ಮಾಡಿದ ಅನುಭವಿ. ಶಿಕ್ಷಣ, ಸಮುದಾಯ, ಪಂಚಾಯತ್ ರಾಜ್ ಇಲಾಖೆಯಲ್ಲಿ ಗುರುತಿಸಿಕೊಂಡವರು.ಒಕ್ಕೂಟದ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಮರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಪಂಚಾಯತ್ ಹೇಗೆ ಮಾದರಿಯಾಗಿ ರೂಪಿಸಬಹುದು ಎನ್ನುವುದು ರಾಜ್ಯಕ್ಕೆ ತೋರಿಸಿಕೊಟ್ಟವರು. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ, ಗ್ರಾಮಪಂಚಾಯತಿ ವ್ಯವಸ್ಥೆ ಸಬಲೀಕರಣದಲ್ಲಿ ಅನನ್ಯ ಕೊಡುಗೆ ನೀಡಿದ್ದಾರೆ. ಪಂಚಾಯತ್ ರಾಜ್ ವಿಷಯದಲ್ಲಿ ಅವರ ಆಳವಾದ ಅನುಭವ ಪಂಚಾಯತ್ ಪ್ರತಿನಿಧಿಗಳಿಗೆ ಮಾರ್ಗದರ್ಶಿಯಾಗಿದೆ ಎಂದರು.

ಜನಪ್ರತಿನಿಧಿ ಪ್ರಕಾಶನದ ಮುಖ್ಯಸ್ಥರಾದ ಸುಬ್ರಹ್ಮಣ್ಯ ಪಡುಕೋಣೆ ಸಂವಾದದ ರೂಪುರೇಷೆ, ಮರವಂತೆ ಪಂಚಾಯತ್ ಆದ ಸಾಧನೆ-ಬದಲಾವಣೆಯನ್ನು ವಿವರಿಸಿದರು. ಈ ಸಂದರ್ಭದಲ್ಲಿ 85ರ ಸಂಭ್ರಮದಲ್ಲಿರುವ ಎಸ್.ಜನಾರ್ದನ ಮರವಂತೆ ಅವರನ್ನು ಗೌರವಿಸಲಾಯಿತು.

cwc ಸಂಸ್ಥೆಯ ಶ್ರೀನಿವಾಸ ಗಾಣಿಗ ಕನ್ಯಾನ ಸ್ವಾಗತಿಸಿದರು. ಅಂಕಣಕಾರ ಶ್ರೀರಾಜ್ ವಕ್ವಾಡಿ ಕಾರ್ಯಕ್ರಮ ನಿರ್ವಹಿಸಿದರು. ಸಂವಾದದಲ್ಲಿ ಗ್ರಾಮ ಪಂಚಾಯತ್ ಪ್ರತಿನಿಧಿಗಳು ಭಾಗವಹಿಸಿದರು.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!