Sunday, September 8, 2024

ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಸಹಕಾರಿ ಸಂಸ್ಥೆಗಳು ಜನರಿಗೆ ಹೆಚ್ಚು ಸೇವೆ ನೀಡುತ್ತಿವೆ-ಕೆ.ಗೋಪಾಲ ಪೂಜಾರಿ

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಸಹಕಾರ ಸಪ್ತಾಹ ಸಮಾರೋಪ

ಬೈಂದೂರು: ಸಹಕಾರ ಕ್ಷೇತ್ರ ಇವತ್ತು ಸಾಕಷ್ಟು ಬೆಳೆದಿದೆ. ಡಾ.ಎಂ.ಎನ್.ರಾಜೇಂದ್ರ ಕುಮಾರ್ ರಂತಹ ಧೀಮಂತ ನಾಯಕರ ನೇತೃತ್ವದಲ್ಲಿ ಸಹಕಾರ ಸಂಘಗಳು ಅಭಿವೃದ್ದಿ ಹೊಂದುತ್ತಿವೆ. ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಸಹಕಾರಿ ಸಂಸ್ಥೆಗಳು ಜನರಿಗೆ ಹೆಚ್ಚು ಸೇವೆ ನೀಡುತ್ತಿವೆ. ಸಾಲ ಸೌಲಭ್ಯವನ್ನು ನೀಡುವುದರ ಜೊತೆಗೆ ಶಿಕ್ಷಣ ಸಾಮಾಜಿಕ ವಲಯಕ್ಕೂ ನೆರವು ನೀಡುವ ಮೂಲಕ ಖಂಬದಕೋಣೆ ರೈತರ ಸೇವಾ ಸಹಕಾರಿ ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.

ನಾಗೂರು ಶ್ರೀ ಕೃಷ್ಣಲಲಿತ ಕಲಾಮಂದಿರದಲ್ಲಿ ನ.೨೦ರಂದು ನಡೆದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ ಇವರ ಆಶ್ರಯದಲ್ಲಿ ೭೦ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಸಮಾರೋಪ ಹಾಗೂ ಪ್ರತಿಭಾ ಪುರಸ್ಕಾರ, ಸನ್ಮಾನ, ಗೌರವ ಧನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಜಿಲ್ಲಾ ಮಟ್ಟದ ಸಂಸ್ಥೆಯಾಗಿದೆ. ಒಳ್ಳೆಯ ಸಂಸ್ಥೆಯಾಗಿ ಬೆಳೆದಿದೆ. ೯ ಕೋಟಿ ವೆಚ್ಚದಲ್ಲಿ ಸಹಕಾರಿ ಮಾಲ್ ನಿರ್ಮಾಣದಂತಹ ದೂರದೃಷ್ಟಿಯ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ಪ್ರಕಾಶ್ಚಂದ್ರ ಶೆಟ್ಟಿಯವರ ನೇತೃತ್ವದಲ್ಲಿ ಸಂಸ್ಥೆಯನ್ನು ಲಾಭದಾಯಕವನ್ನಾಗಿ ನಡೆಸುವ ಮೂಲಕ ಭದ್ರ ಬುನಾದಿ ಹಾಕಿದ್ದಾರೆ ಎಂದರು.

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಎಸ್.ಪ್ರಕಾಶಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಹಕಾರ ಚಳವಳಿ ಈ ರಾಷ್ಟ್ರದ ಆರ್ಥಿಕ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಿವೆ. ಸಹಕಾರ ಕ್ಷೇತ್ರದ ಏಳು-ಬೀಳುಗಳ ಬಗ್ಗೆ ಚರ್ಚೆ ಮಾಡುವ, ವಿಶ್ಲೇಷಣೆ ಮಾಡುವ ಸಂದರ್ಭವೇ ಸಹಕಾರ ಸಪ್ತಾಹ. ಇವತ್ತು ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಒಳ್ಳೆಯ ದಿನಗಳು ಬರುತ್ತಿವೆ. ವಿವಿಧೋದ್ದೇಶ ಸಹಕಾರಿ ಸಂಘಗಳನ್ನಾಗಿ ಪರಿವರ್ತನೆ ಮಾಡುವ ಅವಕಾಶಗಳನ್ನು ಸರ್ಕಾರ ನೀಡಿದೆ. ಸಹಕಾರ ಕ್ಷೇತ್ರ ಸಾಲ ಕೊಡುವುದು, ಪಡೆದುಕೊಳ್ಳುವುದು ಮಾತ್ರವಲ್ಲ. ಉದ್ಯೋಗವನ್ನು ಸೃಷ್ಟಿಸುವುದು, ಸಮಾಜಕ್ಕೂ ತನ್ನ ಕೊಡುಗೆಯನ್ನು ಕೊಡುತ್ತಾ ಇದೆ ಎಂದರು.

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ೧ ಸಾವಿರ ಕೋಟಿ ವ್ಯವಹಾರ ನಡೆಸಿ ೫೫೦ ಕೋಟಿ ಠೇವಣಾತಿ ಸಂಗ್ರಹಿಸಿ, ೨೦೦ ಕೋಟಿ ಸಾಲ ನೀಡಿದೆ. ೫-೬ ಕೋಟಿ ಲಾಭ ಗಳಿಸಿದ್ದು ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಲಾಭದ ಒಂದು ಭಾಗವನ್ನು ಸಮುದಾಯದ ಶಿಕ್ಷಣಕ್ಕೆ ನೀಡುತ್ತಾ ಬಂದಿದೆ. ಇವತ್ತು ೨೩ ಸರ್ಕಾರಿ ಶಾಲೆಗೆ ೪.೬೦ ಲಕ್ಷ ಶಿಕ್ಷಣಕ್ಕೆ ನೀಡುತ್ತಿದೆ. ಸಂಘದ ವ್ಯಾಪ್ತಿಯ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ರೂ.೩೩ ಸಾವಿರ, ಸಂಘದ ವ್ಯಾಪ್ತಿಯ ೪ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪ್ರೋತ್ಸಾಹಧನವಾಗಿ ೪೦ಸಾವಿರ ರೂ ನೀಡುತ್ತಿದೆ. ಇವತ್ತು ಒಟ್ಟು ಶಿಕ್ಷಣ, ಸಮುದಾಯಕ್ಕೆ ರೂ.೯.೮೬ ಲಕ್ಷ ನೀಡುತ್ತಿದೆ. ಬಹು ನಿರೀಕ್ಷೆಯ ರೈತ ಮಾಲ್ ನಿರ್ಮಾಣದ ಬಗ್ಗೆ ಇ-ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ದಿಕ್ಸೂಚಿ ಭಾಷಣ ಮಾಡಿದ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ಅವರು ಸಹಕಾರ ಶಿಕ್ಷಣ, ತರಬೇತಿಯ ಪರಿಷ್ಕರಣೆಯ ಬಗ್ಗೆ ಮಾತನಾಡಿ ೧೧೯ ವರ್ಷಗಳ ಇತಿಹಾಸ ಹೊಂದಿರುವ ಸಹಕಾರ ಚಳವಳಿ ಅವಿಭಜಿತ ದ.ಕ ಜಿಲ್ಲೆಯಲ್ಲಿ ಬಿರುಸಾಗಿ ಬೆಳೆಯಲು ಮೊಳಹಳ್ಳಿ ಶಿವರಾಯರು ಕಾರಣ. ನಾನು ಬೆಳೆಯುವುದರೊಂದಿಗೆ ಇನ್ನೊಬ್ಬರನ್ನು ಬೆಳೆಸುವುದು ಸಹಕಾರದ ತತ್ವ. ಸಹಕಾರದ ಅರಿವು, ಪ್ರಜ್ಞಾವಂತಿಕೆಯಿಂದ ಆರ್ಥಿಕ ವಿಕಾಸವಾಗಿದೆ. ಸಹಕಾರ ಕ್ಷೇತ್ರಗಳ ಬೆಳವಣಿಗೆಯಲ್ಲಿ ಮಹಿಳೆಯರ ಕೊಡುಗೆಯೂ ಇದೆ. ಆರ್ಥಿಕ ವಿಚಾರದಲ್ಲಿ ಬಹು ಪ್ರಮುಖವಾಗಿರುವ ಸಹಕಾರ ಕ್ಷೇತ್ರದ ಬಗ್ಗೆ ಪಠ್ಯದಲ್ಲಿಯೂ ಸೇರ್ಪಡೆಯಾಗಬೇಕು ಎಂದರು.

ಪ್ರಾಥಮಿಕ ಕೃಷಿ ಭೂ ಅಭಿವೃದ್ದಿ ಬ್ಯಾಂಕ್ ಕುಂದಾಪುರ ಇದರ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಸ್.ರಾಜು ಪೂಜಾರಿ, ಎಂ.ಮಹೇಶ ಹೆಗ್ಡೆ, ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಶೇಖರ ಖಾರ್ವಿ, ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್.ವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸಹಕಾರ ಶಿಕ್ಷಣ ನಿಧಿ, ಸಂಘದ ವ್ಯಾಪ್ತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಗೌರವ ಶಿಕ್ಷಕರಿಗೆ ಗೌರವಧನ ವಿತರಣೆ, ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪ್ರೋತ್ಸಾಹಧನ ವಿತರಣೆ ಮಾಡಲಾಯಿತು. ಸಂಘದ ವ್ಯಾಪ್ತಿಯಲ್ಲಿ ನಿವೃತ್ತರಾದ ಶಿಕ್ಷಕರಾದ ಭಾಸ್ಕರ ಪ್ರಭು, ಸುಬ್ರಾಯ ವಿ,ಭಟ್, ನಾಗರಾಜ, ರಾಮ ಶೆಟ್ಟಿ, ನಾರಾಯಣ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷ ಈಶ್ವರ ಹಕ್ಲತೋಡ್, ನಿರ್ದೇಶಕರಾದ ಬಿ.ರಘುರಾಮ ಶೆಟ್ಟಿ, ಕೆ.ಮೋಹನ ಪೂಜಾರಿ, ಬಿ.ಎಸ್ ಸುರೇಶ ಶೆಟ್ಟಿ, ಗುರುರಾಜ ಹೆಬ್ಬಾರ್, ವೀರೇಂದ್ರ ಶೆಟ್ಟಿ, ಮಂಜು ದೇವಾಡಿಗ, ನಾಗರಾಜ ಖಾರ್ವಿ, ಭರತ ದೇವಾಡಿಗ, ಹೂವ ನಾಯ್ಕ, ದಿನೀತಾ ಶೆಟ್ಟಿ, ಜಲಜಾಕ್ಷಿ ಪೂಜಾರಿ ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್.ಪೈ ಸ್ವಾಗತಿಸಿದರು. ಆಕಾಶವಾಣಿ ಕಲಾವಿದ ಡಾ.ಗಣೇಶ ಗಂಗೊಳ್ಳಿ ನಾಡಗೀತೆ ಹಾಡಿದರು. ಹಿರಿಯ ವ್ಯವಸ್ಥಾಪಕ ಚಂದ್ರ ಶೆಟ್ಟಿ ವಂದಿಸಿದರು. ಶಿಕ್ಷಕ ಸುಬ್ರಹ್ಮಣ್ಯ ಜಿ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!