Sunday, September 8, 2024

ಅಧಿಕಾರ ಎನ್ನುವುದು ಸುಖದ ಸುಪ್ಪತ್ತಿಗೆ ಅಲ್ಲ, ಮೊನಚಾದ ಮುಳ್ಳಿನ ಪೀಠ-ಹಾಲಾಡಿ ಶ್ರೀನಿವಾಸ ಶೆಟ್ಟಿ


ಕುಂದಾಪುರ: ನಾನು ವಿಧಾನಸಭೆಗೆ ಪ್ರವೇಶ ಮಾಡುವ ಸಮಯ ಬಹಳ ಕಠಿಣವಾಗಿತ್ತು. ಇಡೀ ಉಡುಪಿ ಜಿಲ್ಲೆಯಿಂದ ನಾನೊಬ್ಬನೇ ಬಿಜೆಪಿ ಶಾಸಕನಾಗಿದ್ದೆ. ಜಿ.ಪಂ., ತಾ.ಪಂಗಳಲ್ಲಿಯೂ ನಾವು ಅಧಿಕಾರದಲ್ಲಿ ಇರಲಿಲ್ಲ. ಎದೆಗುಂದದೆ ಮುನ್ನೆಡೆಯಬೇಕು. ಅಧಿಕಾರ ಎನ್ನುವುದು ಸುಖದ ಸುಪತ್ತಿಗೆ ಅಲ್ಲ, ಅದು ಮೊನಚಾದ ಮುಳ್ಳಿನ ಪೀಠ ಎಂದು ನಿಕಟಪೂರ್ವ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.

ಅವರು ಭಾರತೀಯ ಜನತಾ ಪಕ್ಷ ಕುಂದಾಪುರ ಮಂಡಲದ ವತಿಯಿಂದ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ಅಭಿನಂದನಾ ಸಭೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತಾ ಸಭೆಯಲ್ಲಿ ನೂತನ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ ಅವರನ್ನು ಅಭಿನಂದಿಸಿ ಮಾತನಾಡಿದರು.

ಈ ಚುನಾವಣೆಯಲ್ಲಿ ನಾನು, ಕೋಟ ಶ್ರೀನಿವಾಸ ಪೂಜಾರಿ, ಅಭ್ಯರ್ಥಿ ಕಿರಣ್ ಕೊಡ್ಗಿ ಮೂವರು ಒಟ್ಟಾಗಿ ಕೆಲಸ ಮಾಡಿದ್ದೇವೆ. ಹಾಗಾಗಿ ನಮ್ಮದು ಜೋಡೆತ್ತು ಅಲ್ಲ, ಮೂರೆತ್ತು. ಬಹಳ ಒಳ್ಳೆಯ ಮಿತ್ರತ್ವ ನಮ್ಮದು ಎಂದರು.

ಚುನಾವಣಾ ಸಮಯದಲ್ಲಿ ಪ್ರನಾಳಿಕೆ ಕೊಡುವುದು ಕ್ರಮ, ಗ್ಯಾರಂಟಿ ಕಾರ್ಡ್ ನೀಡುವ ಪದ್ದತಿ ನಮ್ಮಲ್ಲಿ ಇರಲಿಲ್ಲ. ಜನರಿಗೆ ಆಮಿಷ ಒಡ್ಡುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಹೇಳಿದ ಅವರು ಕ್ಷೇತ್ರದ ಜನತೆಗೆ ಸಾಮಾಜಿಕ ನ್ಯಾಯ ನೀಡುವುದು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವ ಮೂಲಕ ಜನರು ವಿಶ್ವಾಸದಿಂದ ಮತ ನೀಡಿ ಚುನಾಯಿಸಿದಕ್ಕೆ ಸಾರ್ಥಕವಾಗುತ್ತದೆ ಎಂದರು.

ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕುಂದಾಪುರ ಕ್ಷೇತ್ರಕ್ಕೆ ಸ್ಟಾರ್ ಪ್ರಚಾರಕರು ಬರಲಿಲ್ಲ, ನಾವು ಕೇಳಿದ್ದು ಕೂಡಾ ಕಡಿಮೆ. ಆದರೆ ಕುಂದಾಪುರ ಕ್ಷೇತ್ರಕ್ಕೆ ಹಾಲಾಡಿ ಶ್ರೀನಿವಾ ಶೆಟ್ಟಿಯವರೇ ಪ್ರಮುಖ ಸ್ಟಾರ್ ಪ್ರಚಾರಕರು. ಅವರ ಮಾರ್ಗದರ್ಶನದಲ್ಲಿ ಗೆಲುವು ಸಾಧಿಸಿದ್ದೇವೆ. ಒಳ್ಳೆತನ ಗೆದ್ದಿದೆ ಎನ್ನುವ ಉದ್ಗಾರ ಕೇಳಿದಾಗ ಸಂತೋಷವಾಗುತ್ತದೆ. ಕ್ಷೇತ್ರದಲ್ಲಿ ಚುನಾವಣಾ ಸಮಯದಲ್ಲಿ ಯಾವುದೇ ಗೊಂದಲ ಇರಲಿಲ್ಲ, ಅಭಿಪ್ರಾಯ ಬೇಧ ಇರಲಿಲ್ಲ, ಒಂದೇ ಕುಟುಂಬದವರಂತೆ, ತಂಡವಾಗಿ ಕೆಲಸ ಮಾಡಿದ್ದರಿಂದ ಗೆಲ್ಲಲು ಸಾಧ್ಯವಾಯಿತು.ಕುಂದಾಪುರ ಕ್ಷೇತ್ರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟರ ಮಾದರಿಯಾಗಿ ನೂತನ ಶಾಸಕ ಕಿರಣ್ ಕೊಡ್ಗಿಯವರು ಇರುತ್ತಾರೆ ಎಂದರು.

ಕರಾವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಪ್ರಭಾವ ಕಡಿಮೆ ಇತ್ತು. ಉಡುಪಿ ಜಿಲ್ಲೆಯಲ್ಲಿ ಐದೂ ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ವಿರೋಧ ಪಕ್ಷದಲ್ಲಿದ್ದು ಸವಾಲುಗಳನ್ನು ಸ್ವೀಕರಿಸಬೇಕಾಗುತ್ತದೆ. ಮುಂದಿನ ದಿನಗಳ ಅತ್ಯಂತ ಕಠಿಣವಾಗಬಹುದು. ಆಡಳಿತದ ಮೇಲೆ ಕಣ್ಗಾವಲು ಇಡಬೇಕಾದ ಅನಿವಾರ್ಯತೆ ಇದೆ. ಚುನಾವಣೆಯಲ್ಲಿ ಪೂರ್ವದಲ್ಲಿ ಪ್ರನಾಳಿಕೆ ಈಡೇರಿಸುವುದು ಗೆದ್ದ ಸರ್ಕಾರಗಳ ಜವಬ್ದಾರಿ. ತಪ್ಪಿದ್ದಲ್ಲಿ ಸರ್ಕಾರವನ್ನು ಎಚ್ಚರಿಸಲು ಸಿದ್ಧರಿರಬೇಕು ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕಿರಣ್ ಕುಮಾರ್ ಕೊಡ್ಗಿ ಈ ಚುನಾವಣೆ ನನಗೂ ಅನಿರೀಕ್ಷಿತವಾಗಿತ್ತು. ಯಾವುದೇ ಪೂರ್ವ ತಯಾರಿ ಇರಲಿಲ್ಲ. ೪೧ ಸಾವಿರ ಮತಗಳ ಅಂತರ ಗೆಲುವನ್ನು ನೀಡಿದ್ದಕ್ಕಿಂತ ಬೇರೆ ಅಭಿನಂದನೆ ಇಲ್ಲ. ಅದುವೇ ನನಗೆ ದೊಡ್ಡ ಅಭಿನಂದನೆ. ಈ ಚುನಾವಣೆಯಲ್ಲಿ ಹಗಲಿರುಳು ದುಡಿದ ಕಾರ್ಯಕರ್ತರು, ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ ನಾಯಕ್ ಕುಯಿಲಾಡಿ, ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ, ಚುನಾವಣಾ ಪ್ರಭಾರಿ ಶ್ಯಾಮಲ ಕುಂದರ್, ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಸುರೇಶ ಶೆಟ್ಟಿ ಕಾಡೂರು, ಜಿಲ್ಲಾ ಬಿಜೆಪಿಯ ಸದಾನಂದ ಬಳ್ಕೂರು, ಅನಿತಾ ಶ್ರೀಧರ್, ಎಸ್.ಸಿ ಮೋರ್ಚಾದ ಗೋಪಾಲ ಕಳಂಜಿ ಮೊದಲಾದವರು ಉಪಸ್ಥಿತರಿದ್ದರು.

ಮಹಿಳಾ ಮೋರ್ಚಾದ ಅಧ್ಯಕ್ಷೆ ರೂಪಾ ಪೈ ವಂದೆ ಮಾತರಂ ಹಾಡಿದರು. ಮಂಡಲದ ಪ್ರಧಾನ ಕಾರ್ಯದರ್ಶಿ ಸುರೇಶ ಶೆಟ್ಟಿ ಗೋಪಾಡಿ ಸ್ವಾಗತಿಸಿ, ಸತೀಶ್ ಪೂಜಾರಿ ವಕ್ವಾಡಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಗೋಪೂಜೆ ನೆರವೇರಿಸಲಾಯಿತು. ಆರತಿ ಬೆಳಗಿ ನೂತನ ಶಾಸಕರನ್ನು ಸ್ವಾಗತಿಸಲಾಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!