Sunday, September 8, 2024

ಕುಂದಾಪುರ: ಗೌರವಾನ್ವಿತ ಮತದಾರರ ಸ್ವಾಭಿಮಾನಿ ಆಂದೋಲನ-ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ


ಕುಂದಾಪುರ: ಯುವಜನರ ಉತ್ಸಾಹಭರಿತ ಪಾಲ್ಗೊಳ್ಳುವಿಕೆಯಲ್ಲಿ ಸ್ವಚ್ಛ, ನ್ಯಾಯಯುತ, ಚುನಾವಣೆಯನ್ನು ನಡೆಸುವಲ್ಲಿ ಗೌರವಾನ್ವಿತ ಮತದಾರರಾದ ನಾವು ಒಂದಾಗಿ ಹೆಜ್ಜೆ ಇಡೋಣ, ಸಾಂವಿಧಾನಿಕ ಹಕ್ಕಾದ ಮತವನ್ನು ಅತ್ಯಂತ ಗೌರವಪೂರ್ಣವಾಗಿ ನಿರ್ಭೀತಿಯಿಂದ, ಯಾವುದೇ ಪ್ರಭಾವ, ಆಸೆ-ಆಮಿಷಗಳಿಗೆ ಬಲಿಯಾಗದೇ ಚಲಾಯಿಸೋಣ, ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳನ್ನು ಜನಪರ ಅಭಿವೃದ್ಧಿಗೆ ಉತ್ತರದಾಯಿಗಳಾಗುವಂತಹ ಪ್ರತಿನಿಧಿಗಳಾಗಿಸಲು ಗೌರವಾನ್ವಿತ ಪ್ರಜೆಗಳಾದ ನಾವು ಕಟಿಬದ್ಧರಾಗೋಣ, ಇದಕ್ಕೆ ನಾವು ಪ್ರತಿಯೊಬ್ಬ ಸ್ವಾಭಿಮಾನಿ ಮತದಾರರು ಪರಸ್ಪರ ಕೈಜೋಡಿಸೋಣ ಎಂದು 300ಕ್ಕೂ ಹೆಚ್ಚು ಯುವ ಮತದಾರರು ಕುಂದಾಪುರದ ಶಾಸ್ತ್ರೀವೃತ್ತದ ಬಳಿ ಮಾನವಸರಪಳಿ ನಿರ್ಮಿಸಿ, ಪ್ರಮಾಣ ಮಾಡಿ ಕುಂದಾಪುರ ಪಟ್ಟಣದಾದ್ಯಂತ ಮೆರವಣಿಗೆ ಸಾಗಿದರು.

ಅಲ್ಲಲ್ಲಿ ಪ್ರಮುಖ ವೃತ್ತಗಳ ಬಳಿ ನಿಂತು ಮತದಾರರ ಜಾಗೃತಿ ಹಾಡುಗಳನ್ನು ಹಾಡುತ್ತಾ ಪಟ್ಟಣದಲ್ಲಿನ ಮತದಾರರನ್ನು ಸೆಳೆದರು. ಯಾವುದೇ ಕಾರಣಕ್ಕೂ ಓಟಿಗೊಂದು ನೋಟು ಪಡೆದು ನಮ್ಮನ್ನು ನಾವೆ ಮಾರಿಕೊಳ್ಳುವುದು ಬೇಡ. ಕಡ್ಡಾಯ ಮತ ಚಲಾವಣೆ ಮಾಡೋಣ, ಓಟು ಒತ್ತುವ ಮುನ್ನ ಯೋಚಿಸೋಣ, ಚಲಾಯಿಸದ ಓಟು, ಚಲಾವಣೆ ಇಲ್ಲದ ನೋಟಿನಂತೆ ಎಂಬುದನ್ನು ಅರಿಯೋಣ, ಪ್ರತಿನಿಧಿಯಾಗಲು ಚುನಾವಣಾ ಕಣದಲ್ಲಿರುವ ಪ್ರತಿ ಅಭ್ಯರ್ಥಿಗಳ ನಡೆಯನ್ನು ಒರೆಗೆ ಹಚ್ಚೋಣ ಎಂದು ಹಾಡುತ್ತಾ, ಘೋಷಣೆ ಮಾಡುತ್ತಾ, ಕಾಂಚಾಣದ ಝಣ ಝಣಗಳ ನಡುವೆ ನಾವು ಮಾಯವಾಗದೇ ಗೌರವಯುತವಾಗಿ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯೋಣ ಎಂದು ಸಾರಿದರು.

ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಕಾರ್ಯಾಲಯವಾದ ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆ, ಜೆ.ಸಿ.ಐ. ಕುಂದಾಪುರ ಸಿಟಿ, ಕುಂದಾಪುರ ತಾಲೂಕು ಸ್ವೀಪ್ ಸಮಿತಿ, ಭಂಡಾರ್ಕರ್ ಕಾಲೇಜು ಕುಂದಾಪುರ, ಡಾ.ಬಿ.ಬಿ.ಹೆಗ್ಡೆ ಕಾಲೇಜು ಕುಂದಾಪುರ ಇವರ ಸಹಯೋಗದಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!