spot_img
Monday, March 16, 2026
spot_img

ಅಧ್ಯಕ್ಷರ ಆಯ್ಕೆ : ಬೂದಿ ಮುಚ್ಚಿದ ಕೆಂಡ

ಸರ್ವ ಸಮ್ಮತ ʼನಾಯಕತ್ವʼದ ಆಯ್ಕೆಯೇ ಬಿಜೆಪಿಗೆ ಕಗ್ಗಂಟು !

ಒಂದು ಸಿದ್ದಾಂತ, ನಾಯಕತ್ವ ಮತ್ತು ಪ್ರತಿಷ್ಠೆಯ ಆಧಾರದಲ್ಲಿ ಎರಡಾಗಿ ಒಡೆಯುವುದು ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿ. ಅದು ಸಂಘರ್ಷಕ್ಕೆ ಮತ್ತು ಭಿನ್ನಮತಕ್ಕೆ ಎಡೆಮಾಡಿಕೊಡುವುದನ್ನು ಬಹುಶಃ ಊಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಸದ್ಯ, ರಾಜ್ಯ ಬಿಜೆಪಿಯ ಒಡಕು ಮನೆ ಇಂತದ್ದೇ ಒಂದು ರಾಜಕೀಯ ಆತಂಕವನ್ನು ರಾಜ್ಯದ ಮುಂದಿರಿಸುತ್ತಿದೆ.

ರಾಜ್ಯ ಬಿಜೆಪಿಯಲ್ಲಿ ಸೃಷ್ಟಿಯಾಗಿರುವ ಅಧ್ಯಕ್ಷ ಸ್ಥಾನದ ಚುನಾವಣೆಗೆ ಈಗ ತಯಾರಿ ನಡೆಯುತ್ತಿದ್ದು, ಬಿಜೆಪಿ ಹೈಕಮಾಂಡ್‌ ಈಗ ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ. ವಿಜಯೇಂದ್ರ ಯಡಿಯೂರಪ್ಪ ಅವರ ಮೇಲೆ ಸೃಷ್ಟಿಯಾಗಿರುವ ಅಸಮಾಧಾನದ ಕಾರಣದಿಂದ ಗೊಂದಲಕ್ಕೆ ಸಿಲುಕಿದಂತಾಗಿದೆ. ಏಪ್ರಿಲ್‌ ತಿಂಗಳಲ್ಲಿ ರಾಜ್ಯ ಬಿಜೆಪಿಯ ಅಧ್ಯಕ್ಷ ಸ್ಥಾನ ಯಾರ ಪಾಲಿಗೆ ಒಲಿಯಲಿದೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಯ ಬಳಿಕವೇ ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕಾತಿಗೆ ಚಾಲನೆ ದೊರೆಯಲಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ಖಚಿತಪಡಿಸಿವೆ. ಆವರೆಗೆ ಇಲ್ಲಿನ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆಯೇ ಸರಿ.

ಏಪ್ರಿಲ್ ಮೊದಲ ವಾರದಲ್ಲಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಅದರ ಬೆನ್ನಲ್ಲೇ ರಾಜ್ಯದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಅಥವಾ ಅವಿರೋಧ ಆಯ್ಕೆ ನಡೆಯಲಿದೆಯಂತೆ. ಚುನಾವಣೆ ನಡೆಯುವುದಾದರೇ ಹೇಗೆ ? ಅಥವಾ ಅವಿರೋಧ ಆಯ್ಕೆ ಮಾಡುವುದಾದರೇ, ವಿಜಯೇಂದ್ರ ಅವರನ್ನು ಹುದ್ದೆಯಿಂದ ಕೆಳಗಿಳಿಸಿ ಬೇರೆಯವರನ್ನು ಕೂರಿಸುವುದಾದರೂ,  ವಿಜಯೇಂದ್ರರನ್ನೇ ಮುಂದುವರಿಸಿದರೂ ರಾಜ್ಯ ಬಿಜೆಪಿಯಲ್ಲಿ ಮುಂದೆ ಆಗಲಿರುವ ಪರಿಣಾಮಗಳನ್ನು ಹೈಕಮಾಂಡ್‌ ನಿಭಾಯಿಸುತ್ತದೆಯೇ ಎಂಬ ಪ್ರಶ್ನೆಯೊಂದು ರಾಜ್ಯ ರಾಜಕೀಯ ವಲಯದಲ್ಲಿ ಮೇಲೆದ್ದಿದೆ.

ವಿಜಯೇಂದ್ರ ಅವರನ್ನು ಅಧ್ಯಕ್ಷರಾಗಿ ಮುಂದುವರಿಸುವುದು ಹೌದು ಆದರೇ, ʼನಾವು ನಮ್ಮ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆʼ ಎಂದು ಶಾಸಕ ಬಸವನಗೌಡ ಪಾಟೀಲ್‌ ಹೈಕಮಾಂಡ್‌ ಮುಂದೆ ಎಚ್ಚರಿಕೆ ನೀಡಿದ್ದು ಕೂಡ ರಾಜ್ಯ ಬಿಜೆಪಿಯ ಭವಿಷ್ಯವನ್ನು ಪ್ರಶ್ನಿಸುವಂತಿದೆ. ಹಾಗಾಗಿ ಯತ್ನಾಳ್‌ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಯೋಚನೆ ಮತ್ತು ಯೋಜನೆಯಿಂದ ಬಿಜೆಪಿ ಹೈಕಮಾಂಡ್‌ ಸದ್ಯಕ್ಕೆ ಹೊರಬಂದಂತೆ ಕಾಣಿಸುತ್ತಿದೆ.

ಸದ್ಯ, ರಾಜ್ಯ ಬಿಜೆಪಿ ಅಧ್ಯಕ್ಷರ ಚುನಾವಣೆ ನಡೆಸಲು ಅನುಕೂಲವಾಗುವಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ 23 ಜಿಲ್ಲಾ ಅಧ್ಯಕ್ಷರ ಆಯ್ಕೆ ನಡೆಸಲಾಗಿದ್ದು, ಎರಡನೇ ಹಂತದಲ್ಲಿ 8 ಜಿಲ್ಲೆಗಳ ಅಧ್ಯಕ್ಷರ ಆಯ್ಕೆ ಮಾಡಲಾಗಿದೆ. ದಾವಣಗೆರೆ, ಚಿತ್ರದುರ್ಗ, ತುಮಕೂರು, ಮೈಸೂರು ಗ್ರಾಮಾಂತರ, ಹಾಸನ, ಉಡುಪಿ ಮತ್ತು ಕೊಡಗು ಬಿಜೆಪಿ ಸಂಘಟನಾತ್ಮಕ ಜಿಲ್ಲೆಗಳ ಅಧ್ಯಕ್ಷರ ಆಯ್ಕೆ ಬಾಕಿಯಿದೆ. ಈ ತಿಂಗಳ ಅಂತ್ಯದೊಳಗೆ ಬಾಕಿ ಇರುವ ಜಿಲ್ಲೆಗಳ ಅಧ್ಯಕ್ಷರ ಆಯ್ಕೆಯೂ ನಡೆಯಲಿದೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ. ಈ ಜಿಲ್ಲಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ಮುಗಿಯುತ್ತಿದ್ದಂತೆ ರಾಜ್ಯಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ನಡೆಯುತ್ತಿದೆ. ಈ ಸುತ್ತ ಹೆಣೆದುಕೊಂಡಿರುವ ಗೊಂದಲ ಈಗ ರಾಜ್ಯ ಬಿಜೆಪಿ ತಲೆ ಬಿಸಿ ಮಾಡಿದೆ.

ರಾಜ್ಯ ಬಿಜೆಪಿ ಅಧ್ಯಕ್ಷರ ಚುನಾವಣೆ ನಡೆಸಲು ಕನಿಷ್ಠ ಶೇ.50ರಷ್ಟು ಜಿಲ್ಲಾ ಅಧ್ಯಕ್ಷರ ಆಯ್ಕೆ ಮುಗಿದಿರಬೇಕೆನ್ನುವ ನಿಯಮವಿದೆ. ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿಯೂ ವಿಜಯೇಂದ್ರ ಅವರ ಮೇಲೆ ಬಿಜೆಪಿಯ ಅನೇಕ ನಾಯಕರು ಅಸಮಧಾನ ಹೊಂದಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ವಿಜಯೇಂದ್ರ ಅವರ ಮೇಲೆ ತೀವ್ರ ಅಸಮಾಧಾನವಿದೆ. ವಿಜಯೇಂದ್ರ ಎಲ್ಲರನ್ನು ಒಂದುಗೂಡಿಸಿಕೊಂಡು ಪಕ್ಷದ ಕೆಲಸ ಮಾಡಲ್ಲ ಎನ್ನುವ ಅಭಿಪ್ರಾಯ ಕಾರ್ಯಕರ್ತರಲ್ಲೂ ಹುಟ್ಟಿದೆ. ಇದು ಇನ್ನಷ್ಟು ವ್ಯಾಪಿಸುವ ಮುನ್ನಾ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳಬೇಕಿದೆ.

ಅಧ್ಯಕ್ಷರ ಸ್ಥಾನಕ್ಕೆ ಹಾಲಿ ಅಧ್ಯಕ್ಷ ವಿಜಯೇಂದ್ರ ಪ್ರಬಲ ಆಕಾಂಕ್ಷಿ. ಅಮಿತ್‌ ಶಾ ಕೂಡ ವಿಜಯೇಂದ್ರ ಅವರ ಮೇಲೆ ಒಳ್ಳೆಯ ಅಭಿಪ್ರಾಯ ಇರಿಸಿಕೊಂಡಿದ್ದಾರೆ. ಆದರೇ, ಬಿಜೆಪಿಯಲ್ಲಿ ಈಗ ಬದಲಾದ ವಾತಾವರಣದಲ್ಲಿ ವಿಜಯೇಂದ್ರ ಅವರನ್ನು ಏನು ಮಾಡುತ್ತಾರೆನ್ನುವುದು ಇನ್ನೂ ನಿಗೂಢ. ತಮ್ಮನ್ನೇ ಮುಂದುವರೆಸುವಂತೆ ಈಗಾಗಲೇ ವಿಜಯೇಂದ್ರ ಹೈಕಮಾಂಡ್ ನಾಯಕರುಗಳನ್ನು ಕೇಳಿಕೊಂಡಿದ್ದಾರೆ. ಹೈಕಮಾಂಡ್‌ ನಾಯಕರು ʼನಾವಿದ್ದೇವೆʼ ಎಂದು ಬೆನ್ನು ತಟ್ಟಿ ಕಳುಹಿಸಿದ್ದಾರೆ. ಅದೇ ಧೈರ್ಯದಲ್ಲಿ ವಿಜಯೇಂದ್ರ ಕೂಡ ಇದ್ದಾರೆ.

ವಿಜಯೇಂದ್ರ ಅವರನ್ನು ಬದಲಾವಣೆ ಮಾಡುವಂತೆ ಪಟ್ಟು ಹಿಡಿದಿರುವ ಯತ್ನಾಳ್ ಬಣ, ಅಧ್ಯಕ್ಷರನ್ನು ಚುನಾವಣೆ ಮೂಲಕವೇ ಆಯ್ಕೆ ಮಾಡಬೇಕು ಎಂದು ಹೈಕಮಾಂಡ್‌ಗೆ ಆಗ್ರಹಿಸಿದೆ. ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆಗಿಳಿದರೇ, ಅವರ ವಿರುದ್ಧ ತಮ್ಮ ಬಣದ ಸ್ಪರ್ಧೆ ಖಚಿತವೆಂದು ಈಗಾಗಲೇ ಯತ್ನಾಳ್ ಘೋಷಿಸಿದ್ದಾರೆ. ಯತ್ನಾಳ್‌ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಹೈಕಮಾಂಡ್‌ ಮಾಡುವುದಿಲ್ಲ ಎನ್ನುವುದರ ಬಗ್ಗೆ ಸ್ವತಃ ಅವರಿಗೂ ತಿಳಿದಿದೆ. ಹಾಗಾಗಿ ಅವರು ರಾಜ್ಯ ಬಿಜೆಪಿಯಲ್ಲಿ ಮಹತ್ತರವಾದದ್ದೇನನ್ನೂ ನಿರೀಕ್ಷಿಸುತ್ತಿಲ್ಲ ಎಂದೇ ಕಾಣಿಸುತ್ತಿದೆ. ಆದರೇ, ರಾಜ್ಯ ಬಿಜೆಪಿಯನ್ನು ಯಡಿಯೂರಪ್ಪ ಮತ್ತು ಅವರ ಮಗನ ಕೈಯ ಹಿಡಿತದಿಂದ ತಪ್ಪಿಸಬೇಕೆನ್ನುವುದೇ ಅವರ ಮೂಲ ಗುರಿ ಎನ್ನುವುದು ಅವರ ನಡೆ ನುಡಿಗಳಲ್ಲಿ ಸ್ಪಷ್ಟವಾಗುತ್ತದೆ.

ಯಡಿಯೂರಪ್ಪ ʼರಾಜ್ಯದಲ್ಲಿ ಬಿಜೆಪಿಯನ್ನು ಮುಂದುವರಿಸುವುದಕ್ಕೆ ತಮ್ಮ ಮಗನನ್ನು ಬಿಟ್ಟರೇ ಮತ್ಯಾರಿದ್ದಾರೆ ?ʼ ಎಂಬರ್ಥದಲ್ಲಿ ಹೈಕಮಾಂಡ್‌ ನಾಯಕರೊಂದಿಗೆ ಮಾತಾಡಿ ಬಂದಿದ್ದಾರೆ. ಯಡಿಯೂರಪ್ಪ ಕೂಡ ಇಳಿ ವಯಸ್ಸಿನಲ್ಲಿಯೂ ತಮ್ಮ ರಾಜಕೀಯ ಪ್ರಭಾವವನ್ನು ಈ ವಿಚಾರದಲ್ಲಿ ನೇರವಾಗಿಯೇ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಸ್ಪಷ್ಟ.

ಯಡಿಯೂರಪ್ಪ ಮತ್ತು ಯತ್ನಾಳ್‌ ಅವರ ನಡುವೆ ಉಂಟಾದ ಭಿನ್ನಮತ, ರಾಜ್ಯ ಬಿಜೆಪಿಯ ಪರಿಸ್ಥಿತಿಯನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ. ಒಂದೇ ಪಕ್ಷದಲ್ಲಿದ್ದುಕೊಂಡು ಒಬ್ಬ ವ್ಯಕ್ತಿಯನ್ನು ರಾಜಕೀಯವಾಗಿ ಮುಗಿಸಬೇಕು ಎನ್ನುವ ಮನಸ್ಥಿತಿ ಮತ್ತು ಅದಕ್ಕೆ ವಿರುದ್ಧವಾದ ಮನಸ್ಥಿತಿ ಇಡೀ ಪಕ್ಷಕ್ಕೆ ಮತ್ತು ರಾಜ್ಯಕ್ಕೂ ಕೆಟ್ಟದ್ದಾಗಿ ಪರಿಣಾಮ ಬೀರಲಿದೆ ಎನ್ನುವುದು ನಿಶ್ಚಿತ. ಇಂತಹ ಸಂಘರ್ಷ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಗಿದೆ. ಆದರೇ, ಈ ರೀತಿಯಲ್ಲಿ ಬೆನ್ನು ಬಿದ್ದು, ಆ ವ್ಯಕ್ತಿಯನ್ನು ಹುದ್ದೆಯಿಂದ ಕೆಳಗಿಳಿಸದೇ ಹೋರಾಟ ಕೈ ಬಿಡಲಾರೆ ಎನ್ನುವ ಮನಸ್ಥಿತಿ ಭವಿಷ್ಯ ಪಕ್ಷದ ಭವಿಷ್ಯಕ್ಕೆ ದೂರಗಾಮಿ ಪರಿಣಾಮ ಬೀರಲಿದೆ.

ಇನ್ನು, ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆದರೆ, ಸೋತ ಬಣಕ್ಕೆ ಮುಖಭಂಗವಾಗುವುದು ಸಹಜ. ಅದಾದ ನಂತರ, ಮತ್ತೆ ಭಿನ್ನಮತೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಎನ್ನುವ ಭೀತಿ, ಹೈಕಮಾಂಡ್‌ಗೆ ಎದುರಾಗಿದೆ. ಹಾಗಾಗಿ, ಎರಡೂ ಬಣಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಲೇ ಬೇಕಾದ ಪರಿಸ್ಥಿತಿಯಲ್ಲಿ ಹೈಕಮಾಂಡ್‌ ಇದೆ.

ಈ ಬಣ ರಾಜಕೀಯದ ಆರೋಪ/ಪ್ರತ್ಯಾರೋಪಗಳ ನಡುವೆ ಮಧ್ಯ ಪ್ರವೇಶಿಸಲೇ ಬೇಕಾದ ಅನಿವಾರ್ಯತೆಗೆ ಬಿಜೆಪಿ ಹೈಕಮಾಂಡ್ ಸಿಲುಕಿರುವುದರಿಂದ, ರಾಜ್ಯ ಘಟಕದಲ್ಲಿ ಆಮೂಲಾಗ್ರ ಬದಲಾವಣೆಗೆ ತಂತ್ರಗಾರಿಕೆಯನ್ನು ಹೆಣೆಯಲೇಬೇಕಿದೆ. ರಾಧಾ ಮೋಹನ್ ದಾಸ್ ಅಗರ್ವಾಲ್ ಅವರ ಉಸ್ತುವಾರಿ ರಾಜ್ಯ ಬಿಜೆಪಿಯಲ್ಲಿ ಪರಿಣಾಮ ಬೀರುತ್ತಿಲ್ಲ. ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ, ಅವರನ್ನು ಬಹಿರಂಗವಾಗಿಯೇ ʼಪಕ್ಷಪಾತಿʼ ಎಂದು ದೂರಿದ್ದರು. ವಿಜಯೇಂದ್ರ ಅವರಿಂದ ಹಿಂದಿನ ಉಸ್ತುವಾರಿ ಅರುಣ್‌ ಸಿಂಗ್‌ ಅವರಿಗೆ ಸೂಟ್ಕೇಸ್ ತಲುಪಿದೆ ಎಂದು ಯತ್ನಾಳ್‌ ಗಂಭೀರವಾಗಿಯೇ ಆರೋಪ ಮಾಡಿದ್ದರು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಅಧ್ಯಕ್ಷರ ಚುನಾವಣೆಯಲ್ಲಿ ಸೋಲುವ ಬಣದ ಪ್ರಮುಖರನ್ನು ಕೋರ್ ಕಮಿಟಿಯಲ್ಲಿ ಸೇರಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಲಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಅದೆಂತದ್ದೇ ಮಾಡಿದರೂ ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮುಂದುವರಿದರೇ, ಬಿಜೆಪಿ ರಾಜ್ಯದಲ್ಲಿ ಬಹುತೇಕ ತನ್ನ ರಾಜಕೀಯ ವರ್ಚಸ್ಸನ್ನು ಕಳೆದುಕೊಳ್ಳಲಿದೆ ಎನ್ನುವ ಅಭಿಪ್ರಾಯ ರಾಜಕೀಯ ವಲಯದಲ್ಲಿ ಈಗೀಗ ನಿಧಾನಕ್ಕೆ ಕೇಳಿ ಬರುತ್ತಿದೆ. ಒಟ್ಟಿನಲ್ಲಿ, ಬುಡ ಸಮೇತ ಬಿಜೆಪಿಯ ಭಿನ್ನಮತ ಶಮನಕ್ಕೆ ಹೈಕಮಾಂಡ್ ಮುಂದಾಗಬೇಕಿದೆ. ಅದಕ್ಕೆ ಮುಹೂರ್ತ ಯಾವಾಗ ಎನ್ನುವುದೇ ಸದ್ಯಕ್ಕಿರುವ ಪ್ರಶ್ನೆಯಾಗಿದೆ.

ಶ್ರೀರಾಜ್‌ ವಕ್ವಾಡಿ 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!