Tuesday, September 17, 2024

ಸ್ವಾತಂತ್ರ್ಯ ಸಾರ್ಥಕವಾಗಬೇಕಾದರೇ…

ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವ ಸ್ವಾತಂತ್ರ್ಯವನ್ನು ದೇಶ ಕಿತ್ತುಕೊಂಡಿಲ್ಲ !   

ಎಪ್ಪತ್ತೆಂಟು ವರ್ಷಗಳ ಹಿಂದೆ, ಸ್ವಾತಂತ್ರ್ಯ ಗಳಿಸಿದ ಬಗ್ಗೆ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಭಾಷಣವೊಂದರಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ, “ನಾವು ಇಂದು ಆಚರಿಸುವ ಸಾಧನೆ ನಮ್ಮ ಮೊದಲ ಹೆಜ್ಜೆ, ನಮ್ಮ ಮುಂದಿರುವ ಅವಕಾಶಗಳ ತೆರೆಯುವಿಕೆ. ಇದು ನಮಗೆ ಕಾಯುತ್ತಿರುವ ವಿಜಯಗಳು ಮತ್ತು ಸಾಧನೆಗಳು. ಆದರೇ, ಈ ಅವಕಾಶಗಳನ್ನು ಬಳಸಿಕೊಳ್ಳಲು ಹಾಗೂ ಎದುರಿಸಲು ನಾವೆಷ್ಟು ಸಮರ್ಥರಾಗಿದ್ದೇವೆ, ನಾವೆಷ್ಟು ಧೈರ್ಯಶಾಲಿಗಳಾಗಿದ್ದೇವೆ ಎಂದು ಅಂದು ಪ್ರಶ್ನಿಸಿದ್ದರಂತೆ. ಬಹುಶಃ ಅಂದು ಜವಾಹರಲಾಲ್‌ ನೆಹರು ಅವರು ಕೇಳಿದ್ದ ಪ್ರಶ್ನೆ ಇಂದಿಗೂ ಪ್ರಸ್ತುತ. ಕಳೆದೆರಡು ಮೂರು ವರ್ಷಗಳ ಹಿಂದೆ ಸ್ವಾತಂತ್ರ್ಯ ಅಮೃತಮಹೋತ್ಸವವನ್ನು ಆಚರಸಿಕೊಂಡೆವು. ಮತ್ತೆ ಮರಳಿ ಮರಳಿ ವರ್ಷಗಳು ಉರುಳುತ್ತಿವೆ. ಸ್ವಾತಂತ್ರ್ಯ ಅಂದರೇ ಏನು ? ಅದು ಒಂದು ಹೊತ್ತಿನ ಆಚರಣೆಗೆ ಅಷ್ಟೇ ಸೀಮಿತವಲ್ಲ ಎನ್ನುವುದನ್ನು ನಾವಿನ್ನೂ ಅರ್ಥೈಸಿಕೊಳ್ಳದೇ ಇರುವುದು ನಮ್ಮ ದೇಶದ ದುರಂತವೇ ಸರಿ.

ದೇಶ ಬ್ರಿಟೀಷ್‌ ಆಳ್ವಿಕೆಯಿಂದ ಬಂಧಮುಕ್ತವಾಗಿ ಇಷ್ಟು ವರ್ಷಗಳನ್ನು ದಾಟಿ ಮುಂದೆ ಬಂದರೂ ನೆಹರು ಅವರ ಈ ಮಾತು ಇಂದಿಗೂ ಪ್ರಸ್ತುತ. ವಸಾಹತುಶಾಹಿಯ ನೊಗದಿಂದ ಮುಕ್ತವಾದ ಭಾರತದ ಮುಂದೆ ದೊಡ್ಡ ಸವಾಲಿತ್ತು. ಸ್ವತಂತ್ರ ಭಾರತ ತನ್ನದೇ ಒಂದು ಸಂಕಲ್ಪದೊಂದಿಗೆ ಹೊಸ ಪ್ರಯಾಣಕ್ಕೆ ನಾಂದಿ ಹಾಡಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರ ದೂರದೃಷ್ಟಿ ಹಾಗೂ ವಿಶಿಷ್ಠವಾದ ಉದಾರ ಕಲ್ಪನೆ ಈ ಸ್ವತಂತ್ರ ಭಾರತದ ಭವಿಷ್ಯದ ಮೇಲಿತ್ತು.

ದೇಶದ ಉದಾರ ಪ್ರಜಾಪ್ರಭುತ್ವಕ್ಕೆ ಪ್ರಧಾನವಾಗಿ ಕೆಲಸ ಮಾಡಿದ ಸಂವಿಧಾನ ಸಭೆಯ ಸದಸ್ಯರಲ್ಲಿ ಅಪಾರ ಧ್ಯೇಯೋದ್ದೇಶ ಇತ್ತು. ಸ್ವಾತಂತ್ರ್ಯ, ಸಂವಿಧಾನ, ಪ್ರಜಾಪ್ರಭುತ್ವದ ಸಮಗ್ರ ಕಲ್ಪನೆ ಈ ದೇಶವನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಹಾಗಾದರೇ, ಸ್ವಾತಂತ್ರ್ಯ, ಸಂವಿಧಾನ, ಪ್ರಜಾಪ್ರಭುತ್ವವನ್ನು ನಾವೆಷ್ಟು ಪಾಲಿಸಿದ್ದೇವೆ ? ಎನ್ನುವುದು ಇನ್ನೂ ಉತ್ತರವಿಲ್ಲದ ಪ್ರಶ್ನೆ.

ವಾಕ್ ಸ್ವಾತಂತ್ರ್ಯ, ಧರ್ಮ ಮತ್ತು ಜಾತ್ಯತೀತ ವಿಚಾರಗಳನ್ನು ಒಳಗೊಂಡಿರುವ ಹಕ್ಕುಗಳನ್ನು ಖಾತರಿಪಡಿಸುವ ಸಾಂವಿಧಾನಿಕ ಯೋಜನೆ,  ಚುನಾವಣಾ ಪ್ರಕ್ರಿಯೆಗಳ ಅನುಷ್ಠಾನ, ಶಾಸಕಾಂಗ, ಭಾಷಾವಾರು ಆಧಾರದ ಮೇಲೆ ಮರುಸಂಘಟಿತಗೊಂಡ ರಾಜ್ಯಗಳು, ಪ್ರಗತಿಯನ್ನು ಸೂಚಿಸುವ ಸಂಸ್ಥೆಗಳ (ಕೈಗಾರಿಕಾ, ಶೈಕ್ಷಣಿಕ, ವೈದ್ಯಕೀಯ) ನಿರ್ಮಾಣ ಮತ್ತು ವಿಶ್ವ ಆರ್ಥಿಕತೆಗೆ ಭಾರತವನ್ನು ಪ್ರಯೋಜನಕಾರಿಯಾಗಿ ಕಟ್ಟಿದ ಜ್ಞಾನ ಹಾಗೂ ಸಂವಹನ ಕ್ಷೇತ್ರಗಳ ಅಭಿವೃದ್ಧಿ, ಹೀಗೆ ಎಲ್ಲವೂ ಕಾಲಕಾಲಕ್ಕೆ ಅನುಷ್ಠಾನಗೊಂಡ ದೇಶದ ಸ್ವಾತಂತ್ರ್ಯದ ಹಾದಿ.

1947ರ ಕಾಲಘಟ್ಟದಲ್ಲಿ ದೇಶ ಅನುಭವಿಸುತ್ತಿದ್ದ ತೀವ್ರ ಬಡತನ, ಬಹುಶಃ ಇಂದಿಗೂ ಈ ಸಮಸ್ಯೆಯಿಂದ ದೇಶ ಹೊರ ಬಂದಿಲ್ಲ. ಹೌದು, ಜಾಗತಿಕ ಹಸಿವು ಸೂಚ್ಯಂಕದ (ಜಿಎಚ್‌ಐ) ಇತ್ತೀಚೆಗಿನ ವರದಿಯ ಪ್ರಕಾರ, ಒಟ್ಟು 125 ದೇಶಗಳ ಪೈಕಿಯಲ್ಲಿ ಭಾರತ 28.68 (ಗಂಭೀರ ಎಂದು ಸೂಚಿಸುತ್ತದೆ) ಅಂಕಗಳೊಂದಿಗೆ 111ನೇ ಸ್ಥಾನಕ್ಕೆ ಕುಸಿದಿದೆ. ಇದು ಭಾರತದ ಈವರೆಗಿನ ಕನಿಷ್ಠ ರ‍್ಯಾಂಕ್‌. 2022ರ ಸೂಚ್ಯಂಕದಲ್ಲಿ ದೇಶ 107ನೇ ಸ್ಥಾನದಲ್ಲಿ ಇದ್ದಿತ್ತು ಎನ್ನುವುದನ್ನು ನಾವಿಲ್ಲಿ ಗಮನಿಸಬೇಕಿದೆ. ಇವೆಲ್ಲದಕ್ಕೂ ಈ ದೇಶವನ್ನು ಆಳಿದ ಸರ್ಕಾರವೇ ನೇರ ಕಾರಣ. ಹೀಗೆಲ್ಲಾ ಜ್ವಲಂತ ಸಮಸ್ಯೆಗಳು ದೇಶದ ಉದ್ದಗಲಕ್ಕೂ ಬೇಕಾದಷ್ಟಿರುವಾಗ ಸಂಭ್ರಮಗಳು, ಆಚರಣೆಗಳು ಒಂದಿನಿತೂ ಆಳುವ ವರ್ಗಕ್ಕೆ ಆತ್ಮ ವಂಚನೆಯಾಗಿ ಕಾಡುವುದಿಲ್ಲವೇ?

ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿನ  ತೊಡಕುಗಳನ್ನು ನಿರ್ಮೂಲನೆ ಮಾಡುವುದಕ್ಕೆ ದೇಶ ಸೋತಿರುವುದು ಸ್ವಾತಂತ್ರ್ಯ ಭಾರತ ಕಂಡಿರುವ ಅಸಮರ್ಥ ಆಡಳಿತವೇ ಕಾರಣ ಅಲ್ಲವೇ ? ಸಾಂವಿಧಾನಿಕ ಕ್ರಮ ಮತ್ತು ಅಗತ್ಯ ಮಾರ್ಪಾಡುಗಳನ್ನು ಅನುಷ್ಠಾನಗೊಳಿಸುವಲ್ಲಿನ ಒತ್ತಡಗಳು ಮತ್ತು ಸವಾಲುಗಳನ್ನು ಸಮರ್ಥವಾಗಿ ಎದುರಿಸುವುದಕ್ಕೆ ಪರಿಹಾರ ಮಾರ್ಗವನ್ನೇ ಸ್ವಾತಂತ್ರ್ಯ ಭಾರತ ಕಂಡುಕೊಂಡಿಲ್ಲ ಎನ್ನುವುದು ವಿಷಾದನೀಯವೇ ಸರಿ.

ದಿನನಿತ್ಯ ದೊಡ್ಡ ಪಿಡುಗಾಗಿಯೇ ಬೆಳೆಯುತ್ತಿರುವ ಕೋಮುವಾದವನ್ನು ಸ್ವಾತಂತ್ರ್ಯ ಭಾರತ ನಿಯಂತ್ರಿಸುವಲ್ಲಿ ಸೋತಿರುವುದು, ಹಾಗೆಯೇ ಅಧಿಕಾರದ ವಿಕೇಂದ್ರೀಕರಣದ ಅಪೂರ್ಣ ಸ್ವರೂಪ ಮತ್ತು ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಗಳ ಸರಿಪಡಿಸುವ ಪ್ರಾಥಮಿಕ ಪ್ರಯತ್ನವೂ ಮಾಡಿಲ್ಲ. ಸರಿದಾರಿಗೆ ತರುವುದಕ್ಕೆ ಪ್ರಯತ್ನ ಮಾಡಿಯೂ ಸೋತಿದೆ ಎಂದರೆ ಯಾವ ಕಾರಣಕ್ಕೆ ಸೋತಿದೆ ಎಂಬುವುದನ್ನು ಪರಿಶೀಲಿಸಿಲ್ಲ ಎನ್ನುವುದೇ ಅರ್ಥ. ಸ್ವಾತಂತ್ರ್ಯದ ಭವಿಷ್ಯದ ಹಾದಿಯನ್ನು ದೇಶ ಸಮರ್ಥವಾಗಿ ಹಾಕಿಕೊಂಡಿಲ್ಲ ಎನ್ನುವುದಕ್ಕೆ ಇದೊಂದೇ ಸಾಕ್ಷಿ ಸಾಕು.

ಜನಸಂಖ್ಯೆಯಲ್ಲಿ ಬೆಳೆದ ಭಾರತ, ಆರ್ಥಿಕತೆಯಲ್ಲಿ ಬೆಳೆದಿಲ್ಲ. ಸಾಮಾಜಿಕ ಸುಸ್ಥಿತಿಯನ್ನು ಕಾಯ್ದುಕೊಂಡಿಲ್ಲ. ಚುನಾವಣೆಯ ಹೆಸರಿನಲ್ಲಿ ವಿಜೃಂಭಿಸುವ ಪ್ರಜಾಪ್ರಭುತ್ವ, ಸ್ವಾತಂತ್ರ್ಯದ ಮೂಲ ಕಲ್ಪನೆಯನ್ನೇ ಕಳೆದುಕೊಂಡಿದೆಯೇ ಅಥವಾ ಕಳೆದುಕೊಳ್ಳುವ ಹಾಗೆ ಮಾಡಲಾಗಿದೆಯೇ ? ಇವೆಲ್ಲಾ ಸಮಸ್ಯೆಗಳಾಗಿ ಕಾಣಿಸದೇ ಇರುವುದು ನಿಜಕ್ಕೂ ಆಶ್ಚರ್ಯವೇ ಸರಿ. ಸಹಕಾರ ಮತ್ತು ಉದಾರ ಸಂಬಂಧಗಳು ವ್ಯಾಪಾರದ ಉದ್ದೇಶದಿಂದಷ್ಟೇ  ಬೆಳೆಯುತ್ತಿವೆ. ಸಾಂಘಿಕ ಪ್ರಗತಿಯ ಚಿಂತನೆ ಇಲ್ಲದ ವಿದೇಶಿ ಒಪ್ಪಂದಗಳು ಕೂಡ ದೊಡ್ಡ ಸವಾಲೇ ಆಗಿದೆ.  ಹವಾಮಾನ ಬದಲಾವಣೆಯು ಒಂದು ಸವಾಲಾಗಿದೆ. ಪರಿಸರ ಸಂರಕ್ಷಣೆಗೆ ಅಗತ್ಯವಾಗಿ ತುರ್ತಾಗಿ ಹಕ್ಕೊತ್ತಾಯಕ್ಕೆ ಮುಂದಾಗಬೇಕಿರುವ ಪರಿಕಲ್ಪನೆಯನ್ನೇ ಸ್ವಾತಂತ್ರ್ಯ ಭಾರತ ಮರೆತಂತಿದೆ.

ಇನ್ನು, ಅಧಿಕಾರವನ್ನು ಕೇಂದ್ರೀಕರಿಸಲು ಮತ್ತು ಭಾರತದ ಕಲ್ಪನೆಯನ್ನು ಏಕರೂಪಗೊಳಿಸಲು ಪ್ರಯತ್ನಿಸುವ ಪ್ರಬಲ ರಾಜಕೀಯ ಶಕ್ತಿಯ ಪ್ರಯೋಗಶೀಲತೆ ಮತ್ತು ವೈವಿಧ್ಯತೆಯ ಗುರುತಿಸುವಿಕೆ ಮತ್ತು ಸಮಗ್ರ ಪ್ರಗತಿಯ ಸಾಧನವಾಗಿ ಒಳಗೊಳ್ಳುವಿಕೆಯ ಸಾಂವಿಧಾನಿಕ ರಚನೆಯನ್ನು ಮುಂದಿಡುವ ತುರ್ತನ್ನು ಅರ್ಥ ಮಾಡಿಕೊಳ್ಳುವುದಕ್ಕೆ ದೇಶದ ಚಿಂತನೆ ಸೋತಂತಿದೆ. ಅಂತರ್ಗತ ಬೆಳವಣಿಗೆಯ ಮೂಲಕ ಆರ್ಥಿಕ ಪ್ರಗತಿ ೧೯೯೦ ರ ದಶಕದ ಆರಂಭದಲ್ಲಿ ಸಮಗ್ರ ಸುಧಾರಣೆಗಳ ನಂತರ ಮತ್ತು ೨೦೦೦ ನೇ ದಶಕದ ಮಧ್ಯಭಾಗದಲ್ಲಿ  ಅಭಿವೃದ್ಧಿ ಆಧಾರಿತ ವಿಧಾನವನ್ನು ಅನುಷ್ಠಾನಗೊಳಿಸಿದ ನಂತರ ವೇಗಗೊಂಡ ಪ್ರಕ್ರಿಯೆ ಕಳೆದ ಕೆಲವು ವರ್ಷಗಳಿಂದೀಚೆಗೆ ನಿಧಾನಗೊಂಡಂತಿದೆ.

ಏತನ್ಮಧ್ಯೆ, ದಕ್ಷಿಣ ಮತ್ತು ಉತ್ತರ ಭಾರತಗಳ ನಡುವೆ ಇರುವ ಒಂದು ಶೀತಲ ಅಸಮಾಧಾನ,  ಶಿಕ್ಷಣ, ಆರೋಗ್ಯ, ರಕ್ಷಣೆ ಮತ್ತು ಸಂಪೂರ್ಣ ಆರ್ಥಿಕ ಬೆಳವಣಿಗೆಯಲ್ಲಿ ಕೊರಗುತ್ತಿರುವ ಪಶ್ಚಿಮ ಭಾರತ (ದೇಶದ ನಾಲ್ಕೂ ದಿಕ್ಕುಗಳೂ), ಅಂತರಾಜ್ಯ ಅಸಮಾನತೆಗಳು ದಿನೆದಿನೆ ಉಲ್ಬಣಗೊಳ್ಳುತ್ತಿವೆ. ಇವೆಲ್ಲಾ ಸ್ವಾತಂತ್ರ್ಯ ಭಾರತದ ಭವಿಷ್ಯದ ಹಿತಕ್ಕಾಗಿ ಪರಿಹಾರ ಕಂಡುಕೊಳ್ಳುವ ಚರ್ಚೆಯ ವಿಷಯಗಳಾಗಬೇಕಿದೆ.

ಸ್ವಾತಂತ್ರೋತ್ತರ ಭಾರತದಲ್ಲಿ ಯಶಸ್ಸು ಮತ್ತು ವೈಫಲ್ಯಗಳು ಭವಿಷ್ಯದ ಸವಾಲುಗಳನ್ನು ಎದುರಿಸಲು ರಾಷ್ಟ್ರಕ್ಕೆ ಮಾರ್ಗಗಳನ್ನು ಒದಗಿಸಿವೆ. ಸ್ವಾತಂತ್ರ್ಯದ ಆರಂಭಿಕ ವರ್ಷಗಳಲ್ಲಿ, ಉನ್ನತ ಶಿಕ್ಷಣ, ಕೈಗಾರಿಕೆ ಮತ್ತು ಆರೋಗ್ಯ ರಕ್ಷಣೆಯ ಅನೇಕ ಆಧುನಿಕ ಸಂಸ್ಥೆಗಳನ್ನು ನಿರ್ಮಿಸಲಾಯಿತು, ನಿರ್ವಹಣೆಯೂ ಸ್ತುತ್ಯಾರ್ಹ. ಆದರೆ ಭಾರತ ಪ್ರಾಥಮಿಕ ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದ ಮೇಲೆ ಸೂಕ್ತ ಗಮನ ನೀಡಿಲ್ಲ. ಇದು ಬಡತನ ಮತ್ತು ಸಾಮಾಜಿಕ ದುಸ್ಥಿತಿಯ ನಿರಂತರತೆಗೆ ಕಾರಣವಾಯಿತು. ಜಾತಿಯ ಆಧಾರದ ಮೇಲೆ ಕಡೆಗಣನೆ ಆರಂಭವಾಯಿತು. ಅಭಿವೃದ್ಧಿ ನಾಗರಿಕರ ಸಾಮರ್ಥ್ಯಗಳ ಆಧಾರದ  ಮೇಲೆ ಕೇಂದ್ರೀಕರಣಗೊಂಡು ಸಮಗ್ರ ಅಭಿವೃದ್ಧಿಯ ಪರಿಕಲ್ಪನೆಯೇ ಇಲ್ಲದಂತಾಯಿತು. ಆರ್ಥಿಕತೆಯಲ್ಲಿ ಉತ್ಪಾದಕ ಶಕ್ತಿಗಳ ಉತ್ತಮ ಬೆಳವಣಿಗೆಗೆ ಪೂರಕ ವಾತಾವರಣವೇ ಸರಿಯಾಗಿ ಇಲ್ಲ.  ಹೀಗೆ ಹತ್ತು ಹಲವು ಸಮಸ್ಯೆಗಳು ಸ್ವಾತಂತ್ರ್ಯೋತ್ತರ ಭಾರತದಲ್ಲಿಯೂ ಇವೆ. ಇಷ್ಟೆಲ್ಲಾ ಹೇಳಿದ ಮೇಲೆ ಈ ಸಂಭ್ರಮದ ನಡುವೆ ವಿಮರ್ಶೆ ಯಾಕೆ ಎನ್ನುವ ಪ್ರಶ್ನೆಯೂ ಸಹಜವಾಗಿ ನಮ್ಮ ನಿಮ್ಮಲ್ಲಿ ಮೂಡಬಹುದು. ಆದರೇ, ಬಹುಶಃ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವ ಹಾಗೂ ನಮ್ಮ ಬಗ್ಗೆ ನಾವು ಅರಿತುಕೊಳ್ಳುವ, ಸರಿಪಡಿಸಿಕೊಳ್ಳುವ ಸ್ವಾತಂತ್ರ್ಯವನ್ನು ದೇಶ ಕಿತ್ತುಕೊಂಡಿಲ್ಲ. ಇದು ನಮ್ಮನ್ನೇ ನಾವು ಸ್ವತಂತ್ರವಾಗಿ ಸಮಗ್ರ ಚಿಂತನೆಯಲ್ಲಿ ವೃದ್ಧಿಸಿಕೊಳ್ಳುವ ಸ್ವಾತಂತ್ರ್ಯವಾಗಿದೆ. ಇದೂ ಕೂಡ ದೇಶಭಕ್ತಿ ಮತ್ತು ಸ್ವಾತಂತ್ರ್ಯ ಎನ್ನುವುದನ್ನು ಬಹುಶಃ ನಾವೆಲ್ಲರೂ ತುರ್ತಾಗಿ ಅರ್ಥೈಸಿಕೊಂಡ ದಿನವೇ ಬಹುಶಃ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ.

-ಶ್ರೀರಾಜ್‌ ವಕ್ವಾಡಿ  

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!