Sunday, September 8, 2024

ಸಿರಿಬಾಗಿಲುವಿನಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ಯಕ್ಷವೈಭವ |ಯಕ್ಷಗಾನ ಮುಂದಿನ ಪೀಳಿಗೆಗೆ ಹಸ್ತಾಂತರವಾಗಲಿ-ಎಡನೀರು ಶ್ರೀ

ಕಾಸರಗೋಡು: ಗಡಿನಾಡು ಕಾಸರಗೋಡಿನ ಸಿರಿಬಾಗಿಲಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ನಡೆದ ನಾಲ್ಕು ದಿನಗಳ ಸಾಂಸ್ಕೃತಿಕ ಉತ್ಸವ ಸಂಪನ್ನಗೊಂಡಿತು.

ಸಮರೋಪ ಸಮಾರಂಭದಲ್ಲಿ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಮತ್ತು ಉಪ್ಪಳ ಕೊಂಡೆಯೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಆಶೀರ್ವಚನದೊಂದಿಗೆ ಜು.20ರಂದು ಯಶಸ್ವಿಯಾಗಿ ನಡೆಯಿತು.

ಸಿರಿಬಾಗಿಲಿನಲ್ಲಿ ನಡೆದ ಸಿರಿಬಾಗಿಲು ಯಕ್ಷವೈಭವ ಯಕ್ಷಗಾನ ಲೋಕವೇ ಅಚ್ಚರಿಗೊಳ್ಳುವಂತೆ 25 ತಂಡಗಳಿಂದ ನಡೆದು ಕಾಸರಗೋಡಿನ ಚರಿತ್ರೆಯಲ್ಲಿ ಪ್ರಥಮ. ಈ ಹಿಂದೆ ಹಲವು ಕಡೆಗಳಲ್ಲಿ ಸೀಮಿತ ತಂಡಗಳ ಯಕ್ಷಗಾನ ಸ್ಪರ್ಧೆ ನಡೆದಿರುತ್ತದೆ. ಆದರೆ ಇದು ಸ್ಪರ್ಧೆಯಲ್ಲ. ಅಲ್ಲದೆ ಹವ್ಯಾಸಿ ವಲಯದ ಕಲಾವಿದರು, ಯಕ್ಷಗಾನ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಿದ ಪ್ರತಿಷ್ಠಾನದ ಯೋಜನೆ, ನಿಜವಾಗಿ ಮೆಚ್ಚುವಂಥದ್ದು, ಈ ಪ್ರತಿಷ್ಠಾನ ಇನ್ನೂ ಮುಂದೆ ಇಂತಹ ಚಟುವಟಿಕೆ ನಡೆಸಿ ಲೋಕ ಪ್ರಸಿದ್ಧಿ ಪಡೆಯಲಿ. ಯಕ್ಷಗಾನ ಬೆಳೆಯಲಿ. ಮುಂದಿನ ಪೀಳಿಗೆಗೆ ಹಸ್ತಾಂತರವಾಗಲಿ ಎಂದು ಎಡನೀರು ಶ್ರೀಗಳು ಆಶೀರ್ವದಿಸಿದರು.

ಗ್ರಾಮೀಣ ಪ್ರದೇಶವಾದ ಸಿರಿಬಾಗಿಲಿನಲ್ಲಿ ಇಂತಹ ಯೋಜನೆ ಕಲ್ಪಿಸಿದ ಪ್ರತಿಷ್ಠಾನ ಹಾಗೂ ಅಧ್ಯಕ್ಷರಾದ ಯಕ್ಷಗಾನ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಮತ್ತು ಸಹಕರಿಸಿದ ಎಲ್ಲರೂ ಅಭಿನಂದಾರ್ಹರು ಎಂದು ಕೊಂಡೆಯರು ಶ್ರೀಗಳು ನುಡಿದರು.

ಅಧ್ಯಕ್ಷತೆಯನ್ನು ಹಂಗಾರಕಟ್ಟೆ ಯಕ್ಷಗಾನ ಕೇಂದ್ರದ ಕಾರ್ಯದರ್ಶಿಗಳಾದ ರಾಜಶೇಖರ ಹೆಬ್ಬಾರರವರು ವಹಿಸಿದರು. ಇದೇ ಸಮಯದಲ್ಲಿ ಪ್ರತಿಷ್ಠಾನದ ಸದಸ್ಯತ್ವ ನೋಂದಾವಣೆಯ ಅಭಿಯಾನದ ದ್ವಿತೀಯ ಮಹಾಪೋಷಕರು ಸದಸ್ಯತ್ವವನ್ನು ಬೆಂಗಳೂರಿನ ಟಿ. ಎಂ. ಸತೀಶ್ ರವರಿಗೆ ನೀಡಿ ಗೌರವಿಸಲಾಯಿತು. ಅತಿಥಿಗಳಾಗಿ ಮಾಂಡೋವಿ ಮೋಟಾರ್ಸ್ ಮೆನೇಜರ್ ರಾದ ಶಶಿಧರ ಕಾರಂತ, ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡು ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತೋಡಿ, ಕರ್ನಾಟಕ ಬ್ಯಾಂಕಿನ ಸುಜಿತ್, ಶೀನ ಶೆಟ್ಟಿ ಕಜೆ, ಸಿರಿಬಾಗಿಲು ವೆಂಕಪ್ಪಯ್ಯನವರ ಹಿರಿಯ ಪುತ್ರಿ ಮಂಗಳ ಗೌರಿ ಕುದ್ರೆಪ್ಪಾಡಿ ಉಪಸ್ಥಿತರಿದ್ದರು.

ಇದೇ ಸಮಯದಲ್ಲಿ ಗಡಿನಾಡ ಸಂಗೀತ ವಿದ್ವಾಂಸೆ ಶಕುಂತಲಾ ಕೆ. ಭಟ್ ಕುಂಚಿನಡ್ಕ ಇವರಿಗೆ ಸಿರಿಬಾಗಲು ವೆಂಕಪ್ಪಯ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರತಿಷ್ಠಾನಕ್ಕೆ ಹಲವು ವಿಧದಲ್ಲಿ ಸಹಕರಿಸಿದ ಇಂಜಿನಿಯರ್ ಶಿವಶಂಕರ ಜಿ.ಎನ್, ರಾಘವೇಂದ್ರ ಉಡುಪ, ಡಾ.ಸತ್ಯನಾರಾಯಣ, ಶುತಕೀರ್ತಿರಾಜ್ ಮುಂತಾದವರನ್ನು ಗೌರವಿಸಲಾಯಿತು. ಕನ್ನಡ ಅಭಿಮಾನಿಗಳಾದ ಮಂಡ್ಯ ಬೆಂಗಳೂರುನಿಂದ ಬಂದ ಸುಲ್ತಾನ್ ಗೌಡ ಮತ್ತು ಷಣ್ಮುಖಂ ನವರು ಪ್ರತಿಷ್ಠಾನದ ಚಟುವಟಿಕೆಗಳನ್ನು ಗಮನಿಸಿ ಅಧ್ಯಕ್ಷರಾದ ರಾಮಕೃಷ್ಣಯ್ಯ ಅವರನ್ನು ಗೌರವಿಸಿದರು.

ಅದಕ್ಕೂ ಮೊದಲು ಪ್ರತಿಷ್ಠಾನ ಪ್ರಕಾಶಿಸಿದ ಏಳು ಕೃತಿಗಳ ಬಗ್ಗೆ ವಿಚಾರ ಸಂಕಿರಣ ನಡೆಯಿತು. ವಿಚಾರ ಸಂಕಿರಣದಲ್ಲಿ ರಾಧಾಕೃಷ್ಣ ಕಲ್ಚಾರ್ ವಿಟ್ಲ, ಡಾ. ನಾಗವೇಣಿ ಮಂಚಿ,  ಪತ್ರಕರ್ತ ಲಕ್ಷ್ಮೀ ಮಚ್ಚಿನ, ರಾಘವೇಂದ್ರ ಉಡುಪ ನೇರಳೆಕಟ್ಟೆ, ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಮುಂತಾದವರು ಭಾಗವಹಿಸಿದರು.

ಹವ್ಯಾಸಿ ತಂಡಗಳಲ್ಲಿ 22 ತೆಂಕುತಿಟ್ಟಿನ ತಂಡಗಳು ಹಾಗೂ ಪ್ರಥಮವಾಗಿ ಮೂರು ಬಡಗುಟ್ಟಿನ ತಂಡಗಳು ಭಾಗವಹಿಸಿರುತ್ತದೆ. ಪಾರ್ತಿಸುಬ್ಬನ ಜನ್ಮನಾಡಾದ ಕಾಸರಗೋಡು ಭಾಗದಲ್ಲಿ ಬಡಗುತಿಟ್ಟಿನ ಪ್ರದರ್ಶನಗಳು ಅತಿ ವಿರಳ. ಉತ್ತಮ ಪ್ರದರ್ಶನ ನೀಡಿ ತಂಡಗಳು ಜನ ಮೆಚ್ಚುಗೆಗೆ ಪಾತ್ರರಾದವು. ಹೆಚ್ಚಿನ ಎಲ್ಲಾ ತಂಡಗಳು ವೃತ್ತಿ ಮೇಳಕ್ಕೆ ತಾವು ಸರಿ ಸಮಾನವೆಂದು ಮೆರೆದರು. ಡಾ.ಶ್ರುತ ಕೀರ್ತಿರಾಜ್ ಉಜಿರೆ ನಿರೂಪಿಸಿದರು. ಪ್ರಸನ್ನ ಕಾರಂತ ದೇಶಮಂಗಲ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!