Sunday, September 8, 2024

ಉದಾತ್ತ ಮಾದರಿಯಾಗುವುದು ಸುಲಭವೇ… | ಸ್ಥಾನಮಾನವುಳ್ಳವರು ಅಲ್ಪಮಾನವರಾಗುವ ದುರಿತ ಕಾಲ

ಸಾಮಾಜಿಕ ಬದುಕಿನ ಜೊತೆಗೆ ಅಥವಾ ಸಾಮಾಜಿಕ ಜೀವನಕ್ಕೆ ಹತ್ತಿರವಾಗಿದ್ದು ತಮ್ಮ ವೃತ್ತಿ ಜೀವನ ನಡೆಸುತ್ತಿರುವವರು ಈ ಸಮಾಜದಲ್ಲಿ ಮಾದರಿಯಾಗಿ ಬದುಕಬೇಕು. ಬಹಳ ವಿಶೇಷವಾಗಿ ಹೀಗೆ ಬದುಕುತ್ತಿರುವವರಲ್ಲಿ ತಮ್ಮನ್ನು ಅನುಸರಿಸುವವರು ಹಲವಾರು ಮಂದಿ ಇದ್ದಾರೆ ಎನ್ನುವ ಸ್ವಯ ಇರಬೇಕು. ಹೆಸರು, ಅಧಿಕಾರ, ದುಡ್ಡು ತಲೆಗೇರಿದಾಗ ಮನುಷ್ಯನ ವರ್ತನೆ ಬದಲಾವಣೆ ಆಗುವುದು ಸಹಜವೇ ಸರಿ. ಆದರೇ, ತನ್ನ ಕಾಲ, ಸ್ಥಿತಿ, ಸಂಬಂಧಗಳ ಅರಿವು ಬಹಳ ಮುಖ್ಯವಾಗಿರುತ್ತದೆ. ಸಮಾಜದಲ್ಲಿ ತನಗಿರುವ ಸ್ಥಾನಮಾನಗಳು, ಅಧಿಕಾರ, ಹೆಸರು, ದುಡ್ಡಿನಿಂದ ಸೃಷಿಯಾದ ಗೌರವಗಳಿಗಾದರೂ ವಿಧೇಯರಾಗಿ ಬದುಕಬೇಕು. ಒಬ್ಬ ಸಾಮಾನ್ಯ ವ್ಯಕ್ತಿಯ ʼಇರುವಿಕೆʼಯೇ ಬಹಳಷ್ಟು ಮಾತನಾಡುತ್ತದೆ. ಇನ್ನು, ದೊಡ್ಡ ದೊಡ್ಡ ಸ್ಥಾನಮಾನಗಳಲ್ಲಿರುವವರ ʼಇರುವಿಕೆʼಯಲ್ಲಿ ವ್ಯತ್ಯಾಸಗಳಾದರೆ ಕೇಳಬೇಕೆ ?

ಇರುವಿಕೆಯಲ್ಲಿ ಸ್ವಯಂ ಪ್ರಜ್ಞೆ ಇಲ್ಲದವನು ಸಮಾಜ ಕಂಟಕನಾಗಿ ಬದಲಾಗುತ್ತಾನೆ. ಪ್ರತಿಯೊಬ್ಬನಿಗೂ ತನ್ನ ಹಿನ್ನೆಲೆ, ಈಗಿರುವ ಹುದ್ದೆ, ಸ್ಥಾನಮಾನ ಗೌರವಗಳ ಅರಿವು ಇರಬೇಕು. ತಮ್ಮಿಂದ ಆದವುಗಳಿಗೆ ಎಲ್ಲದಕ್ಕೂ ಸಮಾಜಾಯಿಷಿ ಕೊಡುವುದಕ್ಕೂ ಒಂದು ಮಿತಿ ಇದೆ. ಒಪ್ಪಿತ ಎನ್ನುವುದಕ್ಕೂ ಒಂದು ಮಿತಿ ಇದೆ. ಅದನ್ನು ದಾಟಿದ ಕ್ರಿಯೆಯನ್ನು ಸಹಿಸಿಕೊಳ್ಳುವ ಅಥವಾ ಒಪ್ಪಿಕೊಳ್ಳುವ ಮನಸ್ಥಿತಿ ಈ ಸಮಾಜಕ್ಕಿಲ್ಲ. ಒಪ್ಪಿಕೊಳ್ಳುವ ಮತ್ತು ಸಹಿಸಿಕೊಳ್ಳುವ ಮನಸ್ಥಿತಿ ಈ ಸಮಾಜಕ್ಕಿದೆ ಎಂದರೇ ಅದು ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ ಎಂದೇ ಅರ್ಥೈಸಿಕೊಳ್ಳಬೇಕು.

ಸಾಮಾನ್ಯ ಅಸಮಾನ್ಯನಾಗುವುದಕ್ಕೂ, ಸಾಮಾನ್ಯರಲ್ಲಿ ಸಾಮಾನ್ಯನಾಗಿಯೇ ಬದುಕುವುದಕ್ಕೂ ವ್ಯತ್ಯಾಸವಿದೆ. ಅಸಮಾನ್ಯನಾಗುವ ಕ್ರಿಯೆಯಲ್ಲಿ ʼಅಹಂʼ ಅಮಲಾಗಿ ಬದಲಾಗಬಹುದು. ಸಾಮಾನ್ಯರೊಳಗೆ ಸಾಮಾನ್ಯರಾಗಿಯೇ ಇರುವ ಕ್ರಿಯೆಯಲ್ಲಿ ʼನಾಟಕೀಯʼವೂ ಮನಸ್ಸು, ಮೈಗೆ ಪರಾಕಾಯ ಪ್ರವೇಶ ಪಡೆದುಕೊಳ್ಳಬಹುದು. ತೊಡಗಿಕೊಳ್ಳುವವನಿಗೆ ಈ ಎರಡೂ ಕ್ರಿಯೆಯಲ್ಲಿ ಸಾಮಾನ್ಯವಾಗಿ ಆಗುವ ಬದಲಾವಣೆಗಳ ಬಗ್ಗೆ ನಿಗಾ ಇರಬೇಕು. ಅಹಂ ಮತ್ತು ನಾಟಕೀಯ ವರ್ತನೆಯನ್ನು ಮೀರಿ ಬೆಳೆಯುವವ ನಿಜಕ್ಕೂ ಈ ಸಮಾಜಕ್ಕೆ ಅತ್ಯಾಪ್ತನಾಗಿ ಬೆಳೆಯುತ್ತಾನೆ, ಉಳಿಯುತ್ತಾನೆ.

ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಮೇಲಿರುವ ಲೈಂಗಿಕ ದೌರ್ಜನ್ಯ ಪ್ರಕರಣ, ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಸಂಸದೀಯ ಮಂಡಳಿ ಸಮಿತಿಯ ಸದಸ್ಯರೂ ಆಗಿರುವ ಹಿರಿಯ ರಾಜಕಾರಣಿ ಬಿ.ಎಸ್‌ ಯಡಿಯೂರಪ್ಪ ಅವರ ಮೇಲಿರುವ ಪೋಕ್ಸೋ ಪ್ರಕರಣ ಹಾಗೂ ಚಿತ್ರನಟ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಮೇಲಿರುವ ಕೊಲೆ ಆರೋಪಗಳನ್ನು ನಾವು ತುಸು ಚಿಂತನೆ ಮಾಡಬೇಕಿದೆ. ಹೌದು, ಸಮಾಜದಲ್ಲಿ ಅಗ್ರ ಸ್ಥಾನಮಾನಗಳನ್ನು ಹೊಂದಿರುವ ಪ್ರಜ್ವಲ್‌ ರೇವಣ್ಣ, ಬಿ.ಎಸ್‌. ಯಡಿಯೂರಪ್ಪ ಹಾಗೂ ನಟ ದರ್ಶನ್‌ ಬಗೆಗೆ ನಾವು ಯೋಚಿಸಬೇಕಿದೆ. ಚಿಂತಿಸಬೇಕಿದೆ. ರಾಜಕೀಯ, ಸಿನೆಮಾ, ಸರ್ಕಾರಿ ಹುದ್ದೆ, ಪತ್ರಿಕೋದ್ಯಮ ಸೇರಿ ಹಲವು ಕ್ಷೇತ್ರಗಳಲ್ಲಿ ಜೀವನ ನಡೆಸುತ್ತಿರುವವರದ್ದು ಕತ್ತಿ ಅಲಗಿನ ಮೇಲಿನ ನಡಿಗೆ. ಸದಾ ಜಾಗೃತರಾಗಿಯೇ ಬದುಕಬೇಕು. ಮಾದರಿಯಾಗಿಯೂ ಬದುಕಬೇಕು. ಅದು ಅನಿವಾರ್ಯವೂ ಕೂಡ.

ಗಮನಿಸಿ, ತನ್ನ ಕಾಮ ತೃಷೆ ತೀರಿಸಿಕೊಳ್ಳುವ ಸಲುವಾಗಿ ನೂರಾರು ಹೆಣ್ಣು ಮಕ್ಕಳನ್ನು ಬರೀ ಅಂಗಾಂಗ ಎಂಬಂತೆ ಬಳಸಿಕೊಂಡು, ಆ ಹೆಣ್ಣು ಮಕ್ಕಳಿಗೆ ಎಸಗಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯಗಳನ್ನು ಸಾವಿರಾರು ವೀಡಿಯೋಗಳನ್ನಾಗಿ ಮಾಡಿಟ್ಟುಕೊಳ್ಳುವ ಮನಸ್ಥಿತಿಗೆ ತಲುಪುವವರೆಗೆ ಹಾಸನ ಪೆನ್‌ಡ್ರೈವ್‌ ಪ್ರಕರಣದ ಆರೋಪಿಗೆ ಸ್ವಯ ಇರಲಿಲ್ಲವೇ ? ತಾನೊಬ್ಬ ರಾಜಕಾರಣಿ, ಒಂದು ಲೋಕಸಭಾ ಕ್ಷೇತ್ರದ ಸಂಸದ, ತಾನಿರುವ ಹುದ್ದೆಗೆ ಒಂದು ಗೌರವವಿದೆ, ಹೀಗೆಲ್ಲಾ ತಾನು ನಡೆದುಕೊಳ್ಳಬಾರದು ಎನ್ನುವ ಪ್ರಾಥಮಿಕ ಪ್ರಜ್ಞೆ ಇದ್ದಿದ್ದರೇ ಬಹುಷಃ ಹೀಗೆಲ್ಲಾ ಆಗುತ್ತಿರಲಿಲ್ಲವೇನೋ. ಯುವ ನಾಯಕ ಎಂದು ಆತನನ್ನು ಸ್ಪರ್ಧೆಯ ಕಣಕ್ಕಿಳಿಸಿದ ಪಕ್ಷ ಹಾಗೂ ಹಿರಿಯ ನಾಯಕರ ಮಾತಿಗೆ ಈಗ ಎಲ್ಲಿದೆ ಬೆಲೆ ? ತನ್ನನ್ನು ಈ ಹಿಂದೆ ಆರಿಸಿದ ಮತದಾರರಿಗೆ ನೀಡಿದ ಸುರಕ್ಷತೆ ?

ಗಾಳಿಯಿಲ್ಲದೇ ಹೊಗೆಯಾಡುವುದಿಲ್ಲ. ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆಯ ತಾಯಿ ನೀಡಿರುವ ದೂರಿನ ಮೇಲೆ ಸಂಕಷ್ಟ ಎದುರಿಸುತ್ತಿರುವ ಆರೋಪಿ ತನ್ನ ವಯಸ್ಸು, ತಾನು ಅನುಭವಿಸಿದ ಹುದ್ದೆ, ಸ್ಥಾನಮಾನಗಳ ಬಗ್ಗೆ ಅರಿವು ಇದ್ದಿದ್ದರೇ, ಇಂತಹ ಕೆಲಸಕ್ಕೆ ಮುಂದಾಗುತ್ತಿದ್ದರೇ ಎನ್ನುವ ಪ್ರಶ್ನೆಯೂ ಸಹಜವಾಗಿ ಮುಂದಿನ ಸಾಲಿನಲ್ಲೇ ನಿಲ್ಲುತ್ತದೆ. ಪ್ರಭಾವಿ ರಾಜಕಾರಣಿ ಎನ್ನುವ ಕಾರಣಕ್ಕೆ ಇಂತಹದ್ದೊಂದು ಘಟನೆ ಆಗಿದ್ದು ನಿಜವಾದರೇ ಈ ಸಮಾಜ ಅದನ್ನು ಒಪ್ಪುವುದಕ್ಕೆ ಸಾಧ್ಯವಿದೆಯೇ ? ಆರೋಪಗಳಿಂದ ಹೊರಬರಲು ಸಮರ್ಥಿಸಿಕೊಳ್ಳುವುದು ಸಾಮಾನ್ಯ. ಆ ಪ್ರತಿವಾದ ಸಮರ್ಥನೆ ಸ್ವಾತಂತ್ರ್ಯವೂ ಹೌದು. ಆದರೂ ಆ ಸ್ವಾತಂತ್ರ್ಯ ಎಲ್ಲಿಯವರೆಗೆ ? ಅದಕ್ಕೂ ಒಂದು ಮಿತಿ ಇದೆ. ಈ ಪ್ರಕರಣದ ವಿಚಾರಣೆ ಆದ ಬಳಿಕ ಸತ್ಯ ಸಂಗತಿ ಹೊರಬರಬಹುದು.

ತಮ್ಮ ಪ್ರಿಯತಮೆಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಮತ್ತು ಅವಹೇಳನಕಾರಿಯಾಗಿ ಕಮೆಂಟ್‌ ಮಾಡಿದ್ದಾರೆ ಎನ್ನುವ ಕಾರಣಕ್ಕೆ ತಮ್ಮದೇ ಅಭಿಮಾನಿ ಎಂದು ಹೇಳಲಾಗುತ್ತಿರುವ ಒಬ್ಬ ವ್ಯಕ್ತಿಯನ್ನು ಅಪಹರಿಸಿ ಕೊಲೆಗೈದು ರಾಜಕಾಲುವೆಗೆ ಎಸೆದಿದ್ದಾರೆ ಎಂಬ ಆರೋಪದ ಮೇಲೆ ಸ್ಯಾಂಡಲ್‌ವುಡ್‌ ನ ಅಗ್ರಮಾನ್ಯ ನಟ ಹಾಗೂ ಆತನ ಪ್ರಿಯತಮೆ, ಸಹಚರರು ಬಂಧನಕ್ಕೊಳಾಗಿದ್ದಾರೆ. ಇಂತಹದ್ದೊಂದು ಕೊಲೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ನಟ ತುಸು ಯೋಚಿಸಿದ್ದರೇ ? ಪತ್ನಿ ಮೇಲಿನ ಹಲ್ಲೆ ಪ್ರಕರಣದಲ್ಲಿ ಬಂಧನ, ಶ್ರೀರಂಗಪಟ್ಟಣದಲ್ಲಿ ಅಭಿಮಾನಿಯ ಮೇಲೆ ಹಲ್ಲೆ, ಮಾಧ್ಯಮಗಳನ್ನು ಅಶ್ಲೀಲವಾಗಿ ನಿಂಧಿಸಿ ಒಂದು ವರ್ಷ ನಿಷೇಧ, ಪುನೀತ್‌ ರಾಜ್‌ಕುಮಾರ್‌ ವಿರುದ್ಧ ವಿವಾದಾತ್ಮಕ ಮಾತು, ವನ್ಯ ಜೀವಿಗಳನ್ನು ಸಾಕಿ ಅರಣ್ಯ ಇಲಾಖೆಯ ಕೆಂಗಣ್ಣಿಗೆ ಗುರಿ, ಮೈಸೂರು ಹೋಟೇಲ್‌ನಲ್ಲಿ ಕಾರ್ಮಿಕನ ಮೇಲೆ ಹಲ್ಲೆ, ನಿರ್ಮಾಪಕನೋರ್ವನಿಗೆ ಬಹಿರಂಗ ಸಭೆಯೊಂದರಲ್ಲಿ ನಿಂದನೆ ಮತ್ತು ವಿವಾದ, ಚಿತ್ರೀಕರಣದ ಸಂದರ್ಭದಲ್ಲಿ ಸಹನಟನ ಮೇಲೆ ಹಲ್ಲೆ, ಸರ್ಕಾರ ನಟನ ಮನೆಯಲ್ಲಿದ್ದ ಹುಲಿ ಉಗುರು ವಶ ಪಡಿಸಿಕೊಂಡಂತಹ ಸಾಲು ಸಾಲು ಅವಾಂತರಗಳು ಆದ ಬಳಿಕವೂ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ತಾನು ನಡೆದುಕೊಂಡು ಬಂದ ದಾರಿ, ಕುಟುಂಬದ ಹಿನ್ನೆಲೆ, ಚಿತ್ರರಂಗದ ಅನುಭವ, ಸ್ಥಾನಮಾನ, ಫ್ಯಾನ್‌ ಫಾಲೋವರ್ಸ್‌, ತಾನೊಬ್ಬ ಅನುಭವಿ ನಟನಾಗಿದ್ದುಕೊಂಡು ಈ ಸಮಾಜಕ್ಕೆ ಮಾದರಿಯಾಗಿ ಇರಬೇಕು ಎನ್ನುವ ವಿಚಾರಗಳನ್ನೆಲ್ಲಾ ಒಮ್ಮೆ ಯೋಚಿಸಿ ಮನಸ್ಸಿನ ಮಾತು ಕೇಳಿದ್ದರೇ,  ಈಗ ಹೊತ್ತಿರುವ ಆರೋಪಗಳಿಗೆ ಹೊಂದುವ ಕೃತ್ಯಗಳ ಬಗ್ಗೆ ಯೋಚನೆಯನ್ನು ಮಾಡುವುಕ್ಕೂ ಸಮಯ ದೊರಕುತ್ತಿರಲಿಲ್ಲ.

ಹೌದು, ಸ್ವಾಸ್ಥ್ಯಕ್ಕೆ ಪ್ರತಿಬಂಧಕರೂಪವಾಗಿ ಆರು ಶತ್ರುಗಳಂತೆ ಇರುವ ಭಾವನೆಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳನ್ನು ತನ್ನೊಳಗೆ ತನಗೇ ಅರಿವಿಲ್ಲದೆ ಮನುಷ್ಯ ಇರಿಸಿಕೊಂಡಿದ್ದಾನೆ. ಅವುಗಳಲ್ಲಿ ಯಾವುದನ್ನು ಎಲ್ಲಿ ಸಾಧಿಸಿಕೊಳ್ಳಬೇಕು ಎನ್ನುವುದು ಆಯಾಯ ವ್ಯಕ್ತಿತ್ವಕ್ಕೆ ಅವಲಂಭಿಸಿರುವ ವಿಷಯ. ಇವುಗಳೊಂದಿಗೆ ಹೇಗೆ ಬದುಕುತ್ತೇವೆ ಎನ್ನುವುದೇ ಮುಖ್ಯ.

ನಾವು ಮಾಡುವ ಪ್ರತಿಯೊಂದು ಕೆಲಸದ ಹಿಂದೆ ನಮ್ಮ ಮನಸ್ಸು ಇರುತ್ತದೆ. ಕೆಲವೊಮ್ಮೆ ಚಂಚಲ ಮನಸ್ಸು ನಮ್ಮನ್ನು ಕೆಟ್ಟ ದಾರಿಯತ್ತ ಕೊಂಡೊಯ್ಯಬಹುದು. ಹಾಗಾಗಿ ನಾವು ನಮ್ಮ ಮನಸ್ಸನ್ನು ನಿಯಂತ್ರಿಸುವುದು ಮುಖ್ಯ. ಬುದ್ಧ ಹೇಳುವಂತೆ, ದುರಾಸೆಯ ನಿರರ್ಥಕೆಯನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ತಪ್ಪುಗಳ ಹಿಂದೆ ಮನಸ್ಸಿನ ಕೈವಾಡವಿರುತ್ತದೆ ಎಂಬ ಬುದ್ಧನ ಮಾತನ್ನು ನಾವು ಅರ್ಥೈಸಿಕೊಳ್ಳಬೇಕು. ಮನಸ್ಸು ಆಗಾಗ ಮೊಗೆಮೊಗೆದು ಕೊಡುವ ದುರಾಸೆಗಳಿಗೆ ಬಲಿಯಾಗುವುದರಿಂದಲೇ ಸ್ಥಾನಮಾನವುಳ್ಳವರು ಅಲ್ಪಮಾನವರಾಗುತ್ತಾರೆ.

ವ್ಯಕ್ತಿಯಾಗಿ ಬದುಕುವುದು ಬಹಳ ಸುಲಭ. ಆದರೆ, ಮಾದರಿ ವ್ಯಕ್ತಿಯಾಗಿ, ಅನುಕರಣೀಯ ವ್ಯಕ್ತಿತ್ವದವರಾಗಿ ಬದುಕುವುದು ಕಷ್ಟ. ಉದಾತ್ತ ಆದರ್ಶಗಳ ಅಳವಡಿಕೆಯ ಇರುವಿಕೆಯಿಂದಲಷ್ಟೇ ಮಾದರಿಯಾಗಿ ಬದುಕಬಹುದು. ʼಅಹಂ ಲೋಕʼ ಮುಂದಾದರೆ, ಆ ಹಮ್ಮುಬಿಮ್ಮಿನಿಂದಲೇ ಎಲ್ಲವನ್ನೂ ಜಯಿಸಿಕೊಳ್ಳಬಹುದೆಂಬ ಭ್ರಮೆ ಆವರಿಸಿಕೊಂಡರೇ ಮನುಷ್ಯ ಮನುಷ್ಯನಾಗಿ ಬದುಕುವುದಕ್ಕೆ ಸಾಧ್ಯವಿಲ್ಲ. ದುರಂತವೆಂದರೇ, ಬಹುತೇಕರು ಇಲ್ಲಿ ಮನುಷ್ಯರಾಗುವ ಪ್ರಾಥಮಿಕ ಪ್ರಯತ್ನವನ್ನೇ ಮಾಡುತ್ತಿಲ್ಲ.

ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!