Sunday, September 8, 2024

ಮೋದಿ ಮತ್ತು ಹದ್ದುಮೀರಿದ ಗಣ್ಯಪ್ರಜ್ಞೆ

ಸ್ವನಾಮ ವೈಭವೀಕರಣ, ಪ್ರಸ್ತುತ ರಾಜಕೀಯದ ಸ್ಥಿತಿಗತಿ !

2014ರ ಚುನಾವಣೆಗೂ ಮುನ್ನಾ ನಡೆದ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರುದ್ಧ ಪ್ರತಿಭಟನೆ ಮತ್ತು ನಿರ್ಭಯಾ ಅತ್ಯಚಾರ ಪ್ರಕರಣದ ವಿರುದ್ಧ ಎದ್ದ ಆಡಳಿತ ವಿರೋಧಿ ಆಂದೋಲನಗಳು ಕಾಂಗ್ರೆಸ್‌ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಘಾತಕವಾಗಿದ್ದವು. ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರದಿಂದ ಇಳಿಯುವುದಕ್ಕೆ ಈ ಎರಡು ವಿಷಯಗಳು ಬಹಳ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಿದ್ದವು.

ವರ್ಷಾನುಗಟ್ಟಲೇ ನಡೆದ ರೈತರ ಪ್ರತಿಭಟನೆ, ಮಣಿಪುರ ಹಿಂಸಾಚಾರ, ಉತ್ತರ ಪ್ರದೇಶದ ಹತ್ರಾಸ್‌ ಅತ್ಯಾಚಾರದಂತಹ ಪ್ರಕರಣಗಳು, ಸಿಎಎ ವಿರೋಧಿ ಪ್ರತಿಭಟನೆ, ಬಿಬಿಸಿ ನಿರ್ಮಾಣದ ಇಂಡಿಯಾ: ದಿ ಮೋದಿ ಕ್ವೆಶ್ಚನ್‌, ಚುನಾವಣಾ ಬಾಂಡ್‌ ನಿಷೇಧ, ಲಡಾಕ್‌ ಉಳಿಸಿ ಹೋರಾಟ, ಗಡಿ ವಿವಾದ, ಪೆಗಾಸಸ್‌ ಬೇಹುಗಾರಿಕೆ, ಹಣದುಬ್ಬರ, ಬೆಲೆ ಏರಿಕೆ, ಆರ್ಥಿಕ ಬಿಕ್ಕಟ್ಟು ಸೇರಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ದೇಶದ ಉದ್ದಗಲಕ್ಕೂ ನಡೆಸಿದ ಭಾರತ್‌ ಜೋಡೋ ಯಾತ್ರೆ ಮತ್ತು ಭಾರತ್‌ ಜೋಡೋ ನ್ಯಾಯ್ ಯಾತ್ರೆಗಳು ಬಿಜೆಪಿಗೆ ಈ ಬಾರಿ ಘಾತಕವಾಗುವಂತಹ ವಿಷಯಗಳೇ ಆಗಿವೆ. ಆದರೇ, ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷಾಧಿಕಾರ ಆರ್ಟಿಕಲ್‌ 370 ರದ್ದು, ರಾಮ ಮಂದಿರ ಲೋಕಾರ್ಪಣೆ(ಅಪೂರ್ಣ ಮಂದಿರ), ತ್ರಿವಳಿ ತಲಾಕ್‌ ರದ್ದು ವಿಚಾರಗಳೇ ಚುನಾವಣೆಗೆ ಪೂರಕವಾಗಲಿವೆ ಎಂಬ ಲೆಕ್ಕಚಾರದಲ್ಲಿ ಬಿಜೆಪಿ ಇದೆ.

ಹಿಂದುತ್ವ ಮತ್ತು ರಾಮ ಮಂದಿರ ಬಿಜೆಪಿಯ ಪ್ರಮುಖ ಅಸ್ತ್ರ ಎನ್ನುವುದು ನಿಜ. ಅಯೋಧ್ಯೆಯ ಅಪೂರ್ಣ ರಾಮ ಮಂದಿರ ಲೋಕಾರ್ಪಣೆ ಆಗುವ ಹೊತ್ತಿಗೆ ದೇಶದಲ್ಲಿ ಇದ್ದ ಉನ್ಮಾದ ಈಗ ಇಲ್ಲ ಎನ್ನುವುದು ಕೂಡ ನಿಜ. ಜನರಿಗೆ ಕೊನೆಗೆ ಈ ಎಲ್ಲಾ ಉನ್ಮಾದಗಳಿಗಿಂತ ಬದುಕೇ ಮುಖ್ಯ ಎನ್ನುವ ಅರಿವು  ಸ್ವಲ್ಪ ಮಟ್ಟಿಗೆ ಆದ ಹಾಗೆ ಕಾಣಿಸುತ್ತಿದೆ. ಆದರೂ ಬಿಜೆಪಿಯ ಮುಸ್ಲೀಮರ ಬಗೆಗಿನ ದ್ವೇಷ, ಮೋದಿ ಮತ್ತು ಮತ್ತಿತರ ಬಿಜೆಪಿಗರ ಮುಸ್ಲೀಮರ ವಿರುದ್ಧ ಮಾತುಗಳಿಂದ ಪ್ರಚೋದನೆಗೆ ಒಳಗಾಗುವವರ ಸಂಖ್ಯೆ ಕಡಿಮೆಯಾಗಿಲ್ಲ. ಎಲ್ಲಾ ತನ್ನ ಆಡಳಿತ ವೈಫಲ್ಯವನ್ನು ಮುಚ್ಚಿಹಾಕಿಕೊಳ್ಳುವುದಕ್ಕೆ ಈ ಚುನಾವಣೆಯಲ್ಲಿ ಮೋದಿ ಬಳಸಿದ ಮುಸ್ಲೀಮರ ವಿರುದ್ಧದ ದ್ವೇಷಪೂರಿತ ಬಾಷಣಗಳ ಕಾರಣದಿಂದಾಗಿ ಮೋದಿ ಪ್ರತಿನಿತ್ಯ ಹೆಚ್ಚುಹೆಚ್ಚು ಹಿಂದೂ ಹೃದಯ ಸಾಮ್ರಾಟನಾಗುತ್ತಿರುವುದು ಕೂಡ ಅಷ್ಟೇ ಸತ್ಯ. ಆದರೇ, ಇಂತಹದ್ದೊಂದು ಬೆಳವಣಿಗೆಯೇ ಈ ಬಾರಿ ಬಿಜೆಪಿಯನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಡಲಿದೆ ಎಂಬ ನಂಬಿಕೆ ಸ್ವತಃ ಬಿಜೆಪಿಯಲ್ಲಿಯೇ  ದಟ್ಟವಾಗಿಲ್ಲ ಎಂಬ ವಾತಾವರಣ ಕಾಣಿಸುತ್ತಿದೆ. ರಾಮ ಮಂದಿರ ಹಾಗೂ ಹಿಂದುತ್ವದ ಬಗೆಗಿನ ನಿಷ್ಠೆಯನ್ನು ಹೊರತಾಗಿ ಬಿಜೆಪಿಗೆ ಮತ ಹಾಕುವವರ ಮನಸ್ಸಿನಲ್ಲಿಯೂ ಇತ್ತೀಚೆಗೆ ಮೋದಿ ಆಡುತ್ತೀರುವ ವಿಪರೀತ ದ್ವೇಷ ಬಾಷಣಗಳು ಆತಂಕ ಮೂಡಿಸಿದೆ ಎನ್ನುವ ಹಾಗೆ ಕಾಣಿಸುತ್ತಿದೆ.

ಬಹುಶಃ ಮೋದಿ ಇಂತಹದ್ದನ್ನು ಚುನಾವಣೆಯಲ್ಲಿ ಆಯ್ದುಕೊಳ್ಳದೇ ಇದ್ದಿದ್ದರೇ, ಈಗಿನ ರಾಜಕೀಯದ ಪರಿಸ್ಥಿತಿ ಬೇಡುವ ಸಾಮರ್ಥ್ಯವನ್ನು ಮೋದಿ ವೃದ್ಧಿಸಿಕೊಳ್ಳುವುದಕ್ಕೆ ಸಾದ್ಯವಾಗುತ್ತಿರಲಿಲ್ಲ. ಇದು ಬಿಜೆಪಿ, ಆರ್‌ಎಸ್‌ಎಸ್‌ ಹಾಗೂ ರಾಷ್ಟ್ರ ರಾಜಕಾರಣದ ಪಾಲಿಗೆ ಎಷ್ಟು ಸತ್ಯವೋ ಅಷ್ಟೇ ಅಪ್ರಿಯವೂ ಹೌದು. ಮೋದಿ ಅವರ ಆತ್ಮರತಿಗೆ ಸ್ವತಃ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಬೇಸತ್ತಿರಬಹುದು. ಈ ಪ್ರಜಾಪ್ರಭುತ್ವದ ದೇಶದಲ್ಲಿ ತನಗಿಂತ ಶ್ರೇಷ್ಠ ನಾಯಕನಿಲ್ಲ ಎಂದು ಗುರುತಿಸಿಕೊಳ್ಳುವ ಒಂದು ಅತೀವ ಆಸೆ ಮೋದಿ ಅವರ ಮನಸ್ಸಿನಲ್ಲಿದೆ. ಈ ಮನಸ್ಸನ್ನೇ ಸ್ವತಃ ಆರ್‌ಎಸ್‌ಎಸ್‌ ಒಪ್ಪಿಕೊಳ್ಳುವುದಿಲ್ಲ. ಮೋದಿ ಸಂಪುಟದಲ್ಲಿರುವ ಹಾಗೂ ಪಕ್ಷಕ್ಕಿಂತ ಮೋದಿಗೆ ಹೆಚ್ಚು ವಿದೇಯರಾಗಿರುವ ಬಿಜೆಪಿ ನಾಯಕರೂ ಕೂಡ ʼಮೋದಿʼ ಪ್ರಭುತ್ವವನ್ನೇ ತಮಗೆ ಅರಿವೇ ಇಲ್ಲದೇ ತಮ್ಮಗೊಳಗೆ ಆವರಿಸಿಕೊಂಡು ಬಿಟ್ಟಿದ್ದಾರೆ. ಪ್ರಭುತ್ವವನ್ನು ಒಪ್ಪಿಕೊಳ್ಳುವುದು ಎಂದರೇ, ಅದು ಒಂದು ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕುವುದೇ ಆಗಿದೆ.  ಪ್ರಜೆಗಳು ಅವನನ್ನು ಮತ್ತು ಅವನ ಎಲ್ಲಾ ನಡೆಯನ್ನು ದೈವಾಜ್ಞೆ ಎಂದು ಪಾಲಿಸಬೇಕು ಎಂಬ ವಾತಾವರಣ ಸೃಷ್ಟಿ ಮಾಡುವ ʼಪ್ರಭುತ್ವʼವನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಮೋದಿ ತನ್ನ ʼಪರಿವಾರʼದವರಿಗೆ ಮಾಡಿದ್ದಾರೆ. ಆದರ್ಶ ಪ್ರಜಾಪ್ರಭುತ್ವದಲ್ಲಿ ಇರಬೇಕಾದ, ಆದರೇ ವಾಸ್ತವದಲ್ಲಿ ಕಣ್ಮರೆಯಾಗಿರುವ ಸ್ಥಿತಿಯನ್ನು ಮೋದಿ ಒಂದು ಹಂತದಲ್ಲಿ ಸೃಷ್ಟಿ ಮಾಡಿದ್ದಾರೆಯೇ ಎನ್ನುವ ಪ್ರಶ್ನೆಯೂ ಇದೆ.
ಈ ಬಾರಿಯ ಲೋಕಸಭಾ ಚುನಾವಣೆಯ ಪ್ರಚಾರದಲ್ಲಂತೂ ಪಕ್ಷ, ಪಕ್ಷದ ಚಿಹ್ನೆಗಿಂತ ʼಮೋದಿ ನಾಮʼವನ್ನೇ ಅಭ್ಯರ್ಥಿಗಳು ಬಳಸಿಕೊಂಡಿರುವುದೇ ಇದಕ್ಕೆ ಸಾಕ್ಷಿ. ಅಭ್ಯರ್ಥಿಗಳು ಸ್ವನಾಮ ಬಳಕೆಯಿಲ್ಲದೇ ಚುನಾವಣೆಯನ್ನು ಎದುರಿಸಿದ್ದು ತಮಗೆ ವರ್ಚಸ್ಸು ಇಲ್ಲ ಎಂಬ ಕಾರಣಕ್ಕೋ ಅಥವಾ ಮೋದಿಗೆ ಶರಣಾಗಿ ಸಾಮಂತರಾಗಿ ಆಳ್ವಿಕೆ ಮಾಡುತ್ತೇವೆ ಎಂಬ ಕಾರಣಕ್ಕೋ ತಿಳಿಯುತ್ತಿಲ್ಲ. ಪರೋಕ್ಷವಾಗಿ ಪಕ್ಷಕ್ಕಿಂತ, ಆರ್‌ಎಸ್ಎಸ್‌ ಸಂಘಟನೆಗಿಂತ ಅಥವಾ ಬಿಜೆಪಿಯ ಸಿದ್ದಾಂತಕ್ಕಿಂತ ಮೋದಿಯೇ ನಮ್ಮ ಮೊದಲ ಆದ್ಯತೆ ಎಂಬುವುದನ್ನು ಈ ನಾಯಕರೆಲ್ಲಾ ಒಪ್ಪಿಕೊಂಡರೇ ? ಪರೋಕ್ಷವಾಗಿ ʼಪ್ರಭುತ್ವʼವನ್ನು ಮೆಚ್ಚಿಕೊಂಡರೇ ? ʼಮೋದಿ ಕಾ ಪರಿವಾರ್‌ʼ ಎಂಬ ಪ್ರಚಾರ ಗಿಟ್ಟಿಸಿಕೊಳ್ಳುವ ಮೋದಿಯ ಉದ್ದೇಶ ? ಮುಂದೊಂದು ದಿನ ಈ ʼಮೋದಿ ಕಾ ಪರಿವಾರ್‌ʼ ಒಂದು ರಾಜಕೀಯ ಪಕ್ಷವೇ ಆಗಿ ಬದಲಾಗುವ ಮುನ್ಸೂಚನೆಯೇ ? ಗೊತ್ತಿಲ್ಲ. ಮೋದಿಯನ್ನು ವಿಷ್ಣುವಿನ ಅವತಾರ ಎಂದೆಲ್ಲಾ ಹಾಡಿ ಹೊಗಳಿದವರು ಬಿಜೆಪಿಯಲ್ಲಿದ್ದಾರೆ ಎನ್ನುವುದು ಕೂಡ ಉಲ್ಲೇಖಾರ್ಹ.

ಈ ಮನೋಧೋರಣೆ ಭಾರತದಂತಹ ರಾಜಕೀಯ ಹಾಗೂ ಚುನಾವಣಾ ಪ್ರಕ್ರಿಯೆಗೆ ಅಂಟಿರುವುದು ಆಶ್ಚರ್ಯವೇ ಸರಿ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಗಳಲ್ಲಿ, ಜಾಹೀರಾತುಗಳಲ್ಲಿ ಬಿಜೆಪಿಯ ಚಿಹ್ನೆಗಿಂತ ಮೋದಿಯವರೇ ಹೆಚ್ಚು ರಾರಾಜಿಸಿದ್ದಾರೆ. ಸಣ್ಣ ಮಟ್ಟಿನ ಆತ್ಮರತಿ ಅಥವಾ ಗಣ್ಯಪ್ರಜ್ಞೆ ಸಾಮಾನ್ಯವಾಗಿ ಎಲ್ಲರಲ್ಲೂ ಇರುವುದು ಸಹಜ. ಅದು ಅತಿಯಾದರೇ ಅಸಹಜವೇ ಸರಿ. ಇದು ಆತ್ಮರತಿಯ ಪರಾಕಾಷ್ಠೆಯೆ ಆಗಿದೆ. ನಿರ್ಲಜ್ಜೆಯಿಂದ ಏನೋ ಮಹತ್ತರವಾದ ಸಾಧನೆಯನ್ನು ಮಾಡಿದ್ದೇನೆ ಎಂಬ ಸ್ವಯಂ ವೈಭವೀಕರಣದ ವ್ಯಕ್ತಿತ್ವ ರಾಜಕೀಯ ಕ್ಷೇತ್ರದಲ್ಲಿ ತುಸು ಹೆಚ್ಚೇ ಇರುತ್ತದೆ. ಆದರೇ, ಬಹುಶಃ ದೇಶ ಇಷ್ಟೊಂದು ಆತ್ಮರತಿಯುಳ್ಳ ರಾಜಕಾರಣಿಯನ್ನು ಕಂಡ ಉದಾಹರಣೆಯೇ ಇಲ್ಲವೇನೋ.

ಕರ್ನಾಟಕದಲ್ಲೂ ʼಮೋದಿ ನಾಮʼ ಮತ್ತು ವಿಫಲತೆ :

ಈ ಭಾರಿಯ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಕಾರಣದ ಈಗಿನ ಪರಿಸ್ಥಿತಿ ಗಮನಿಸುವುದಾದರೇ ಮೋದಿ ಹವಾ, ಆ ಅಲೆ, ಈ ಅಲೆ, ಹಿಂದುತ್ವ ಹಾಗೂ ರಾಮ ಮಂದಿರದ ಹೆಸರಿನಲ್ಲಿ ಸೃಷ್ಟಿಸಿದ ಉನ್ಮಾದದ ನಡುವೆಯೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಾಂಗ್ರೆಸ್ ಈ ಬಾರಿ ಪ್ರಾಬಲ್ಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಏರಿದ್ದು,‌ ರೇವಂತ್‌ ರೆಡ್ಡಿ ನೇತೃತ್ವದ ಕಾಂಗ್ರೆಸ್ ತೆಲಂಗಾಣ ರಾಜ್ಯದಲ್ಲೂ ಗೆದ್ದು ಅಧಿಕಾರ ಹಿಡಿದಿರುವುದು ಮಾತ್ರವಲ್ಲದೇ, ತಮಿಳುನಾಡು, ಕೇರಳದಲ್ಲೂ ತನ್ನ ನೇತೃತ್ವದ ʼಇಂಡಿಯಾʼ ಮೈತ್ರಿಕೂಟದ ಪಕ್ಷಗಳೇ ಅಧಿಕಾರದಲ್ಲಿರುವುದು ಬಲವರ್ಧನೆ ಹೆಚ್ಚಳವಾಗುವುದಕ್ಕೆ ಪೂರಕವಾಗಿದೆ. ಕರ್ನಾಟಕದಲ್ಲಿ ನಡೆದ ಚುನಾವಣೆಯಲ್ಲೂ ಮೋದಿ ಹಾಗೂ ಅಮಿತ್ ಶಾ ಜೋಡಿಯ ರಾಜಕೀಯ ತಂತ್ರಗಳು ಫಲ ನೀಡದೆ ಕಾಂಗ್ರೆಸ್ ನಿಚ್ಚಳ ಬಹುಮತ ಗಳಿಸಿ ಅಧಿಕಾರ ಹಿಡಿದಿದೆ. ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ʼಮೋದಿನಾಮʼ ಬಿಜೆಪಿಗೆ ಯಶಸ್ಸು ತಂದುಕೊಟ್ಟಿಲ್ಲ. ಬಿಜೆಪಿ ಇದೀಗ ಮಾಜಿ ಪ್ರಧಾನಿ ದೇವೇಗೌಡರ ನಾಯಕತ್ವದ ಜಾತ್ಯತೀತ ಜನತಾದಳದ ಮೈತ್ರಿಯನ್ನು ಆಶ್ರಯಿಸುವಷ್ಟು ದಯನೀಯ ಸ್ಥಿತಿಯನ್ನು ಮುಟ್ಟಿದೆ. ಅಲ್ಲಿಯೂ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಇಡೀ ದೇಶದಾದ್ಯಂತ ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಧಕ್ಕೆ ಉಂಟು ಮಾಡಿದೆ. ʼಮೋದಿ ನಾಮʼ ಇಂತಹ ಕಳಂಕವನ್ನೆಲ್ಲಾ ದೂರಿಕರಿಸುತ್ತದೆ ಎಂಬ ನಂಬಿಕೆಯಲ್ಲಿಯೇ ಮೈತ್ರಿ ಅಭ್ಯರ್ಥಿಗಳು ಚುನಾವಣೆಯನ್ನು ಎದುರಿಸಿದರು. ಅಷ್ಟಾಗಿಯೂ ದೇಶದ ಮೊದಲ ಚುನಾವಣೆಯಿಂದಲೂ ಇಲ್ಲಿನ ಮತದಾರರು ಬದುಕನ್ನು ಕಿತ್ತುಕೊಂಡವರನ್ನು, ಸಾಮಾಜಿಕ ಬದುಕಿನಲ್ಲಿ ಸಂಘರ್ಷಕ್ಕೆ ಕಾರಣವಾದವರನ್ನು, ಪ್ರಜಾಪ್ರಭುತ್ವದ ಬದುಕಿಗೆ ಚ್ಯುತಿ ತಂದವರನ್ನು ನಿರಂತರವಾಗಿ ಅಧಿಕಾರದಿಂದ ಇಳಿಸುತ್ತಲೇ ಬಂದಿದ್ದಾರೆ ಎನ್ನುವುದು ಕೂಡ ಇಲ್ಲಿ ಉಲ್ಲೇಖಾರ್ಹ.

ರಾಜಧಾನಿ ದೆಹಲಿ ಧಣಿಗಳ ನಿರ್ದೇಶನಕ್ಕೆ ಮಣಿದು ಅನಿವಾರ್ಯವಾಗಿ ಜೆಡಿಎಸ್‌ನೊಂದಿಗೆ ಮೈತ್ರಿಯನ್ನು ಒಪ್ಪಿಕೊಂಡ ಬಿಜೆಪಿ ಸ್ಥಳೀಯ ನಾಯಕರು ಚುನಾವಣೆ ಎದುರಿಸಿದ್ದಾರೆ. ಇನ್ನು, ಮೋದಿ ಕರ್ನಾಟಕಕ್ಕೆ ಬಂದು ಮೆರೆದಿದ್ದು ಕೂಡ ಸ್ವನಾಮ ಪ್ರೀತಿಯನ್ನೇ. ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್‌. ಡಿ ದೇವೇಗೌಡರಿಂದಲೂ ತಮ್ಮ ಜಪ ಮಾಡಿಸಿಕೊಂಡ ಕೀರ್ತಿ ಯಾರಿಗಾದರೂ ಸಲ್ಲುತ್ತದೆ ಎಂದರೇ ಅದು ಮೋದಿ ಅವರಿಗೆ ಮಾತ್ರ. ಅದು ಅವರು ಸೃಷ್ಟಿಸಿಕೊಂಡ ಸ್ವನಾಮ ವೈಭವೀಕರಣದಿಂದಲೇ ಸಾಧ್ಯವಾಗಿದ್ದೆನ್ನುವುದು ಇಲ್ಲಿ ಮುಖ್ಯಾಂಶ.

ಬಹುಶಃ 2014ರಲ್ಲಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಮೋದಿ ಅವರನ್ನು ಆಯ್ಕೆ ಮಾಡುವಾಗ ಆರ್‌ಎಸ್‌ಎಸ್‌ ಗೂ, ಮೋದಿ ಸಂಘವನ್ನು ಮೀರಿ ಬೆಳೆಯುತ್ತಾರೆ ಎನ್ನುವುದರ ಬಗ್ಗೆ ಊಹೆ ಇದ್ದಿರಲಿಕ್ಕಿಲ್ಲ. ೨೦೧೪ರ ಆರಂಭದಲ್ಲಿ ಆರ್‌ಎಸ್‌ಎಸ್‌ ನಿಯಂತ್ರಣದಲ್ಲಿ ಮೋದಿ ಇದ್ದಿದ್ದರು, ಮೋದಿ ಬರಬರುತ್ತಾ ಆ ನಿಯಂತ್ರಣವನ್ನು ಮೀರಿ ಬೆಳೆದರು. ಇದೇ ಆರ್‌ಎಸ್‌ಎಸ್‌ ನಾಯಕರಲ್ಲಿ ಅಸಮಾಧಾನ ಮೂಡುವುದಕ್ಕೆ ಕಾರಣ. ರಾಮ ಮಂದಿರದ ಶ್ರೇಯ ಮೋದಿ ಒಬ್ಬರೇ ಪಡೆದುಕೊಂಡಿರುವುದರ ಬಗ್ಗೆ ಆರ್‌ಎಸ್‌ಎಸ್‌ ನಾಯಕರಲ್ಲಿ ಸಣ್ಣ ಮುನಿಸಿದೆ. ಆರ್‌ಎಸ್‌ಎಸ್‌ ಮತ್ತು ಮೋದಿ ನಡುವೆ ಸಣ್ಣ ಭಿನ್ನಾಭಿಪ್ರಾಯವಿದೆ ಎನ್ನುವ ವಿಚಾರಕ್ಕೆ ವಿರೋಧ ಯಾವ ಮಟ್ಟದಲ್ಲಿ ಬರಲಿದೆ ಎನ್ನುವುದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಆದರೇ, ಸಂಘಟನಾ ಶಕ್ತಿಯಿಂದ ಧರ್ಮ ರಕ್ಷಣೆ ಮಾಡುವ ದೃಷ್ಟಿಯಲ್ಲಿ ಶಾಖೆಗಳಲ್ಲಿ ದೇಶಭಕ್ತಿಯನ್ನು ಕಣಕಣದಲ್ಲೂ ಆಹ್ವಾಹಿಸಿಕೊಂಡು ದೇಶಕ್ಕಾಗಿ ನಾವು ಎಂಬ ಉತ್ಸಾಹದಲ್ಲಿ ಹಿಂದೂ ಧರ್ಮದ ಸಂಘಟನೆ ಮಾಡಿದ ಆರ್‌ಎಸ್‌ಎಸ್‌ ನಾಯಕರಿಗೆ ಮೋದಿ ಅವರ ಈ ಧೋರಣೆ ಹಿಡಿಸುತ್ತದೆಯೇ ? ಪ್ರಶ್ನೆಯಾಗಿಯೇ ಉಳಿದಿದೆ.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!