Sunday, September 8, 2024

ಎಕ್ಸಲೆಂಟ್ ವಿದ್ಯಾ ಸಂಸ್ಥೆ ಕುಂದಾಪುರ: ವಿದ್ಯಾರ್ಥಿಗಳೊಂದಿಗೆ ಗೋಪೂಜೆ, ತುಳಸಿ ಪೂಜೆ ಆಚರಣೆ

ಕುಂದಾಪುರ: ಸುಣ್ಣಾರಿಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು, ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ, ಹಾಗೂ ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆ, ಯಡಾಡಿ-ಮತ್ಯಾಡಿ ಇದರ ಸಹಯೋಗದಲ್ಲಿ ಸುಣ್ಣಾರಿಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ದೀಪಾವಳಿಯ ಸಾಂಪ್ರದಾಯಿಕ ಆಚರಣೆಗಳಾದ ಗೋಪೂಜೆ, ಬಲೀಂದ್ರ ಕೂಗುವುದು, ತುಳಸಿ ಪೂಜೆ, ಕೃಷಿ ಪರಿಕರ ಮತ್ತು ಸರಸ್ವತಿ ಪೂಜೆಯನ್ನು ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿಗಳೊಂದಿಗೆ ನವೆಂಬರ್ 13ರ ರಾತ್ರಿ ಆಚರಿಸಿ ವಿದ್ಯಾರ್ಥಿಗಳಿಗೆ ಹಬ್ಬದ ಊಟವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂದ ಕನ್ನಡದ ರಾಯಭಾರಿ, ಗ್ರಾವಿಟಿ ಆಂಗ್ಲಮಾಧ್ಯಮ ಶಾಲೆಯ ಅಧ್ಯಕ್ಷರಾಗಿರುವ ಮನು ಹಂದಾಡಿಯವರು ವಿದ್ಯಾರ್ಥಿಗಳಿಗೆ ದೀಪಾವಳಿ ಸಂದೇಶವನ್ನು ನೀಡುತ್ತಾ ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆಯ ಬಗ್ಗೆ ಕಾಳಜಿ ಮತ್ತು ತಿಳುವಳಿಕೆ ಕಡಿಮೆಯಾಗುತ್ತಿದ್ದು ಎಕ್ಸಲೆಂಟ್ ಸಮೂಹ ಸಂಸ್ಥೆ ಹಮ್ಮಿಕೊಂಡಿರುವ ಗೋಪೂಜೆ, ತುಳಸಿ ಪೂಜೆ, ಸರಸ್ವತಿ ಪೂಜೆಯಂತಹ ದೀಪಾವಳಿಯ ಸಾಂಪ್ರದಾಯಿಕ ಪೂಜೆಯು ವಿದ್ಯಾರ್ಥಿಗಳಲ್ಲಿ ನಮ್ಮ ಸಂಸ್ಕೃತಿ ಮತ್ತು ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸಲು ಸಹಕಾರಿಯಾಗಲಿದೆ ಎಂದರು.

ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಡಾ. ರಮೇಶ ಶೆಟ್ಟಿ ಮಾತನಾಡುತ್ತಾ ನಮ್ಮ ಹಿರಿಯರು ಆಚರಿಸಿದ ಹಬ್ಬಗಳು, ಆಚರಣೆಗಳ ಮಹತ್ವ ವಿದ್ಯಾರ್ಥಿಗಳಿಗೆ ಸಾರಬೇಕು, ನಮ್ಮ ನಾಡು-ನುಡಿ, ನೆಲೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸಬೇಕು ಎಂಬ ಕಾರಣಕ್ಕಾಗಿ ಈ ಸಂಭ್ರಮಾಚರಣೆಯನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಸಂಸ್ಥೆಯ ವಿದ್ಯಾರ್ಥಿಗಳು ಮನೆಯವರನ್ನು ಬಿಟ್ಟು ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್‌ನಲ್ಲಿದ್ದಾರೆ ಈ ಸಂದರ್ಭದಲ್ಲಿ ಅವರಿಗೆ ಮನೆಯಲ್ಲಿ ಆಚರಿಸುವ ಯಾವುದೇ ಹಬ್ಬಗಳಿಂದ ವಂಚಿತರಾಗಬಾರದು ಎನ್ನುವ ಕಾರಣದಿಂದ ಎಲ್ಲಾ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಿ ವಿದ್ಯಾರ್ಥಿಗಳಿಗೆ ಹಬ್ಬದ ಊಟವನ್ನು ಸವಿಯುತ್ತೇವೆ ಎಂದು ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ತಿಳಿಸಿದರು. ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್‌ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

ದೀಪಾವಳಿ ಸಾಂಪ್ರದಾಯಿಕ ಪೂಜೆ:
ದೀಪಾವಳಿಯ ಆಚರಣೆಯ ಸಂದರ್ಭದಲ್ಲಿ ಕುಂದಾಪುರದ ಎಕ್ಸಲೆಂಟ್ ಕಾಲೇಜಿನ ಆವರಣ ಹಬ್ಬದಂತೆ ಕಂಗೊಳಿಸುತಿತ್ತು. ವಿದ್ಯಾರ್ಥಿಗಳೆಲ್ಲಾ ಸಾಂಪ್ರಾದಾಯಿಕ ಉಡುಗೆ-ತೊಡುಗೆಗಳನ್ನು ತೊಟ್ಟು ಬಹಳ ಉತ್ಸಾಹದಿಂದ ಹಬ್ಬದ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದರು.

ಎಕ್ಸಲೆಂಟ್ ಆವರಣದಲ್ಲಿ ಗೋಪೂಜೆಗೆ ದನ ಮತ್ತು ಕರು ಶೃಂಗಾರಗೊಂಡಿರುವುದು ಎಲ್ಲರ ಕೂತುಹಲ ಕೆರಳಿಸಿತು. ಬೃಹತಾಕಾರದ ತುಳಸಿ ಕಟ್ಟೆಯನ್ನು ಹೂವಿನಿಂದ ಶೃಂಗಾರಗೊಳಿಸಲಾಗಿತ್ತು.

ಬಲೀಂದ್ರ ಕರೆಯುವ ವಿಧಿ-ವಿಧಾನಗಳನ್ನು ಸಂಪ್ರದಾಯಕ್ಕೆ ತಕ್ಕಂತೆ ಸಿದ್ಧಗೊಳಿಸಲಾಗಿತ್ತು. ಕೃಷಿ ಪರಿಕರಗಳಾದ ನೇಗಿಲು-ನೊಗ, ಹಾರೆ, ಕತ್ತಿ ಹಾಗೂ ಇತರ ಪರಿಕರಗಳನ್ನು ಪೂಜೆಗೆ ಸಿದ್ಧಗೊಳಿಸಿದ್ದು ವಿದ್ಯಾರ್ಥಿಗಳಿಗೆ ಹಳೆಯ ಕೃಷಿ ಪರಿಕರಗಳ ಬಗ್ಗೆ ಕುತೂಹಲ ಹೆಚ್ಚಿಸಿತು. ಒಟ್ಟಾರೆ ಅಪ್ಪಟ ಭಾರತೀಯ ಸಂಸ್ಕೃತಿಯ ದೀಪಾವಳಿ ಎಕ್ಸಲೆಂಟ್ ಆವರಣದಲ್ಲಿ ಕಂಗೊಳಿಸುತ್ತಿದ್ದು ವಿದ್ಯಾರ್ಥಿಗಳೆಲ್ಲರೂ ಉತ್ಸಾಹಕರಾಗಿ ಓಡಾಡುತ್ತಿದ್ದು ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಸಂಸ್ಕೃತ ಉಪನ್ಯಾಸಕಿ ಶ್ರೀಮತಿ ಸುದಕ್ಷಿಣ, ಕನ್ನಡ ಉಪನ್ಯಾಸಕರಾದ ನಾಗರಾಜ ಶೆಟ್ಟಿ ಮತ್ತು ಗುರುಪ್ರಸಾದ ಅವರು ಕಾರ್ಯಕ್ರಮ ನಿರ್ವಹಿಸಿದರು. ಹಬ್ಬದ ಅಂಗವಾಗಿ ವಿಶೇಷ ಭೋಜನ ಏರ್ಪಡಿಸಲಾಗಿತ್ತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!