spot_img
Friday, June 5, 2026
spot_img

ವಿಶ್ವ ಪರಿಸರ ದಿನದ ಅಪೂರ್ವ ಕೊಡುಗೆ| ಕುಂದಾಪುರದಲ್ಲಿ 250ಕ್ಕೂ ಹೆಚ್ಚು ಪ್ರಬೇಧಗಳ ಚಿತ್ರಕೂಟ ಔಷಧಿ ವನ ಉದ್ಘಾಟನೆ

ಊರಲ್ಲೇ ಇದ್ದು ಅಪರೂಪದ ವ್ಯವಸ್ಥೆ ಕಟ್ಟಿದ ಮಹಾ ಸಾಧಕ ಡಾ.ರಾಜೇಶ್ ಬಾಯರಿ-ಶಾಸಕ ಗುರುರಾಜ್ ಗಂಟಿಹೊಳೆ
ಕುಂದಾಪುರ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕರಾವಳಿಯ ಹೆಮ್ಮೆಯ ಆಯುರ್ವೇದ ಸಂಸ್ಥೆಯಾದ ಕುಂದಾಪುರದ ಆಲೂರು ತಾಲೂಕಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ಹಸಿರು ಕ್ರಾಂತಿಯೊಂದಿಗೆ ಆರೋಗ್ಯ ಕ್ರಾಂತಿಗೆ ಮುನ್ನುಡಿ ಬರೆಯಲಾಗಿದೆ. ಪರಿಸರಕ್ಕೆ ವಿಶೇಷ ಕೊಡುಗೆ ನೀಡುವ ಹಾಗೂ ಮುಂದಿನ ಪೀಳಿಗೆಗೆ ಆಯುರ್ವೇದ ಪರಂಪರೆಯನ್ನು ದಾಟಿಸುವ ಉದಾತ್ತ ಉದ್ದೇಶದಿಂದ ನಿರ್ಮಿಸಲಾದ, 250ಕ್ಕೂ ಹೆಚ್ಚು ಅಪರೂಪದ ಪ್ರಬೇಧದ ಗಿಡಮೂಲಿಕೆಗಳನ್ನೊಳಗೊಂಡ ಚಿತ್ರಕೂಟ ಔಷಧೀಯ ಸಸ್ಯಗಳ ಉದ್ಯಾನವನ (ಔಷಧಿ ವನ) ಮತ್ತು ವನಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ.

ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಈ ಔಷಧಿ ವನವನ್ನು ಉದ್ಘಾಟಿಸಿ, “ಸಾಮಾನ್ಯವಾಗಿ ಎರಡು ಮಾದರಿ ಇರುತ್ತದೆ. ಒಂದು, ಹಿಮಾಲಯ ನೋಡಲು ಅಲ್ಲಿಗೆ ಹೋಗುವುದು. ಇನ್ನೊಂದು, ಹಿಮಾಲಯವನ್ನೇ ತನ್ನ ಬಳಿಗೆ ಕರೆಸುವುದು. ಚಿತ್ರಕೂಟದ ಮುಖ್ಯಸ್ಥರಾದ ಡಾ. ರಾಜೇಶ್ ಬಾಯರಿ ಅವರು ಎರಡನೇ ಮಾದರಿಯನ್ನು ಆರಿಸಿಕೊಂಡಿದ್ದಾರೆ. ಸ್ವಂತ ಊರಿನಲ್ಲೇ ಉಳಿದು, ಸ್ಥಳೀಯ ಸಂಪನ್ಮೂಲ ಮತ್ತು ಪ್ರಕೃತಿಯನ್ನು ಬಳಸಿಕೊಂಡು ಗ್ರಾಮೀಣ ಭಾಗದಲ್ಲೂ ಜಾಗತಿಕ ಮಟ್ಟದ ಅದ್ಭುತ ಸಾಧನೆ ಮಾಡಬಹುದು ತೋರಿಸಿಕೊಟ್ಟಿದ್ದಾರೆ. ಅದಕ್ಕೆ ಚಿತ್ರಕೂಟ ಆಯುರ್ವೇದ ಸಂಸ್ಥೆಯೇ ಅತ್ಯುತ್ತಮ ಉದಾಹರಣೆ” ಎಂದು ಹೇಳಿದರು.

“ವೈದ್ಯರು ಇಲ್ಲಿ ನಿರ್ಮಿಸಿರುವ ಚಿಕಿತ್ಸಾ ವ್ಯವಸ್ಥೆ ಮತ್ತು ದಿವ್ಯ ಪರಿಸರವನ್ನು ಕಂಡು ನಮಗೆ ಹತ್ತು ಪಟ್ಟು ಹೆಮ್ಮೆಯಾಗುತ್ತಿದೆ. ಇದೊಂದು ಅದ್ಭುತ ಮಾದರಿಯಾಗಿದೆ. ಇಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಗಳೆಲ್ಲರೂ ಇದೇ ಗ್ರಾಮೀಣ ಪ್ರದೇಶದವರಾಗಿದ್ದು, ರೋಗಿಗಳೊಂದಿಗೆ ಅತ್ಯಂತ ಸೂಕ್ಷ್ಮವಾಗಿ, ಪ್ರೀತಿಯಿಂದ ಮಾತನಾಡಿ ಚಿಕಿತ್ಸೆ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ. ಯಾವುದೇ ದೊಡ್ಡ ಜಾಹೀರಾತುಗಳ ಆಡಂಬರವಿಲ್ಲದೆ, ಕೇವಲ ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದವರ ಬಾಯಿಮಾತಿನ ಪ್ರಚಾರದಿಂದಲೇ ಇಂದು ದೇಶ-ವಿದೇಶಗಳಿಂದ ರೋಗಿಗಳು ಈ ಗ್ರಾಮೀಣ ಭಾಗದ ಸಂಸ್ಥೆಯನ್ನು ಹುಡುಕಿಕೊಂಡು ಬರುತ್ತಿದ್ದಾರೆ” ಎಂದು ಶಾಸಕರು ಮೆಚ್ಚುಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿಗಳಾದ ದಿಲೀಪ್ ಕುಮಾರ್, ಖ್ಯಾತ ವೈದ್ಯ ಅತುಲ್ ಕುಮಾರ್ ಶೆಟ್ಟಿ, ಕಾಳಿಕಾಂಬ ದೇವಸ್ಥಾನ ಮೊಕ್ತೇಸರರು ಚಂದ್ರಯ್ಯ ಆಚಾರ್ಯ, ಚಿತ್ರಕೂಟ ಮುಖ್ಯಸ್ಥರಾದ ಡಾ. ರಾಜೇಶ್ ಬಾಯರಿ ಮತ್ತು ಡಾ. ಅನುಲೇಖಾ ಬಾಯರಿ ಉಪಸ್ಥಿತರಿದ್ದರು. ಪತ್ರಕರ್ತ ಪ್ರಭಾಕರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಅಳಿವಿನ ಅಂಚಿನಲ್ಲಿರುವ ಗಿಡಮೂಲಿಕೆಗಳ ಸಂರಕ್ಷಣೆ:
ಬೇರೆಲ್ಲೂ ಸುಲಭವಾಗಿ ಸಿಗದ ಅತ್ಯಪೂರ್ವ ಮತ್ತು ಅಳಿವಿನ ಅಂಚಿನಲ್ಲಿರುವ ಔಷಧೀಯ ಸಸ್ಯಗಳನ್ನು ಕಲೆಹಾಕಿ ಈ ವನದಲ್ಲಿ ಸಂರಕ್ಷಿಸಲಾಗಿದೆ. ಯಾವುದೇ ರಾಸಾಯನಿಕಗಳು ಸೇರದ, ಸಂಪೂರ್ಣ ನೈಸರ್ಗಿಕ ಗಿಡಮೂಲಿಕೆಗಳಿಂದಲೇ ರೋಗಿಗಳಿಗೆ ಶುದ್ಧ ಆಯುರ್ವೇದ ಚಿಕಿತ್ಸೆ ನೀಡಬೇಕು ಮತ್ತು ಇಡೀ ಜಗತ್ತಿಗೆ ಉತ್ತಮ ಆರೋಗ್ಯವನ್ನು ಕರುಣಿಸಬೇಕು ಎನ್ನುವುದು ಚಿತ್ರಕೂಟ ಸಂಸ್ಥೆಯ ಮುಖ್ಯಸ್ಥರಾದ ಖ್ಯಾತ ಆಯುರ್ವೇದ ತಜ್ಞ ಡಾ. ರಾಜೇಶ್ ಬಾಯರಿ ಅವರ ಕನಸಾಗಿದೆ. ಪ್ರಸ್ತುತ ಬಾಯರಿ ಅವರ ವೈದ್ಯರ ತಂಡವು ಇದೇ ಉದ್ಯಾನವನದ ಹಲವಾರು ಅಮೂಲ್ಯ ಗಿಡಮೂಲಿಕೆಗಳನ್ನು ಬಳಸಿಕೊಂಡು ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುತ್ತಿದೆ.

ಸಾರ್ವಜನಿಕ ಜಾಗೃತಿ:
ಚಿತ್ರಕೂಟ ಆಯುರ್ವೇದ ಆಸ್ಪತ್ರೆಗೆ ಪ್ರತಿವರ್ಷ ನೂರಾರು ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಪ್ರಕೃತಿ-ಆಯುರ್ವೇದ ಆಸಕ್ತರು ಕ್ಷೇತ್ರ ವೀಕ್ಷಣೆಗೆ ಆಗಮಿಸುತ್ತಾರೆ. ಇಲ್ಲಿಗೆ ಬರುವ ಆಸಕ್ತರು ವಿವಿಧ ಔಷಧೀಯ ಸಸ್ಯಗಳನ್ನು ನೇರವಾಗಿ ವೀಕ್ಷಿಸಿ, ಅವುಗಳ ಔಷಧೀಯ ಗುಣಗಳು, ರೋಗ ನಿರೋಧಕ ಶಕ್ತಿ ಹಾಗೂ ಆರೋಗ್ಯದ ದೃಷ್ಟಿಯಿಂದ ಅವುಗಳ ಮಹತ್ವವನ್ನು ಪ್ರಾಯೋಗಿಕವಾಗಿ ತಿಳಿದುಕೊಳ್ಳಲು ಈ ಉದ್ಯಾನವನ ಅತ್ಯುತ್ತಮ ವೇದಿಕೆಯಾಗಿದೆ.

ಕೇವಲ ಆಸ್ಪತ್ರೆಯ ಆವರಣಕ್ಕೆ ಮಾತ್ರ ಸೀಮಿತವಾಗದೆ, ಸಾರ್ವಜನಿಕರಲ್ಲಿ ಪರಿಸರ ಹಾಗೂ ಆರೋಗ್ಯದ ಜಾಗೃತಿ ಮೂಡಿಸುವುದು ಈ ವನದ ಮುಖ್ಯ ಉದ್ದೇಶವಾಗಿದೆ. ಇಲ್ಲಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಸಸ್ಯಗಳನ್ನು ಮನೆಮಟ್ಟದಲ್ಲಿ ತುರ್ತು ಚಿಕಿತ್ಸೆಗೆ ಹೇಗೆ ಬಳಸಬಹುದು, ಅವುಗಳಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳೇನು ಹಾಗೂ ಪ್ರತಿಯೊಬ್ಬರೂ ತಮ್ಮ ಮನೆಯ ಕೈದೋಟದಲ್ಲಿ ಇವುಗಳನ್ನು ಹೇಗೆ ಸುಲಭವಾಗಿ ಬೆಳೆಸಬಹುದು ಎಂಬುದರ ಬಗ್ಗೆ ಚಿತ್ರಕೂಟದ ತಜ್ಞರು ಪ್ರಾಯೋಗಿಕ ಮಾಹಿತಿ ನೀಡುತ್ತಾರೆ.

ಪ್ರಕೃತಿ ಮತ್ತು ಪ್ರಾಣಶಕ್ತಿಯ ಸಂಯೋಜನೆಯಂತಿರುವ ಈ ಚಿತ್ರಕೂಟ ಔಷಧಿ ವನವು ಕರಾವಳಿ ಭಾಗದಲ್ಲಿ ಪರಿಸರ ಸಂರಕ್ಷಣೆ ಮತ್ತು ಆಯುರ್ವೇದ ವೈದ್ಯಕೀಯ ಕ್ಷೇತ್ರಕ್ಕೆ ಸಂದ ಬಹುದೊಡ್ಡ ಕೊಡುಗೆಯಾಗಿ ಮೂಡಿಬಂದಿದೆ ಎಂದು ಗಣ್ಯರು ಹಾಗೂ ಸಾರ್ವಜನಿಕರು ಪ್ರಶಂಸಿಸಿದ್ದಾರೆ.

ವನ ಮತ್ತು ಆಯುರ್ವೇದ ಚಿಕಿತ್ಸೆ ಕುರಿತು ಹೆಚ್ಚಿನ ಮಾಹಿತಿಗಾಗಿ 8762220168 ಸಂಪರ್ಕಿಸಬಹುದು.

 

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!