spot_img
Monday, March 16, 2026
spot_img

ವಿಜಯೇಂದ್ರ ವಿರುದ್ಧ ಮುಗಿಯದ ಭಿನ್ನರ ಯುದ್ಧ

ಪಕ್ಷದ ಶುದ್ಧೀಕರಣಕ್ಕೆ ಮುಂದಾಗದ ಬಿಜೆಪಿ ಹೈಕಮಾಂಡ್‌ | ಬಂಡಾಯ ತೀವ್ರ

 ಗ್ಯಾರಂಟಿ ಯೋಜನೆಗಳ ಫಲವಾಗಿ ರಾಜ್ಯದಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್‌ ಸರ್ಕಾರವನ್ನು ಹೇಗಾದರೂ ಮಾಡಿ ತಲೆಕೆಳಗಾಗುವಂತೆ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದ ರಾಜ್ಯ ಬಿಜೆಪಿಯ ಬುಡವೇ ಈಗ ಅಲ್ಲಾಡುತ್ತಿದೆ. ವಿಪಕ್ಷವಾಗಿ ಆಡಳಿತ ಸರ್ಕಾರದ ವೈಫಲ್ಯವನ್ನು ಎತ್ತಿ ಹಿಡಿಯಬೇಕಿದ್ದ ಬಿಜೆಪಿ ತನ್ನೊಳಗಿನ ಭಿನ್ನಮತವನ್ನು ಸರಿಪಡಿಸಿಕೊಳ್ಳುವುದಕ್ಕಾಗಿಯೇ ಹರಸಾಹಸ ಪಡುತ್ತಿರುವುದು ಹಾಸ್ಯಾಸ್ಪದವೇ ಸರಿ.

ನೇರ ಮಾರ್ಗವೋ ಅಥವಾ ವಾಮ ಮಾರ್ಗವೋ ಅದು ಏನೇ ಇರಲಿ, ಪಕ್ಷ ಸಂಘಟನೆಯ ವಿಚಾರದಲ್ಲಿ ಬಿಜೆಪಿ ಮಾಡುವ ಕಾರ್ಯತಂತ್ರವನ್ನು ಕಾಂಗ್ರೆಸ್‌ ಕೂಡ ಬೆರಗು ಕಣ್ಣಿಂದ ಕಾಣುತ್ತದೆ. ಆದರೆ, ಈಗ ಬಿಜೆಪಿಯೊಳಗಿನ ನಾಯಕತ್ವದ ಬಗೆಗಿನ ಬೀದಿ ರಂಪಾಟವನ್ನು ನೋಡಿ ಇವರಿಗಿಂತ ನಾವೇ ಪರವಾಗಿಲ್ಲ ಎಂಬಂತೆ ಕಾಂಗ್ರೆಸ್‌ ಮುಸಿ ಮುಸಿ ನಗುತ್ತಿದೆ ಎಂದನ್ನಿಸುತ್ತಿದೆ. ವಾಸ್ತವ ಏನೆಂದರೆ, ಪಕ್ಷದ ಸಂಘಟನೆಯ ವಿಚಾರದಲ್ಲಿ, ಕಾರ್ಯಕರ್ತರನ್ನು ಜೋಡಿಸುವುದರಲ್ಲಿ ಬಿಜೆಪಿ ಕಾಂಗ್ರೆಸ್‌ಗಿಂತಲೂ ಒಂದು ಹಂತ ಮೇಲೆಯೇ ಇದೆ. ಆದರೆ, ನಾಯಕತ್ವದ ವಿಚಾರದಲ್ಲಿ ಸಂಪೂರ್ಣ ಶಿಸ್ತು ಕಳೆದುಕೊಂಡಿದೆ ಎನ್ನುವುದು ರಾಜಕೀಯ ವಲಯದ ಅಭಿಪ್ರಾಯ.

ಇಂತಹ ಸ್ಥಿತಿಯಲ್ಲೂ ನಾಯಕತ್ವ, ನೇತೃತ್ವದ ವಿಚಾರದಲ್ಲಿ ರಾಜ್ಯ ಬಿಜೆಪಿಯನ್ನು ಶುದ್ಧೀಕರಣ ಮಾಡುವ ಯೋಚನೆಯಲ್ಲಿಯೂ ಬಿಜೆಪಿ ಹೈಕಮಾಂಡ್‌ ಇದ್ದಂತೆ ಕಾಣಿಸುತ್ತಿಲ್ಲ. ಅಧಿಕಾರದಲ್ಲಿದ್ದಾಗಲೂ, ವಿಪಕ್ಷದಲ್ಲಿದ್ದಾಗಲೂ ರಾಜ್ಯ ಬಿಜೆಪಿ ನಾಯಕರಿಗೆ ನಾಯಕತ್ವ ಅಥವಾ ಜವಾಬ್ದಾರಿಯ ಅಮಲು ತುಸು ಹೆಚ್ಚೇ ಇದೆ. ಬಹುಶಃ ಎಲ್ಲಾ ಕಡೆ, ಎಲ್ಲಾ ಪಕ್ಷಗಳಲ್ಲಿಯೂ ಈ ನಾಯಕತ್ವ ವಹಿಸಿಕೊಳ್ಳುವ ಗೀಳು ಸಾಮಾನ್ಯ. ಆದರೆ ರಾಜ್ಯ ಬಿಜೆಪಿಯಲ್ಲಿ ಅದು ಒಂದು ರೀತಿಯಲ್ಲಿ ರೋಗ. ತಳಮಟ್ಟದ ರಾಜಕಾರಣದಲ್ಲಿ ಎಲ್ಲಾ ವರ್ಗದ ಅರ್ಹ ಕಾರ್ಯಕರ್ತರನ್ನು ಗುರುತಿಸುವ, ಜವಾಬ್ದಾರಿ ನೀಡುವ ಬಿಜೆಪಿಯಲ್ಲಿ ಮೇಲ್ಮಟ್ಟದಲ್ಲಿ ಹಿರಿಯ, ಕಿರಿಯರ ನಡುವೆ ಸಮನ್ವಯ ಇಲ್ಲ ಎನ್ನುವುದು ಎದ್ದು ಕಾಣುತ್ತಿದೆ. ಈಗ ಈ ಕುರಿತಾಗಿ ಬಿಜೆಪಿಯ ತಳಮಟ್ಟದ ಕಾರ್ಯಕರ್ತರಲ್ಲಿಯೂ ಸಿಟ್ಟೆದ್ದಿದೆ. ಮೂಲ ಬಿಜೆಪಿಗರು, ಆರ್‌ಎಸ್‌ಎಸ್‌ ಮೂಲದವರು, ಹೊರಗಿನಿಂದ ಬಂದವರು, ಪ್ರಭಾವ ಮತ್ತು ಕೃಪಾಶೀರ್ವಾದದಿಂದ ಮೇಲ್ಪಂಕ್ತಿಯ ರಾಜಕಾರಣಕ್ಕೆ ಬಂದವರು, ಅಧಿಕಾರ ಹಿಡಿದವರು, ಜವಾಬ್ದಾರಿ ವಹಿಸಿಕೊಂಡವರ ಕಾರಣದಿಂದ ಕಾರ್ಯಕರ್ತರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದಕ್ಕೆ ಬಿಜೆಪಿ ವಿಫಲವಾಗುತ್ತಿದೆ. ಆದಾಗ್ಯೂ, ಬಿಜೆಪಿಯ ಕಾರ್ಯಕರ್ತರಲ್ಲಿ ಹಿಂದುತ್ವದ ಕಿಚ್ಚು ಹೇರಳವಾಗಿ ಇರುವುದರಿಂದ ಈ ನಾಯಕತ್ವಕ್ಕಾಗಿ ಬಡಿದಾಡುವ ಎಲ್ಲಾ ನಾಯಕರನ್ನು ದಿವ್ಯ ನಿರ್ಲಕ್ಷ್ಯ ಮಾಡಿ ಪಕ್ಷಕ್ಕಾಗಿ ದುಡಿಯುವ ಗುಣವಿದೆ. ಇದರಿಂದಲೇ ಬಿಜೆಪಿಯ ಪ್ರಭಾವಿ ನಾಯಕರು ರಾಜಕಾರಣ ಮಾಡತ್ತಿದ್ದಾರೆ.

ರಾಜ್ಯ ಬಿಜೆಪಿಯ ಶುದ್ಧೀಕರಣದ ಚರ್ಚೆ ಈಗ ಸ್ವಪಕ್ಷೀಯರಿಂದಲೇ ಮತ್ತೆ ಮೇಲೆದ್ದಿದೆ. ರಾಜ್ಯ ಬಿಜೆಪಿಯಲ್ಲಂತೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ಕೃಪಾಶೀರ್ವಾದದಿಂದಲೇ ಕೋಟೆ ಕಟ್ಟಿದ ಅನೇಕ ನಾಯಕರಿದ್ದಾರೆ. ಅದು ಮೂಲ ಬಿಜೆಪಿಗರಿಗೆ, ಆರ್‌.ಎಸ್‌.ಎಸ್‌ ಮೂಲದವರಿಗೆ ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಹಿಂದಿನಿಂದಲೂ ಕಾರ್ಯಕರ್ತರ ಪಕ್ಷ ಎಂದು ಗುರುತಿಸಿಕೊಂಡಿರುವ ಬಿಜೆಪಿಯಲ್ಲಿ ಬೆಳೆದ ನಾಯಕರಿಗೆ ಒಬ್ಬ ವ್ಯಕ್ತಿ ಪಕ್ಷಕ್ಕಿಂತ ʼಸುಪ್ರೀಂʼ ಆಗುವುದು ಸುತಾರಾಂ ಇಷ್ಟವಿಲ್ಲ. ನಿಧಾನಕ್ಕೆ ಭಿನ್ನಮತ ಮೇಲೆದ್ದಿತು. ಗುಂಪುಗಾರಿಕೆ ಮುನ್ನೆಲೆಗೆ ಬಂದಿದ್ದಷ್ಟೇ ಅಲ್ಲ ಬೀದಿಗೆ ಬಂತು.

ರಾಜ್ಯ ಬಿಜೆಪಿಯಲ್ಲಿ ಈಗ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿರುವ ವಿಜಯೇಂದ್ರ ಯಡಿಯೂರಪ್ಪ ಅವರ ಮೇಲಿನ ಸಿಟ್ಟು ಬಿಜೆಪಿಯನ್ನು ಮೂರು ನಾಲ್ಕು ಗುಂಪುಗಳಾಗಿ ಬೇರ್ಪಡುವಂತೆ ಮಾಡಿದೆ. ಈ ಭಿನ್ನಮತ ಚಾಲ್ತಿಯಲ್ಲಿಟ್ಟುಕೊಂಡೇ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನದಲ್ಲಿಯೇ ಎಲ್ಲಾ ಬಿಜೆಪಿ ನಾಯಕರೂ ಇದ್ದಾರೆ. ಅದೇ ರಾಜ್ಯ ರಾಜಕಾರಣದ ʼಸ್ಪಾಟ್‌ಲೈಟ್ʼ. ಪಕ್ಷದಲ್ಲಿ ಹಿರಿಯವರೆಂದೆನ್ನಿಸಿಕೊಂಡವರೇ ವರಿಷ್ಠರೊಂದಿಗೆ ಲಾಬಿಗೆ ಇಳಿದು ಸಣ್ಣತನ ತೋರಿಸುತ್ತಿರುವಾಗ ಈ ಸಮಸ್ಯೆಗಳು ಸರಿಯಾಗುವುದಾದರೂ ಹೇಗೆ ? ಹೈಕಮಾಂಡ್‌ ಕೂಡ ಈ ಬಗ್ಗೆ ಜಾಣ ಮೌನ ವಹಿಸಿದೆ.

ಬಿಜೆಪಿಯ ಶಿಸ್ತು ಸಮಿತಿಯಾಗಲಿ, ಕೇಂದ್ರ ಸಂಸದೀಯ ಮಂಡಳಿಯಾಗಲಿ ಈ ಗೊಂದಲಗಳ ಬಗ್ಗೆ ಮಾತಾಡುತ್ತಿಲ್ಲ. ಹೆಚ್ಚಾಗಿ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರಾಗಿರುವ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಅವರ ಮೇಲೆಯೇ ಇರುವ ಅಸಮಧಾನವಾಗಿರುವುದರಿಂದ  ಆ ಪ್ರಭಾವವೂ ಇಲ್ಲಿ ಕೆಲಸ ಮಾಡುತ್ತಿದೆ. ಮಿಗಿಲಾಗಿ ರಾಜ್ಯದಲ್ಲಿ ಈಗ ಚುನಾವಣೆಯ ಸಂದರ್ಭವೇನೂ ಅಲ್ಲ. ಹಾಗಾಗಿ ಜಗಳ ಮಾಡುವಷ್ಟು ಮಾಡಲಿ ಎಂದು ಹೈಕಮಾಂಡ್‌ ಸುಮ್ಮನಾಗಿರುವಂತಿದೆ.  ಇಂತಹ ಸಂದರ್ಭದಲ್ಲಿ ಯಾವ ಗುಂಪಿನ ಪರವಾಗಿಯೂ ತೀರ್ಮಾನ ತೆಗೆದುಕೊಳ್ಳುವುದು ಕೂಡ ಹೈಕಮಾಂಡ್‌ ಗೆ ಕಷ್ಟದ ಸಂಗತಿ. ಎಲ್ಲಾ ಗುಂಪಿನ ನಾಯಕರಿಗೆ ತಮ್ಮದೇ ಆದ ರಾಜಕೀಯ ಪ್ರಭಾವ ರಾಜ್ಯದಲ್ಲಿದೆ. ಹಾಗಾಗಿ ಈ ಸಮಸ್ಯೆ ತಾನಾಗಿಯೇ ಬಗೆಹರಿಯಲಿ ಎಂದು ಕಾದು ನೋಡುವ ತಂತ್ರದಲ್ಲಿ ಹೈಕಮಾಂಡ್‌ ಇದೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರ ನಡುವಿನ ಸಿಎಂ ಪದವಿ ಹಸ್ತಾಂತರ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್‌ ಪಾಳಯದಲ್ಲಿ ಮೇಲೆದ್ದಿದ್ದ ಭಿನ್ನಮತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರ ಒಂದೇ ಒಂದು ಖಡಕ್ ಎಚ್ಚರಿಕೆಯಿಂದ ತಣ್ಣಗಾಯಿತು. ಆದರೇ, ಬಿಜೆಪಿಯಲ್ಲಿ ಎಚ್ಚರಿಕೆ ಕೊಡುವವರೂ ಇಲ್ಲದಂತಾಗಿದೆ. ಎಚ್ಚರಿಕೆ ಕೊಡುವವರ ವಿರುದ್ಧವೇ ಬಿಜೆಪಿಯಲ್ಲಿ ಬಣ ರಾಜಕೀಯ ಸೃಷ್ಟಿಯಾಗಿರುವುದರಿಂದ ಇಲ್ಲಿನ ಪರಿಸ್ಥಿತಿ ಕಾಂಗ್ರೆಸ್‌ಗಿಂತ ಭಿನ್ನ. ಹಾಗಾಗಿ ಬಿಜೆಪಿ ತನ್ನ ಸಂಪೂರ್ಣ ಶಿಸ್ತನ್ನು ಕಳೆದುಕೊಂಡಿದೆ ಎಂದೇ ಹೇಳಬೇಕು.

ಬಿಜೆಪಿಯಲ್ಲಿ ಎರಡು ಹಂತದಲ್ಲಿ ಶುದ್ಧೀಕರಣ ಆಗಬೇಕಿರುವ ಅನಿವಾರ್ಯತೆ ಇದೆ. ಒಂದು ವಿಜಯೇಂದ್ರ ವಿಜಯೇಂದ್ರ ವಿರುದ್ಧ ಬಹಿರಂಗ ಸಮರ ಸಾರಿರುವ ಶಾಸಕ ಬಸವನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ, ಹರೀಶ್ ಮೊದಲಾದವರ ಜತೆಗೆ ಇದೀಗ ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದ ಗೌಡ, ಆರ್. ಅಶೋಕ್ ಸೇರಿದಂತೆ ಪ್ರಮುಖ ಮುಖಂಡರು ಸಮರಕ್ಕೆ ಮುಂದಾಗಿರುವುದರ ಬಗ್ಗೆ, ಮತ್ತೊಂದು ಪಕ್ಷದಲ್ಲಿದ್ದೂ ಕಾಂಗ್ರೆಸ್ ಗೆ ನಿಷ್ಠೆ ವ್ಯಕ್ತಪಡಿಸಿರುವ ಎಸ್.ಟಿ.ಸೋಮಶೇಖರ್, ಶಿವರಾಮ ಹೆಬ್ಬಾರ್ ಮತ್ತು ಆಚೆಗೂ ಇಲ್ಲ, ಈಚೆಗೂ ಇಲ್ಲ ಎಂದು ಪಕ್ಷದ ಒಳಗೆ ಆಗುತ್ತಿರುವ ಗೊಂದಲಗಳನ್ನು ವರಿಷ್ಠರಿಗೆ ಮುಟ್ಟಿಸದೇ ಸುಮ್ಮನೆ ಆಟ ನೋಡುತ್ತಿರುವವರನ್ನೂ ಶುದ್ದೀಕರಣ ಮಾಡಬೇಕಿದೆ.

ಯಡಿಯೂರಪ್ಪ ಅವರ ಶಿಫಾರಸ್ಸಿನ ಮೇರೆಗೆ ರಾಜ್ಯದ ಬಿಜೆಪಿಯ ವಿಷಮ ಸ್ಥಿತಿಯಲ್ಲಿ ಮುಖ್ಯಮಂತ್ರಿ ಪದವಿಗೆ ಏರಿದ ಬಸವರಾಜ್‌ ಬೊಮ್ಮಾಯಿ ನೇತೃತ್ವದಲ್ಲಿ ಮತ್ತೊಂದು ಗುಂಪು ಕ್ರಿಯಾಶೀಲವಾಗಿದೆ. ಸಂಘ ಪರಿವಾರ ಅಥವಾ ಬಿಜೆಪಿಯ ಹಿನ್ನೆಲೆ ಇಲ್ಲದಿದ್ದರೂ ಬಸವರಾಜ್ ಬೊಮ್ಮಾಯಿ ಸದ್ಯದ ಪರಿಸ್ಥಿತಿಯಲ್ಲಿ ಆಚೆಗೂ ಇಲ್ಲ, ಈಚೆಗೂ ಇಲ್ಲ ಎಂಬಂತಿರುವ ರಾಜ್ಯ ಬಿಜೆಪಿ ಹೊಸ ಗುಂಪಿನ ನೇತೃತ್ವ ವಹಿಸಿಕೊಂಡಿರುವುದರ ಹಿಂದೆ ಹೊಸ ಲೆಕ್ಕಾಚಾರಗಳು ಹೇರಳವಾಗಿ ಕಾಣಿಸುತ್ತಿವೆ.

ರಾಜ್ಯ ಬಿಜೆಪಿಗೆ ಲಿಂಗಾಯತ ಮತಗಳೇ ಆಸರೆ. ಬಸವರಾಜ್‌ ಬೊಮ್ಮಾಯಿ ಕೂಡ ಲಿಂಗಾಯತ ಸಮುದಾಯದವರೇ ಆಗಿದ್ದಾರೆ. ಸದ್ಯ ಅಧ್ಯಕ್ಷರಾಗಿರುವ ವಿಜಯೇಂದ್ರ ಯಡಿಯೂರಪ್ಪ ಕೂಡ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಬಿಜೆಪಿಯೊಂದಿಗಿನ ರಾಜಕಾರಣದ ಮಾರ್ಗದರ್ಶಕರಾಗಿದ್ದ ಯಡಿಯೂರಪ್ಪ ಅವರನ್ನು ನೇರವಾಗಿ ಎದರು ಹಾಕಿಕೊಳ್ಳುವುದಕ್ಕೆ  ಬೊಮ್ಮಾಯಿ ಅವರಿಗೆ ಸಾಧ್ಯವಿಲ್ಲ. ಹಾಗಾಗಿ ತಟಸ್ಥ ನಿಲುವಿನೊಂದಿಗೆ ಇದ್ದು, ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರ ವಿರುದ್ಧ ಬಂಡಾಯ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪ ಪಡೆದರೆ, ಲಾಭ ಪಡೆದುಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ಬೊಮ್ಮಾಯಿ ಇದ್ದಿರಬಹುದು ಎಂದು ಕಾಣಿಸುತ್ತಿದೆ. ಇಲ್ಲವಾದರೇ, ಸಂಸದರಾಗಿರುವಾಗ ವರಿಷ್ಠರಿಗೆ ಇಲ್ಲಿನ ಸಮಸ್ಯೆಗಳನ್ನು ಹೇಳಿ ಸರಿಪಡಿಸಬಹುದಲ್ಲವೇ ? ಹೇಳಿ ಸರಿಪಡಿಸುವ ಸ್ಥಾನದಲ್ಲಿದ್ದುಕೊಂಡವರೇ ತಮಗಾಗುವ ಲಾಭಕ್ಕಾಗಿ ಕಾದು ಕುಳಿತಿದ್ದಾರೆ.

ಇನ್ನು, ಸದ್ಯದ ಮಟ್ಟಿಗೆ ಯಡಿಯೂರಪ್ಪ ಅವರನ್ನು ವಿರೋಧ ಕಟ್ಟಿಕೊಂಡು ವರಿಷ್ಠರು ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳೂ ತೀರಾ ಕಡಿಮೆ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿನ ಬಿಕ್ಕಟ್ಟು ಸದ್ಯಕ್ಕೆ ಬಗೆ ಹರಿಯುವ ಲಕ್ಷಣಗಳಂತೂ ಕಾಣಿಸುತ್ತಿಲ್ಲ. ಇಂತಹ ವಿಷಮ ಸ್ಥಿತಿಯಲ್ಲಿ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಪಕ್ಷದ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ವಿಚಾರದಲ್ಲಿ ವಿಜಯೇಂದ್ರ ಎಡವುತ್ತಿದ್ದಾರೆ. ಹಿರಿಯ ನಾಯಕರೊಂದಿಗೆ ಸಮನ್ವಯ ಕಾಯ್ದುಕೊಳ್ಳದೆ ತಮ್ಮದೇ ದಾರಿಯಲ್ಲಿ, ತಂದೆಯ ಕೃಪಾಶೀರ್ವಾದದ ಧೈರ್ಯದಲ್ಲಿ ನಡೆಯುತ್ತಿರುವುದು ಅವರ ಭವಿಷ್ಯದ ಮೇಲೆಯೇ ಕೆಟ್ಟ ಪರಿಣಾಮ ಬೀರಲಿದೆ ಎನ್ನುವುದು ಅವರಿಗೆ ತಿಳಿದಿಲ್ಲ ಎಂದು ನೇರವಾಗಿ ಕಾಣಿಸುತ್ತಿದೆ. ಏನೇ ಆಗಲಿ, ಒಟ್ಟಿನಲ್ಲಿ ರಾಜ್ಯ ಬಿಜೆಪಿಯ ಭವಿಷ್ಯದ ಬಗ್ಗೆ ದೊಡ್ಡ ಕುತೂಹಲವಂತೂ ಇದೆ.

ಶ್ರೀರಾಜ್‌ ವಕ್ವಾಡಿ  

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!