Tuesday, October 22, 2024

ಬಿ.ಅಪ್ಪಣ್ಣ ಹೆಗ್ಡೆಯವರ 90ನೇ ಜನ್ಮದಿನಾಚರಣೆಯ ಸಾರ್ವಜನಿಕ ಸಂಭ್ರಮಾಚರಣೆ: ಪೋಸ್ಟರ್ ಅನಾವರಣ

ಬಸ್ರೂರು, ಅ.4: ಮನುಷ್ಯ ಜನ್ಮ ಶ್ರೇಷ್ಠವೆಂದು ಪರಿಗಣಿಸುತ್ತೇವೆ. ಈ ಜನ್ಮದಲ್ಲಿ ಸಮಾಜ ಸೇವೆ ಮಾಡುವ ಮೂಲಕ ಭಗವಂತನಿಗೆ ತೆರಿಗೆ ಪಾವತಿಸುತ್ತೇವೆ. ಆ ಮೂಲಕ ಭಗವಂತನ ಅನುಗ್ರಹ ಸಿದ್ಧಿಸುತ್ತದೆ. ಅಪ್ಪಣ್ಣ ಹೆಗ್ಡೆಯವರು ಜನಸೇವೆಯಲ್ಲಿ ಸಾರ್ಥಕತೆ ಕಂಡುಕೊಂಡವರು. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ, ಜನಸಂಪತ್ತು ಗಳಿಸಿದವರು. ಅವರ 90ನೇ ಜನ್ಮದಿನಾಚರಣೆಯನ್ನು ಆಚರಿಸುವುದು ಅತ್ಯಂತ ಮಹತ್ವದ್ದು ಎಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ ಹೇಳಿದರು.
ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಬಿ.ಅಪ್ಪಣ್ಣ ಹೆಗ್ಡೆ ಜನ್ಮದಿನೋತ್ಸವ ಸಮಿತಿ ಹಾಗೂ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ರಿ., ಬಸ್ರೂರು ಪ್ರಸ್ತುತಿಯಲ್ಲಿ ಡಿ.24ರಂದು ನಡೆಯಲಿರುವ ಬಿ.ಅಪ್ಪಣ್ಣ ಹೆಗ್ಡೆಯವರ 90ನೇ ಜನ್ಮದಿನಾಚರಣೆಯ ಸಾರ್ವಜನಿಕ ಸಂಭ್ರಮಾಚರಣೆ ಕಾರ್ಯಕ್ರಮದ ಪೋಸ್ಟರ್ ಅನಾವರಣ ಸಡಗರ ಕಾರ್ಯಕ್ರಮದಲ್ಲಿ ಪೋಸ್ಟರ್ ಅನಾವರಣಗೊಳಿಸಿ ಮಾತನಾಡಿದರು.
ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ ಅಪ್ಪಣ್ಣ ಹೆಗ್ಡೆಯವರ ಜನರ ನಡುವೆ ಬದುಕುತ್ತಿರುವ ವ್ಯಕ್ತಿ. ಯಾರಿಗೂ ಕೇಡು ಬಯಸದೆ ಬದುಕುತ್ತಿದ್ದಾರೆ. ಅವರ ಜೀವನ ಮೌಲ್ಯ, ಸೇವೆ ಎಲ್ಲರಿಗೂ ಮಾದರಿಯಾಗಿದೆ. ತನ್ನ ಜೀವಿತದ 90ನೇ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ನಡೆಯುವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಲಿ ಎಂದರು.
ಬಸ್ರೂರು ಶ್ರೀ ಮಹತೋಬಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಮಾತನಾಡಿ, ನಿರಂತರವಾದ ಚಟುವಟಿಕೆಯೇ ನನ್ನ ಜೀವನದ ಯಶಸ್ಸಿನ ಗುಟ್ಟು. ಸಾರ್ವಜನಿಕರ ಜೊತೆ ಸದಾ ತೊಡಗಿಸಿಕೊಳ್ಳುತ್ತ ಬಂದಿರುವುದರಿಂದ ಎಲ್ಲರ ಪ್ರೀತ್ಯಾದರ ಸಿಕ್ಕಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ನನ್ನ ಯಶಸ್ಸಿಗೆ ಕಾರಣ ಎಂದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಅಪ್ಪಣ್ಣ ಹೆಗ್ಡೆಯವರು ಧಾರ್ಮಿಕವಾದ ಉಡುಪಿ ಜಿಲ್ಲೆಗೆ ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ಅವರ ಪಂಚಾಯಿತಿಕೆಯ ಮೂಲಕವೇ ಹಲವಾರು ಸಮಸ್ಯೆಗಳು ಇತ್ಯರ್ಥವಾಗಿವೆ. ಅವರ ಮಾರ್ಗದರ್ಶನದಲ್ಲಿ ಸಾಕಷ್ಟು ದೇವಸ್ಥಾನ, ದೈವಸ್ಥಾನಗಳು ಜೀರ್ಣೋದ್ಧಾರಗೊಂಡಿವೆ. ಅವರು 90ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಸಂಭ್ರಮದ ವಿಚಾರ ಎಂದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ, ಉದ್ಯಮಿ ಗಿಳಿಯಾರು ಉದಯ ಕುಮಾರ್ ಹೆಗ್ಡೆ, ರಾಮರತನ್ ಹೆಗ್ಡೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೊಲ್ಲೂರು ದೇವಳದ ವ್ಯವಸ್ತಾಪನ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಬಾಬು ಶೆಟ್ಟಿ, ಸದಸ್ಯರಾಗಿ ಆಯ್ಕೆಯಾದ ಸುರೇಂದ್ರ ಶೆಟ್ಟಿ, ರಘುರಾಮ ದೇವಾಡಿಗ ಆಲೂರು ಇವರನ್ನು ಅಪ್ಪಣ್ಣ ಹೆಗ್ಡೆ ಅಭಿನಂದಿಸಿದರು.
ಪತ್ರಕರ್ತ ಕೆ.ಸಿ ರಾಜೇಶ ಕಾರ್ಯಕ್ರಮ ನಿರ್ವಹಿಸಿದರು. ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ವಿಕಾಸ್ ಹೆಗ್ಡೆ ಸ್ವಾಗತಿಸಿದರು. ಜನಸೇವಾ ಟ್ರಸ್ಟಿನ ವಸಂತ ಗಿಳಿಯಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ನರಸಿಂಹ ಪೂಜಾರಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!