spot_img
Friday, March 27, 2026
spot_img

ಸರ್ಕಾರದೊಂದಿಗೆ ಹೊಂದಾಣಿಕೆಗೆ ಒಪ್ಪಿ ಹೇಳುವುದಷ್ಟೆ ಸತ್ಯ ?

-ಶ್ರೀರಾಜ್‌ ವಕ್ವಾಡಿ

 ಸತ್ಯವನ್ನು ಸುಳ್ಳು ಎಂದು ಬಿಂಬಿಸುವ ವ್ಯವಸ್ಥಿತ ಅಜೆಂಡಾಕ್ಕೆ ಬಲಿಯಾದ ಪತ್ರಿಕಾ ಸ್ವಾತಂತ್ರ್ಯ !

ಜಗತ್ತು ನೇರವಂತಿಗೆಯನ್ನು ಅಷ್ಟು ಸುಲಭದಲ್ಲಿ ಒಪ್ಪಿಕೊಳ್ಳುವುದಕ್ಕೆ ಎಂದೂ ಮುಂದಾಗುವುದಿಲ್ಲ. ಸತ್ಯವನ್ನು ಸತ್ಯವೆಂದೆ ಹೇಳುವ ಒಬ್ಬ ವ್ಯಕ್ತಿ ಅಥವಾ ಮಾಧ್ಯಮ ಇಲ್ಲಿ ಹಣೆ ಮೇಲೆ ಲೇಬಲ್‌ ಅಂಟಿಸಿಕೊಳ್ಳುವುದಕ್ಕೆ ಸಿದ್ಧವಾಗಿರಬೇಕು. ವ್ಯವಸ್ಥೆಯ ತಪ್ಪುಗಳನ್ನು, ಸರ್ಕಾರದ ದುರಾಡಳಿತವನ್ನು ಪ್ರಶ್ನಿಸುವುದನ್ನೇ ಇಲ್ಲಿ ದೇಶದ್ರೋಹ ಎಂದು ವ್ಯವಸ್ಥಿತವಾಗಿ ಬಿಂಬಿಸಲಾಗಿದೆ ಎಂದರೇ ನೀವು ನಂಬಲೇಬೇಕು.

ಪ್ರಶ್ನಿಸುವ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಈ ದೇಶ ಉದಯಿಸುವುದಕ್ಕೂ ಹಿಂದಿನಿಂದ ಬಂದ ಒಂದು ಪದ್ಧತಿ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಒಂದು ರೀತಿಯಲ್ಲಿ ಮಾಧ್ಯಮಗಳ ಬಾಯಿಗೆ ಬೀಗ ಹಾಕುತ್ತಿದ್ದರೇ, ಈಗ ಮತ್ತೊಂದು ರೀತಿ. ಮಾಧ್ಯಮಗಳ ಮೇಲೆ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ. ಪತ್ರಿಕಾ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗುತ್ತಿದೆ.  ಸರ್ಕಾರದ ಬಗ್ಗೆ ಬಹಿರಂಗವಾಗಿ ಹೇಳಲು ಧೈರ್ಯ ಮಾಡುವವರ ಮೇಲೂ ಇಂತಹ ದಾಳಿಯನ್ನು ಮಾಡಲಾಗುತ್ತಿರುವುದು ಆತಂಕಕಾರಿಯಾಗಿದೆ. ಮಾಧ್ಯಮಗಳು ಸರ್ಕಾರದ ಕೈಗೊಂಬೆಗಳಲ್ಲ. ಆಡಳಿತದ ಪಕ್ಷದ ತೋಳಲ್ಲಾಡುವ ಮಗುವಲ್ಲ. 

ಸತ್ಯ ಹೇಳುವವರ ವಿರುದ್ಧ ಅವರ ಧ್ವನಿ ಅಡಗಿಸುವುದಕ್ಕೆ ಬೇಕಾಗಿ ಅವರದ್ದೇ ಆದ ಐಟಿ ಸೆಲ್‌ ಗಳಿವೆ, ಅದು ಒಂದು ಪ್ರಯೋಗಾಲಯದಂತೆ ಕಾರ್ಯ ನಿರ್ವಹಿಸುತ್ತದೆ. ಪ್ರಯೋಗಾಲ ಸೃಷ್ಟಿಸಿದ ಪ್ರಯೋಗಗಳು ಹೇಗಿವೆ ಎಂದು ಕೇಳಿದರೆ ʼವಾಟ್ಸ್ಯಾಪ್‌ ಯೂನಿವರ್ಸಿಟಿಗಳು ಕಲಿಸಲಾಗಿರುವ ಇತಿಹಾಸ ಎಷ್ಟಿದೆಯೆಂದರೇ, ದೇಶದ ಎಲ್ಲಾ ಇತಿಹಾಸಕಾರರು ಕಳೆದ ಎಪ್ಪತ್ತು ವರ್ಷಗಳಾವಧಿಯಲ್ಲಿ ಕಲಿಸಿದ ಇತಿಹಾಸಕ್ಕಿಂತಲೂ ಹೆಚ್ಚುʼ (ರವೀಶ್‌ ಕುಮಾರ್‌ ಅವರ ʼದಿ ಫ್ರೀ ವಾಯ್ಸ್‌ʼ ಕೃತಿಯಿಂದ). ಹೌದು, ಸತ್ಯ ಹೇಳಿದರೆ, ಇಲ್ಲಿನ ಎಲ್ಲಾ ದಾಖಲೆಗಳನ್ನು ಉಲ್ಲೇಖಿಸಿ ಹೇಳಿದರೂ ಅದನ್ನು ಒಪ್ಪದೇ ಇರುವಷ್ಟರ ಮಟ್ಟಿಗೆ ಇಲ್ಲಿ ಸುಳ್ಳನ್ನು ಸಾಮಾಜಿಕ ಬುದ್ಧಿಗೆ ಹೇರಲಾಗಿದೆ. ಸುಳ್ಳನ್ನು ಅತಿರಂಜಿಸಿ ಸಾಮಾಜಿಕ ಬುದ್ಧಿಯನ್ನೇ ನಿಷ್ಕ್ರಿಯೆಗೊಳಿಸಲಾಗಿದೆ.  

ಸರ್ಕಾರ ʼಸುಳ್ಳು ಹೇಳುವ ಮಾಧ್ಯಮಗಳನ್ನುʼ ತನ್ನ ತೆಕ್ಕೆಯೊಳಗೆ ತೆಗೆದುಕೊಳ್ಳುತ್ತಲೇ ಬಂದಿದೆ. ಮಾಧ್ಯಮಗಳು ಮತ್ತು ಸರ್ಕಾರಗಳ ಹೊಂದಾಣಿಕೆ ಹೇಗೆ ಬದಲಾಗಿದೆ ಎಂದರೆ, ʼನೀನು ಜಾಹೀರಾತು ಕೊಡು, ನಿನ್ನ ಪರವಾಗಿ ನಾನು ಇರುತ್ತೇನೆʼ ಎಂಬಂತೆ. ಹೀಗೆ ಆಗದೆ, ವಿರುದ್ಧ ನಡೆದರೆ ನಡೆಯುವುದು ಎಲ್ಲವೂ ಪ್ರತಿಕಾರ. ಆದಾಯ ತೆರಿಗೆ (ಐ.ಟಿ.), ಜಾರಿ ನಿರ್ದೇಶನಾಲಯ (ಇ.ಡಿ.) ಥರದ ಸಂಸ್ಥೆಗಳ ಮೂಲಕ ದಾಳಿ ನಡೆಯುತ್ತಿದೆ. ಇತ್ತೀಚೆಗಿನ ವರ್ಷಗಳಲ್ಲಿ ಇಂತಹ ವಿದ್ಯಮಾನಗಳು ಆಗಾಗ್ಗೆ ವರದಿಯಾಗುತ್ತಿವೆ.

ಕಳೆದ ವರ್ಷ ʼ2002ʼರ ಗುಜರಾತ್ ಹತ್ಯಾಕಾಂಡ ಮತ್ತು ಅಂದು ಅಲ್ಲಿದ್ದ ಮೋದಿ ನೇತೃತ್ವದ ಸರ್ಕಾರದ ಒಂದು ಸಿದ್ಧಾಂತದ ಪರವಾದ ಧೋರಣೆಯ ಬಗ್ಗೆ ಎರಡು ಭಾಗಗಳಲ್ಲಿ ಹೊರಬಂದ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ಬಿಬಿಸಿ ನಿರ್ಮಿಸಿದ ಸಾಕ್ಷ್ಯಚಿತ್ರ (ಇಂಡಿಯಾ : ದಿ ಮೋದಿ ಕ್ವೆಶ್ಚನ್) ದೇಶದಲ್ಲಿ ಪ್ರಸಾರ ಆಗದಿರುವಂತೆ ನೋಡಿಕೊಳ್ಳಲಾಯಿತು. ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ವಿವಾದಕ್ಕೆ ಒಳಗಾದ ಗುಜರಾತ್‌ ಹತ್ಯಾಕಾಂಡದ ಆಧಾರಿತ ಸಾಕ್ಷ್ಯಚಿತ್ರವನ್ನು  ನಿರ್ಮಿಸಿದ ಬಿಬಿಸಿ ಸಂಸ್ಥೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ಸರ್ಕಾರವನ್ನು ಪ್ರಶ್ನಿಸುವ, ಸರ್ಕಾರದ ತಪ್ಪನ್ನು ಎತ್ತಿ ತೋರಿಸುವ ಮಾಧ್ಯಮಗಳನ್ನು ನಿರಂತರವಾಗಿ ಇಂತಹ ದಾಳಿಗಳಿಂದ ಉಸಿರು ಗಟ್ಟಿಸುತ್ತಿರುವುದು ವಿಷಾದನೀಯ. ಬಿಬಿಸಿ ಮೇಲಿನ ದಾಳಿಯನ್ನು ಅಂತಾರಾಷ್ಟ್ರೀಯ ತೆರಿಗೆ ಮತ್ತು ವರ್ಗಾವಣೆ ಬೆಲೆಗಳ ಅಕ್ರಮದ ಬಗ್ಗೆ ಸಮೀಕ್ಷೆ ನಡೆಸುತ್ತಿದ್ದು, ಅದರಂತೆ ಬಿಬಿಸಿ ಮೇಲೂ ಆರೋಪ ಕೇಳಿಬಂದ ಕಾರಣದಿಂದ ದಾಳಿ ಮಾಡಲಾಗಿದೆ ಎಂದು ಸರ್ಕಾರ ಸಮರ್ಥನೆ ತೆಗೆದುಕೊಂಡಿತ್ತು. ಹೀಗೆ ಪತ್ರಕರ್ತರ ಬಂಧನ, ಪತ್ರಿಕಾ ಸಂಸ್ಥೆಗಳ ಮೇಲೆ ಐ.ಟಿ. ಮತ್ತು ಇ.ಡಿ. ದಾಳಿ ಮಾಡುತ್ತಲೇ ಬಂದಿದೆ.

ನ್ಯಾಷನಲ್ ಹೆರಾಲ್ಡ್‌ ಮೇಲೆ ಇ.ಡಿ. ರೈಡ್‌ ನನ್ನು ನಾವು ನೆನಪಿಸಿಕೊಳ್ಳಬೇಕು. ಬಳಕೆಯಲ್ಲಿ ಇಲ್ಲದ ಮಾಧ್ಯಮ ಸಂಸ್ಥೆಯ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಂಡು ಸುಮಾರು 2,000 ಕೋಟಿ ರೂ ಲಾಭ ಹಾಗೂ ಆಸ್ತಿ ಸಂಪಾದಿಸಲು ಯಂಗ್ ಇಂಡಿಯಾ ಲಿ. ವಾಮಮಾರ್ಗ ಅನುಸರಿಸಿದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದರು.

ಕಾಂಗ್ರೆಸ್ ಪಕ್ಷ ಮಾಲೀಕತ್ವದ ಎಜೆಎಲ್ ಅನ್ನು 90.25 ಕೋಟಿ ರೂ ಮೌಲ್ಯದ ಆಸ್ತಿಯ ಹಕ್ಕಗಳನ್ನು ಪಡೆದುಕೊಳ್ಳಲು ವೈಐಎಲ್ ಕೇವಲ 50 ಲಕ್ಷ ರೂ ಪಾವತಿಸಿತ್ತು. ಸುದ್ದಿ ಪತ್ರಿಕೆ ಆರಂಭಿಸಲು ಸಾಲವಾಗಿ ಆರಂಭದಲ್ಲಿ ಈ ಹಣ ನೀಡಲಾಗಿತ್ತು. ಎಜೆಎಲ್‌ಗೆ ನೀಡಿದ ಸಾಲವು ಅಕ್ರಮವಾಗಿದೆ. ಏಕೆಂದರೆ ಅದನ್ನು ಪಕ್ಷದ ನಿಧಿಯಿಂದ ಬಳಸಲಾಗಿದೆ ಎಂದು ದೂರಿನಲ್ಲಿ ಅವರು ಹೇಳಿದ್ದರು.

ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮೇಲೆ ಇ.ಡಿ. ದಾಳಿ ಮಾಡಿತ್ತು. ಮನಿಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಳೆದ ವರ್ಷ ಕಾಂಗ್ರೆಸ್ ನಾಯಕರಿಗೆ ಸಮನ್ಸ್ ಜಾರಿ ಮಾಡಿದ್ದರು. ರಾಹುಲ್‌ ಗಾಂಧಿ, ಸೋನಿಯಾ ಗಾಂಧಿಯವರು ವಿಚಾರಣೆಗೂ ಹಾಜರಾಗಿದ್ದರು.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಒಡೆತನದಲ್ಲಿದ್ದು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಪ್ರಕಟಿಸುತ್ತಿದೆ. ಇದರ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಾಜ್ಯಸಭೆಯ ವಿರೋಧ ಪಕ್ಷದ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಪವನ್ ಬನ್ಸಾಲ್ ಅವರನ್ನು ಪ್ರಶ್ನಿಸಿತ್ತು. ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್‌ ಗಾಂಧಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿತ್ತು. ದೇಶದಾದ್ಯಂತ ಕಾಂಗ್ರೆಸ್‌ ಕಾರ್ಯಕರ್ತರು ಬೃಹತ್‌ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದರು.

ಇನ್ನು, ನ್ಯೂಸ್‌ ಕ್ಲಿಕ್ ಆದಾಯ ತೆರಿಗೆ ಅಧಿಕಾರಿಗಳು 2021ರ ಫೆಬ್ರುವರಿಯಲ್ಲಿಯೂ ಕಾರ್ಯಾಚರಣೆ ನಡೆಸಿದ್ದರು. ನ್ಯೂಸ್‌ ಕ್ಲಿಕ್ ವೆ‌ಬ್ ಪೋರ್ಟಲ್‌ 2018-19 ರ ಹಣಕಾಸು ವರ್ಷದಲ್ಲಿ ವರ್ಲ್ಡ್‌ವೈಡ್ ಮೀಡಿಯಾ ಹೋಲ್ಡಿಂಗ್ಸ್ ಎಲ್‌.ಎಲ್‌.ಸಿ ಯುಎಸ್‌ ಎಯಿಂದ 9.59 ಕೋಟಿ ವಿದೇಶಿ ನೇರ ಹೂಡಿಕೆಯನ್ನು (ಎಫ್‌ ಡಿಐ) ಪಡೆದಿದೆ ಎಂದು ಆರೋಪಿಸಿದ್ದ ದೆಹಲಿ ಪೊಲೀಸರು ‘ನ್ಯೂಸ್‌ ಕ್ಲಿಕ್‌’ ಮೇಲೆ ಫೆಬ್ರವರಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ತೆರಿಗೆ ವಂಚನೆಯ ಆರೋಪಗಳಿಗೆ ಸಂಬಂಧಿಸಿದಂತೆ  ಅಧಿಕಾರಿಗಳು ಇದನ್ನು “ಸರ್ವೆ” ಎಂದು ಕರೆದಿದ್ದು, “ದಾಳಿ” ಅಲ್ಲ ಎಂದು ಸಮರ್ಥಿಸಿಕೊಂಡಿದ್ದರು.  

ದೇಶದ ಹಳೆಯ ಮತ್ತು ಹೆಸರಾಂತ ಪತ್ರಿಕೆಗಳಲ್ಲಿ ಒಂದಾದ ʼದೈನಿಕ್‌ ಬಾಸ್ಕರ್‌ʼ ಪತ್ರಿಕೆಯ ಮೇಲೂ 2021ರ ಜುಲೈ 12ರಂದು ಐಟಿ ಇಲಾಖೆ ದಾಳಿ ನಡೆದಿತ್ತು ಎನ್ನುವುದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬೇಕು. ಪ್ರಭುತ್ವ ಸಿದ್ಧಾಂತಕ್ಕೆ ಕ್ಯಾರೆ ಮಾಡುವುದಿಲ್ಲ ಎಂಬ ಧೋರಣೆಯಲ್ಲಿಯೇ ಈ ಪತ್ರಿಕೆ ನಡೆದುಕೊಂಡು ಬಂದಿರುವುದು ಸರ್ಕಾರದ ಕೆಂಗಣ್ಣಿಗೂ ಕಾರಣವಾಗಿತ್ತು.  12 ರಾಜ್ಯಗಳಲ್ಲಿ ಈ ಪತ್ರಿಕೆಯ ಆವೃತ್ತಿಗಳಿವೆ.‘ದೈನಿಕ್ ಭಾಸ್ಕರ್‌’ ಸಂಸ್ಥೆಯು ಆದಾಯ ತೆರಿಗೆ ಪಾವತಿಯಲ್ಲಿ ಅಕ್ರಮ ಎಸಗಿದೆ ಎಂಬ ಆರೋಪದ ಮೇಲೆ ಸಂಸ್ಥೆಯ ಪ್ರಧಾನ ಕಚೇರಿ ಮತ್ತು ಪ್ರಾದೇಶಿಕ ಕಚೇರಿಗಳ ಮೇಲೆ ದೇಶದ ಒಟ್ಟು ಆರು ರಾಜ್ಯಗಳಲ್ಲಿ ಏಕಕಾಲದಲ್ಲಿ ಪರಿಶೀಲನೆ ನಡೆದಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಗಂಗಾ ನದಿ ತಟದಲ್ಲಿ ಮೃತ ದೇಹಗಳನ್ನು ನಿಷ್ಕರುಣೆಯಿಂದ ಎಸೆಯಲಾಗಿದೆ. ಈ ಮೂಲಕ ಸರ್ಕಾರ  ಕೋವಿಡ್‌ ಸಾವಿನ ಸಂಖ್ಯೆಯನ್ನು ಮುಚ್ಚಿಡಲು ಪ್ರಯತ್ನಿಸುತ್ತಿದೆ. ಆದರೆ, ಗಂಗೆ ತನ್ನ ಒಡಲಲ್ಲಿ ಇರುವ ಹೆಣಗಳನ್ನು ಹೊರಹಾಕುತ್ತಿದ್ದಾಳೆ’ ಎಂದು ದೈನಿಕ್‌ ಭಾಸ್ಕರ್‌ ಪತ್ರಿಕೆಯು 2021ರ ಜೂನ್‌ ಕೊನೆಯ ವಾರದಲ್ಲಿ ವಿಸ್ತೃತವಾದ ತನಿಖಾ ವರದಿಯನ್ನು ಪ್ರಕಟಿಸಿದ್ದು ನಿಮಗೆ ನೆನಪಿರಬಹುದು. ಈ ವರದಿಯೇ ಸರ್ಕಾರ ಐಟಿ ಇಲಾಖೆಯಿಂದ ಪತ್ರಿಕಾ ಕಚೇರಿಗಳ ಮೇಲೆ ದಾಳಿ ನಡೆಸುವುದಕ್ಕೆ ಕಾರಣ ಎಂದು ಹೇಳಲಾಗಿತ್ತು.

ಇನ್ನು, “ಕೋವಿಡ್‌ ಕಾರಣಕ್ಕೆ ಸಂಭವಿಸಿದ ಸಾವುಗಳ ಸಂಖ್ಯೆಯನ್ನು ಉತ್ತರ ಪ್ರದೇಶ ಸರ್ಕಾರ ಮುಚ್ಚಿಟ್ಟಿದೆ. ಆಕ್ಸಿಜನ್‌ ಪೂರೈಕೆಯಲ್ಲಿ ಸರ್ಕಾರ ವಿಫಲವಾಗಿದೆ. ಈ ಕಾರಣದಿಂದಲೇ ಎರಡನೇ ಅಲೆಯಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿವೆ” ಎಂದು 2021ರ ಜೂನ್‌ ಮತ್ತು ಜುಲೈನಲ್ಲಿ ಪುಖಾಂನುಪುಂಖವಾಗಿ ವರದಿ ಮಾಡಿದ ಬೆನ್ನಿಗೆ ಆದಾಯ ತೆರಿಗೆ ಪಾವತಿಯಲ್ಲಿ ಮತ್ತು ಕಂಪನಿಗೆ ಸಂಬಂಧಿಸಿದ ಖರೀದಿಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ, ಈ ಪತ್ರಿಕೆಯ ಮೇಲೆ ಐಟಿ ದಾಳಿಗೆ ಮಾಡಲಾಗಿತ್ತು. ಕೋವಿಡ್‌ ಸಂದರ್ಭದಲ್ಲಿ ನಡೆದ ವೈದಕೀಯ ವೈಫಲ್ಯಗಳು, ಸರ್ಕಾರದ ಬೇಜವಾಬ್ದಾರಿಗಳ ಮೇಲೆ ಸರಣಿ ವರದಿಗಳ ಮೂಲಕ ಭಾರತ್‌ ಸಮಾಚಾರ್‌ ಬಯಲಿಗೆಳೆದಿತ್ತು. ಇದೇ ಕಾರಣಕ್ಕೆ ಐಟಿ ದಾಳಿ ನಡೆಸಲಾಗಿದೆ ಎಂದು ಕೂಡ ಹೇಳಲಾಗಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಈ ಐಟಿ ದಾಳಿ ಆದ ಬೆನ್ನಿಗೆ ʼನೀವು ಎಷ್ಟು ಬೇಕಾದರೂ ನಮ್ಮ ಧ್ವನಿ ಅಡಗಿಸಲು ಪ್ರಯತ್ನಿಸಿ, ನಾವೂ ಅಷ್ಟೇ ದೊಡ್ಡ ದನಿಯಲ್ಲಿ ಸತ್ಯ ಹೇಳುತ್ತೇವೆ. ಮೊದಲೂ ಹೆದರುತ್ತಿರಲಿಲ್ಲ, ಈಗಲೂ ಹೆದರುವುದಿಲ್ಲ’ ಎಂದು ʼಭಾರತ್ ಸಮಾಚಾರ್‌ʼ ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿ ಮತ್ತೆ ತನ್ನ ಪತ್ರಿಕಾ ಸಿದ್ಧಾಂತವನ್ನು ಮುಂದುವರಿಸಿದ್ದು ಇಡೀ ದೇಶವೇ ಬೆರಗು ಕಣ್ಣಿಂದ ಕಾಣುವಂತೆ ಮಾಡಿತ್ತು.

ಈಗ ಮತ್ತೆ ನ್ಯೂಸ್‌ ಕ್ಲಿಕ್‌ ಮೇಲೆ ದಾಳಿ, ಮಾಧ್ಯಮ ಸ್ವಾತಂತ್ರ್ಯದ ಧಮನ. ಸಮರ್ಪಕ ತನಿಖಾ ಪ್ರಕ್ರಿಯೆಯನ್ನು ಅನುಸರಿಸಿ ತನಿಖೆ ನಡೆಸಿಲ್ಲ ಎಂಬ ಆರೋಪವೂ ಇದೆ. ಹೀಗೆ ಸತ್ಯ ಹೇಳುವವರ ವಿರುದ್ಧ, ಪ್ರಭುತ್ವವನ್ನು ವಿರೋಧಿಸುವ ಮತ್ತು ತಪ್ಪನ್ನು ಪ್ರಶ್ನಿಸುವ ಮಾಧ್ಯಮಗಳ ಮೇಲೆ ಹೀಗೆ ನಿರಂತರವಾಗಿ ಇಂತಹ ದಾಳಿಗಳು ನಡೆಯುತ್ತಿವೆ.  ಈಗ ಮತ್ತೊಮ್ಮೆ ದೇಶದಲ್ಲಿ ಲೋಕಸಭಾ ಚುನಾವಣೆ ಬರುತ್ತಿದೆ. ಸಾಮಾಜಿಕ ಜಾಲತಾಣ ಮತ್ತು ಮಾರಾಟಗೊಂಡ ಮಾಧ್ಯಮಗಳು ಪ್ರಭುತ್ವವನ್ನು ಮೆರೆಸಿವುದಕ್ಕೆ ತಯಾರಾಗಿವೆ, ದೇಶ ಮತ್ತೆ ಈ ಎಲ್ಲಾ ಅತಿರಂಜಿತ ಸುಳ್ಳುಗಳಿಗೆ ಮರುಳಾಗುವುದಕ್ಕೆ ತಯಾರಾದಂತಿದೆ. ಎಲ್ಲಿಯವರೆಗೆ ಸುಳ್ಳನ್ನೇ ಸತ್ಯವೆಂದು ಈ ದೇಶ ನಂಬುತ್ತದೆಯೋ ಅಲ್ಲಿಯ ತನಕ ಹೀಗೆ ಸತ್ಯವನ್ನು ಹೇಳುವ ಮಾಧ್ಯಮಗಳನ್ನು, ಪತ್ರಕರ್ತರನ್ನು ದೇಶದ್ರೋಹಿಗಳೆಂದು ಬಿಂಬಿಸುವುದರಲ್ಲಿ ಸರ್ಕಾರ ಮತ್ತು ಸರ್ಕಾರಿ ಪ್ರಾಯೋಜಿತ ಗುಂಪುಗಳು, ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳು ಪ್ರತ್ಯಕ್ಷ ಮತ್ತು ಪರೋಕ್ಷಾಗಿ ಕಾರ್ಯನಿರ್ವಹಿಸುತ್ತಲೇ ಇರುತ್ತವೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಸರ್ಕಾರದೊಂದಿಗೆ ಹೊಂದಾಣಿಕೆಗೆ ಒಪ್ಪಿದವರು ಹೇಳುವುದನ್ನು ಸತ್ಯವೆಂದು, ಒಪ್ಪದವರು ಹೇಳುವುದನ್ನು ಸುಳ್ಳು ಎಂದು ಬಿಂಬಿಸುವ ವ್ಯವಸ್ಥಿತ ಅಜೆಂಡಾಕ್ಕೆ ಈ ದೇಶ ಇನ್ನೆಷ್ಟು ಬಲಿಯಾಗಬೇಕೋ ಗೊತ್ತಿಲ್ಲ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!