Sunday, September 8, 2024

ನ.15ರಿಂದ ಕುಂದಾಪುರದಲ್ಲಿ ಕಾರ್ಮಿಕರ ಐಕ್ಯತೆ-ಜನತೆಯ ಸೌಹಾರ್ದತೆಗಾಗಿ 15ನೇ ಸಿ‌ಐಟಿಯು ರಾಜ್ಯ ಸಮ್ಮೇಳನ

ಕುಂದಾಪುರ, ನ.4: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿ‌ಐಟಿಯು) ನೇತೃತ್ವದಲ್ಲಿ ಕಾರ್ಮಿಕರ ಐಕ್ಯತೆ-ಜನತೆಯ ಸೌಹಾರ್ದತೆಗಾಗಿ ಕುಂದಾಪುರದ ಆರ್ ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸಿ‌ಐಟಿಯು 15ನೇ ರಾಜ್ಯ ಸಮ್ಮೇಳನ ನವೆಂಬರ್ 15 ರಿಂದ 17 ರ ತನಕ ನಡೆಯಲಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೇಳಿದರು.

ಅವರು ನ.4ರಂದು ಕುಂದಾಪುರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಸಮ್ಮೇಳನದ ಬಗ್ಗೆ ವಿವರಣೆ ನೀಡಿದರು.

ನ.15 ರಂದು ಬೆಳಿಗ್ಗೆ 10.30ಕ್ಕೆ ಸಿ‌ಐಟಿಯು ಅಖಿಲ ಭಾರತ ಅಧ್ಯಕ್ಷೆ ಡಾ.ಹೇಮಲತಾ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಸಿ‌ಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ರಾಜ್ಯ ಸಭಾ ಸದಸ್ಯರಾದ ತಪನ್ ಸೇನ್ ಮತ್ತು ಉಪಾಧ್ಯಕ್ಷ ಎ.ಕೆ. ಪದ್ಮನಾಭನ್ ಮಾರ್ಗದರ್ಶನ ನೀಡಲಿದ್ದಾರೆ. ಸಿ‌ಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಮೀನಾಕ್ಷಿ ಸುಂದರಂ ಹಾಗೂ ಸಿ‌ಐಟಿಯು ರಾಜ್ಯ ಮುಖಂಡರೂ ಭಾಗವಹಿಸಲಿದ್ದಾರೆ. ಸಿ‌ಐಟಿಯು ರಾಜ್ಯ ಅಧ್ಯಕ್ಷ ಎಸ್. ವರಲಕ್ಷ್ಮಿ ರಾಜ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯದ 31 ಜಿಲ್ಲೆಗಳಿಂದ ವಿವಿಧ ಕಾರ್ಮಿಕರ ನಡುವೆ ಅವರ ಕ್ಷೇತ್ರಗಳಲ್ಲಿ ದುಡಿಯುತ್ತಿರುವ 130 ಮಹಿಳಾ ಪ್ರತಿನಿಧಿಗಳು ಸೇರಿದಂತೆ 420 ಮಂದಿ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸಮ್ಮೇಳನದ ಕೊನೆಯ ದಿನವಾದ ನವೆಂಬರ್ 17 ರಂದು ಮಧ್ಯಾಹ್ನ 2.30 ಗಂಟೆಗೆ ಕುಂದಾಪುರ ಶಾಸ್ತ್ರಿ ವೃತ್ತದಿಂದ ಬೃಹತ್ ಮೆರವಣಿಗೆ ಹಾಗೂ ನೆಹರು ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದ್ದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಪ್ರಧಾನ ಭಾಷಣ ಮಾಡಲಿದ್ದಾರೆ.ಈ ಮೆರವಣಿಗೆಯಲ್ಲಿ ಜಿಲ್ಲೆಯಲ್ಲಿ ಸಿ‌ಐಟಿಯುಗೆ ಸಂಯೋಜನೆಗೊಂಡಿರುವ ಎಲ್ಲಾ ಕಾರ್ಮಿಕ ಸಂಘಗಳ ಸದಸ್ಯರು ಭಾಗವಹಿಸಲಿದ್ದಾರೆ ಎಂದರು.

15ನೇ ರಾಜ್ಯ ಸಮ್ಮೇಳನ ಯಶಸ್ಸಿಗೆ ಕಾರ್ಮಿಕರ ಹಿತೈಷಿಗಳು, ಲೇಖಕರು, ಕವಿಗಳು, ಜನಪರ ಹೋರಾಟಗಾರರೂ ಸೇರಿದಂತೆ ವಿಶಾಲವಾದ ಸ್ವಾಗತ ಸಮಿತಿ ರಚನೆ ಮಾಡಲಾಗಿದೆ. ಸಮ್ಮೇಳನ ಅತ್ಯಂತ ವ್ಯವಸ್ಥಿತವಾಗಿ ವ್ಯಾಪಕವಾಗಿ ಪ್ರಚಾರ ಮಾಡಲು ಕಾರ್ಮಿಕರು ಗ್ರಾಮ ಗ್ರಾಮಗಳಲ್ಲಿ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

2014ರ ನಂತರ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಕಾರ್ಮಿಕ ವರ್ಗವನ್ನು ಕೇಂದ್ರಿಕರಿಸಿ ವ್ಯಾಪಕ ದಾಳಿ ನಡೆಸುತ್ತಿದೆ. ಸ್ವಾತಂತ್ರ್ಯಪೂರ್ವದಿಂದ ಇಲ್ಲಿಯ ತನಕ ಕಾರ್ಮಿಕರು ಸಮರಧೀರ ಚಳವಳಿ ಮೂಲಕ ಗಳಿಸಿದ 44 ಕಾರ್ಮಿಕ ಕಾನೂನುಗಳಲ್ಲಿ 15 ಕಾನೂನುಗಳನ್ನು ರದ್ದುಗೊಳಿಸಿ ಉಳಿದ 29 ಕಾನೂನುಗಳನ್ನು ವಿಲೀನಗೊಳಿಸಿ 4 ಸಂಹಿತೆಗಳನ್ನಾಗಿ ರೂಪಿಸಿ ಶ್ರಮಿಕರನ್ನು ಬಂಡವಾಳದ ಗುಲಾಮರನ್ನಾಗಿಸುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಸುತ್ತಿದೆ. ಇದರಿಂದ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕೋಟ್ಯಾಂತರ ಕಾರ್ಮಿಕರಿಗೆ, ಕಟ್ಟಡ, ಹಂಚು, ಬೀಡಿ ಮತ್ತಿತ್ತರ ಕಾರ್ಮಿಕರ ಸೌಲಭ್ಯಗಳಿಗೆ ಕತ್ತರಿ ಬೀಳಲಿದೆ. ಸ್ಕೀಂ ನೌಕರರಾದ ಬಿಸಿಯೂಟ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಗುತ್ತಿಗೆ ಕಾರ್ಮಿಕರು, ಹೊರಗುತ್ತಿಗೆ, ಟ್ರೈನಿ, ಅಪ್ರೆಂಟಿಸ್ ಮೊದಲಾದ ಹೆಸರಿನಲ್ಲಿ ಕಡಿಮೆ ಕೂಲಿಗೆ ದುಡಿಸಿಕೊಳ್ಳುತ್ತಿರುವುದು ಹೆಚ್ಚಳ ಗೊಂಡಿದೆ. ಅಂಗನವಾಡಿ ನೌಕರರಿಗೆ ಗ್ರಾಚ್ಯುವಿಟಿ ನೀಡಬೇಕೆಂದು ಸುಪ್ರಿಂಕೋರ್ಟ್ ತೀರ್ಪು ನೀಡಿ 6 ತಿಂಗಳು ಕಳೆದರೂ ಜಾರಿಯಾಗಿಲ್ಲ ಎಂದು ಆರೋಪಿಸಿದರು.

ನಮ್ಮ ದೇಶದ ಆರ್ಥಿಕ ಬೆನ್ನೆಲುಬಾಗಿದ್ದ ಸಾರ್ವಜನಿಕ ಉದ್ಯಮಗಳನ್ನು ಕೆಲವೇ ವ್ಯಕ್ತಿಗಳ ಹಿತಕೋಸ್ಕರ ಖಾಸಗೀಕರಿಸಿ ಅಭಿವೃದ್ಧಿ ಎಂದು ಬಿಂಬಿಸಲು ಹೊರಟಿದೆ. ಇಂತಹ ನೀತಿಗಳ ವಿರುದ್ಧ ದೇಶಾದಾದ್ಯಂತ ಸಿ‌ಐಟಿಯು ಮುತುವರ್ಜಿಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳು ಐಕ್ಯತೆಯಿಂದ ಹತ್ತಾರು ಹೋರಾಟ, ಮುಷ್ಕರಗಳನ್ನು ಸಂಘಟಿಸಿದೆ.

ಸ್ವಾತಂತ್ರ್ಯ ಗಳಿಸಿದ 75 ವರ್ಷಗಳ ನಂತರವೂ ದೇಶದ ರೈತನ ಬೆಳೆಗಳಿಗೆ ಬೆಲೆಗಳಿಲ್ಲದೇ ಆತ್ಮಹತ್ಯೆ ಮುಂದುವರಿದಿದೆ. ಈ ಹಿಂದೆ ಅತ್ಯಲ್ಪ ರಕ್ಷಣೆಗಿದ್ದ ಕಾನೂನುಗಳನ್ನು ಬಿಜೆಪಿ ನೇತೃತ್ವದ ಸರ್ಕಾರ ರದ್ದುಗೊಳಿಸಿ ನೂತನ ಕೃಷಿ ಕಾಯ್ದೆ ತಂದಿರುವುದು ರಾಜ್ಯದಲ್ಲಿ ಇಂದಿಗೂ ಜಾರಿಯಲ್ಲಿದೆ. ದೇಶದ ಐನೂರಕ್ಕೂ ಅಧಿಕ ರೈತ ಸಂಘಟನೆಗಳು ನಡೆಸಿದ ಐತಿಹಾಸಿಕ ಹೋರಾಟಗಳು ಸ್ಫೂರ್ತಿದಾಯಕ. ಈ ಹೋರಾಟಗಳನ್ನು ಮುನ್ನಡೆಸಲು ಕಾರ್ಮಿಕ ವರ್ಗ ದೃಢವಾದ ಐಕ್ಯತಾ ರೈತರ ಜೊತೆ ಸಾಧಿಸಲು ಸಮ್ಮೇಳನ ಒತ್ತು ನೀಡಲಿದೆ. ಬೆಲೆ ಏರಿಕೆ ಮತ್ತು ನಿರುದ್ಯೋಗದಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆಲೆಗಳನ್ನು ನಿಯಂತ್ರಿಸಬೇಕಾದ ಸರ್ಕಾರಗಳು ತೆರಿಗೆ ಹೆಚ್ಚಿಸುವ ಮೂಲಕ ತಾವು ಬೆಲೆ ಏರಿಕೆಗೆ ಕಾರಣವಾಗಿವೆ ಎಂದರು.

ಸರ್ಕಾರದ ಇಂತಹ ನೀತಿಗಳಿಂದ ಕಾರ್ಮಿಕ ವರ್ಗ ಎದುರಿಸುತ್ತಿರುವ ಸಮಸ್ಯೆಗಳು, ಜನಸಾಮಾನ್ಯರ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಚರ್ಚಿಸಿ ಮುಂದಿನ ಮೂರು ವರ್ಷಗಳಲ್ಲಿ ಸಿ‌ಐಟಿಯು ಸಂಘಟನೆ ತನ್ನ ಹೋರಾಟಗಳನ್ನು ನಿರ್ಣಯಿಸಲಿದೆ ಎಂದು ಹೇಳಿದರು.

ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗರ ಮಾತನಾಡಿ, ಸಿ‌ಐಟಿಯು ರಾಜ್ಯದಲ್ಲಿ 2.5ಲಕ್ಷ ಸದಸ್ಯರನ್ನು ಹೊಂದಿದ್ದು ಈ ಸದಸ್ಯರನ್ನು ಪ್ರತಿನಿಧಿಗಳ ಸಮ್ಮೇಳನ ನಡೆಯಲಿದೆ. ಶತಮಾನದ ಇತಿಹಾಸವಿರುವ ಕಾರ್ಮಿಕ ಚಳಿವಳಿಯಲ್ಲಿ ಸಿ‌ಐಟಿಯು ತೊಡಗಿಸಿಕೊಂಡಿದ್ದು 1970ರಲ್ಲಿ ಸ್ಥಾಪನೆಯಾದ ಸಂಘಟನೆ 63 ಲಕ್ಷ ಸದಸ್ಯರನ್ನು ದೇಶದಲ್ಲಿ ಹೊಂದಿದೆ. ತಳಮಟ್ಟದಿಂದ ರಾಷ್ಟ್ರಮಟ್ಟದ ತನಕ ಸಮ್ಮೇಳನಗಳನ್ನು ಸಂಘಟಿಸಿದೆ. ಕಾರ್ಮಿಕರು, ಜನಸಾಮಾನ್ಯರ ಸಮಸ್ಯೆಗಳನ್ನು ಧ್ವನಿಸುವ ಕೆಲಸ ಮಾಡುತ್ತಿದೆ ಎಂದರು.

ಸ್ವಾಗತ ಸಮಿತಿ ಕೋಶಾಧಿಕಾರಿ ಎಚ್.ನರಸಿಂಹ ಮಾತನಾಡಿ, ಅಸಂಘಟಿತ ಕ್ಷೇತ್ರವಾಗಿರುವ ಆಟೋ, ಟ್ಯಾಕ್ಷಿ, ಖಾಸಗಿ ಬಸ್ಸು ಚಾಲಕರು, ನಿರ್ವಾಹಕರಿಗೆ ಕಲ್ಯಾಣ ಮಂಡಳಿಗಳ ರಚಿಸುವ ಮೂಲಕ ಸಾಮಾಜಿಕ ಭದ್ರತೆ ನೀಡುವ ಕೆಲಸ ಆಗಬೇಕಾಗಿದೆ. ಬಿಸಿಯೂಟ ನೌಕರರಿಗೆ ಮೇ ತಿಂಗಳಿಂದ 3-4ತಿಂಗಳು ವೇತನ ಸಿಗದೆ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಧರಣಿ ಮಾಡಬೇಕಾಯಿತು. ಹೊಸ ಉದ್ಯೋಗ ಸೃಷ್ಟಿ ಇಲ್ಲವಾಗಿದೆ. ಶಿಥಿಲಗೊಂಡ ಕೈಗಾರಿಕೆಗಳ ಪುನಶ್ಚೇತನಕ್ಕೂ ಒತ್ತು ನೀಡುತ್ತಿಲ್ಲ. ಹೆಂಚು ಉದ್ಯಮ ಹಲವು ಸಮಸ್ಯೆಗಳಿಗೆ ಸಿಲುಕಿ ಮುಚ್ಚುವ ಹಂತಕ್ಕೆ ಬಂದಿವೆ. ಕಾರ್ಮಿಕರ ಬದುಕು ಅತಂತ್ರವಾಗುತ್ತಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಕುಂದಾಪುರದಲ್ಲಿ ನಡೆಯುವ ೧೫ನೇ ಸಮ್ಮೇಳನ ಮಹತ್ವ ಎನಿಸಲಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಗೌರವ ಅಧ್ಯಕ್ಷ ಕೆ.ಶಂಕರ್, ಪ್ರಚಾರ ಸಮಿತಿಯ ಚಂದ್ರಶೇಖರ್ ವಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!