Sunday, September 8, 2024

ಬೈಂದೂರು ಕ್ಷೇತ್ರ: ಕೊರೋನಾ ವಾರಿಯರ್ಸ್ ಗಳಿಗೆ ಆಹಾರ ಕಿಟ್ ವಿತರಣೆ


ಸೇವಾ ಭಾರತಿ ಕರ್ನಾಟಕ, ಪ್ರೇರಣಾ ಎಜುಕೇಶನಲ್ ಟ್ರಸ್ಟ್ ಶಿವಮೊಗ್ಗ, ಕುಂದಾಪುರ ಎಜುಕೇಶನಲ್ ಸೊಸೈಟಿ ವತಿಯಿಂದ ಕಿಟ್ ವಿತರಣೆ


ಕುಂದಾಪುರ, ಜೂ.7: ಕೊರೋನಾದಿಂದ ಮನುಷ್ಯರ ಜೀವ ಉಳಿಸುವುದು ಅತೀ ಮುಖ್ಯ. ಆ ಹಿನ್ನೆಲೆಯಲ್ಲಿ ಕೊರೋನಾದಿಂದ ಮುಕ್ತರಾಗುವ ನಿಟ್ಟಿನಲ್ಲಿ ಸರ್ಕಾರ ಕಠಿಣವಾದ ನಿರ್ಧಾರಗಳನ್ನು ತಗೆದುಕೊಂಡಿದೆ. ಸಂಸದರು, ಶಾಸಕರುಗಳು ತಮ್ಮ ವ್ಯಾಪ್ತಿಯ ಶಾಸಕರುಗಳೊಂದಿಗೆ ಕ್ಷೇತ್ರ, ಗ್ರಾಮ ಮಟ್ಟದಿಂದ ಕೊರೋನಾ ನಿಯಂತ್ರಿಸುವ ಬಗ್ಗೆ ಕಠಿಣವಾದ ನಿಲುವುಗಳನ್ನು ತಗೆದುಕೊಂಡಿದೆ. ಕೊರೋನಾ ನಿರ್ಬಂಧಿಸುವಲ್ಲಿ ಕೊರೊನಾ ವಾರಿಯರ್ಸ್ ಪಾತ್ರ ಪ್ರಮುಖವಾಗಿದ್ದು ಅವರಿಗೆ ವಿಶ್ವಾಸ ಮೂಡಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದು ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.


ಅವರು ಮಾರಣಕಟ್ಟೆಯಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ಸಭಾಭವನದಲ್ಲಿ ನಡೆದ ಸೇವಾ ಭಾರತಿ ಕರ್ನಾಟಕ, ಪ್ರೇರಣಾ ಎಜುಕೇಶನಲ್ ಟ್ರಸ್ಟ್ ಶಿವಮೊಗ್ಗ, ಕುಂದಾಪುರ ಎಜುಕೇಶನಲ್ ಸೊಸೈಟಿ ರಿ., ವತಿಯಿಂದ ಕೊರೋನಾ ವಾರಿಯರ್ಸ್ ಗಳಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಸುಮಾರು 35ಸಾವಿರ ಕುಟುಂಬಗಳಿಗೆ ಆಹಾರದ ಕಿಟ್ ನೀಡಲಾಗುತ್ತದೆ. ಕೊರೋನಾ ನಿಯಂತ್ರಣದಲ್ಲಿ ಸರ್ಕಾರದ ಹಾಗೂ ಸಮಾಜದ ಮಹತ್ವದ ಜವಬ್ದಾರಿಯಿದೆ. ಲಾಕ್‍ಡೌನ್ ಬೇಡವಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಆದರೆ ಈ ಸಂದರ್ಭದಲ್ಲಿ ಕೊರೋನಾ ಸರಪಣಿಯಿಂದ ರಕ್ಷಿಸಿಕೊಳ್ಳಲು ಲಾಕ್ ಡೌನ್ ಅನಿವಾರ್ಯತೆಯಿತ್ತು. ಪಾಸಿಟಿವಿಟಿ ಪ್ರಮಾಣ 10 ಕ್ಕಿಂತ ಕಡಿಮೆ ಬಂದ ಬಳಿಕ ಲಾಕ್ ಡೌನ್ ಸಡಿಲಿಕೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.


ಶಿವಮೊಗ್ಗ ಲೋಕಸಭಾ ಕ್ಷೇತ್ರ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಜೀವ ಮತ್ತು ಜೀವನವನ್ನು ಉಳಿಸಿಕೊಳ್ಳಬೇಕಾದ ಸಂದಿಗ್ದತೆ ನಮ್ಮ ಮುಂದಿದೆ. ಕೊರೋನಾ ವಿರುದ್ಧ ಹೋರಾಟದಲ್ಲಿ ವಾರಿಯರ್ಸ್ ಹಗಲಿರುಳು ಜೀವದ ಹಂಗು ತೊರೆದು ಶ್ರಮಿಸುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳು ಚುನಾವಣೆಯನ್ನು ಬದಿಗಿಟ್ಟು ಸಿದ್ದಾಂತ, ಸೇವೆಗೆ ಆಧ್ಯತೆ ನೀಡಿ ಕೊರೋನಾ ವಾರಿಯರ್ಸ್‍ಗೆ ಪ್ರೋತ್ಸಾಹ ನೀಡುವ ಕಾರ್ಯಕ್ಕೆ ಮುಂದಾಗಿದೆ. ಬೈಂದೂರು ಕ್ಷೇತ್ರದ ಸುಮಾರು 5ಸಾವಿರ, ಶಿವಮೊಗ್ಗ ಲೋಕಸಭಾ ಕ್ಷೇತ್ರದ 35ಸಾವಿರ ಕೊರೋನಾ ವಾರಿಯರ್ಸ್‍ಗೆ ಆಹಾರ ಕಿಟ್ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಮೊದಲ ಹಂತದ ಕೋವಿಡ್ ಬಂದ ನಂತರ ಲಸಿಕೆ ನೀಡಲು ತಯಾರಿ ಮಾಡಿದರೂ ಕೂಡಾ ಕೆಲವು ರಾಜಕೀಯ ಮುಖಂಡರು ಲಸಿಕೆಯ ಬಗ್ಗೆ ತಪ್ಪು ಸಂದೇಶವನ್ನು ನೀಡಿದ್ದರಿಂದ ಜನ ಹಿಂದೇಟು ಹಾಕಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಲಸಿಕೆ ಸರಬರಾಜು ಮಾಡಿದರೂ ಕೂಡಾ ಜನ ಲಸಿಕೆ ಪಡೆಯಲು ಮುಂದೆ ಬರಲಿಲ್ಲ. ಆ ಸಂದರ್ಭದಲ್ಲಿ ಸರ್ಕಾರ 40-50 ರಾಷ್ಟ್ರಗಳಿಗೆ ರಪ್ತು ಮಾಡಿತು. ಈಗಾಗಲೆ ದೇಶದಲ್ಲಿ 20 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ. ಈ ವಾರದಲ್ಲಿ 1 ಕೋಟಿ ಲಸಿಕೆ ರಾಜ್ಯಕ್ಕೆ ಬರುತ್ತಿದೆ ಬರುತ್ತಿದೆ.


ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬೈಂದೂರು ತಾ.ಪಂ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಜಿ.ಪಂ.ಮಾಜಿ ಸದಸ್ಯರಾದ ಬಾಬು ಶೆಟ್ಟಿ, ಶಂಕರ ಪೂಜಾರಿ, ಸುರೇಶ ಬಟವಾಡಿ, ಸೇವಾ ಭಾರತಿಯ ಪ್ರಸನ್ನ ಉಪ್ಪುಂದ, ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ ಶೆಟ್ಟಿ ಡಾ|ಅತುಲ್ ಕುಮಾರ್ ಶೆಟ್ಟಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.


ಸಿದ್ಧಾಪುರ, ಅಂಪಾರು, ತ್ರಾಸಿ, ನಾಗೂರು, ಉಪ್ಪುಂದ, ಬೈಂದೂರು, ಗೋಳಿಹೊಳೆಗಳಲ್ಲಿ ಕಿಟ್ ವಿತರಣೆ ನಡೆಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!