spot_img
Tuesday, June 2, 2026
spot_img

ಬೈಂದೂರು ಕ್ಷೇತ್ರದ ಮಳೆಗಾಲದ ಮುನ್ನೆಚ್ಚರಿಕೆ ಕ್ರಮಗಳ ಸಭೆ | ಅಧಿಕಾರಿಗಳು ತ್ವರಿತ ಸ್ಪಂದನೆ ಜೊತೆಗೆ ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಬೇಕು-ಶಾಸಕ ಗಂಟಿಹೊಳೆ

ಕುಂದಾಪುರ: ಪ್ರಕೃತಿಯ ಮುಂದೆ ಯಾವ ವ್ಯವಸ್ಥೆಯು ದೊಡ್ಡದಲ್ಲ. ಆದರೆ ಕೆಲವೊಂದು ಬಾರಿ ಅಧಿಕಾರಿಗಳು ಮಳೆಗಾಲದ ಅಪಾಯಗಳನ್ನು ಅರಿತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದು ಕೊಳ್ಳದೆ ಇರುವ ಸಂದರ್ಭಗಳಲ್ಲಿ ಸಾರ್ವಜನಿಕರು ಪರದಾಡುವಂತಾಗುತ್ತದೆ. ಹಾಗಾಗಿ ಇಂತಹ ಮಳೆಗಾಲದ ಅನಿಶ್ಚಿತತೆಯ ಸಮಯದಲ್ಲಿ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸುವುದರ ಜೊತೆಗೆ ಕಾನೂನಿನ ವ್ಯಾಪ್ತಿಯೊಳಗೆ ಮಾನವೀಯತೆಯನ್ನು ಹೆಚ್ಚು ಪ್ರದರ್ಶಿಸಿ ಕೆಲಸ ಮಾಡಬೇಕು ಎಂದು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಬೈಂದೂರು ಕ್ಷೇತ್ರದ ಮಳೆಗಾಲದ ಮುನ್ನೆಚ್ಚರಿಕೆ ಕ್ರಮಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸ್ತುತ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಇಲ್ಲದೇ ಅಧ್ಯಕ್ಷರ ಜವಾಬ್ದಾರಿಗಳು ಅನ್ಯ ಇಲಾಖೆಗಳ ಅಧಿಕಾರಿಗಳಿಗೆ ವರ್ಗಾವಣೆ ಆಗಿದ್ದರೂ ಬಹುತೇಕ ಆಡಳಿತಾಧಿಕಾರಿಗಳು ಗ್ರಾಮ ಪಂಚಾಯತ್ ಆಡಳಿತದ ಬಗ್ಗೆ ಸಂಪೂರ್ಣ ನಿರಾಸಕ್ತಿ ಹೊಂದಿದ್ದಾರೆ. ಅಧಿಕಾರಿಗಳ ಇಂತಹ ಧೋರಣೆ ಮಳೆಗಾಲದ ಸಮಯವೂ ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳಿಗೂ ಸಾರ್ವಜನಿಕರಿಗೆ ಸಮಸ್ಯೆಯನ್ನು ಉಂಟು ಮಾಡುತ್ತದೆ.ಈ ಬಗ್ಗೆ ಆತಂಕ ವ್ಯಕ್ತ ಪಡಿಸಿದ ಶಾಸಕರು ಗ್ರಾಮ ಆಡಳಿತದ ಮೇಲುಸ್ತುವಾರಿ ವಹಿಸಿಕೊಂಡಿರುವ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಒಳಗೊಂಡಂತೆ ಇಡೀ ಜಿಲ್ಲಾಡಳಿತ ಈ ವಿಚಾರದ ಬಗ್ಗೆ ಗಂಭೀರವಾದ ಪುನರ್ ವಿಮರ್ಶೆ ಮಾಡಬೇಕೆಂದರು. ಹಾಗೂ ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಹೆಚ್ಚಿನ ಅಧಿಕಾರಿಗಳನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಿಸಿರುವ ಔಚಿತ್ಯದ ಬಗ್ಗೆಯೂ ಶಾಸಕರು ಸಭೆಯಲ್ಲಿ ಪ್ರಸ್ತಾಪಿಸಿದರು.

ಇಲಾಖಾ ನಡುವಿನ ಸಮನ್ವತೆ ಕೊರತೆಗೆ ಶಾಸಕರು ಗರಂ :
ನಾಡ ಗ್ರಾಮದಲ್ಲಿ ಕಿಂಡಿ ಅಣೆಕಟ್ಟುವಿನ ಹಲಗೆ ತೆಗೆದ ವಿಚಾರವಾಗಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಯು ಗ್ರಾಮ ಪಂಚಾಯತ್ ನಿಂದ ಪತ್ರ ಬಂದಿಲ್ಲ ಎಂದು ಹೇಳಿದಾಗ ಕೆಂಡಾಮಂಡಲರಾದ ಶಾಸಕರು ಪ್ರಸ್ತುತ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನೂ ಕಡಿಮೆ ಆಗಿಲ್ಲ. ಇಂತಹ ಪರಿಸ್ಥಿಯನ್ನು ಬಹಳ ನಾಜೂಕಾಗಿ ನಿಭಾಯಿಸಿಕೊಂಡು ಹೋಗುವುದು ಇಲಾಖೆಗಳ ಜವಾಬ್ದಾರಿ. ಅಂತಹುದರಲ್ಲಿ ಗ್ರಾಮ ಪಂಚಾಯತ್ ನಿಂದ ಪತ್ರ ಬಂದಿಲ್ಲ ಎಂಬ ಕಾರಣ ನೀಡಿ ಸರಿಯಾದ ಸಮನ್ವಯ ಇಲ್ಲದೇ ಕಿಂಡಿ ಅಣೆಕಟ್ಟುಗಳ ಅಸಮರ್ಪಕ ಹಾಗೂ ಸಮಯೋಚಿತವಲ್ಲದ ನಿರ್ವಹಣೆಗಳಿಂದಾಗಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟು ಮಾಡಿರುವುದನ್ನು ಸಹಿಸಲು ಸಾಧ್ಯವಿಲ್ಲವೆಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು . ಹಾಗೂ ಇಂತಹ ಸನ್ನಿವೇಶಗಳು ಇತರೆ ಗ್ರಾಮದಲ್ಲಿ ಸಂಭವಿಸಿದ್ದರೂ ಸಂಪೂರ್ಣ ಮಳೆ ಬರುವವರೆಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೂಕ್ತ ಮುಂಜಾಗ್ರತೆ ಕ್ರಮ ಕೈಗೊಳ್ಳಿ :
ಮೆಸ್ಕಾಂ ಮತ್ತು ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಗಳು ಅಗತ್ಯ ಸಮನ್ವಯದೊಂದಿಗೆ ಸಾರ್ವಜನಿಕ ಸ್ಥಳ ಹಾಗೂ ವಿದ್ಯುತ್ ಲೈನ್‌ಗಳ ಮೇಲಿರುವ ಅಪಾಯಕಾರಿ ಮರಗಳನ್ನು ತೆರವು ಗೊಳಿಸಲು ಕ್ರಮ ವಹಿಸಲು ಸೂಚನೆ ನೀಡಿದರು. ಎಲ್ಲಾ ಇಲಾಖೆಗಳು ತಮ್ಮ ತಮ್ಮ ಹೊಣೆಯರಿತು ಮಳೆಗಾಲದಲ್ಲಿ ಆಗಬಹುದಾದಂತಹ ಸಂಭಾವ್ಯ ಅಪಾಯಗಳನ್ನು ತಪ್ಪಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದು ಕೊಳ್ಳಲು ಸೂಚಿಸಿದರು.ಗ್ರಾಮ ಪಂಚಾಯತ್ ಹಾಗೂ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಅಗತ್ಯವಿದ್ದ ಕಡೆ ಚರಂಡಿ ಹೂಳೆತ್ತುವುದು, ಕಾಳಜಿ ಕೇಂದ್ರಗಳ ಗುರುತಿಸುವಿಕೆ, ನುರಿತ ಈಜುಗಾರರ ಪಟ್ಟಿಯೊಂದಿಗೆ ದೋಣಿ ವ್ಯವಸ್ಥೆ ಮಾಡುವುದು ಸೇರಿದಂತೆ ಇನ್ನುಳಿದ ಅಗತ್ಯ ವ್ಯವಸ್ಥೆ ಮಾಡಿ ಕೊಳ್ಳಲು ಸಲಹೆ ನೀಡಿದರು.

ರಾಷ್ಟೀಯ ಪುರಸ್ಕಾರ ಪಡೆದ ಗ್ರಾ.ಪಂ.ಗಳಿಗೆ ಅಭಿನಂದನೆ:
ದೀನ ದಯಾಳ್ ಪಂಚಾಯತ್ ಸತತ ವಿಕಾಸ ರಾಷ್ಟೀಯ ಪುರಸ್ಕಾರ ಪಡೆದು ದೆಹಲಿಗೆ ಹೊರಟ ರಾಜ್ಯದ ೬ ಪಂಚಾಯತ್ ಗಳ ಪೈಕಿ ಉಡುಪಿ ಜಿಲ್ಲೆಯ ೫ ಪಂಚಾಯತ್ ಗಳಾದ ಬೈಂದೂರು ಕ್ಷೇತ್ರದ ಹಕ್ಲಾಡಿ ಹಾಗೂ ವಂಡ್ಸೆ ಪಂಚಾಯತ್ ಮತ್ತು ಜಿಲ್ಲೆಯ ಉಳಿದ ಗ್ರಾಮ ಪಂಚಾಯತ್ ಗಳಾದ ಸಾಣೂರು, ಮಡಾಮಕ್ಕಿ, ಮುದ್ರಾಡಿಯ ಅಮೋಘ ಸಾಧನೆಯನ್ನು ಶಾಸಕರು ಪ್ರಸ್ತಾಪಿಸಿ ಇದಕ್ಕಾಗಿ ಶ್ರಮಿಸಿ ಜಿಲ್ಲೆಯ ಕೀರ್ತಿ ಹೆಚ್ಚಿಸಲು ಶ್ರಮಿಸಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ಅಭಿನಂದನೆಯನ್ನು ಶಾಸಕರು ಸಲ್ಲಿಸಿದರು.

ಸಭೆಯಲ್ಲಿ ಕುಂದಾಪುರ ತಾಲೂಕು ತಹಸೀಲ್ದಾರ್ ಪ್ರದೀಪ್ ಕುರುಡೇಕರ್, ಬೈಂದೂರು ತಹಶೀಲ್ದಾರ್ ಡಿ.ಜಿ ಮಹತ್, ಕುಂದಾಪುರ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್, ಬೈಂದೂರು ತಾಪಂ ಕಾರ್ಯನಿರ್ವಹಣಾಧಿಕಾರಿ ರಾಮದಾಸ್ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತ್ ಆಡಳಿತಾಧಿಕಾರಿಗಳು, ಪಿಡಿ‌ಓ ಮತ್ತು ವಿ‌ಎ‌ಓ ಗಳು ಉಪಸ್ಥಿತರಿದ್ದರು.

 

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!