Sunday, September 8, 2024

ಮಾ.13ರಂದು ‘ರೇಡಿಯೋ ಕುಂದಾಪ್ರ’ ನಿರಂತರ ಪ್ರಸಾರ ಉದ್ಘಾಟನೆ

ಕುಂದಾಪುರ: ಮಾ.7: ಭಂಡಾರ್‌ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ವತಿಯಿಂದ ಪ್ರಾರಂಭಗೊಂಡ ಸಮುದಾಯ ಬಾನುಲಿ ರೇಡಿಯೋ ಕುಂದಾಪ್ರ 89.6 FM ನಿರಂತರ ಪ್ರಸಾರ ಮಾರ್ಚ್ 13 ರಿಂದ ಆರಂಭಗೊಳ್ಳಲಿದೆ. ರೇಡಿಯೋ ಕುಂದಾಪುರ ಇದು ಲಾಭರಹಿತ ಸಮುದಾಯ ಬಾನುಲಿ ಕೇಂದ್ರವಾಗಿದ್ದು ಸ್ಥಳೀಯ ಜನರಜೀವನದ ಪ್ರಗತಿ ಸುಧಾರಿಸುವ ಗುರಿಯನ್ನು ಹೊಂದಿದೆ. ಕೃಷಿ, ಮೀನುಗಾರಿಕೆ, ಗೃಹಿಣಿಯರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಿಶೇಷ ಕಾರ್ಯಕ್ರಮಗಳ ಪ್ರಸಾರ ಇದರ ಧ್ಯೇಯೋದ್ದೇಶವಾಗಿದೆ. ಆರೋಗ್ಯ, ಪೋಷಣೆ, ಶಿಕ್ಷಣ, ಕೃಷಿ ವಿಷಯಗಳ ಕುರಿತು ಸ್ಥಳೀಯರ ಅನುಭವಗಳನ್ನು ಮತ್ತು ಅವರ ವಿಚಾರಗಳನ್ನು ಹಂಚಿಕೊಳ್ಳಲು ಚರ್ಚಿಸಲು ಸಮುದಾಯದ ಸದಸ್ಯರಿಗೆ ಇದೊಂದು ವೇದಿಕೆಯಾಗಿದೆ ಎಂದು ಕಾಲೇಜಿನ ಹಿರಿಯ ವಿಶ್ವಸ್ಥರಾದ ಕೆ.ಶಾಂತಾರಾಮ ಪ್ರಭು ತಿಳಿಸಿದ್ದಾರೆ.

ಅವರು ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಮಾ.7ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪದವಿ ಕಾಲೇಜು ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಮಾತನಾಡಿ, ಮಾ.13ರಂದು ಅಕಾಡೆಮಿ ಆಫ್‌ ಜನರಲ್ ಎಜ್ಯುಕೇಶನ್ ಮಣಿಪಾಲದ ಅಧ್ಯಕ್ಷರಾದ ಡಾ. ಎಚ್.ಎಸ್.ಬಲ್ಲಾಳ್ ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ವರದರಾಯ ಪೈ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಭಂಡಾರ್‌ಕಾರ್‍ಸ್ ಕಾಲೇಜಿನ ಹಿರಿಯ ವಿಶ್ವಸ್ಥರಾದ ಕೆ. ಶಾಂತಾರಾಮ ಪ್ರಭು ಅಧ್ಯಕ್ಷತೆ ವಹಿಸಲಿದ್ದಾರೆ. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕುಲಸಚಿವರಾದ ಡಾ.ರಂಜನ್ ಆರ್ ಪೈ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ರೇಡಿಯೋ ಕುಂದಾಪ್ರ 89.6 FM ಸಮುದಾಯ ಬಾನುಲಿ ಕೇಂದ್ರ ಸ್ಥಳೀಯ ಕನ್ನಡ ಭಾಷೆಯಲ್ಲಿಯೇ ಹೆಚ್ಚು ಪ್ರಸಾರವಾಗುವುದರಿಂದ ಜನರನ್ನು ಅದು ಸುಲಭವಾಗಿ ತಲುಪುತ್ತದೆ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಉತ್ತಮ ಸಂವಹನ ಮಾಧ್ಯಮವಾಗಿದೆ. ಗ್ರಾಮೀಣ ಭಾಗದಜನರ ಸಮಸ್ಯೆ, ಸವಾಲುಗಳು ಮತ್ತು ಅಗತ್ಯತೆಗಳನ್ನು ರೇಡಿಯೋ ಕುಂದಾಪುರದ ಮೂಲಕ ಸುಲಭವಾಗಿ ಹಂಚಿಕೊಳ್ಳಬಹುದಾಗಿದೆ. ಇದು ಸಮುದಾಯದವರೇ ನಿರ್ವಹಿಸುವ ಸಮುದಾಯ ಬಾನುಲಿ. ಜನಸಾಮಾನ್ಯರ ಹವ್ಯಾಸ, ಆಸಕ್ತಿಯ ವಿಷಯಗಳ ಕುರಿತಂತೆ ಮೌಲಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತದೆ. ಸಮುದಾಯದ ವಿವಿಧಜನಜೀವನದ ಆಚರಣೆಗಳ, ವೈಯಕ್ತಿಕ ವೃತ್ತಿಗಳ ಸೃಜನಶೀಲತೆ ಮತ್ತು ಸ್ವಯಂ ಸಬಲೀಕರಣಕ್ಕೆ ಪೂರಕವಾದ ಮನರಂಜನಾ ವಿಷಯಗಳ ಕುರಿತಂತೆ ಕಾರ್ಯಕ್ರಮಗಳನ್ನು ‘ರೇಡಿಯೋ ಕುಂದಾಪ್ರ 89.6 FM’ ಸಮುದಾಯ ಬಾನುಲಿ ಕೇಂದ್ರವು ಪ್ರಸಾರ ಮಾಡುತ್ತದೆ ಎಂದರು.

ರೇಡಿಯೋ ಕುಂದಾಪ್ರ ಕಾರ್ಯಕ್ರಮಗಳಲ್ಲಿ ಕೃಷಿ ಸಮಾಚಾರ, ಕಡಲ ಒಡಲು, ಯುವ ಸ್ಪಂದನ, ಕೇಳೇ ಸಖಿ, ಅತಿಥಿಯೊಂದಿಗೆ ಜ್ಯೋತಿ ಮುಂತಾದ ವಿಭಾಗಗಳು ಇರುತ್ತದೆ. ಕಾರ್ಯಕ್ರಮ ನೀಡಲು ಸಂಪನ್ಮೂಲ ವ್ಯಕ್ತಿಗಳಾಗಿ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಡಾ. ಉಮೇಶ್ ಪುತ್ರನ್, ರಘು ಪಾಂಡೇಶ್ವರ್, ನರೇಂದ್ರಕುಮಾರ್‌ಕೋಟ, ಚನ್ನ ಪೂಜಾರಿ, ಸತೀಶ್ ವಡ್ಡರ್ಸೆ, ಚೆಂಪಿ ದಿನೇಶ್, ವಾಸಂತಿ ಅಂಬಲಪಾಡಿ, ವಿಜಯೇಂದ್ರಗುಂಡ್ಮಿ, ಮೋಹನ್‌ರಾವ್, ಕುಮಾರ್‌ಎಸ್. ಎನ್., ಹರೀಶ್ ಕಿರಣ್‌ತುಂಗಾ, ಸುಪ್ರೀತಾ ಪುರಾಣಿಕ್, ಜಯರಾಮ್ ಶೆಟ್ಟಿ, ಆಟೋ ದೀಪ, ಸುಶ್ಮಿತಾ ಸಾಲಿಗ್ರಾಮ, ಮುನಿಯಾಲ್ ಗಣೇಶ್ ಶೆಣೈ, ಮೀನಾಕ್ಷಿ ಹಾಗೂ ವಿವಿಧ ಸರಕಾರಿ ಇಲಾಖೆಗಳ ತಜ್ಞರು ಭಾಗವಹಿಸಲಿದ್ದಾರೆ ಎಂದರು.

ಇದರಲ್ಲಿ ಭಂಡಾರ್‌ಕಾರ್ಸ್ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳ ಭಾಗವಹಿಸುವಿಕೆ ವಿಶೇಷವಾಗಿದೆ. ಉತ್ಸಾಹಿ ವಿದ್ಯಾರ್ಥಿಗಳು ಬಹಳಷ್ಟು ರೇಡಿಯೋ ಕಾರ್ಯಕ್ರಮಗಳ ಜೊತೆಗೆ ಸುಂದರ ಶೀರ್ಷಿಕೆ ಗೀತೆ ಒದಗಿಸಿದ್ದಾರೆ. ವಾರಕ್ಕೊಮ್ಮೆ ಪ್ರಸಾರಗೊಳ್ಳುವ ರೇಡಿಯೋ ನಾಟಕಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ಪ್ರಾಂಶುಪಾಲ ಶುಭಕರಾಚಾರಿ ತಿಳಿಸಿದರು.

ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಯು.ಎಸ್ ಶೆಣೈ ಮಾತನಾಡಿ, ಕಾಲೇಜಿನ 60ನೇ ವರ್ಷದ ಸವಿನೆನಪಿಗಾಗಿ ರೂಪುಗೊಂಡ ಯೋಜನೆ ಇದಾಗಿದೆ. ಸ್ಥಳೀಯ ಜನರಜೀವನದ ಪ್ರಗತಿ ಸುಧಾರಿಸುವ ಗುರಿಯೊಂದಿಗೆ ಸಾರ್ವಜನಿಕರ ಸಹಕಾರದೊಂದಿಗೆ ‘ರೇಡಿಯೋ ಕುಂದಾಪ್ರ 89.6 FM’ ಸಮುದಾಯ ಬಾನುಲಿ ಕೇಂದ್ರ ಆರಂಭವಾಗುತ್ತಿದೆ. ಕುಂದಾಪ್ರದ ವೈಶಿಷ್ಟ್ಯತೆಗಳು, ಕೃಷಿ, ಕಲೆ ಇತ್ಯಾದಿಗಳನ್ನು ತಿಳಿಯಪಡಿಸುವ ಪ್ರಯತ್ನ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಮತ್ತು ಸಮುದಾಯದ ಸಂಗೀತ, ಯಕ್ಷಗಾನ, ನಾಟಕ, ಜೊತೆಗೆ ಮರೆಯಾಗುತ್ತಿರುವ ಜಾನಪದ ಕಲೆಗಳನ್ನು ಅಭಿವ್ಯಕ್ತಿಸಲು ಇದೊಂದು ಉತ್ತಮ ವೇದಿಕೆಯಾಗಿದೆ. ಮುಂದಿನ 3-4 ತಿಂಗಳ ಪ್ರಸಾರಕ್ಕೆ ಆಗುವಷ್ಟು ಕಾರ್ಯಕ್ರಮಗಳ ಧ್ವನಿಮುದ್ರಣ ಆಗಿದೆ. 30 ಸಂಪನ್ಮೂಲ ವ್ಯಕ್ತಿಗಳು ಇದರಲ್ಲಿ ಭಾಗವಹಿಸಿದ್ದಾರೆ. ರೇಡಿಯೋ ಕುಂದಾಪ್ರ ೮೯.೬ ಎಫ್. ಎಮ್ ಹೆಚ್ಚು ಹೆಚ್ಚು ಪ್ರಚಾರ ಮಾಡಬೇಕಾದ ಕಾರ್ಯವನ್ನು ಜನತೆ ಮಾಡಬೇಕು ಎಂದು ಹೇಳಿದ ಅವರು, ಚುನಾವಣೆ ನೀತಿಸಂಹಿತೆ ದೃಷ್ಟಿಯಿಂದ ಸರಳವಾಗಿ ನಿರಂತರ ಪ್ರಸಾರ ಉದ್ಘಾಟನೆಯಾಗುತ್ತದೆ. ಚುನಾವಣೆ ಪ್ರಕ್ರಿಯೆಗಳು ಮುಗಿದ ಬಳಿಕ ಕಾರ್ಯಕ್ರಮ ಮಾಡುವ ಯೋಚನೆ ಇದೆ ಎಂದರು.

‘ರೇಡಿಯೋ ಕುಂದಾಪ್ರ 89.6 FM’ ನ ಮುಖ್ಯ ನಿರ್ವಹಕಿ ಜ್ಯೋತಿ ಸಾಲಿಗ್ರಾಮ ಮಾತನಾಡಿ, ಕುಂದಾಪುರ ಸುತ್ತಮುತ್ತಲ 25 ಕಿ.ಮೀ ವ್ಯಾಪ್ತಿಯಲ್ಲಿ ರೇಡಿಯೋ ಮೂಲಕ ಆಲಿಸಬಹುದು. ಜಾಗತಿಕವಾಗಿ ‘ರೇಡಿಯೋ ಕುಂದಾಪ್ರ 89.6 FM’ ಆಲಿಸುವ ಶ್ರೋತೃಗಳು ಮೊಬೈಲ್ Play store ನಿಂದ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಂಡು ನಿರಂತರ ಆಲಿಸಬಹುದಾಗಿದೆ ಎಂದರು.

ಸುದ್ಧಿಗೋಷ್ಟಿಯಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಧ ಡಾ.ಜಿ.ಎಂ.ಗೊಂಡ ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಸುಮಲತಾ ಸ್ವಾಗತಿಸಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!