Sunday, April 28, 2024

ಗುಜ್ಜಾಡಿ ಸರಕಾರಿ ಶಾಲೆಯಲ್ಲಿ ಬಿಸಿಯೂಟಕ್ಕೆ ತರಕಾರಿ ಸ್ವಾವಲಂಬನೆ!


ಗಂಗೊಳ್ಳಿ : ಬೈಂದೂರು ವಲಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅತೀ ಹೆಚ್ಚು ಮಕ್ಕಳ ದಾಖಲಾತಿ ಹಾಗೂ ಶೈಕ್ಷಣಿಕ ಸಾಧನೆಗಳಿಂದ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೀಗ ಶಾಲೆಯ ವಠಾರದಲ್ಲಿ ಮಾಡಲಾಗಿರುವ ತರಕಾರಿ ತೋಟದಿಂದ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದೆ.

ಶಾಲೆಯ ಬಿಸಿಯೂಟ ಯೋಜನೆಯ ಅಂಗವಾಗಿ ಶಾಲಾ ಮಕ್ಕಳಿಗೆ ಸಂಪೂರ್ಣ ಸಾವಯವ ಕೃಷಿಯಾಧಾರಿತ ತರಕಾರಿಗಳನ್ನು ಉಪಯೋಗಿಸುವಂತಾಗಲಿ ಎನ್ನುವ ಸದುದ್ದೇಶದಿಂದ ಶಾಲೆಯ ವಠಾರದಲ್ಲಿ ಸುಮಾರು ೧೦ ಸೆಂಟ್ಸ್ ಜಾಗದಲ್ಲಿ ಮಾಡಿರುವ ತರಕಾರಿ ತೋಟದಲ್ಲಿ ಉತ್ತಮ ಫಸಲು ಬಂದಿದ್ದು, ಶಾಲೆಯ ಮಧ್ಯಾಹ್ನದೂಟಕ್ಕೆ ಇಲ್ಲಿ ಬೆಳೆದ ಗುಣಮಟ್ಟದ ತರಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದೀಗ ಎರಡು ಕ್ವಿಂಟಾಲ್‌ಗೂ ಮಿಕ್ಕಿ ತರಕಾರಿ ಬೆಳೆದಿದ್ದು, ಇದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಹಾಗೂ ಸ್ಥಳೀಯರ ಪ್ರಶಂಸೆಗೆ ಪಾತ್ರವಾಗಿದೆ.

ಸಾವಯವ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮತ್ತು ಶಾಲೆಯ ಮಧ್ಯಾಹ್ನದ ಬಿಸಿಯೂಟಕ್ಕೆ ಉತ್ತಮ ಗುಣಮಟ್ಟದ ತರಕಾರಿಗಳನ್ನು ಒದಗಿಸುವ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಆಗಿನ ಮುಖ್ಯೋಪಾಧ್ಯಾಯರಾದ ಆನಂದ ಅವರ ಮುತುವರ್ಜಿಯಲ್ಲಿ ಶಾಲಾ ತರಕಾರಿ ತೋಟವನ್ನು ಪ್ರಾರಂಭಿಸಲಾಗಿತ್ತು. ಶಾಲೆಯ ಎಸ್‌ಡಿ‌ಎಂಸಿ ಸದಸ್ಯೆ ಶಾಂತಾ ದೇವಾಡಿಗ ನೇತೃತ್ವದಲ್ಲಿ ಸೌತೆಕಾಯಿ, ಮುಳ್ಳುಸೌತೆ, ಬೆಂಡೆಕಾಯಿ, ತೊಂಡೆಕಾಯಿ, ಕುಂಬಳಕಾಯಿ, ಬದನೆ ಹಾಗೂ ಬಸಳೆ ಸೊಪ್ಪನ್ನು ಬೆಳೆಸಲಾಗಿದೆ. ಶಾಲಾ ತರಕಾರಿ ತೋಟದಲ್ಲಿ ಉತ್ತಮವಾದ ಇಳುವರಿ ಬಂದಿದ್ದು ಪ್ರಥಮ ಕಟಾವಿನಲ್ಲೇ ಬರೋಬ್ಬರಿ ಒಂದೂವರೆ ಕ್ವಿಂಟಾಲ್‌ಗೂ ಅಧಿಕ ಸೌತೆಕಾಯಿ ಬೆಳೆ ಲಭಿಸಿದೆ. ಕಳೆದ ವರ್ಷ ಮಕ್ಕಳ ಬಿಸಿಯೂಟಕ್ಕೂ ಬಳಸಿ ಹೆಚ್ಚುವರಿ ತರಕಾರಿಗಳನ್ನು ಸ್ಥಳೀಯ ಅಂಗಡಿಗೆ ಮಾರಾಟ ಮಾಡಿ ಸುಮಾರು 10 ಸಾವಿರ ರೂ. ಶಾಲೆಗೆ ಆದಾಯ ದೊರೆತಿರುವುದನ್ನು ಇಲ್ಲಿ ಸ್ಮರಿಸಬಹುದು.

ವಿದ್ಯಾಭಿಮಾನಿಗಳಾದ ನರಸಿಂಹ ನಾಯಕ್ ಇವರು ತಮ್ಮ ಸ್ವಂತ ಟ್ರಾಕ್ಟರ್‌ನಲ್ಲಿ ನೆಲವನ್ನು ಉಳುಮೆ ಮಾಡಿ ಹದ ಮಾಡಿಕೊಟ್ಟಿದ್ದು, ಸ್ಥಳೀಯರಾದ ರಾಮಚಂದ್ರ ಮಯ್ಯ, ಅಮರ ಪೂಜಾರಿ ಹಾಗೂ ಶಾಲಾ ಹಳೆ ವಿದ್ಯಾರ್ಥಿಗಳಾದ ಸಂತೋಷ ಕೊಡಂಚ ಹಾಗೂ ಉಷಾ ಪೂಜಾರಿ ಅವರು ಸಾವಯವ ಗೊಬ್ಬರ, ಕೋಳಿ ಗೊಬ್ಬರ, ಬೇಲಿ ಮಾಡಲು ಬೇಕಾದ ಪರಿಕರಗಳನ್ನು ಒದಗಿಸಿದ್ದಾರೆ. ಪ್ರತಿನಿತ್ಯ ಗಿಡಗಳಿಗೆ ಗೊಬ್ಬರವನ್ನು ಹಾಕುವುದಲ್ಲದೆ ಪ್ರಾಣಿ ಪಕ್ಷಿಗಳಿಂದ ಗಿಡಗಳನ್ನು ರಕ್ಷಿಸಿ ಗಿಡಗಳು ಉತ್ತಮವಾಗಿ ಬೆಳೆದು ನಿರೀಕ್ಷೆಗೆ ಮೀರಿದ ಫಸಲು ದೊರಕುವಲ್ಲಿ ಎಸ್‌ಡಿ‌ಎಂಸಿ ಅಧ್ಯಕ್ಷ ನಾರಾಯಣ ಕೆ, ಉಪಾಧ್ಯಕ್ಷೆ ಗಾಯತ್ರಿ ಕೊಡಂಚ, ಸದಸ್ಯರಾದ ವಿಶ್ವನಾಥ ಮೇಸ್ತ, ಮಹೇಶ್ ಪೂಜಾರಿ, ಮುಖ್ಯವಾಗಿ ಪ್ರತಿ ಹಂತದಲ್ಲಿಯೂ ಶಾಲಾ ಶಿಕ್ಷಕರಾದ ವಿಶ್ವನಾಥ್ ದೇವಾಡಿಗ ಇವರ ಪರಿಶ್ರಮ ಇದರ ಹಿಂದಿದೆ. ಶಾಲಾ ಮುಖ್ಯೋಪಾಧ್ಯಾಯ ಗಂಗಾಧರ ಮತ್ತು ವಿದ್ಯಾರ್ಥಿಗಳ ಸಹಕಾರದಿಂದ ಶಾಲಾ ವಠಾರದಲ್ಲಿ ಸುಂದರ ತರಕಾರಿ ತೋಟ ನಿರ್ಮಾಣಗೊಂಡು ಶಾಲೆಯ ಮಕ್ಕಳ ಮಧ್ಯಾಹ್ನದೂಟಕ್ಕೆ ಉತ್ತಮ ತರಕಾರಿ ದೊರೆಯುವಂತೆ ಆಗಿದೆ.

ಶಾಲೆಯ ವಠಾರದಲ್ಲಿ ಮಾಡಿರುವ ತರಕಾರಿ ತೋಟದಲ್ಲಿ ಉತ್ತಮ ಗುಣಮಟ್ಟದ ತರಕಾರಿಗಳನ್ನು ಬೆಳೆಯಲಾಗಿದ್ದು, ಶಾಲೆಯ ಮಧ್ಯಾಹ್ನದೂಟಕ್ಕೆ ಇಲ್ಲಿ ಬೆಳೆದ ತರಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದೀಗ ಎರಡು ಕ್ವಿಂಟಾಲ್‌ಗೂ ಮಿಕ್ಕಿ ತರಕಾರಿ ಬೆಳೆದಿದೆ. ತರಕಾರಿ ತೋಟ ಮಾಡುವಲ್ಲಿ ಶಾಲೆಯ ಎಸ್‌ಡಿ‌ಎಂಸಿ ಸದಸ್ಯೆ ಶಾಂತಾ ದೇವಾಡಿಗ ಅವರ ಪರಿಶ್ರಮ ಹಾಗೂ ಎಸ್‌ಡಿ‌ಎಂಸಿ ಸದಸ್ಯರು ಮತ್ತು ವಿದ್ಯಾಭಿಮಾನಿಗಳ ಸಹಕಾರ ಶ್ಲಾಘನೀಯ ಹಾಗೂ ಈ ಕಾಯಕದಲ್ಲಿ ಕೈಜೋಡಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು

-ಗಂಗಾಧರ, ಮುಖ್ಯಶಿಕ್ಷಕ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಜ್ಜಾಡಿ.

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!