spot_img
Friday, May 23, 2025
spot_img

ಅಂಪಾರು: ಎಕ್ಕರಬೆಟ್ಟಿನಲ್ಲಿ ಅಪ್ರಕಟಿತ ವಿಜಯನಗರ ಕಾಲದ ಶಿಲಾ ಶಾಸನ ಪತ್ತೆ

ಜನಪ್ರತಿನಿಧಿ ವಾರ್ತೆ] ಕುಂದಾಪುರ: ಇತಿಹಾಸವನ್ನು ತಿಳಿಸುವ ವಿಜಯನಗರ ವೀರಬುಕ್ಕಣ್ಣ ಒಡೆಯನ ಕಾಲದ ಶಾಸನವೊಂದು ಅಂಪಾರು ಸಮೀಪ ಪತ್ತೆಯಾಗಿದೆ.

ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಎಕ್ಕರಬೆಟ್ಟಿನ ಶಿವರಾಮ ಶೆಟ್ಟರ ಮನೆಯ ಮೇಲ್ಭಾಗದ ಗದ್ದೆಯಲ್ಲಿದೆ. ಇದೊಂದು ಅಪ್ರಕಟಿತ ಶಿಲಾ ಶಾಸನವಾಗಿದ್ದು, ಈ ಶಾಸನದ ಉದ್ದ 90 ಸೆ.ಮೀ ಮತ್ತು ಅಗಲ 59 ಸೆ.ಮೀ ಗಳಿದ್ದು, ಮೇಲ್ಭಾಗದ ಉಬ್ಬುಶಿಲ್ಪವನ್ನು ಸೇರಿದಂತೆ ಎತ್ತರ ಸುಮಾರು 12೫ ಸೆ.ಮೀಯಲ್ಲಿದೆ. ಕಣಶಿಲೆಯಿಂದ ಕೂಡಿದೆ. ಈ ಶಾಸನವು 34 ಸಾಲುಗಳುಳ್ಳ ಕನ್ನಡ ಭಾಷೆ ಮತ್ತು ಲಿಪಿಯಲ್ಲಿದೆ.

ಈ. ಶಾಸನದ ಮೇಲ್ಭಾಗದಲ್ಲಿ ಸೂರ್ಯ ಚಂದ್ರ, ಬಲಭಾಗದಲ್ಲಿ ಸೊಂಟಕ್ಕೆ ಎಡಗೈ ಕೊಟ್ಟು ನಿಂತಿರುವ ಆಂಜನೇಯ, ಮಧ್ಯದಲ್ಲಿ ಶಿವಲಿಂಗ ಹಾಗೂ ಎಡ ಭಾಗದಲ್ಲಿ ದೀಪದ ಕಂಬ ಹಾಗೂ ಒಂದು ಹಸುವಿನ ಉಬ್ಬು ಶಿಲ್ಪವಿದೆ.

ಈ ಶಾಸನವನ್ನು ತುಮಕೂರು ವಿಶ್ವವಿದ್ಯಾನಿಲಯದ, DOSR ಇತಿಹಾಸ ಮತ್ತು ಪುರಾತತ್ವ ವಿಭಾಗದ ಅಧ್ಯಕ್ಷರಾದ ಪ್ರೊ. ಎಂ ಕೊಟ್ರೇಶ್ ರವರ ಮಾರ್ಗದರ್ಶನದಲ್ಲಿ ಪಿ‌ಎಚ್.ಡಿ ಸಂಶೋಧನೆ ಕೈಗೊಂಡಿರುವ ವೈಶಾಲಿ ಜಿ.ಆರ್ ರವರ ಕ್ಷೇತ್ರಕಾರ್ಯದಲ್ಲಿ ಲಭ್ಯವಾಗಿದೆ.

ಶ್ರೀ ಶಂಕರನಾರಾಯಣ ದೇವಸ್ಥಾನದ ಅರ್ಚಕರಾದ ಶಿವಪ್ರಸಾದ್ ಅಡಿಗರ ಈ ಶಾಸನವನ್ನು ಮೊದಲಿಗೆ ಗುರುತಿಸಿದ್ದು, ಆ ಮೂಲಕ ಈ ಶಾಸನದ ಸ್ಪಷ್ಟತೆಗಾಗಿ ಸಂಶೋಧಕರಿಗೆ ತಿಳಿಸಿ, ಆ ಶಾಸನದ ಅರ್ಥೈಸುವಲ್ಲಿ ಸಾಕಷ್ಟು ಸಹಕರಿಸಿದ್ದಾರೆ. ಇದಕ್ಕಾಗಿ ಎ.ಎಸ್.ಐನ ಶಾಸನವಿಭಾಗದಿಂದ ಶಾಸನತಜ್ಞೆಯಾದ ಡಾ. ಶ್ರೀದೇವಿ ತೇಜಸ್ವಿನಿಯವರು ಹಾಗೂ ಪಡಿಯಚ್ಚು ಸಹಾಯಕರಾದ ನಾಗಣ್ಣನವರು ಈ ಶಾಸನದ ಪಡಿಯಚ್ಚನ್ನು ತೆಗೆದಿದ್ದು, ಈ ಶಾಸನದ ಕುರಿತು ಹೆಚ್ಚಿನ ಅಧ್ಯಯನ ಕೈಗೊಂಡಿದ್ದರು.

ಶಾಸನದ ಕಾಲವನ್ನು ಗುರುತಿಸುವುದಾದರೆ ಅದು ಶಕವರ್ಷ 1291, ಸೌಮ್ಯ ಸಂವತ್ಸರ, ಮಾರ್ಗಶಿರಮಾಸ, ಶು1, ಗುರುವಾರ ಇದಕ್ಕೆ ಸಂವಾದಿಯಾಗಿ ಸಾ.ಶಕ 1369 ರ ನವೆಂಬರ್ 1ಕ್ಕೆ ಕಾಲಘಟ್ಟವು ಸರಿಹೊಂದಿದೆ.ಈ ಶಾಸನದ ಪ್ರಾರಂಭದಲ್ಲಿ ಶಿವಸ್ತುತಿ, ಗಣಪತಿ ಸ್ತುತಿಸಿ ನೇರವಾಗಿ ವಿಜಯನಗರ ಅರಸು ವೀರ ಬುಕ್ಕಣ್ಣ ಒಡೆಯ ನಿರೂಪ ಎಂದು ಹೇಳಿದೆ. ಬಳಿಕ. ಬಾರಕೂರ ರಾಜ್ಯಪಾಲನಾದ ಗೋಪರಸನು ಈ ಶಾಸನದ ನಿರೂಪಣೆಯನ್ನು ಮಾಡಿದ ಶಾಸನ ಪಠ್ಯವನ್ನು ಮುಂದುವರೆದಿದೆ. ಆ ನಿರೂಪವು ಕೋಟೇಶ್ವರ ದೇವರು ಹಾಗೂ ಚವುಡೇಶ್ವರಿಯ ದೇವರಿಗಾಗಿ ಅರಮನೆಯ ಕಾಣಿಕೆಯಾಗಿ ನೀಡಿರುವ ದಾನದ ಕುರಿತಾಗಿದೆ. ಅಂಪಾರಿನ ಚತುಸ್ಸೀಮೆಯನ್ನು ದಾನದ ಮೂಲವಾಗಿ ಕೆಲವು ಪ್ರದೇಶಗಳನ್ನು ಹೇಳಿದೆ. ಅಲ್ಲದೇ ಕೋಟೇಶ್ವರ ದೇವರ ದೀವಿಗೆಗೆ ವರ್ಷವೊಂದಕ್ಕೆ ಐದು ಹೊನ್ನುಗಳನ್ನು ಕೊಡಬೇಕಾಗಿ ಈ ಶಾಸನದಲ್ಲಿ ಹೇಳಿದೆ. ಸೇನಬೋವ, ಎಡೆಹಾಳಿ, ಕುಪ್ಪಾರು ದಾನದ ಚುತುಸ್ಸೀಮೆಯ ಮುಂತಾದವುಗಳ ಉಲ್ಲೇಖ ಬರುತ್ತದೆ. ಈ ಶಾಸನದ ನಿರೂಪವು ಎಡೆನಾಡ ವಿಷ್ಣುಮೂರ್ತಿ, ದುರ್ಗಾಂಬ ದೇವತೆ ಮತ್ತು ವೊಳತ್ತೂರು ಚವುಡೇಶ್ವರಿ ದೇವಿ ಸಾಕ್ಷಿಯಾಗಿರುವ ಪಠ್ಯವಿದೆ. ಎಂದಿನಂತೆ ಕಡೆಯ ೭ ಸಾಲುಗಳು ಶಾಪಶಯದಿಂದ ಕೂಡಿದ್ದು, ಕೊನೆಯ ಸಾಲಿನಲ್ಲಿ ಗೋಪರಸನ ಬರಹವೆಂದು ಹೇಳಿದೆ.

ಈ ಶಾಸನವು ಜೈನರದ್ದಾಗಿತ್ತೆಂಬ ಅಭಿಪ್ರಾಯವು ಆ ಪ್ರದೇಶದಲ್ಲಿ ಜನರಲ್ಲಿತ್ತು. ಶಾಸನ ಪತ್ತೆ ಸಂದರ್ಭದಲ್ಲಿ ಸುಶೀಲಾ ಶಿವರಾಮ ಶೆಟ್ಟಿ, ಜಗದೀಶ್ ಶೆಟ್ಟಿ, ರೋಷಿನಿ ಶೆಟ್ಟಿ, ವನಜಾ ಶೆಟ್ಟಿ, ವೆಂಕಟರಮಣ ಮತ್ತು ಕೂಡಿಗೆ ಚಂದ್ರಶೇಖರ ಕನ್ನಂತ ಮುಂತಾದವರು ಉಪಸ್ಥಿತರಿದ್ದರೆಂದು ಪ್ರದೀಪ್ ಕುಮಾರ್ ಬಸ್ರೂರು ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!