Sunday, September 8, 2024

ವಯನಾಡಿನ ಪ್ರೀತಿಯನ್ನು ರಾಗಾ ಮರೆಯುವುದಿಲ್ಲ !

ರಾಯ್ಬರೇಲಿಯ ಉಪಚುನಾವಣೆಯಲ್ಲಿ ಪ್ರಿಯಾಂಕಾ ಸ್ಪರ್ಧೆ | ಅಮೇಥಿ ಮರಳಿ ಕಾಂಗ್ರೆಸ್‌ಗೆ !?

ಹಲವು ರಾಜಕೀಯ ವಿಶ್ಲೇಷಣೆಗಳು, ರಾಜಕೀಯ ವಲಯದ ಚರ್ಚೆಗಳ ನಡುವೆ ಅಳೆದು ತೂಗಿ ಕಾಂಗ್ರೆಸ್ ಪಕ್ಷ ಅಂತಿಮವಾಗಿ ಅಮೇಥಿ ಹಾಗೂ ರಾಯ್ಬರೇಲಿ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ನಾಮಪತ್ರದ ಕೊನೆಯ ದಿನದಂದು ಕಣಕ್ಕಿಳಿಸಿದೆ. ಈ ಎರಡು ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿ ಘೋಷಣೆ ಮಾಡಿರುವ ಬೆನ್ನಲ್ಲೇ ಉತ್ತರಪ್ರದೇಶದ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ವಯನಾಡಿನ ಹೊರತಾಗಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ರಾಯ್ಬರೇಲಿಯಿಂದಲೂ ಸ್ಪರ್ಧಾ ಕಣಕ್ಕೆ ಇಳಿದಿದ್ದು ಹಾಗೂ ಗಾಂಧಿ ಕುಟುಂಬದ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಕಿಶೋರಿ ಲಾಲ್ ಶರ್ಮಾ ಅಮೇಥಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ರಾಯ್ಬರೇಲಿ ಅಥವಾ ಅಮೇಥಿಯಿಂದ ಈ ಭಾರಿ ಸ್ಪರ್ಧಾ ಕಣಕ್ಕೆ ಇಳಿಯುವುದು ಬಹುತೇಕ ನಿಶ್ಚಿತ ಎಂಬ ರಾಜಕೀಯ ಚರ್ಚೆಗಳು ಕೇಳಿ ಬಂದಿದ್ದವು. ಆದರೇ, ಎಲ್ಲಾ ನಿರೀಕ್ಷೆಗಳು ಹುಸಿಯಾದವು.

ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್‌ನ ಭದ್ರಕೋಟೆ ಎಂದು ಕರೆಸಿಕೊಳ್ಳುವ ಅಮೇಥಿ ಹಾಗೂ ರಾಯ್ಬರೇಲಿ ಕ್ಷೇತ್ರಗಳಿಗೆ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರೇ ಸ್ಪರ್ಧಿಸಬೇಕು ಎಂಬ ಒತ್ತಾಯ ಸ್ಥಳೀಯ ಕಾಂಗ್ರೆಸ್‌ ಘಟಕದಿಂದ ಕೇಳಿಬಂದಿತ್ತು. ಗಾಂಧಿ ಕುಟುಂಬದ ಸದಸ್ಯರು ಅಮೇಥಿಯಿಂದ ಸ್ಪರ್ಧಿಸದಿದ್ದಲ್ಲಿ ಸ್ಮೃತಿ ಇರಾನಿ ಸುಲಭವಾಗಿ ಗೆಲುವು ಸಾಧಿಸಬಹುದು ಎಂಬ ಸಣ್ಣ ಭಯ ಕಾಂಗ್ರೆಸ್‌ ವಲಯದಲ್ಲಿ ಸೃಷ್ಟಿಯಾಗಿತ್ತು. ರಾಯ್ಬರೇಲಿಯಿಂದ ಪ್ರಿಯಾಂಕಾ ಗಾಂಧಿ, ಅಮೇಥಿಯಿಂದ ರಾಹುಲ್‌ ಗಾಂಧಿ ಸ್ಪರ್ಧಿಸುವುದು ಖಚಿತ ಎಂದು ಕಾಂಗ್ರೆಸ್‌ ವಲಯ ಭಾವಿಸಿತ್ತು. ಆದರೇ ಕಾಂಗ್ರೆಸ್‌ ಹೈಕಮಾಂಡ್‌ನ ಯೋಚನೆ ಮತ್ತು ಯೋಜನೆ ಬೇರೆಯಾಗಿದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಉತ್ತರ ಪ್ರದೇಶದಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಕಟ್ಟುವ ಜವಾಬ್ದಾರಿ ವಹಿಸಿಕೊಂಡಿದ್ದ ಪ್ರಿಯಾಂಕಾ, ಬಹಳ ದೊಡ್ಡ ಸುದ್ದಿಯಲ್ಲಿ ಇದ್ದಿದ್ದರೂ ಕೂಡ ಉ.ಪ್ರದೇಶದಲ್ಲಿ ಕಾಂಗ್ರೆಸ್‌ ಹೀನಾಯ ಸೋಲು ಅನುಭವಿಸಬೇಕಾಯಿತು. ಉತ್ತರ ಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವ ಮಟ್ಟಕ್ಕೆ ಪ್ರಿಯಾಂಕ ಕಾಣಿಸಿಕೊಂಡರು. ಉತ್ತರ ಪ್ರದೇಶದಲ್ಲಿ ಮಹಿಳಾ ಕಾಂಗ್ರೆಸ್‌ನ ವರ್ಚಸ್ಸನ್ನು ವೃದ್ಧಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದರು. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷದ ಚುನಾವಣಾ ಭವಿಷ್ಯವನ್ನು ಪುನರುಜ್ಜೀವಗೊಳಿಸುವ ಗುರಿಯನ್ನು ಹೊಂದಿದ್ದ ಪ್ರಿಯಾಂಕಾ, ಮಹಿಳಾ ಮತದಾರರನ್ನು ಸೆಳೆಯುವಲ್ಲಿ ಅಹರ್ನಿಶಿ ಪ್ರಯತ್ನಿಸಿದರು. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹತ್ರಾಸ್‌ ಅತ್ಯಚಾರ ಪ್ರಕರಣದ ವಿರುದ್ಧ ನಿಂತು ಪ್ರಿಯಾಂಕ ಗಾಂಧಿ ಹಾಗೂ ರಾಹುಲ್‌ ಗಾಂಧಿ ದೇಶದ ಗಮನ ಸೆಳೆದರು. ಪ್ರಿಯಾಂಕ ಭರವಸೆಯಾಗಿ ಕಾಣಿಸಿಕೊಂಡರು. ಆದರೂ ಚುನಾವಣೆಯಲ್ಲಿ ಇವು ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಿಂದ ರಾಹುಲ್‌ ಗಾಂಧಿ ಸ್ಪರ್ಧಿಸಿ, ರಾಯ್‌ಬರೇಲಿಯಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಾರೆ ಎನ್ನುವ ಊಹಾಪೂಹಗಳು ಊಹಾಪೂಹಗಳಾಗಿಯೇ ಉಳಿದವು. ಪ್ರಿಯಾಂಕಾ ಗಾಂಧಿ ಅವರು ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ ಮತ್ತು ಬದಲಿಗೆ ರಾಷ್ಟ್ರವ್ಯಾಪಿ ಪ್ರಚಾರದತ್ತ ಗಮನ ಹರಿಸಿದ್ದಾರೆ.

ಅಮೇಥಿ ಮತ್ತು ರಾಯ್ಬರೇಲಿ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ಭದ್ರಕೋಟೆಗಳಾಗಿವೆ. ಅಮೇಥಿಗೆ ಹೋಲಿಸಿದರೇ ರಾಯ್ಬರೇಲಿ ರಾಹುಲ್‌ಗೆ ಸುರಕ್ಷಿತ ಕ್ಷೇತ್ರ ಎಂಬ ನಿರ್ಧಾರಕ್ಕೆ ಬಂದು ರಾಹುಲ್‌ ಗಾಂಧಿ ರಾಯ್ಬರೇಲಿಯಿಂದ ಕಣಕ್ಕಿಳಿದರು. ಪ್ರಿಯಾಂಕ ಕ್ಷೇತ್ರವನ್ನು ಸಹೋದರನಿಗೆ ಬಿಟ್ಟುಕೊಟ್ಟರು ಎಂಬ ಮಾತೂ ಕೂಡ ಇದೆ. ಉತ್ತರ ಪ್ರದೇಶದಲ್ಲಿ ಅಖಿಲೇಶ್‌ ಯಾದವ್‌ ಅವರೊಂದಿಗಿನ ಪ್ರಬಲ ಮೈತ್ರಿ ಇರುವ ಕಾರಣ ಈ ಬಾರಿ ಈ ಎರಡೂ ಕ್ಷೇತ್ರಗಳನ್ನು ಕಾಂಗ್ರೆಸ್‌ ಮತ್ತೆ ವಶಕ್ಕೆ ಪಡೆದುಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿ ರಾಜ್ಯ ಕಾಂಗ್ರೆಸ್‌ ಘಟಕ ಇದ್ದಿತ್ತು. ರಾಯ್ಬರೇಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ರಾಯ್ಬರೇಲಿಯನ್ನು ಹೊರತು ಪಡಿಸಿ ಬಚ್ರವಾನ್‌, ಹರ್ಚಂದಪುರ್‌, ಸರಿನಿ, ಉಂಚಹರ್‌ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷದ ಶಾಸಕರಿದ್ದಾರೆ. ಹಾಗಾಗಿ ಸಹಜವಾಗಿ ಸಮಾಜವಾದಿ ಪಕ್ಷದ ಮತಗಳು ಕಾಂಗ್ರೆಸ್‌ಗೆ ಬರುವುದು ನಿಶ್ಚಿತ.

ಇನ್ನು ಅಮೇಥಿಯಿಂದ ಬ್ರಾಹ್ಮಣ ವರ್ಗದ ಜನಪ್ರಿಯತೆಯನ್ನು ಹೊಂದಿರುವ ಸ್ಥಳೀಯ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಅವರನ್ನು ಕಣಕ್ಕಿಳಿಸಿ ಮೇಲ್ಜಾತಿಗಳು, ಬುಡಕಟ್ಟುಗಳು, ದಲಿತರು ಮತ್ತು ಮುಸ್ಲಿಮರಿಂದ ಸಾಂಪ್ರದಾಯಿಕ ಬೆಂಬಲವನ್ನು ಮರಳಿ ಪಡೆಯಲು ಪಕ್ಷದ ತಂತ್ರ ಹೆಣೆಯಿತು. ರಾಜಕೀಯವಾಗಿ, ಈ ಕ್ರಮ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ವಿರುದ್ಧ ಹೊಸ ಅಸ್ತ್ರವನ್ನೇ ಒದಗಿಸಿದೆ. ಕಾಂಗ್ರೆಸ್ ನ ಈ ನಡೆಯನ್ನು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಟೀಕಿಸಿದ್ದು, ಚುನಾವಣಾ ರ್ಯಾಲಿಗಳ ಸಂದರ್ಭದಲ್ಲಿ ಕಾಂಗ್ರೆಸ್‌ ವಿರುದ್ಧ ಮೋದಿ ಹರಿಹಾಯ್ದಿದ್ದಾರೆ. ಇನ್ನು, ರಾಹುಲ್ ಗಾಂಧಿ 2004 ರಿಂದ ಅಮೇಥಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ, 2019ರಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋತರು. ಅವರು ಪ್ರಸ್ತುತ ಕೇರಳದ ವಯನಾಡ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಚುನಾವಣಾ ಇತಿಹಾಸದ ದಾಖಲೆಗಳ ಪ್ರಕಾರ, ಅಮೇಥಿಯಲ್ಲಿ ಕಾಂಗ್ರೆಸ್ 18 ಚುನಾವಣೆಗಳ ಪೈಕಿ 15 ಬಾರಿ ಮತ್ತು ರಾಯ್ಬರೇಲಿಯಲ್ಲಿ 20 ಚುನಾವಣೆಗಳ ಪೈಕಿ 17 ಬಾರಿ ಗೆದ್ದಿದೆ. ಅಮೇಥಿಗೆ ಹೋಲಿಸಿದರೆ ರಾಯ್ಬರೇಲಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಬಲವಾಗಿದೆ. ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ಇಲ್ಲಿ ರಾಹುಲ್ ವಿರುದ್ಧ ದೊಡ್ಡ ಮಟ್ಟದ ಪೈಪೋಟಿ ನೀಡುತ್ತಾರೆ ಎಂಬ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಪ್ರಿಯಾಂಕ ಗಾಂಧಿ ಹಾಗೂ ಕೆ. ಎಲ್‌ ಶರ್ಮಾ ಪಕ್ಷ ಸಂಘಟನೆಯಲ್ಲಿ ನಿರಂತರ ಶ್ರಮ ವಹಿಸಿದ್ದಾರೆ. ಗಾಂಧಿ ಪರಿವಾರದ ಭದ್ರಕೋಟೆ ಎಂಬ ಪಟ್ಟವೂ ಈ ಕ್ಷೇತ್ರಕ್ಕಿದೆ.

ಚುನಾವಣಾ ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ರಾಹುಲ್ ಗಾಂಧಿಯವರು 2014 ರಲ್ಲಿ ಅಮೇಥಿಯಲ್ಲಿ ಶೇ. 46ರಷ್ಟು ಮತಗಳನ್ನು ಪಡೆದುಕೊಂಡಿದ್ದರು, 2019 ರಲ್ಲಿ ರಾಹುಲ್‌ ವರ್ಚಸ್ಸು ಅಮೇಥಿಯಲ್ಲಿ ಕುಸಿದಿತ್ತು ಎನ್ನುವುದಕ್ಕೆ ಅವರು ಪಡೆದುಕೊಂಡ ಶೇ. 43 ರಷ್ಟು ಮತಗಳೇ ಸಾಕ್ಷಿ. ರಾಯ್ಬರೇಲಿಯಲ್ಲಿ, ಸೋನಿಯಾ ಗಾಂಧಿಯವರು ಚುನಾವಣೆಗಳಲ್ಲಿ ಸತತವಾಗಿ ಶೇ. 55-56ರಷ್ಟು ಮತಗಳನ್ನು ಸಲೀಸಾಗಿ ಪಡೆದುಕೊಂಡಿದ್ದಾರೆ.

2022ರ ವಿಧಾನಸಭಾ ಚುನಾವಣೆಯಲ್ಲಿ(ರಾಯ್ಬರೇಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು) ಎಸ್‌ಪಿ ಐದರಲ್ಲಿ ನಾಲ್ಕು ಕ್ಷೇತ್ರಗಳನ್ನು ಗೆದ್ದರೆ, ಅಮೇಥಿಯಲ್ಲಿ ಬಿಜೆಪಿ ಮೂರು ಮತ್ತು ಎಸ್‌ಪಿ ಎರಡು ಕ್ಷೇತ್ರಗಳನ್ನು ಗಳಿಸಿತು. ಈಗ ಎಸ್‌ಪಿ ಜೊತೆಗಿನ ಕಾಂಗ್ರೆಸ್ ಮೈತ್ರಿಯನ್ನು ಗಮನಿಸಿದರೆ, ರಾಯ್ಬರೇಲಿ ಸುರಕ್ಷಿತ ಕ್ಷೇತ್ರವಾಗಿ ಕಾಣಿಸುತ್ತಿದೆ. ಒಂದು ವೇಳೆ ರಾಹುಲ್ ಅಮೇಥಿಯಿಂದ ಸ್ಪರ್ಧಿಸಿ ಮತ್ತೊಮ್ಮೆ ಸೋತರೇ ಅದು ಕಾಂಗ್ರೆಸ್ ಪಕ್ಷದೊಳಗೆ ಅವರ ಸ್ಥಾನಮಾನವನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಭಾರತ್‌ ಜೋಡೋ ಯಾತ್ರೆ, ಭಾರತ್‌ ಜೋಡೋ ನ್ಯಾಯ ಯಾತ್ರೆಯ ಮೂಲಕ ತಮ್ಮ ರಾಜಕೀಯ ವರ್ಚಸ್ಸನ್ನು ನಿರೀಕ್ಷೆಗೂ ಮೀರಿ ವೃದ್ಧಿಸಿಕೊಂಡಿದ್ದ ರಾಹುಲ್‌ಗೆ ಅಮೇಥಿಯಲ್ಲಿ ಮತ್ತೊಮ್ಮೆ ಸೋಲಾದರೇ ಆ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕಾಗಿಯೇ ರಾಹುಲ್ ಭಾವನಾತ್ಮಕ ನಿರ್ಧಾರಕ್ಕಿಂತ ಪ್ರಾಯೋಗಿಕವಾಗಿ ಸುರಕ್ಷಿತ ಕ್ಷೇತ್ರವನ್ನು ಆರಿಸಿಕೊಂಡರು. ಮತ್ತು ತಮ್ಮ ಪಾಲಿಗಾಗುತ್ತಿದ್ದ ಕ್ಷೇತ್ರವನ್ನು ಸಹೋದರನಿಗೆ ಬಿಟ್ಟುಕೊಡುವ ಮೂಲಕ ಪ್ರಿಯಾಂಕಾ ಧಾರಾಳತನವನ್ನು ಮೆರೆದರು. ಆದಾಗ್ಯೂ, ರಾಹುಲ್‌ ಗಾಂಧಿ ರಾಯ್ಬರೇಲಿಯಿಂದ  ಕ್ಷೇತ್ರದ ಸಂಪರ್ಕದಿಂದ ದೂರದಲ್ಲಿದ್ದರು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ತಾಯಿಯ ರಾಜಕೀಯ ವರ್ಚಸ್ಸು ಹಾಗೂ ಸಮಾಜವಾಧಿ ಮೈತ್ರಿಯ ಬಲ ಇಲ್ಲಿರುವುದು ಕಾಂಗ್ರೆಸ್‌ಗೆ ಲಾಭವೇ ಆಗಿದೆ.

ಆದಾಗ್ಯೂ, ಸ್ಮೃತಿ ಇರಾನಿಗೆ ಸವಾಲು ಎಸೆಯಲು ಪ್ರಿಯಾಂಕಾ ಗಾಂಧಿ ಅಮೇಥಿಯಿಂದ ಸ್ಪರ್ಧಿಸಬಹುದಿತ್ತು, ಇದು ಪಕ್ಷದ ಕಾರ್ಯಕರ್ತರನ್ನು ಪ್ರೇರೇಪಿಸುವ ಎಲ್ಲಾ ಲಕ್ಷಣಗಳಿತ್ತು ಮತ್ತು ರಾಜ್ಯ ಮತ್ತು ಹಿಂದಿ ಹೃದಯ ಭಾಗದಾದ್ಯಂತ ಒಂದು ಬಲವಾದ ಸಂದೇಶವನ್ನು ರವಾನಿಸಬಹುದಾದ ಎಲ್ಲಾ ಅವಕಾಶಗಳು ಕಾಂಗ್ರೆಸ್‌ಗೆ ಇದ್ದಿತ್ತು. ಆದರೇ ಕಾಂಗ್ರೆಸ್‌  ಆ ಮುಖವಾಗಿ ಯೋಚಿಸದೇ ಇರುವುದು ಅಥವಾ ಯೋಚಿಸಿಯೂ ನಿರ್ಧಾರ ತೆಗೆದುಕೊಳ್ಳದೇ ಇರುವುದು ಆಶ್ಚರ್ಯವೇ ಸರಿ.

ʼಗಾಂಧಿ ಕುಟುಂಬ ರಾಜಕಾರಣʼ ಎಂಬ ಆರೋಪಗಳಿಂದ ಮುಕ್ತಿ ಹೊಂದುವ ಉದ್ದೇಶದಿಂದ ಪಕ್ಷದ ಯಾವೊಬ್ಬ ಕಾರ್ಯಕರ್ತ ಕೂಡ ಪಕ್ಷದ ಟಿಕೆಟ್ ಪಡೆಯಬಹುದು ಎಂಬ ಸಂದೇಶವನ್ನು ರವಾನಿಸುವ ಉದ್ದೇಶದಿಂದ ಅಮೇಥಿ ಟಿಕೇಟ್‌ ಅನ್ನು ಕೆ. ಎಲ್‌ ಶರ್ಮಾ ಅವರಿಗೆ ಬಿಟ್ಟುಕೊಡುವ ಉದಾರ ಮನೋಭಾವವನ್ನು ಕಾಂಗ್ರೆಸ್ ತೋರಿಸುವ ಪ್ರಯತ್ನ ಮಾಡಿದ್ದಿರಬಹುದು. ಪರೋಕ್ಷವಾಗಿ ರಾಹುಲ್‌ ಗಾಂಧಿಯವರನ್ನು ತನ್ನ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುತ್ತಿದೆ. ಪ್ರಧಾನಿ ಅಭ್ಯರ್ಥಿಯ ರಾಜಕೀಯ ವರ್ಚಸ್ಸನ್ನು ಮತ್ತಷ್ಟು ವೃದ್ಧಿಸುವ ಉದ್ದೇಶದಿಂದ ರಾಗಾ ಅವರನ್ನು ಸುಲಭಸಾದ್ಯವಾದ ಎರಡೂ ಕ್ಷೇತ್ರಗಳಿಂದ ಸ್ಪರ್ಧೆಗೆ ಇಳಿಸಿರಬಹುದು.

2019ರ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ರಾಹುಲ್‌ ಅವರನ್ನು ಅಪ್ಪಿ ಕೊಂಡಾಡಿದ್ದ ವಯನಾಡನ್ನು ಅಷ್ಟು ಸುಲಭದಲ್ಲಿ ರಾಹುಲ್‌ ತ್ಯಜಿಸುವುದಕ್ಕೆ ಮುಂದಾಗುವುದಿಲ್ಲ ಅಂತಲೇ ಕಾಣಿಸುತ್ತಿದೆ. ವಯನಾಡು ತೋರಿದ ಪ್ರೀತಿ ರಾಹುಲ್‌ ಗಾಂಧಿಗೆ ಅಮೇಥಿಯೂ ತೋರಿಸಿಲ್ಲ. ಹಾಗಾಗಿ ಕಷ್ಟ ಕಾಲದಲ್ಲಿ ಕೈ ಹಿಡಿದ ವಯನಾಡನ್ನು ನಿರಾಕರಿಸುವ ಮನಸ್ಸು ರಾಹುಲ್ ಗಾಂಧಿಗೂ ಇಲ್ಲ. ಒಂದು ವೇಳೆ ವಯನಾಡು ಹಾಗೂ ರಾಯ್ಬರೇಲಿ ಎರಡೂ ಕ್ಷೇತ್ರಗಳಲ್ಲಿಯೂ ಗೆದ್ದರೇ, ವಯನಾಡನ್ನು ಉಳಿಸಿಕೊಂಡು ರಾಯ್ಬರೇಲಿಯಿಂದ ಪ್ರಿಯಾಂಕ ಗಾಂಧಿಗೆ ಉಪಚುನಾವಣೆಗೆ ಅವಕಾಶ ಮಾಡಿಕೊಡಬಹುದುದೆಂಬ ಚರ್ಚೆಯೂ ಇದೆ.

ಆದಾಗ್ಯೂ, ಉಪಚುನಾವಣೆಯಲ್ಲಿ ರಾಮ್‌ಪುರ ಮತ್ತು ಅಜಂಗಢದಂತಹ ಸಮಾಜವಾದಿ ಪಾರ್ಟಿಯ ಭದ್ರಕೋಟೆಯ ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದೆ ಎನ್ನುವುದು ಕೂಡ ಇಲ್ಲಿ ಉಲ್ಲೇಖಾರ್ಹ. ಈ ಕ್ಷೇತ್ರಗಳಲ್ಲಿ ಈ ಹಿಂದೆ ಕ್ರಮವಾಗಿ ಎಸ್ಪಿಯ ಅಜಂ ಖಾನ್‌ ಮತ್ತು ಅಖಿಲೇಶ್‌ ಯಾದವ್‌ ಗೆದ್ದಿದ್ದರು. ಅವರು ಬಳಿಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಜಯ ಗಳಿಸಿದ್ದರಿಂದ ಈ ಕ್ಷೇತ್ರಗಳು ತೆರವಾಗಿದ್ದವು. ಎರಡೂ ಕ್ಷೇತ್ರಗಳನ್ನು ಎಸ್‌ಪಿ ಉಳಿಸಿಕೊಳ್ಳುವ ಹಾದಿಯಲ್ಲಿ ರಾಮ್‌ಪುರದಿಂದ ಅಸೀಮ್‌ ರಾಜಾ ಮತ್ತು ಅಜಂಗಢದಿಂದ ಧರ್ಮೇಂದ್ರ ಯಾದವ್‌  ಅವರನ್ನು ಕಣಕ್ಕಿಳಿಸಿ ಸೋಲು ಕಾಣಬೇಕಾಯಿತು. ಈ ಅಂಶವನ್ನು ಕಾಂಗ್ರೆಸ್ ಎಚ್ಚರಿಕೆಯಿಂದ ಪರಿಗಣಿಸಬೇಕಾಗಿದೆ. ಈ ಚುನಾವಣೆಗೂ ಹಾಗೂ ರಾಮ್‌ಪುರ ಮತ್ತು ಅಜಂಗಢ ಉಪಚುನಾವಣೆಗೂ ವ್ಯತ್ಯಾಸವಿದೆ. ರಾಯ್ಬರೇಲಿ ರಾಮ್‌ಪುರವೂ ಅಲ್ಲ, ಅಜಂಗಢವೂ ಅಲ್ಲ. ಆದರೂ, ಉಪ ಚುನಾವಣೆಗೆ ಪ್ರಿಯಾಂಕ ಅವರನ್ನು ಕಣಕ್ಕಿಳಿಸುವ ಯೋಚನೆಯಲ್ಲಿ ಕಾಂಗ್ರೆಸ್‌ ಇರುವುದು ಹೌದಾದರೇ ಈ ಚುನಾವಣೆಯಲ್ಲೇ ಯಾಕೆ ಕಣಕ್ಕಿಳಿಸಬಾರದಿತ್ತು ಎನ್ನುವ ಪ್ರಶ್ನೆಯೂ ಇದೆ. ರಾಯ್ಬರೇಲಿಯಿಂದ ಪ್ರಿಯಾಂಕಾ ಅವರನ್ನು ಕಣಕ್ಕಿಳಿಸಿದ್ದರೆ, ಮೋದಿ ಮತ್ತು ಬಿಜೆಪಿಯ ಟೀಕೆಯಿಂದಲೂ ಮುಕ್ತವಾಗಬಹುದಿತ್ತು.

ಪ್ರತಿಯೊಂದು ಕಾರ್ಯತಂತ್ರದ ಕ್ರಮ ಅದರ ಸಾಧಕ-ಬಾಧಕಗಳನ್ನು ಹೊಂದಿದೆ. ಈ ನಿರ್ಧಾರವು ಮಾಸ್ಟರ್‌ಸ್ಟ್ರೋಕ್ ಅಥವಾ ತಪ್ಪು ಹೆಜ್ಜೆಯೇ ಎಂಬುದು ಜೂನ್ 4 ರಂದು ಚುನಾವಣಾ ಫಲಿತಾಂಶ ಬಂದ ಮೇಲೆಯೇ ತಿಳಿಯಲಿದೆ.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!